Watermelon: ಕಲ್ಲಂಗಡಿಗೂ ಕಲರ್: ತಿನ್ನೋ ಮುನ್ನ ಹುಷಾರ್, ಯಾಮಾರಿದ್ರೆ ಕಿಡ್ನಿ ಡಮಾರ್!
ಗೋಬಿ, ಕಬಾಬ್, ಕಾಟನ್ ಕ್ಯಾಂಡಿ ಹೀಗೆ ಆಹಾರ ಪಾದರ್ಥಗಳಿಗೆ ಕಲರ್ ಬೆರೆಸೋದನ್ನು ಸರ್ಕಾರ ಬ್ಯಾನ್ ಮಾಡಿತ್ತು. ಇದೀಗ ಹಸಿರು ಬಟಾಣಿ, ಕಲ್ಲಂಗಡಿಯಲ್ಲೂ ಡೇಂಜರ್ ಕಲರ್ ಬಳಸುತ್ತಿರುವುದು ಬಯಲಾಗಿದೆ. ಬೇಸಿಗೆಗೆ ಹೆಚ್ಚಾಗಿ ಬರುವ ಕಲ್ಲಂಗಡಿಗಳ ಮಾರಾಟ ಹೆಚ್ಚಿಸಲು ಹಾಗೂ ಜನರನ್ನು ಕಲ್ಲಂಗಡಿಯತ್ತ ಆಕರ್ಷಿಸಲು ವ್ಯಾಪಾರಿಗಳು ಕೃತಕ ಬಣ್ಣ ಬಳಕೆ ಮಾಡುತ್ತಿರುವುದು ಬಯಲಾಗಿದೆ.
ಬಿಸಿಲ ಬೇಗೆ ನಡುವೆ ಕೈ ಬೀಸಿ ಕರೆಯುವ ಕೆಂಪು ಕಲ್ಲಂಗಡಿಗೆ ಬಣ್ಣ ಹಾಕುತ್ತಿದ್ದಾರೆ ಅನ್ನೋ ಶಾಕಿಂಗ್ ವಿಷಯ ಗೊತ್ತಾಗಿದೆ. ಕಲ್ಲಂಗಡಿಯನ್ನು ಕೆಲವರು ಕೃತಕವಾಗಿ ಬಣ್ಣ ಬಳಸಿ ಕೆಂಪು ಮಾಡುತ್ತಿದ್ದಾರೆ. ವ್ಯಾಪಾರಿಗಳು ಮಾರಾಟ ಮಾಡುವ ಮುನ್ನ ಹಣ್ಣುಗಳಿಗೆ ಕೆಂಪು ಬಣ್ಣ ಇಂಜೆಕ್ಟ್ ಮಾಡುತ್ತಿದ್ದಾರೆ. ಈ ಕಲ್ಲಂಗಡಿ ಸೇವನೆ ಮಾಡುವುದು ಲಿವರ್ ಹಾಗೂ ಕಿಡ್ನಿ ಮೇಲೆ ಪರಿಣಾಮ ಬೀರುತ್ತದೆ ಎಂದು ಆಹಾರ ತಜ್ಞರು ಹೇಳಿದ್ದಾರೆ.

ಹೌದು.. ಬೀದಿ ಬದಿ ಮಾರಾಟವಾಗುವ ಕೆಲ ಕಲ್ಲಂಗಡಿಗಳಲ್ಲಿ ಕೃತಕ ಬಣ್ಣ ಇಂಜೆಕ್ಟ ಮಾಡುತ್ತಿರುವುದು ತನಿಖೆಯಿಂದ ಬಯಲಾಗಿದೆ. ಸಾಮಾನ್ಯವಾಗಿ ಕಲ್ಲಂಗಡಿ ಹೆಚ್ಚು ಬಣ್ಣವನ್ನು ಹೊಂದಿರುವುದಿಲ್ಲ. ಆದರೆ ಕೆಲವರು ಜನರನ್ನು ಆಕರ್ಷಿಸಲು ಕಲ್ಲಂಗಡಿಗೆ ಕೃತಕ ಬಣ್ಣ ಇಂಜೆಕ್ಟ್ ಮಾಡಿ ಮಾರಾಟ ಮಾಡುತ್ತಿದ್ದಾರೆ. ಇದು ಅಸುರಕ್ಷಿತ ಎಂದು ತಿಳಿದು ಬಂದಿದೆ.
