ಸರ್ಕಾರದ 18 ಅಧಿಕಾರಿಗಳ ಮೇಲೆ ಎಸಿಬಿ ದಾಳಿ: ಯಾರ ಮನೆಯಲ್ಲಿ ಸಿಕ್ಕಿದ್ದೇನು?
ಬೆಂಗಳೂರು, ಮಾ. 16: ಜನ ಸಾಮಾನ್ಯರ ಬಳಿ ಸುಲಿಯುವ ಜತೆಗೆ ಸರ್ಕಾರಿ ಯೋಜನೆಗಳಲ್ಲಿ ಎತ್ತುವಳಿ ಮಾಡಿ ತಲೆಮಾರುಗಳಿಗೆ ಆಗುವಷ್ಟು ಅಕ್ರಮ ಆಸ್ತಿಯನ್ನು ಭ್ರಷ್ಟಾಚಾರ ನಿಗ್ರಹ ದಳ ಬಯಲಿಗೆ ಎಳೆದಿದೆ.
ಬೆಳಂಬೆಳಗ್ಗೆ ರಾಜ್ಯದ 18 ಸರ್ಕಾರಿ ಅಧಿಕಾರಿಗಳ ಮನೆಗಳ ಮೇಲೆ ದಾಳಿ ಮಾಡಿ ಚಿನ್ನಾಭರಣ, ಐಶಾರಾಮಿ ಬಂಗಲೆಗಳನ್ನು ಪತ್ತೆ ಮಾಡಿ ಅಕ್ರಮ ಗಳಿಕೆಯ ಲೆಕ್ಕಾಚಾರ ಮಾಡುತ್ತಿದ್ದಾರೆ. ಎಸಿಬಿ ದಾಳಿಯಲ್ಲಿ ಪತ್ತೆಯಾದ ಚಿನ್ನಾಭರಣ, ನಗದು ಹಾಗೂ ಐಶರಾಮಿ ಬಂಗಲೆಗಳ ವಸ್ತು ಪ್ರದರ್ಶನ ಮೇಳದ ಚಿತ್ರಗಳು ಇಲ್ಲಿವೆ ನೋಡಿ!
ಎಸಿಬಿಯ 300 ಅಧಿಕಾರಿಗಳ ದಾಳಿ:
ರಾಜಧಾನಿ ಬೆಂಗಳೂರು ಸೇರಿದಂತೆ ಭ್ರಷ್ಟಾಚಾರ ನಿಗ್ರಹ ದಳದ 300 ಅಧಿಕಾರಿಗಳ ತಂಡಗಳು ದಾಳಿ ಮಾಡಿವೆ. ಬಾಗಲಕೋಟೆ, ದಕ್ಷಿಣ ಕನ್ನಡ, ಬೆಂಗಳೂರು, ಮೈಸೂರು, ರಾಯಚೂರು, ಯಾದಗಿರಿ, ಬೆಳಗಾವಿ, ಗದಗ ಜಿಲ್ಲೆಗಳಲ್ಲಿ ದಾಳಿ ನಡೆದಿದೆ. ವಿವಿಧ ಇಲಾಖೆಗಳ 18 ಅಧಿಕಾರಿಗಳು ಎಸಿಬಿ ದಾಳಿಗೆ ಒಳಗಾಗಿದ್ದಾರೆ.

ಆತಂಕದಲ್ಲಿ ಭ್ರಷ್ಟರ ಧರ್ಮಪತ್ನಿಯರು:
ವರ್ಷಗಳಿಂದ ನಾನಾ ಮಾರ್ಗಗಳ ಮೂಲಕ ಗಳಿಸಿದ ಹಣದಿಂದ ಖರೀದಿ ಮಾಡಿದ್ದ ಚಿನ್ನಾಭರಣ, ಬೆಳ್ಳಿ ಆಭರಣ, ಆಸ್ತಿಗಳನ್ನು ಎಸಿಬಿ ಅಧಿಕಾರಿಗಳು ಪತ್ತೆ ಮಾಡಿ ಲೆಕ್ಕ ಹಾಕುತ್ತಿದ್ದಂತೆ ಕೆಲ ಮಹಿಳೆಯರು ಕಣ್ಣೀರು ಹಾಕಿದ್ದಾರೆ ! ಚಿನ್ನಾಭರಣಗಳು ಮತ್ತೆ ಕೈ ಸೇರುತ್ತವೋ ಇಲ್ಲವೋ ಎಂಬ ಆತಂಕದಲ್ಲಿ "ಎಲ್ಲವೂ ಹೋಯಿತಲ್ಲ" ಒಂದು ಕಣ್ಣಾಲಿಗಳಲ್ಲಿ ನೀರು ಜಿನುಗಿಸಿದ್ದಾರೆ.
ಅದರಲ್ಲೂ ಕೆಲವು ಭ್ರಷ್ಟರು ಚಿನ್ನದ ರೂಪದಲ್ಲಿ ಸಂಪಾದನೆ ಮಾಡಿಟ್ಟಿದ್ದ ಆಸ್ತಿ, ನಗದು ಹಣ ಎಸಿಬಿ ಅಧಿಕಾರಿಗಳು ವಶ ಪಡಿಸಿಕೊಂಡಿದ್ದಾರೆ. ಕೆಲ ಅಧಿಕಾರಿಗಳ ಮನೆಯಲ್ಲಿನ ನಗದು ಲೆಕ್ಕ ಹಾಕಲು ಯಂತ್ರಗಳನ್ನು ಕೊಂಡೊಯ್ದಿದ್ದಾರೆ. ಬುಧವಾರ ನಡೆದ ