ಸತೀಶ ಜಾರಕಿಹೊಳಿಗೆ ಅಂತ್ಯಕಾಲ ಬಂದಿದೆ: ಬಸನಗೌಡ ಪಾಟೀಲ್ ಯತ್ನಾಳ
ವಿಜಯಪುರ,ನವೆಂಬರ್ 16: ಕೂಡಲ ಸಂಗಮ ಸ್ವಾಮೀಜಿ ಬಿಟ್ಟರೆ ನಮ್ಮ ಸಮಾಜದ ಇತರೆ ಸ್ವಾಮೀಜಿಗಳು ಬುಕ್ಕಿಂಗ್ ಸ್ವಾಮೀಜಿಗಳು ಎಂದು ಬಸನಗೌಡ ಪಾಟೀಲ್ ಯತ್ನಾಳ ಆರೋಪ ಮಾಡಿದ್ದಾರೆ.
ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ಬುಧವಾರ ಮಾಧ್ಯಮಗಳಿಗೆ ಮಾತನಾಡಿದ ಅವರು, ನಮ್ಮ ಸಮಾಜದ ಮೀಸಲಾತಿಗಾಗಿ ತಮ್ಮ ಜೀವನವನ್ನೇ ಮೀಸಲಾಗಿಟ್ಟವರು ಕೂಡಲಸಂಗಮ ಶ್ರೀಗಳು. ಉಳಿದವರೆಲ್ಲಾ ಬುಕ್ಕಿಂಗ್ ಸ್ವಾಮಿಗಳು, ಅವರೆಲ್ಲಾ ರೊಕ್ಕಾ ಹೊಡಕೊತ್ತ ಶ್ರೀ ಗುರು ಬಸವಲಿಂಗಾಯ ನಮಃ ಅನ್ನುತ್ತಾರೆ. ಫೈವ್ ಸ್ಟಾರ್ ಹೊಟೇಲ್ ತರಹ ಮಠ ಕಟ್ಟಿಕೊಂಡು ಕುಳಿತಿದ್ದಾರೆ. ಈಗ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಸಿಗುತ್ತದೆ ಎಂದು ತಿಳಿದು ನಮಗಿನ್ನು ಉಳಿಗಾಲವಿಲ್ಲಾ ಎಂಬುದು ಅವರಿಗೆ ಗೊತ್ತಾಗಿದೆ. ಈಗ ಸಮಾಜದ ಬಗ್ಗೆ ಮಾತನಾಡುತ್ತಿದ್ದಾರೆ. ಅಲ್ಲದೇ ಗದಗ ಪ್ರವಾಸ ಮಾಡುತ್ತೇವೆ. ಹರಿಹರದಲ್ಲಿ ಸಭೆಯನ್ನು ಮಾಡುತ್ತೇವೆ ಎಂದು ಹೇಳುತ್ತಿದ್ದಾರೆಂದು ಪರೋಕ್ಷವಾಗಿ ಪಂಚಮಸಾಲಿ ಹರಿಹರ ಪೀಠದ ವಚನಾನಂದ ಸ್ವಾಮೀಜಿ ವಿರುದ್ದ ಕಿಡಿಕಾಡಿದರು.
ಸತೀಶ ಜಾರಕಿಹೊಳಿಗೆ ಅಂತ್ಯಕಾಲ
ಇನ್ನೂ ಸತೀಶ ಜಾರಕಿಹೊಳಿ ಅವರಿಗೆ ಅಂತ್ಯಕಾಲ ಬಂದಿದೆ. ಹೀಗಾಗಿ ಅವರು ಈ ರೀತಿ ವರ್ತಿಸುತ್ತಿದ್ದಾರೆ ಎಂದು ಸತೀಶ್ ಜಾರಕಿಹೊಳಿ ವಿರುದ್ದ ಯತ್ನಾಳ ವಾಗ್ದಾಳಿ ನಡೆಸಿದ್ದರು. ಗೋಕಾಕ ಒಂದು ರೀತಿ ಬಿಹಾರ ರಾಜ್ಯದಂತಾಗಿತ್ತು. ನನಗೆ ನೀ ಗೋಕಾಕಕ್ಕೆ ಹೆಂಗ ಬರ್ತಿ ಎಂದು ಸವಾಲು ಹಾಕಿದ್ದರು.ಸತೀಶ ಜಾರಕಿಹೊಳಿ ಅವರ ಊರಿನಲ್ಲಿ ಯಾರೂ ಹೋಗುವುದಿಲ್ಲ. ಅಲ್ಲಿಗೆ ಹೋಗಿ ಯಾರೂ ಭಾಷಣ ಮಾಡಲು ಸಾಧ್ಯವಿಲ್ಲ. ಅಲ್ಲಿ ಯಾರಿಗೂ ಧಮ್ ಇಲ್ಲ. ಅವರ ಪರ್ಮಿಶನ್ ಇಲ್ಲದೇ ಯಾರೂ ಗೋಕಾಕಕ್ಕೆ ಬರಬಾರದು ಎಂದು ಸತೀಶ ಜಾರಕಿಹೊಳಿ ಅವರದೇ ಒಂದು ಸಾಮ್ರಾಜ್ಯ ಎಂಬಂತೆ ಮಾಡಿಕೊಂಡಿದ್ದರು. ಇಷ್ಟು ದಿನ ಮಾಡಿದಂತೆ ಇನ್ಮುಂದೆ ನಡೆಯಲ್ಲ. ನನಗೆ ಸವಾಲು ಹಾಕಿದ್ದರಿಂದ ಉತ್ತರ ಕೊಡಲು ಹೋಗಿದ್ದೆ ಎಂದು ಸ್ಪಷ್ಟಪಡಿಸಿದರು.
