ಪರಿಶಿಷ್ಟ ಪಂಗಡಕ್ಕೆ ಕಾಡುಗೊಲ್ಲರ ಸೇರ್ಪಡೆ; ಜನವರಿಯಲ್ಲಿ ಕೇಂದ್ರ ಸಚಿವರ ಭೇಟಿ ಮಾಡಲಿರುವ ಸಿಎಂ
ಬೆಳಗಾವಿ,ಡಿಸೆಂಬರ್ 27: ಕುರಿ ಕಾಯುವ ವೃತ್ತಿಯಲ್ಲಿರುವ ಕಾಡುಗೊಲ್ಲ ಸಮಾಜವನ್ನು ಪರಿಶಿಷ್ಟ ಪಂಗಡದ ಜಾತಿಗಳ ಪಟ್ಟಿಗೆ ಸೇರಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ.ಈ ಕುರಿತು ಕೇಂದ್ರ ಸಾಮಾಜಿಕ ನ್ಯಾಯ ಸಬಲೀಕರಣ ಸಚಿವರನ್ನು ಭೇಟಿಯಾಗಿ ಚರ್ಚಿಸಲು ಜನೆವರಿ ಮೊದಲ ಅಥವಾ ಎರಡನೇ ವಾರದಲ್ಲಿ ಮುಖ್ಯಮಂತ್ರಿಯವರು ನವದೆಹಲಿಗೆ ತೆರಳಲಿದ್ದಾರೆ ಎಂದು ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವರಾದ ಜೆ.ಸಿ.ಮಾಧುಸ್ವಾಮಿ ಹೇಳಿದರು.
ಮಂಗಳವಾರ ವಿಧಾನಸಭೆಯ ಶೂನ್ಯವೇಳೆಯಲ್ಲಿಂದು ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಪ್ರಸ್ತಾಪಿಸಿದ ವಿಷಯಕ್ಕೆ ಪ್ರತಿಕ್ರಿಯಿಸಿ ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿದ ಅವರು ಈ ಮೊದಲು ಹಿಂದುಳಿದ ಬುಡಕಟ್ಟು(ಬಿಟಿ)ಗಳ ಪಟ್ಟಿಯಲ್ಲಿದ್ದ ಕಾಡುಗೊಲ್ಲ ಹಾಗೂ ವಾಲ್ಮೀಕಿನಾಯಕ ಜಾತಿಗಳ ಪೈಕಿ ವಾಲ್ಮೀಕಿನಾಯಕರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿದಾಗ ಕಾಡುಗೊಲ್ಲರನ್ನು ಪ್ರವರ್ಗ 1 ರಲ್ಲಿ ಮುಂದುವರೆಸಲಾಯಿತು.
ಕಾಡುಗೊಲ್ಲರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಅಗತ್ಯವಿದ್ದ ಕುಲಶಾಸ್ತ್ರ ಅಧ್ಯಯನ ಕೈಗೊಳ್ಳಲು ಮಾನವಶಾಸ್ತ್ರಜ್ಞರಾದ ಅನ್ನಪೂರ್ಣಮ್ಮ ನೇತೃತ್ವದ ಸಮಿತಿ ರಚಿಸಲಾಯಿತು.ಅವರು ನೀಡಿದ ವರದಿ ಆಧರಿಸಿ 2014 ರಲ್ಲಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಯಿತು.ಕುಲಶಾಸ್ತ್ರ ಅಧ್ಯಯನದ ಕೆಲವು ಅಂಶಗಳಲ್ಲಿ ಕಾಡುಗೊಲ್ಲರ ಕೆಲವು ಆಚರಣೆಗಳು ಎಸ್.ಟಿ.ಗೆ ಸೇರ್ಪಡೆ ಮಾಡಲು ಪೂರಕವಾಗಿಲ್ಲ ಎಂದು ಕೇಂದ್ರ ಕೆಲವು ಸ್ಪಷ್ಟನೆಗಳನ್ನು ಕೇಳಿತ್ತು.ಬುಡಕಟ್ಟು ಸಂಶೋಧನಾ ಸಂಸ್ಥೆಯ ಮೂಲಕ ಸ್ಪಷ್ಟನೆಗಳನ್ನು ಪಡೆದು ಕೇಂದ್ರಕ್ಕೆ ಕಳುಹಿಸಲಾಗಿದೆ. ಜನೆವರಿ ಮೊದಲ ಅಥವಾ ಎರಡನೇ ವಾರದಲ್ಲಿ ಮುಖ್ಯಮಂತ್ರಿಯವರು ನವದೆಹಲಿಗೆ ತೆರಳಿ ಕೇಂದ್ರ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಚಿವರನ್ನು ಭೇಟಿ ಮಾಡಲಿದ್ದಾರೆ.ರಾಜ್ಯ ಸರ್ಕಾರ ಈ ವಿಷಯದಲ್ಲಿ ಬದ್ಧತೆ ಹೊಂದಿದೆ ಎಂದರು.