ಅಸುರಕ್ಷಿತ ಬಟಾಣಿ
ಆರೋಗ್ಯ ಇಲಾಖೆ ರಾಜ್ಯದಲ್ಲಿ ಜನವರಿಯಿಂದ 3608 ಆಹಾರ ಪದಾರ್ಥಗಳ ಮಾದರಿಯನ್ನು ಸಂಗ್ರಹ ಮಾಡಿತ್ತು. ಇದರಲ್ಲಿ ಇಡ್ಲಿ ಬೇಯಿಸಲು ಪ್ಲಾಸ್ಟಿಕ್ ಕವರ್ ಬಳಕೆ ಮಾಡುವುದರಿಂದ ಕ್ಯಾನ್ಸರ್ ಬರುತ್ತದೆ ಎನ್ನುವ ವಿಚಾರ ಆತಂಕ ಮೂಡಿಸಿದೆ. ಇಡ್ಲಿ ಬಳಿಕ ಹಸಿರು ಬಟಾಣಿ ಕೂಡ ಅಸುರಕ್ಷಿತ ಎನ್ನುವುದು ಆಹಾರ ಇಲಾಖೆಯ ಪ್ರಯೋಗಾಲಯದಿಂದ ದೃಢಪಟ್ಟಿದೆ. ಈ ಪೈಕಿ 26 ಮಾದರಿಯ ಬಟಾಣಿ ಅಸುರಕ್ಷಿತವಾಗಿರುವುದು ಗೊತ್ತಾಗಿದೆ.

ಬೆಂಗಳೂರಿನ ವಿವಿಧ ಭಾಗಗಳಲ್ಲಿನ ಸುಮಾರು 36 ಮಾದರಿಯ ಹಸಿರು ಬಟಾಣಿಯನ್ನು ಪಡೆದಿದ್ದ ಆಹಾರ ಇಲಾಖೆ ಅವುಗಳನ್ನು ಪ್ರಯೋಗಾಲಯದಲ್ಲಿ ಪ್ರಯೋಗ ಮಾಡಿತ್ತು. ಇದೀಗ ಪ್ರಯೋಗಾಲಯದ ವರದಿ ಬಂದಿದ್ದು 26ಕ್ಕೂ ಹೆಚ್ಚು ಹಸಿರು ಬಟಾಣಿ ಮಾದರಿಗಳು ಅಸುರಕ್ಷಿತ ಎಂದು ತಿಳಿದು ಬಂದಿದೆ.
ಮಾರುಕಟ್ಟೆಯಲ್ಲಿ ಸಿಗುವ ಹಸಿರು ಬಟಾಣಿ, ಹಸಿರು ಡ್ರೈ ಬಟಾಣಿ ಸೇರಿದಂತೆ 106 ಸ್ಯಾಂಪಲ್ಗಳನ್ನು ಕಲೆಕ್ಟ್ ಮಾಡಿ ಲ್ಯಾಬ್ಗೆ ಕಳುಹಿಸಲಾಗಿತ್ತು. ಈ ಪೈಕಿ 31 ಮಾದರಿ ವರದಿ ಬಂದಿದ್ದು ಇದರಲ್ಲಿ 26 ಮಾದರಿಯ ಬಟಾಣಿ ಅಸುರಕ್ಷಿತ ಅನ್ನೋದು ಗೊತ್ತಾಗಿದೆ. ಉಳಿದ ಬಟಾಣಿಯ ಪರೀಕ್ಷಾ ವರದಿ ಬರುವುದು ಬಾಕಿ ಇದೆ.
ಬಟಾಣಿ ಹಸಿರಾಗಿ ಕಾಣಲು ಕೃತಕ ಬಣ್ಣ ಬಳಸಲಾಗುತ್ತದೆ. ಕಲರ್ ಬಳಕೆಯಿಂದ ಬಟಾಣಿ ಸಾಮಾನ್ಯಕ್ಕಿಂತ ಹೆಚ್ಚು ಹಸಿರಾಗಿ ಕಂಡು ಜನರನ್ನು ಆಕರ್ಷಿಸುತ್ತದೆ. ಈ ಬಟಾಣಿಯ ಬಣ್ಣ ಕಿಡ್ನಿಯ ಮೇಲೆ ಪರಿಣಾಮ ಬೀರಲಿದೆ ಎಂದು ವರದಿಯಲ್ಲಿ ಬಹಿರಂಗಪಡಿಸಲಾಗಿದೆ. ಆರೋಗ್ಯ ಹಾಗೂ ಆಹಾರ ಸುರಕ್ಷಿತ ಇಲಾಖೆ ಕೃತಕ ಬಣ್ಣ ಬಳಸಿ ಬಟಾಣಿ ವ್ಯಾಪಾರ ಮಾಡುವ ವ್ಯಾಪಾರಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದೆ.