ವಿಜಯಪುರ ಮತ ಕ್ಷೇತ್ರದಲ್ಲಿ ತಿಂಡಿ ಇದ್ದವರು ನಿಲ್ಲಲಿ
ಮುಂದಿನ ವಿಧಾನಸಭಾ ಚುನಾವಣೆಗೆ ವಿಜಯಪುರ ನಗರ ಕ್ಷೇತ್ರದಿಂದ ಶಾಸಕ ಶಿವಾನಂದ ಪಾಟೀಲ್ ಪುತ್ರಿ ಸಂಯುಕ್ತಾ ಪಾಟೀಲ್ ಕಣಕ್ಕಿಳಿಯೋ ಸುದ್ದಿ ಹರಿದಾಡುತ್ತಿದ್ದು, ಈ ಕುರಿತು ಶಾಸಕ ಯತ್ನಾಳ ಮಾತನಾಡಿ, ಯಾರು ನಿಲ್ಲೋರು, ತಿಂಡಿ ಇದ್ದವರು ನಿಲ್ಲಲಿ ಎಂದು ಸವಾಲು ಹಾಕಿದರು. ಈ ಹಿಂದೆ ಮಾಜಿ ಸಿಎಂ ಸಿದ್ಧರಾಮಯ್ಯ ವಿಜಯಪುರಕ್ಕೆ ಬಂದಿದ್ದಾಗ, ನಾನು ಮುಂದಿನ ಸಲ ಮುಸ್ಲಿಮರನ್ನೇ ಆರಿಸಿ ತರುವುದಾಗಿ ಜಿಗದಾಡಿ ಭಾಷಣ ಮಾಡಿದ್ದ. ಈಗ ಮುಸ್ಲಿಮ ಅಭಿಮಾನ ಎಲ್ಲಿ ಹೋಯಿತು? ಅವರ ಹೇಳಿಕೆಯ ಬಗ್ಗೆ ಮುಸ್ಲಿಮರು ಚಿಂತನೆ ನಡೆಸಬೇಕು. ಈಗ ಅವರ ಪುತ್ರಿ ಯಾಕೆ ಅರ್ಜಿ ಸಲ್ಲಿಸಿದ್ದಾರೆ ಎಂಬುದನ್ನು ಅವರೇ ಹೇಳಬೇಕು. ಆ ಹಿಂದೆ ಇಲ್ಲಿಯೇ ಇದ್ದ ಒಬ್ಬ ಅವನೂ ಹಣ ವಸೂಲಿ ಮಾಡಬೇಕು ಎಂದುಕೊಂಡಿದ್ದ ಎಂದು ವಾಗ್ದಾಳಿ ನಡೆಸಿದರು
ಮಾಜಿ ಸಿಎಂ ಸಿದ್ಧರಾಮಯ್ಯ ಬಾದಾಮಿ ಬದಲು ಬೇರೆ ಕ್ಷೇತ್ರದಿಂದ ಸ್ಪರ್ಧೆ ಬಯಸುತ್ತಿರುವ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಯತ್ನಾಳ, ಬಾದಾಮಿಗಿಂತ ಹಳೆಯ ಗಂಡನ ಪಾದವೇ ಗತಿ ಎಂಬ ರೀತಿಯಲ್ಲಿ ಮತ್ತೆ ತಮ್ಮ ಮತಕ್ಷೇತ್ರದತ್ತ ಹೊರಟಿದ್ದಾರೆ ಎಂದು ಅವರು ವ್ಯಂಗ್ಯವಾಡಿದರು.
ರೈತರಿಗೆ ಯೋಗ್ಯ ದರ ಸಿಗಬೇಕು
ರಾಜ್ಯ ಸರಕಾರ ನಂದಿನಿ ಹಾಲಿನ ಬೆಲೆ ಏರಿಕೆ ನಿರ್ಧಾರ ಮಾಡಿ ಮತ್ತೆ ಅದನ್ನು ಹಿಂಪಡೆದಿರುವ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ, ರೈತರಿಗೂ ಯೋಗ್ಯ ದರ ಸಿಗಬೇಕು ಎಂದು ಹೇಳಿದರು. ಈಗ ರೈತರ ಹಾಲಿಗೆ ನೀಡಲಾಗುತ್ತಿರುವ ಬೆಲೆಯನ್ನು ಗಮನಿಸಿದರೆ, ಆ ಹಣದಲ್ಲಿ ಜಾನುವಾರುಗಳ ಪೋಷಣೆ ಮಾಡಲು ಆಗುವುದಿಲ್ಲ. ಸರಕಾರ ವೈಜ್ಞಾನಿಕ ನಿರ್ಣಯ ಮಾಡಬೇಕು. ಒಮ್ಮೆ ಮಾಡಿದ ನಿರ್ಣಯವನ್ನು ಹಿಂದಕ್ಕೆ ಪಡೆಯಬಾರದು ಎಂದು ಹೇಳಿದರು.