ವರದಿ ಅಂಗೀಕರಿಸಿ, ಇಲ್ಲ ಹೋರಾಟ ಎದುರಿಸಿ: ಲಿಂಗಾಯತರ ಎಚ್ಚರಿಕೆ
ಬೆಂಗಳೂರು, ಮಾರ್ಚ್ 19: ಪಂಚಪೀಠದ ಕೆಲ ಸ್ವಾಮಿಗಳು ಹಾಗೂ ಇನ್ನು ಕೆಲ ಮಠಾಧೀಶರು ನಿವೃತ್ತ ನ್ಯಾಯಮೂರ್ತಿ ನಾಗಮೋಹನ ದಾಸ್ ಅವರ ವರದಿಯನ್ನು ಸಂಪುಟ ಸಭೆಯಲ್ಲಿ ಅಂಗೀಕಾರ ಮಾಡಬಾರದೆಂದು ಮುಖ್ಯಮಂತ್ರಿಗಳ ಮೇಲೆ ಒತ್ತಡ ಹಾಕಿದ್ದು ದುರಂತದ ಸಂಗತಿ ಎಂದು ಡಾ. ಶಶಿಕಾಂತ ಪಟ್ಟಣ ಹೇಳಿದ್ದಾರೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ವಿಶ್ವ ಲಿಂಗಾಯತ ಸಮಿತಿ ಧಾರವಾಡದ ಕಾರ್ಯಾಧ್ಯಕ್ಷರು ಹಾಗೂ ಜಾಗತಿಕ ಲಿಂಗಾಯತ ಮಹಾಸಭಾ ಬೆಂಗಳೂರಿನ ರಾಷ್ಟ್ರೀಯ ಕಾರ್ಯದರ್ಶಿಗಳಾದ ಶಶಿಕಾಂತ್ ಪಟ್ಟಣ ಅವರು, ವೀರಶೈವವು ಲಿಂಗಾಯತ ಧರ್ಮದ ಒಂದು ಉಪಪಂಗಡವಾಗಿದ್ದು ಅದು ಇತ್ತೀಚಿಗೆ ವೈದಿಕ ಆಚರಣೆಯಲ್ಲಿ ತೊಡಗಿದೆ. ಆದ್ದರಿಂದ ಲಿಂಗಾಯತ ಧರ್ಮಕ್ಕೆ ಅಪಚಾರ ಮಾಡುವ ಅನೇಕ ಪರಂಪರೆಯನ್ನು ಹುಟ್ಟು ಹಾಕಿ ಬಸವಣ್ಣನವರು ಸ್ಥಾಪಿಸಿದ ಲಿಂಗಾಯತ ಧರ್ಮ ತತ್ವಗಳನ್ನು ವೀರಶೈವವು ವಿರೂಪಗೊಳಿಸಿದ್ದು, ಲಿಂಗಾಯತ ಧರ್ಮವು ಇಂದು ವೀರಶೈವ ಹಾಗು ವೈದಿಕ ಮುಕ್ತ ಸ್ವತಂತ್ರ ಧರ್ಮವಾಗಬೇಕು ಎಂದು ಹೇಳಿದ್ದಾರೆ.
ಮುಖ್ಯಮಂತ್ರಿಗಳು ರಾಜಕೀಯ ಲೆಕ್ಕಾಚಾರ ಮಾಡುತ್ತ ಸಮಯ ಹರಣ ಮಾಡಬಾರದು. ಶೀಘ್ರವಾಗಿ ಲಿಂಗಾಯತ ಧರ್ಮಕ್ಕಾಗಿ ನಾಗಮೋಹನ್ ದಾಸ್ ಅವರ ವರದಿಯನ್ನಾಧರಿಸಿ ರಾಜ್ಯದಲ್ಲಿ ಲಿಂಗಾಯತಕ್ಕೆ ಅಲ್ಪಸಂಖ್ಯಾತ ಮಾನ್ಯತೆ ನೀಡಿ, ಕೇಂದ್ರಕ್ಕೆ 2 (C) ಮೈನಾರಿಟಿ ಕಾನೂನಿನ ಅಡಿಯಲ್ಲಿ ಭಾರತದ ಎಲ್ಲ ರಾಜ್ಯಗಳಲ್ಲಿ ಅನ್ವಯವಾಗುವ ಹಾಗೆ ಅಲ್ಪಸಂಖ್ಯಾತ ಹಾಗೂ ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಗೆ ಶಿಫಾರಸ್ಸು ಮಾಡಬೇಕು.

ನಾಗಮೋಹನ ದಾಸ ವರದಿಯನ್ನು ಸಚಿವ ಸಂಪುಟ ಸಭೆಯಲ್ಲಿ ಅಂಗೀಕಾರ ಮಾಡದಿದ್ದರೆ ರಾಜ್ಯದಲ್ಲಿ ತನ್ನ ಸರ್ಕಾರವನ್ನು ಮತ್ತೆ ಅಧಿಕಾರಕ್ಕೆ ತರುವುದು ಕಷ್ಟ ಸಾಧ್ಯವಾಗುತ್ತದೆ . ಬಸವ ಭಕ್ತರ ಭಾವನೆಗಳ ಜೊತೆಗೆ ಯಾರೇ ಚೆಲ್ಲಾಟವಾಡಿದರೂ ಅದನ್ನು ಸಹಿಸಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಲಿಂಗಾಯತರ ಬೇಡಿಕೆ ನ್ಯಾಯ ಸಮ್ಮತ ಹಾಗೂ ಕಾನೂನು ಸಮ್ಮತವಾಗಿದ್ದು ದಿನಾಂಕ 19 ಮಾರ್ಚ್ 2018 ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಅಂಗೀಕರಿಸಿ ಕೇಂದ್ರಕ್ಕೆ ಶಿಫಾರಸ್ಸು ಮಾಡಲಿ. ಒಂದು ವೇಳೆ ರಾಜ್ಯ ಸರಕಾರವು ವೀರಶೈವರ ಒತ್ತಡಕ್ಕೆ ಮಣಿದು ವರದಿಯನ್ನು ಅಂಗೀಕರಿಸದಿದ್ದರೆ ಖಂಡಿತ ಉಗ್ರ ಹೋರಾಟವನ್ನು ಎದುರಿಸಬೇಕಾಗುತ್ತದೆ ಎಂದಿದ್ದಾರೆ.












Click it and Unblock the Notifications