ಎಕ್ಸಿಟ್ ಪೋಲ್: ಯಡಿಯೂರಪ್ಪಗೆ ಒಂದು ಕಡೆ ಖುಷಿ, ಇನ್ನೊಂದು ಕಡೆ ದುಃಖ?
ಭಗೀರಥ ಪ್ರಯತ್ನದ ನಂತರ ಅಧಿಕಾರಕ್ಕೇರಲು ಶಕ್ತರಾದ ಯಡಿಯೂರಪ್ಪನವರಿಗೆ ಉಪಚುನಾವಣಾ ಫಲಿತಾಂಶ, ಖುಷಿಯ ಜೊತೆಗೆ, ದುಃಖವನ್ನೂ ಜೊತೆಜೊತೆಯಾಗಿ ನೀಡಲಿದೆಯೇ?
ಉಪಚುನಾವಣಾ ಫಲಿತಾಂಶದ ಬಗ್ಗೆ ವಿವಿಧ ವಾಹಿನಿಗಳು ನೀಡಿದ ವರದಿ ಮತ್ತು ಗುಪ್ತಚರ ಇಲಾಖೆಯಿಂದ ಬಂದ ಮಾಹಿತಿಯನ್ನು ಆಧರಿಸಿ ಹೇಳುವುದಾದಾರೆ ಹೌದು?
ಎಲ್ಲಾ ವಾಹಿನಿಗಳು, ಪ್ರಮುಖವಾಗಿ ಸಿವೋಟರ್ ನೀಡಿದ ಸಮೀಕ್ಷೆಯ ಪ್ರಕಾರ, ಸರಕಾರ ಉಳಿಸಿಕೊಳ್ಳಲು ಬೇಕಾದಷ್ಟು ಸ್ಥಾನವನ್ನು ಬಿಜೆಪಿ ಗೆಲ್ಲಲಿದೆ. ಹಾಗಾಗಿ, ಸರಕಾರಕ್ಕೆ ಸದ್ಯಕ್ಕೆ ತೊಂದರೆಯಿಲ್ಲ.
ಆದರೆ, ಸಮೀಕ್ಷೆಯಲ್ಲಿ ಬಂದ, ಒಂದು ಫಲಿತಾಂಶ ಏನಂದರೆ, ಪಕ್ಷೇತರರು, ಒಂದು ಸ್ಥಾನವನ್ನು ಗೆಲ್ಲುವ ಸಾಧ್ಯತೆಯಿದೆ ಎಂದು ಹೇಳಿರುವುದು. ಜೊತೆಗೆ, ಗುಪ್ತಚರ ವರದಿಯಲ್ಲೂ, ಇದೇ ಅಂಶ ಹೊರಬಿದ್ದಿದೆ ಎಂದು ಹೇಳಲಾಗುತ್ತಿದೆ. ಇದೇ, ಯಡಿಯೂರಪ್ಪನವರಿಗೆ ತಲೆನೋವಾಗಿ ಪರಿಣಮಿಸಿರುವ ವಿಚಾರ.

ಗುಪ್ತಚರ ಇಲಾಖೆ ಸಮೀಕ್ಷೆ
ಗುಪ್ತಚರ ಇಲಾಖೆ, ಉಪಚುನಾವಣೆಯಲ್ಲಿ, ಯಾವ ಪಕ್ಷಕ್ಕೆ ಎಷ್ಟು ಸ್ಥಾನ ಸಿಗಬಹುದು ಎನ್ನುವುದರ ಬಗ್ಗೆ ವರದಿಯನ್ನು, ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ನೀಡಿದೆ ಎನ್ನುವ ಮಾಹಿತಿಯಿದೆ. ಇದರ ಪ್ರಕಾರ, ಬಿಜೆಪಿ - 10 ಕಾಂಗ್ರೆಸ್ - 02 ಜೆಡಿಎಸ್ - 02 ಪಕ್ಷೇತರರು - 01 ಸ್ಥಾನದಲ್ಲಿ ಗೆಲ್ಲಲಿದ್ದಾರೆ. ಒಬ್ಬರು, ಪಕ್ಷೇತರರು ಗೆಲ್ಲಲಿದ್ದಾರೆ ಎಂದಾದರೆ, ಅದು, ನಿಸ್ಸಂಶಯವಾಗಿ ಹೊಸಕೋಟೆಯಿಂದ ಶರತ್ ಬಚ್ಚೇಗೌಡ.

ಸಿವೋಟರ್ ಹೊರತು ಪಡಿಸಿ ಮಿಕ್ಕೆಲ್ಲಾ ಪಕ್ಷೇತರರಿಗೆ ಒಂದು ಸ್ಥಾನದ ಸಾಧ್ಯತೆ ಎಂದಿವೆ
ಸಿವೋಟರ್ ಹೊರತು ಪಡಿಸಿ, ಮಿಕ್ಕೆಲ್ಲಾ ಸಮೀಕ್ಷೆಗಳು, ಪಕ್ಷೇತರರಿಗೆ ಒಂದು ಸ್ಥಾನದ ಸಾಧ್ಯತೆ ಎಂದಿವೆ. ಅದು ನಿಜವಾದಲ್ಲಿ, ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಬಹುಬೇಕಾಗಿರುವ ಹೊಸಕೋಟೆಯಲ್ಲಿ, ಎಂಟಿಬಿ ನಾಗರಾಜ್ ಸೋಲು. ಎಂಟಿಬಿ ಗೆಲುವು, ಬಿಜೆಪಿ ಪಾಲಿಗೆ ಬಹುಮುಖ್ಯ ಎನ್ನುವುದಕ್ಕೆ ಕಾರಣ ಇಲ್ಲದಿಲ್ಲ.

