5 ಸಾವಿರ ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ ಬಿದ್ದ ಜೆಇ
ಚಿಕ್ಕಮಗಳೂರು, ಆ.3 : ರೈತನಿಂದ ಐದು ಸಾವಿರ ರೂ. ಲಂಚ ಸ್ವೀಕರಿಸುವಾಗ ಮೆಸ್ಕಾಂ ಜೆಇ ಮತ್ತು ಲೈನ್ ಮೆನ್ ಎಸಿಬಿ ಬಲೆಗೆ ಬಿದ್ದಿದ್ದಾರೆ. ಚಿಕ್ಕಮಗಳೂರು ಜಿಲ್ಲಾ ಎಸಿಬಿ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಯುತ್ತಿದೆ.
ಬೀರೂರು ಮೆಸ್ಕಾಂ ಕಚೇರಿಯ ಜೆಇ ಹರೀಶ್ ಕುಮಾರ್ ಮತ್ತು ಲೈನ್ ಮೆನ್ ಶ್ರೀನಿವಾಸ್ ಎಸಿಬಿ ಬಲೆಗೆ ಬಿದ್ದವರು. ಗುರುವಾರ ರೈತನಿಂದ ಹಣ ಪಡೆಯುವಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ, ಇಬ್ಬರನ್ನು ಬಂಧಿಸಿದ್ದಾರೆ.

ಕಡೂರು ತಾಲೂಕಿನ ಬೀರೂರು ಹೋಬಳಿಯ ರೈತರೊಬ್ಬರು ತಮ್ಮ ಜಮೀನಿನಲ್ಲಿ ಸುಟ್ಟು ಹೋಗಿದ್ದ ಟ್ರಾನ್ಸ್ ಫಾರ್ಮರ್ ಬದಲಾವಣೆಗಾಗಿ ಬೀರೂರು ಮೆಸ್ಕಾಂ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಬದಲಾವಣೆ ಮಾಡಿಕೊಡಲು ಐದು ಸಾವಿರ ರೂ. ಲಂಚ ಕೇಳಿದ್ದರು.
ರೈತ ಈ ಕುರಿತು ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದರು. ದೂರಿನ ಅನ್ವಯ ಕಾರ್ಯಾಚರಣೆ ನಡೆಸಿದ ಎಸಿಬಿ ಅಧಿಕಾರಿಗಳು ಇಂದು ಹಣ ಪಡೆಯುವಾಗ ಜೆಇ ಮತ್ತು ಲೈನ್ ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ - 1988ರ ಅಡಿ ಜೆಇ ಹರೀಶ್ ಮತ್ತು ಲೈನ್ ಮೆನ್ ಶ್ರೀನಿವಾಸ್ ವಿರುದ್ಧ ಪ್ರಕರಣವನ್ನು ದಾಖಲು ಮಾಡಿಕೊಳ್ಳಲಾಗಿದೆ.












Click it and Unblock the Notifications