ಹಿರಿಯೂರು ಶಾಸಕಿ ಪೂರ್ಣಿಮಾ ಮಾತನಾಡಿ,ಕಳೆದ ತಿಂಗಳು ನವದೆಹಲಿಗೆ ತೆರಳಿದ್ದ ಸಮಾಜದ ನಿಯೋಗಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಅವರ ಸಹಕಾರದಿಂದ ಕೇಂದ್ರ ಸರ್ಕಾರದ ಸಕಾರಾತ್ಮಕ ಪ್ರತಿಕ್ರಿಯೆ ದೊರೆತಿದೆ ಎಂದರು.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ,ಈ ವಿಷಯದಲ್ಲಿ ರಾಜ್ಯ ಸರ್ಕಾರ ಶಿಫಾರಸ್ಸು ಮಾಡಿದರೆ ಸಾಲದು ಕೇಂದ್ರದ ಮೇಲೆ ಒತ್ತಡ ತರಬೇಕು ಎಂದರು
ವನ್ಯ ಪ್ರಾಣಿ ದಾಳಿಯಿಂದ ಮೃತಪಟ್ಟವರ ಪರಿಹಾರ ಪೂರ್ವಾನ್ವಯವಾಗುವಂತೆ ಕ್ರಮ: ಆರ್. ಅಶೋಕ್
ವನ್ಯಪ್ರಾಣಿ ದಾಳಿಯಿಂದ ಮೃತಪಟ್ಟವರಿಗೆ ನೀಡಲಾಗುವ ಪರಿಹಾರ ಮೊತ್ತವನ್ನು ಇತ್ತೀಚೆಗೆ 15 ಲಕ್ಷ ರೂ.ಗಳಿಗೆ ಹೆಚ್ಚಿಸಿ,ಆದೇಶ ಹೊರಡಿಸಲಾಗಿದೆ. ಮುಖ್ಯಮಂತ್ರಿಗಳು ಈ ಕುರಿತು ಘೋಷಣೆ ಮಾಡಿದ ದಿನದಿಂದಲೇ ಪೂರ್ವಾನ್ವಯವಾಗುವಂತೆ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು
ವಿಧಾನಸಭೆಯಲ್ಲಿ ನಡೆದ ಪ್ರಶ್ನೋತ್ತರ ಕಲಾಪದಲ್ಲಿ ಟಿ. ನರಸೀಪುರ ಶಾಸಕ ಎಂ. ಅಶ್ವಿನ್ ಕುಮಾರ್ ಅವರು ಮಾತನಾಡಿ, ನಮ್ಮ ಭಾಗದಲ್ಲಿ ಕಬ್ಬು ಕಟಾವಿಗೆ ಬಂದಿದ್ದರೂ ಕೂಡ ವನ್ಯಪ್ರಾಣಿಗಳ ಭಯದಿಂದ ಕಬ್ಬು ಕಟಾವು ಮಾಡುತ್ತಿಲ್ಲ. ಈಗಾಗಲೇ ಪ್ರಾಣಿಗಳ ದಾಳಿಗೆ ಸಿಲುಕಿ ಅಸುನೀಗಿರುವ ಮಂಜುನಾಥ ಹಾಗೂ ಮೇಘನಾ ಅವರಿಗೆ ಮುಖ್ಯಮಂತ್ರಿಗಳ ಹೊಸ ಆದೇಶದಂತೆ 15 ಲಕ್ಷ ರೂ. ಪರಿಹಾರ ನೀಡಬೇಕೆಂದು ಆಗ್ರಹಿಸಿದರು.
