ಅಧಿವೇಶನಕ್ಕೆ ಮಾಧ್ಯಮ ನಿಷೇಧ; ಆದೇಶದಲ್ಲಿ ಏನಿದೆ?
ಬೆಂಗಳೂರು, ಅಕ್ಟೋಬರ್ 09 : ಕರ್ನಾಟಕ ವಿಧಾನಸಭೆ ಕಲಾಪದ ಚಿತ್ರೀಕರಣಕ್ಕೆ ಖಾಸಗಿ ಮಾಧ್ಯಮಗಳಿಗೆ ನಿರ್ಬಂಧ ಹೇರಲಾಗಿದೆ. ಅಕ್ಟೋಬರ್ 10 ರಿಂದ ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ವಿಧಾನಮಂಡಲ ಅಧಿವೇಶನ ನಡೆಯಲಿದೆ.
ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಬುಧವಾರ ಸಂಜೆ ಈ ಕುರಿತು ಅಧಿಕೃತ ಆದೇಶ ಹೊರಡಿಸಿದರು. ಕಲಾಪವನ್ನು ಚಿತ್ರೀಕರಣ ಮಾಡಿ ಖಾಸಗಿ ಚಾನಲ್ಗಳಿಗೆ ಸಾಟಲೈಟ್ ಮೂಲಕ ಸಂಪರ್ಕವನ್ನು ಒದಗಿಸುವ ಹೊಣೆಯನ್ನು ಬೆಂಗಳೂರು ದೂರದರ್ಶನ ಕೇಂದ್ರಕ್ಕೆ ವಹಿಸಲಾಗಿದೆ.
ಕರ್ನಾಟಕ ವಿಧಾನಸಭೆ ಅಧಿವೇಶನದ ಕಾರ್ಯ ಕಲಾಪಗಳನ್ನು ಲೋಕಸಭೆ ಮಾದರಿಯಲ್ಲಿ ಚಿತ್ರೀಕರಿಸಿ ನೇರ ಪ್ರಸಾರದ ಔಟ್ಪುಟ್ ಅನ್ನು ದೂರದರ್ಶನ ಖಾಸಗಿ ಚಾನಲ್ಗಳಿಗೆ ನೀಡಲಿದೆ. ಸದನದ ಕಾರ್ಯಕಲಾಪಗಳ ಛಾಯಾಚಿತ್ರಗಳನ್ನು ತೆಗೆದು ಮುದ್ರಣ ಮಾಧ್ಯಮದವರಿಗೆ ನೀಡುವ ಕಾರ್ಯವನ್ನು ವಾರ್ತಾ ಇಲಾಖೆಗೆ ವಹಿಸಲಾಗಿದೆ.

ಈ ಹಿಂದೆ ಜಾರಿಯಲ್ಲಿದ್ದಂತಹ ಪದ್ಧತಿಯ ಬದಲಾಗಿ, ಬೆಂಗಳೂರು ದೂರದರ್ಶನ ಕೇಂದ್ರದವರು ಚಿತ್ರೀಕರಿಸಿದ ವಿಧಾನಸಭೆಯ ಕಾರ್ಯಕಲಾಪಗಳ ಔಟ್ಪುಟ್ ಅನ್ನು ಖಾಸಗಿ ಸುದ್ದಿವಾಹಿನಿಯವರು ಪಡೆಯಬಹುದಾಗಿದೆ.
ಸದನದ ಕಾರ್ಯ ಕಲಾಪಗಳನ್ನು ವರದಿ ಮಾಡುವ ವರದಿಗಾರರಿಗೆ ಮಾತ್ರ ಎಂದಿನಂತೆ ವಿಧಾನಸಭೆಯ ಸಭಾಂಗಣದ ಮೊದಲನೇ ಮತ್ತು 2ನೇ ಮಹಡಿಯಲ್ಲಿರುವ ಪತ್ರಕರ್ತರ ಗ್ಯಾಲರಿಗೆ ಪ್ರವೇಶಿಸಲು ಅವಕಾಶವಿರುತ್ತದೆ.
ಆದರೆ, ಖಾಸಗಿ ಸುದ್ದಿ ವಾಹಿನಿಗಳ ಕ್ಯಾಮರಾಮನ್ ಹಾಗೂ ಮುದ್ರಣ ಮಾಧ್ಯಮದ ಛಾಯಾಗ್ರಾಹಕರುಗಳಿಗೆ ವಿಧಾನಸಭೆಯ ಸಭಾಂಗಣದೊಳಗೆ/ ಎರಡನೇ ಮಹಡಿಯ ಪತ್ರಕರ್ತರ ಗ್ಯಾಲರಿಗೆ ಪ್ರವೇಶವಿಲ್ಲ.
ವರದಿಗಾರರು ಸದನದ ಒಳಗೆ ಮೊಬೈಲ್, ಟ್ಯಾಬ್ ಇತ್ಯಾದಿಗಳನ್ನು ತೆಗೆದುಕೊಂಡು ಹೋಗುವಂತಿಲ್ಲ. ಎಲ್ಲಾ ಮುದ್ರಣ ಮತ್ತು ಸುದ್ದಿವಾಹಿನಿಯವರು ಸಹಕಾರ ನೀಡಬೇಕೆಂದು ಆದೇಶದಲ್ಲಿ ಮನವಿ ಮಾಡಲಾಗಿದೆ.












Click it and Unblock the Notifications