ಮಕ್ಕಳಿಗೆ ಸಂಸ್ಕೃತ ಜ್ಞಾನವೂ ಅಗತ್ಯ : ಪೇಜಾವರ ಶ್ರೀ
ಉಡುಪಿ, ಜೂ. 5 : ಇಂದಿನ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳಿಗೆ ಭಾಷಾಜ್ಞಾನ, ತತ್ವಜ್ಞಾನ, ತಂತ್ರಜ್ಞಾನ ಮತ್ತು ಸಂಸ್ಕೃತ ಜ್ಞಾನ ಅತ್ಯಗತ್ಯವಾಗಿದೆ. ಈ ಅವಶ್ಯಕತಗಳೊಂದಿಗೆ ಭವಿಷ್ಯದ ಗುರಿ ಸಾಧಿಸುವ ಶಿಕ್ಷಣ ನೀಡುವುದು ಸಮಾಜದ ಕರ್ತವ್ಯವಾಗಿದೆ ಎಂದು ಉಡುಪಿ ಶ್ರೀ ಪೇಜಾವರ ಮಠಾಧೀಶ ಶ್ರೀವಿಶ್ವೇಶ ತೀರ್ಥ ಶ್ರೀಪಾದರು ಅಭಿಪ್ರಾಯಪಟ್ಟಿದ್ದಾರೆ.
ಉಡುಪಿಯ ಕುಂಜಾರುಗಿರಿ ಸಮೀಪ ಪಾಜಕ ಕ್ಷೇತ್ರದಲ್ಲಿ ಪೇಜಾವರ ಮಠದ ಪಾಜಕ ಪ್ರತಿಷ್ಠಾನ ವತಿಯಿಂದ ಆರಂಭಿಸಲಾಗಿರುವ ಕೇಂದ್ರೀಯ ಪಠ್ಯಕ್ರಮ ಶಿಕ್ಷಣದ ನೂತನ ವಿದ್ಯಾ ಸಂಸ್ಥೆ 'ಆನಂದ ತೀರ್ಥ ವಿದ್ಯಾಲಯ' ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಪೇಜಾವರ ಮಠದ ಕಿರಿಯ ಯತಿ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿ, ಮಳೆ ಬಂದಾಗ ಬೀಜಗಳು ಚಿರುರೊಡೆದು, ಮರಗಳಾಗುತ್ತವೆ. ಹಾಗಯೇ ಶಾಲೆಗಳು ಮಕ್ಕಳಿಗೆ ಸೃಜನಶೀಲತೆ ಕಲಿಸುವ ಮೊದಲ ಮೆಟ್ಟಿಲಾಗಿವೆ. ಮಕ್ಕಳಲ್ಲಿ ಶಿಕ್ಷಣ ಎಂಬ ಬೀಜವನ್ನು ಬಿತ್ತುವ ಕೆಲಸವನ್ನು ಶಾಲೆಗಳು ಮಾಡಬೇಕು ಎಂದುರು.
ನಗರಾಭಿವೃದ್ಧಿ ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯ್ ಕುಮಾರ್ ಸೊರಕೆ ಮಾತನಾಡಿ, ಪೇಜಾವರ ಮಠ ಧಾರ್ಮಿಕ ಸೇವೆಯ ಜೊತೆಗೆ ಶಿಕ್ಷಣ ಕ್ಷೇತ್ರಕ್ಕೂ ಸಾಕಷ್ಟು ಕೊಡುಗೆ ನೀಡಿದೆ. ಮಠ ತನ್ನ ಸೇವೆಯನ್ನು ಇದೇ ಭವಿಷ್ಯದಲ್ಲೂ ಮುಂದುವರೆಸಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಸಮಾರಂಭವ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರಿನ ಇಂಡಿಯನ್ ಓವರ್ಸೀಸ್ ಬ್ಯಾಂಕ್ ಪ್ರಾದೇಶಿಕ ಪ್ರಬಂಧಕ ಸುಧಾಕರ್, ಎನ್ಐಟಿಕೆ ನಿವೃತ್ತ ಡೀನ್ ಡಾ.ಬಿ.ಆರ್. ಸಾಮಗ, ಕುರ್ಕಾಲು ಗ್ರಾ.ಪಂ. ಅಧ್ಯಕ್ಷ ಭುವನೇಶ್ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.












Click it and Unblock the Notifications