Anna Bhagya: ನಾಳೆಯಿಂದಲೇ ಅನ್ನಭಾಗ್ಯ ಯೋಜನೆ ಜಾರಿ: ಅಕ್ಕಿ ಜೊತೆಗೆ ಹಣ ವರ್ಗಾವಣೆ : ಕೆ ಎಚ್ ಮುನಿಯಪ್ಪ
ಬೆಂಗಳೂರು, ಜೂನ್ 30: ಅನ್ನಭಾಗ್ಯ ಯೋಜನೆ ಜುಲೈ 1 ರಿಂದ ಆರಂಭವಾಗಲಿದ್ದು, ಅಕ್ಕಿ ಜೊತೆಗೆ ಫಲಾನುಭವಿಗಳಿಗೆ 170 ರೂಪಾಯಿ ಹಣವನ್ನು ವರ್ಗಾವಣೆ ಮಾಡಲಾಗುವುದು ಎಂದು ಆಹಾರ ಸಚಿವ ಕೆ.ಎಚ್ ಮುನಿಯಪ್ಪ ಹೇಳಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಪಡಿತರ ಚೀಟಿ ಹೊಂದಿರುವವರ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆಯಾಗಲಿದೆ. ಯಾರು ಖಾತೆ ತೆರೆದಿಲ್ಲವೋ ಅಂತಹವರು ಬ್ಯಾಂಕ್ ಖಾತೆ ತೆರೆಯಬೇಕಾಗುತ್ತೆ, ಅಕ್ಕಿ ದಾಸ್ತಾನು ಸಂಗ್ರಹವಾಗುವವರೆಗೂ ಮಾತ್ರ ಹಣ ನೀಡುತ್ತೇವೆ ಎಂದು ಹೇಳಿದರು.

ಫಲಾನುಭವಿಗಳಿಗೆ ಒಂದು ಕೆ ಜಿ ಗೆ 34 ರೂಪಾಯಿಯಂತೆ ಹಣ ನೀಡಲಾಗುವುದು. ಎಷ್ಟು ತಿಂಗಳು ಅಕ್ಕಿ ಬದಲಿಗೆ ಹಣ ನೀಡಲಾಗುವುದು ಎಂಬುದನ್ನ ಹೇಳೋದಿಲ್ಲ. ಇದು ಅಕ್ಕಿ ಪೂರೈಕೆಯಾಗದ ಕಾರಣ ಹಣ ನೀಡುವುದು ತಾತ್ಕಾಲಿಕ ಮಾತ್ರವಾಗಿದೆ. ಎಂಎಸ್ ಪಿ ಮೂಲಕ ಧಾನ್ಯ ಖರೀದಿ ಮಾಡುತ್ತೇವೆ. ಎರಡು ಕೆಜಿ, ಜೋಳ/ರಾಗಿ ಕೊಡುತ್ತೇವೆ, ಎಂಟು ಕೆಜಿ ಅಕ್ಕಿ ಕೊಡುತ್ತೇವೆ.ಮಾತು ಕೊಟ್ಟಂತೆ ಜುಲೈ 1 ರಿಂದ ಯೋಜನೆ ಜಾರಿ ಆಗುತ್ತದೆ ಎಂದು ಹೇಳಿದರು.
ಕೇಂದ್ರ ಸರ್ಕಾರ ಮನಸ್ಸು ಬದಲಾಯಿಸಿ ಅಕ್ಕಿ ಕೊಟ್ರೆ, ನಾವು ಅಕ್ಕಿ ಹಂಚಿಕೆ ಮಾಡುತ್ತೇವೆ. ಕೇಂದ್ರ ದ ಬಳಿ ಅಕ್ಕಿ ದಾಸ್ತಾನು ಇದೆ, ಇಲ್ಲವೆ ಟೆಂಡರ್ ಕರೆದು ಅಕ್ಕಿ ಖರೀದಿ ಮಾಡುತ್ತೇವೆ ಹಣ ರೆಡಿ ಇದೆ,ಅಕೌಂಟ್ ಗೆ ವರ್ಗಾವಣೆ ಆಗುತ್ತೆ, ನಾಳೆಯಿಂದನೆ ಅಕೌಂಟ್ ಗೆ ಹಣ ಹೋಗುತ್ತದೆ. ಅನ್ನಭಾಗ್ಯ ಯೋಜನೆಗೆ ಸಮಾವೇಶ ಅವಶ್ಯಕತೆ ಇಲ್ಲ.
ನಾಳೆಯಿಂದ ಅಕೌಂಟ್ ಗೆ ಹಣ ವರ್ಗಾವಣೆ ಆಗಲಿದೆ. 90% ಅಕೌಂಟ್ ಇದ್ದಾವೆ ಅಂತ ಮಾಹಿತಿ ಇದೆ, ಅಕೌಂಟ್ ಇಲ್ಲದವರು ಅಕೌಂಟ್ ಮಾಡಿಸಬೇಕು. ಒಬ್ಬರಿಗೆ 170 ರೂಪಾಯಿ ಕೊಡುತ್ತೇವೆ ಅಕ್ಕಿ ಸಿಗುವರೆಗೆ ಮಾತ್ರ ಈ ಹಣ ವರ್ಗಾವಣೆ ಆಗಲಿದೆ. ಅಕ್ಕಿ ಸಿಕ್ಕ ಬಳಿಕ ಅಕ್ಕಿ ಕೊಡುತ್ತೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಧಾನ್ಯ ಕೊಡುತ್ತೇವೆ ಎಂದಿದ್ದಾರೆ. ದಕ್ಷಿಣದಲ್ಲಿ ರಾಗಿ ಕೊಡುತ್ತೇವೆ, ಉತ್ತರದಲ್ಲಿ ಜೋಳ ಕೊಡುತ್ತೇವೆ. ರಾಗಿ ದಾಸ್ತಾನು ಇದೆ, ಜೋಳ ದಾಸ್ತಾನು ಇಲ್ಲ. ಹೀಗಾಗಿ ದಾಸ್ತಾನು ಆದ ಬಳಿಕ ಧಾನ್ಯಗಳ ಹಂಚಿಕೆ ಮಾಡುತ್ತೇವೆ ಎಂದು ಹೇಳಿದರು.
ಅನ್ನಭಾಗ್ಯ ಯೋಜನೆ ಜುಲೈ 1 ರಿಂದ ರಾಜ್ಯಾದ್ಯಂತ ಆರಂಭಗೊಳ್ಳಲಿದೆ. ಆದರೆ ದೊಡ್ಡ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಕುರಿತಾಗಿ ಯಾವುದೇ ಸ್ಪಷ್ಟತೆ ಸಿಕ್ಕಿಲ್ಲ. ಈಗಾಗಲೇ ಶಕ್ತಿ ಯೋಜನೆಯನ್ನು ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರೆ, ರಾಜ್ಯಾಧ್ಯಂತ ವಿವಿಧ ಜಿಲ್ಲೆಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರುಗಳು ಚಾಲನೆ ನೀಡಿದ್ದರು. ಆದರೆ ಅನ್ನಭಾಗ್ಯ ಯೋಜನೆಗೆ ದೊಡ್ಡ ಮಟ್ಟದಲ್ಲಿ ಚಾಲನೆ ಸಿಗಲಿದ್ಯಾ ಎಂಬುವುದರ ಬಗ್ಗೆ ಇನ್ನೂ ಯಾವುದೇ ಮಾಹಿತಿ ತಿಳಿದು ಬಂದಿಲ್ಲ.












Click it and Unblock the Notifications