ಎಂಟಿಬಿ ವರ್ಸಸ್ ಸಿದ್ದರಾಮಯ್ಯ
ಸಿದ್ದರಾಮಯ್ಯನವರು ಉಪಚುನಾವಣೆಯ ಪ್ರಚಾರದಲ್ಲಿ ಒಂದು ಹೇಳಿಕೆಯನ್ನು ನೀಡಿದ್ದರು. "ಅನರ್ಹ ಶಾಸಕರೆಲ್ಲರೂ ಬಿಜೆಪಿಯಿಂದ ದುಡ್ಡು ತೆಗೆದುಕೊಂಡಿದ್ದಾರೆ. ಆದರೆ, ಎಂಟಿಬಿ, ಆಪರೇಷನ್ ಕಮಲ ನಡೆಸುವುದಕ್ಕೆ ದುಡ್ಡು ಕೊಟ್ಟಿದ್ದೇ ಅವನು. ಪಕ್ಷಕ್ಕೆ ಹಣ ನೀಡಿದವರು ಇವರೊಬ್ಬರೇ" ಎಂದು ಸಿದ್ದರಾಮಯ್ಯ ಹೇಳಿದ್ದರು. ಈ ಮಾತು, ಬಿಜೆಪಿ ವಲಯದಲ್ಲೇ ಕೇಳಿಬರುತ್ತಿತ್ತು.

ಎಂಟಿಬಿ ನಾಗರಾಜ್ ವಿರುದ್ದ ಬಚ್ಚೇಗೌಡ್ರ ಪುತ್ರ ಶರತ್ ಬಚ್ಚೇಗೌಡ
ಎಂಟಿಬಿ ನಾಗರಾಜ್ ವಿರುದ್ದ ಬಿಜೆಪಿ ಸಂಸದ ಬಚ್ಚೇಗೌಡ್ರ ಪುತ್ರ ಶರತ್ ಬಚ್ಚೇಗೌಡ ಕಣಕ್ಕಿಳಿದಿದ್ದಕ್ಕೆ ಯಡಿಯೂರಪ್ಪ ಫುಲ್ ಗರಂ ಆಗಿದ್ದರು. ಹೇಗಾದರೂ ಮಾಡಿ, ಕಣದಿಂದ ಮಗನನ್ನು ಹಿಂದಕ್ಕೆ ಸರಿಸಿ ಎನ್ನುವ ಒತ್ತಡ ಬಚ್ಚೇಗೌಡರಿಗಿತ್ತು. ಆದರೆ, ಇದ್ಯಾವುದಕ್ಕೂ ಜಗ್ಗದ ಶರತ್, ಕುಕ್ಕರ್ ಚಿಹ್ನೆಯೊಂದಿಗೆ, ಪಕ್ಷೇತರರಾಗಿ ಕಣದಲ್ಲಿದ್ದು, ಎಂಟಿಬಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗೆ ಭರ್ಜರಿ ತಿರುಗೇಟು ನೀಡಿದ್ದರು. ಒಂದು ವೇಳೆ, ಎಂಟಿಬಿ ಸೋತರೆ, ಅದಕ್ಕೆ ನೇರ ಕಾರಣ, ಶರತ್ ಎನ್ನುವುದು, ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿರುವ ಮಾತು.

ಎಂಟಿಬಿ ಗೆಲ್ಲಬೇಕೆಂದು, ಯಡಿಯೂರಪ್ಪ ಸಾಕಷ್ಟು ಶ್ರಮವಹಿಸಿದ್ದರು
ಎಂಟಿಬಿ ನಾಗರಾಜ್ ಸೋತರೆ, ಅವರನ್ನು ಪರಿಷತ್ ಸದಸ್ಯರನ್ನಾಗಿ ಮಾಡುವ ಆಯ್ಕೆ, ಸಿಎಂಗಿದೆ. ಆದರೆ, ಬಿಜೆಪಿಯಲ್ಲಿದ್ದ ಮುಖಂಡನಿಂದಲೇ ಸೋಲುವಂತಾಯಿತು (ವೋಟ್ ಡಿವೈಡ್ ಆಗಿ) ಎನ್ನುವುದು ಯಡಿಯೂರಪ್ಪನವರಿಗಾಗುವ ಹಿನ್ನಡೆ. ಎಂಟಿಬಿ ಗೆಲ್ಲಬೇಕೆಂದು, ಯಡಿಯೂರಪ್ಪ ಸಾಕಷ್ಟು ಶ್ರಮವಹಿಸಿದ್ದರು. ವಿಶೇಷ ಅನುದಾನವನ್ನು ನೀಡಿದ್ದರು. ಹೀಗಾಗಿ, ಮತಗಟ್ಟೆ ಸಮೀಕ್ಷೆ ನಿಜವಾದಲ್ಲಿ, ಮುಖ್ಯಮಂತ್ರಿಗಳಿಗೆ ಒಂದು ಕಡೆ ಖುಷಿ, ಇನ್ನೊಂದು ಕಡೆ ದುಃಖ.












Click it and Unblock the Notifications