ಶಾಸಕ ಅಶ್ವಿನ್ಕುಮಾರ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ ಆರ್.ಅಶೋಕ ಅವರು, ಕಳೆದ ಮೂರು ವರ್ಷಗಳಿಂದ ನಂಜನಗೂಡು ಟಿ. ನರಸೀಪುರ ಭಾಗದಲ್ಲಿ ಕಾಡಾನೆ, ಕಾಡು ಹಂದಿ, ಚಿರತೆ ದಾಳಿಗಳಿಂದ ನಾಲ್ವರು ಪ್ರಾಣ ಕಳೆದುಕೊಂಡಿದ್ದಾರೆ. ಈ ಭಾಗದಲ್ಲಿ ವಿದ್ಯುತ್ ತಂತಿ ಬೇಲಿ, ಕಂದಕ ತೋಡಿ ವನ್ಯ ಪ್ರಾಣಿ ನಿಯಂತ್ರಿಸಲಾಗುತ್ತಿದೆ. ಈಗಾಗಲೇ ಪ್ರಾಣ ಕಳೆದುಕೊಂಡಿರುವ ವ್ಯಕ್ತಿಗಳ ಕುಟುಂಬಕ್ಕೆ ಆರಂಭಿಕ ಪರಿಹಾರವಾಗಿ 5 ಲಕ್ಷ ರೂ. ಕೊಡಲಾಗುವುದು. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರದಲ್ಲಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಹೊಸ ಆದೇಶದಂತೆ ಒಟ್ಟು 15 ಲಕ್ಷ ರೂ.ಗಳನ್ನು ಮಂಜೂರು ಮಾಡಲು ಕ್ರಮಕೈಗೊಳ್ಳಲಾಗುವುದೆಂದರು.
ಟಿ.ನರಸೀಪುರ ಭಾಗದಲ್ಲಿ ಸಾರ್ವಜನಿಕರು ಪ್ರತಿಭಟನೆ ಮಾಡುತ್ತಿದ್ದು, ಮೃತ ವ್ಯಕ್ತಿಗಳ ಎಫ್.ಎಸ್.ಎಲ್. ವರದಿಗಾಗಿ ಕಾಯದೇ ಮರಣೋತ್ತರ ಪರೀಕ್ಷೆಯ ನಂತರ ಸಂಪೂರ್ಣ ಪರಿಹಾರ ಹಣ ಒದಗಿಸಬೇಕೆಂದು ಶಾಸಕ ಅಶ್ವಿನಕುಮಾರ್ ಮನವಿ ಮಾಡಿದರು.