ಇಡ್ಲಿ ತಯಾರಿಕೆ-ಪಾರ್ಸಲ್ಗೆ ಪ್ಲಾಸ್ಟಿಕ್ ಕವರ್ ಬ್ಯಾನ್
ಇನ್ನೂ ಇಡ್ಲಿ ತಯಾರಿಕೆ ಹಾಗೂ ಅದರ ಪಾರ್ಸಲ್ಗೆ ಬೀದಿ ಬದಿ ವ್ಯಾಪಾರಿಗಳು ಪ್ಲಾಸ್ಟಿಕ್ ಪೇಪರ್ ಬಳಕೆ ಮಾಡುತ್ತಾರೆ. ಈ ಬಗ್ಗೆ ಕೂಡ ಬೆಂಗಳೂರಿನ 221ಕ್ಕೂ ಹೆಚ್ಚು ಕಡೆ ಸಂಗ್ರಹಿಸಿದ್ದ ಮಾದರಿಯಲ್ಲಿ 51 ಮಾದರಿಯ ಇಡ್ಲಿ ಅಸುರಕ್ಷಿತ ಎಂದು ವರದಿ ಬಂದಿದೆ. ಕ್ಯಾನ್ಸರ್ ಕಾರಕ ಇಡ್ಲಿ ಬಗ್ಗೆ ವರದಿ ಬಂದಂತೆ ಆಹಾರ ತಯಾರಿಕೆ ಹಾಗೂ ಪಾರ್ಸಲ್ ವೇಲೆ ಪ್ಲಾಸ್ಟಿಕ್ ಬ್ಯಾನ್ ಮಾಡುವುದಾಗಿ ಸಚಿವರು ಹೇಳಿದ್ದಾರೆ. ಇಂತಹ ಇಡ್ಲಿ ಸೇವನೆ ಕ್ಯಾನ್ಸರ್ ಬರಲು ನೇರ ಸಂಬಂಧ ಹೊಂದಿಲ್ಲದೇ ಇದ್ದರು ಕೂಡ ಕ್ಯಾನ್ಸರ್ ಬರುವ ಅಂಶವನ್ನು ದೇಹದ ಒಳಗೆ ಹೆಚ್ಚಿಸುತ್ತದೆ. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಟ್ಯಾಟೂವಿನಿಂದ ಹೆಚ್ಐವಿ
ಇನ್ನೂ ಟ್ಯಾಟೂ ಹಾಕಿಸಿಕೊಳ್ಳುವುದರಿಂದಲೂ ಹೆಚ್ಐವಿ ಸೊಂಕು ಬರುತ್ತದೆ ಎನ್ನುವ ಅಂಶ ಬಯಲಾಗಿದೆ. ಯುವಕ ಯುವತಿಯರು ಮೈ ಕೈಗೆಲ್ಲಾ ಟ್ಯಾಟೂ ಹಾಕಿಸಿಕೊಳ್ಳುತ್ತಾರೆ. ಆದರೆ ರಸ್ತೆ ಬದಿಯ ಟ್ಯಾಟೂವಿನಿಂದ ಹೆಚ್ಐವಿ ಹಾಗೂ ಸ್ಕಿನ್ ಕ್ಯಾನ್ಸರ್, ಚರ್ಮ ರೋಗ ಬರುತ್ತಿದೆಯಂತೆ. ಈ ಬಗ್ಗೆ ಪರೀಕ್ಷೆ ನಡೆಸಿದಾಗ ಟ್ಯಾಟೂ ಹಾಕಲು ಬಳಸುವ ಕಲರ್ನಲ್ಲಿ 22 ಮಾದರಿಯ ಮೆಟಲ್ ಇರುವುದು ಪತ್ತೆಯಾಗಿದೆ. ಇದರಿಂದ ಹೆಚ್ಐವಿ ಹಾಗೂ ಸ್ಕಿನ್ ಕ್ಯಾನ್ಸರ್, ಚರ್ಮ ರೋಗ ಬರುತ್ತದೆ. ಮಾರಣಾಂತಿಕ ಕೆಮಿಕಲ್ ಬಳಕೆಯಿಂದಾಗಿ ಮಾರಕ ರೋಗಗಳು ಬರುತ್ತಿವೆ. ಹೀಗಾಗಿ ಟ್ಯಾಟೂಗೆ ಹೊಸ ಕಾನೂನು ರಚಿಸಲು ಆರೋಗ್ಯ ಇಲಾಖೆ ಮುಂದಾಗಿದೆ.












Click it and Unblock the Notifications