'ಪ್ರಬುದ್ಧ' ಯೋಜನೆಯಡಿ ವಿದೇಶದಲ್ಲಿ ವ್ಯಾಸಂಗಕ್ಕೆ ಸಹಾಯಧನ ಅರ್ಜಿ ಹಾಕಿ
ಉಡುಪಿ, ನವೆಂಬರ್ 25; ಉಡುಪಿ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯು 'ಪ್ರಬುದ್ಧ' ಯೋಜನೆಯಡಿ ಅರ್ಜಿಗಳನ್ನು ಆಹ್ವಾನಿಸಿದೆ. ಈ ಯೋಜನೆಯಡಿ ವಿದೇಶಿ ವಿಶ್ವ ವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗಕ್ಕಾಗಿ ಧನ ಸಹಾಯವನ್ನು ನೀಡಲಾಗುತ್ತದೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ವಿದೇಶಿ ವಿಶ್ವವಿದ್ಯಾನಿಲಯಗಳಲ್ಲಿ ಸ್ನಾತಕೋತ್ತರ ಮತ್ತು ಪಿಹೆಚ್ಡಿ ಪದವಿ ಪಡೆಯಲು ಧನಸಹಾಯ ನೀಡುವ ಉದ್ದೇಶದಿಂದ 'ಪ್ರಬುದ್ಧ' ಯೋಜನೆ ಜಾರಿಗೆ ತರಲಾಗಿದೆ.
ಸಮಾಜ ಕಲ್ಯಾಣ ಇಲಾಖೆಯ ಪರೀಕ್ಷಾ ಪೂರ್ವ ತರಬೇತಿ ಕೇಂದ್ರ, ಬೆಂಗಳೂರು ಮೂಲಕ ಈ ಯೋಜನೆಯನ್ನು ಅನುಷ್ಟಾನಗೊಳಿಸಲಾಗುತ್ತಿದೆ. ಸ್ನಾತಕೋತ್ತರ ಪದವಿ ಅಧ್ಯಯನದ ಗರಿಷ್ಠ ಕೋರ್ಸ್ ಅವಧಿ 2 ವರ್ಷ, ಪಿಹೆಚ್ಡಿ ಅಧ್ಯಯನಕ್ಕೆ ಗರಿಷ್ಠ 4 ವರ್ಷವಾಗಿದೆ.

ಅರ್ಹತೆಗಳು; ಅರ್ಜಿಗಳನ್ನು ಸಲ್ಲಿಸುವ ಅಭ್ಯರ್ಥಿಯು ಕರ್ನಾಟಕದ ನಿವಾಸಿಯಾಗಿರಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿರಬೇಕು. ಯುಜಿಸಿ ಮಾನ್ಯತೆ ಪಡೆದ ವಿಶ್ವ ವಿದ್ಯಾಲಯದಿಂದ ಪದವಿಯನ್ನು ಪಡೆದಿರಬೇಕು.
ಸ್ನಾತಕೋತ್ತರ ಪದವಿಗೆ ಮತ್ತು ಪಿಹೆಚ್ಡಿ ಪದವಿಗೆ ಆಯ್ಕೆ ಬಯಸುವ ಅಭ್ಯರ್ಥಿಗಳು ಪದವಿಯಲ್ಲಿ ಕನಿಷ್ಟ ಶೇ 55 ರಷ್ಟು ಅಂಕವನ್ನು ಪಡೆದಿರಬೇಕು. QS/ US News/ Overall Global Rankingಗಳಲ್ಲಿ 300ರೊಳಗೆ ಸ್ಥಾನ ಪಡೆದ ವಿದೇಶಿ ವಿಶ್ವವಿದ್ಯಾಲಯ/ ಸಂಸ್ಥೆಗಳಲ್ಲಿ ಪ್ರವೇಶ ಪಡೆದಿರಬೇಕು.
ಸ್ನಾತಕೋತ್ತರ ಪದವಿಗೆ ಅರ್ಜಿ ಸಲ್ಲಿಸುವವರಿಗೆ 35 ವರ್ಷ, ಪಿಹೆಚ್ಡಿ ವ್ಯಾಸಂಗಕ್ಕೆ ಗರಿಷ್ಟ ಮಿತಿ 40 ವರ್ಷಗಳು ಎಂದು ನಿಗದಿ ಮಾಡಲಾಗಿದೆ. ಸರ್ಕಾರಿ ನೌಕರರ ಮಕ್ಕಳು ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ. ಅರ್ಜಿಗಳನ್ನು ಆನ್ಲೈನ್ ಮೂಲಕ sw.kar.nic.in ನಲ್ಲಿ ಸಲ್ಲಿಸಬೇಕಿದೆ.
ಕುಟುಂಬದ ವಾರ್ಷಿಕ ಆದಾಯ ರೂ. 8 ಲಕ್ಷಕ್ಕಿಂತ ಕಡಿಮೆ ಇದ್ದರೆ ಶೇ 100ರಷ್ಟು ಸಹಾಯಧನ ನೀಡಲಾಗುತ್ತದೆ. ರೂ. 8 ರಿಂದ 15 ಲಕ್ಷದ ತನಕ ಇದ್ದರೆ ಶೇ 50ರಷ್ಟು ಸಹಾಯಧನ ಸಿಗಲಿದೆ. ರೂ. 15 ರಿಂದ 25 ಲಕ್ಷ ರೂ. ತನಕ ಇದ್ದರೆ ಶೇ 33ರಷ್ಟು ಸಹಾಯಧನ ಸಿಗಲಿದೆ ಎಂದು ತಿಳಿಸಲಾಗಿದೆ.
ಈಗಾಗಲೇ ಅಭ್ಯರ್ಥಿಗಳು ಸ್ನಾತಕೋತ್ತರ ಪದವಿಯನ್ನು ಭಾರತದಲ್ಲಿ ಅಥವ ವಿದೇಶದಲ್ಲಿ ಪೂರ್ಣಗೊಳಿಸಿದ್ದಲ್ಲಿ ಮತ್ತೊಮ್ಮೆ ಅರ್ಜಿ ಸಲ್ಲಿಕೆ ಮಾಡಲು ಅರ್ಹರಲ್ಲ ಎಂದು ಸ್ಪಷ್ಟಪಡಿಸಲಾಗಿದೆ.












Click it and Unblock the Notifications