ಮಾಂಜ್ರಾ ನದಿ ಪ್ರವಾಹ ತಡೆಗೆ ಲಂಬಾಕಾರದ ದ್ವಾರ(ವರ್ಟೀಕಲ್ ಗೇಟ್) ಅಳವಡಿಕೆ: ಸಚಿವ ಜೆ.ಸಿ.ಮಾಧುಸ್ವಾಮಿ
ಬೀದರ್ ಜಿಲ್ಲೆಯಲ್ಲಿ ಮಾಂಜ್ರಾ ನದಿಯ ಪ್ರವಾಹ ತಡೆಗೆ ಈಗಿರುವ ಗೇಟ್ಗಳು ಅನುಪಯುಕ್ತವಾಗಿವೆ. ದುರಸ್ತಿಪಡಿಸಿದ್ದರೂ ನೀರನ್ನು ಸಂಪೂರ್ಣವಾಗಿ ನಿಲ್ಲಿಸಲಾಗುತ್ತಿಲ್ಲ. ಲಂಬಾಕಾರದ ದ್ವಾರ (ವರ್ಟಿಕಲ್ ಗೇಟ್) ಅಳವಡಿಸುವ ಮೂಲಕ ನೀರು ನಿಲ್ಲಿಸಲು ಪ್ರಯತ್ನಿಸಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದರು.
ಪ್ರಶ್ನೋತ್ತರ ಕಲಾಪದಲ್ಲಿ ಭಾಲ್ಕಿ ಶಾಸಕ ಈಶ್ವರ ಬಿ. ಖಂಡ್ರೆ ಮಾತನಾಡಿ, ಬೀದರ ಜಿಲ್ಲೆಯ ಮಾಂಜ್ರಾ ನದಿಗೆ ಅಡ್ಡಲಾಗಿ ದಶಕದ ಹಿಂದೆ ನಿರ್ಮಾಣವಾದ ಜಿಂಗ್ಯಾಳ, ಮಾಣಿಕೇಶ್ವರ, ಆಲಹಳ್ಳಿ ಮತ್ತು ಚಂದಾಪುರ ಹತ್ತಿರ ನಿರ್ಮಾಣವಾದ ಬ್ಯಾರೇಜ್ಗಳಲ್ಲಿ ನೀರು ಶೇಖರಣೆಯಾಗುತ್ತಿಲ್ಲ. ಈ ಬಗ್ಗೆ ಸರ್ಕಾರ ಕಯಗೊಂಡಿರುವ ಕ್ರಮಗಳ ಕುರಿತು ಪ್ರಶ್ನಿಸಿದರು, ಉತ್ತರ ಒದಗಿಸಿದ ಸಚಿವ ಜೆ.ಸಿ.ಮಾಧುಸ್ವಾಮಿ, ಮಾಂಜ್ರಾ ನದಿಗೆ 4.80 ಟಿ.ಎಂ.ಸಿ. ನೀರಿನ ಹಂಚಿಕೆಯೊಂದಿಗೆ 12,672 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಕಲ್ಪಿಸಲು 4 ಸರಣಿ ಬ್ಯಾರೇಜ್ ನಿರ್ಮಿಸಲಾಗಿದೆ. 2016ರಲ್ಲಿ ಮಾಂಜ್ರಾ ನದಿಯಲ್ಲಿ ಉಂಟಾದ ಬೃಹತ್ ಪ್ರಮಾಣದ ಪ್ರವಾಹದಿಂದ ಹಾನಿಗೊಳಗಾಗಿದ್ದ ಕೆಲವು ಗೇಟುಗಳನ್ನು ಮೂಲ ಗುತ್ತಿಗೆದಾರರಿಂದ ಸರ್ಕಾರಕ್ಕೆ ಆರ್ಥಿಕ ಹೊರೆ ಇಲ್ಲದೇ ದುರಸ್ತಿ ಕಾರ್ಯ ಕೈಗೊಳ್ಳಲಾಗಿತ್ತು. ಪ್ರಸ್ತುತ 4 ಬ್ಯಾರೇಜುಗಳ ಸ್ವಯಂ ಚಾಲಿತ ಗೋಡಬೊಳೆ ಗೇಟ್ಗಳ ನಿರ್ವಹಣೆ ಕೈಗೊಂಡು ಸೋರಿಕೆಯನ್ನು ಕಡಿಮೆಗೊಳಿಸಿ ನೀರಿನ ಸಂಗ್ರಹ ಮಾಡಲಾಗುತ್ತಿದೆ ಎಂದರು.