ರಾಜ್ಯಕ್ಕೆ ಮತ್ತೆ ದಿಗ್ವಿಜಯ್: ಸಿದ್ದು ವಿರುದ್ದ ದೂರು,ದುಮ್ಮಾನ
ಬೆಂಗಳೂರು, ನ 4: ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯದ ಉಸ್ತುವಾರಿ ದಿಗ್ವಿಜಯ್ ಸಿಂಗ್ ಬುಧವಾರ (ನ 5) ರಾಜ್ಯಕ್ಕೆ ಮತ್ತೆ ಭೇಟಿ ನೀಡಲಿದ್ದಾರೆ. ಇದು ದಿಗ್ವಿಜಯ್ ಅವರ ಖಾಸಗಿ ಭೇಟಿಯಾಗಿದ್ದರೂ, ಕಾಂಗ್ರೆಸ್ ನಾಯಕರು ತಮ್ಮ ಕಷ್ಟಸುಖಗಳನ್ನು ವಿವರಿಸಲು ಸರ್ವ ಸನ್ನದ್ದರಾಗಿದ್ದಾರೆ.
ಪ್ರಮುಖವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆಸಲು ಉದ್ದೇಶಿಸಿರುವ ಸಚಿವರ ಮೌಲ್ಯಮಾಪನಕ್ಕೆ ಕಾಂಗ್ರೆಸ್ ಮುಖಂಡರು ದಿಗ್ವಿಜಯ್ ಸಿಂಗ್ ಬಳಿ ವಿರೋಧ ವ್ಯಕ್ತ ಪಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ. (ನಿಗಮ-ಮಂಡಳಿ ಕಗ್ಗಂಟು ಬಿಡಿಸಲು ಸಿಂಗ್ ಸೂತ್ರ)
ಇದಾದ ನಂತರ ನಿಗಮ ಮಂಡಳಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಲು ದಿಗ್ವಿಜಯ್ ಸಿಂಗ್ ಮೂಲಕ ಮುಖ್ಯಮಂತ್ರಿಗಳಿಗೆ ಮಗುದೊಮ್ಮೆ ಒತ್ತಡ ತರಲು ಸಜ್ಜಾಗಿದ್ದಾರೆ ಎಂದು ತಿಳಿದು ಬಂದಿದೆ.
ಗುರುವಾರ ದಿಗ್ವಿಜಯ್ ದೆಹಲಿಗೆ ವಾಪಸ್ ಆಗುವ ಮುನ್ನ ಅವರನ್ನು ಭೇಟಿಯಾಗಿ ಪಕ್ಷದಲ್ಲಿನ ಬೆಳವಣಿಗೆ, ಮುಖ್ಯಮಂತ್ರಿಗಳ ಕಾರ್ಯವೈಖರಿಯ ಬಗ್ಗೆ ಕೂಡಾ ದಿಗ್ವಿಜಯ್ ಸಿಂಗ್ ಅವರಿಗೆ ವಿವರಿಸಲು ಕಾಂಗ್ರೆಸ್ ಮುಖಂಡರು ಸಿದ್ದರಾಗಿದ್ದಾರೆ ಎಂದು ಪಕ್ಷದ ಮೂಲಗಳಿಂದ ತಿಳಿದು ಬಂದಿದೆ.
ನಿಗಮ ಮಂಡಳಿ ಸ್ಥಾನಗಳಿಗೆ ನಮ್ಮ ಬೇಡಿಕೆಯ ಶೇ.25ರಷ್ಟು ಸ್ಥಾನವನ್ನು ಮೀಸಲಿಡುವಂತೆ ಮಾಜಿ ಶಾಸಕರ ನಿಯೋಗವೊಂದು ಶುಕ್ರವಾರ (ಅ 31) ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಯವರನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಿ ಬಂದಿತ್ತು. (ಸಚಿವರ ಮೌಲ್ಯಮಾಪನಕ್ಕೆ ಸಿದ್ದರಾಮಯ್ಯ ತಯಾರಿ)
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರ ವಿರುದ್ದ ಇನ್ನೂ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ತಮ್ಮ ಕ್ಷೇತ್ರಗಳಲ್ಲಿ ತಮ್ಮ ಮಾತಿಗೆ ಬೆಲೆಯೇ ಇಲ್ಲದಂತಾಗಿದೆ ಎಂದು ನಿಯೋಗ ರಾಹುಲ್ ಗಾಂಧಿಯವರ ಬಳಿ ತಮ್ಮ ನೋವನ್ನು ತೋಡಿಕೊಂಡಿದೆ.
ಕಳೆದ ಒಂದೂವರೆ ವರ್ಷದ ಅವಧಿಯಲ್ಲಿ ತಮ್ಮ ಪಕ್ಷದ ಶಾಸಕರೇ ಸಚಿವರ ವಿರುದ್ದ ದೂರು ನೀಡಿರುವ ಹಿನ್ನಲೆಯಲ್ಲಿ, ಸಚಿವರ ಮೌಲ್ಯಮಾಪನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಜ್ಜಾಗಿದ್ದಾರೆ. ಸಿಎಂ ಈ ನಿರ್ಧಾರಕ್ಕೆ ಪಕ್ಷದೊಳಗೆ ಪರ, ವಿರೋಧ ನಿಲುವು ವ್ಯಕ್ತವಾಗಿದೆ.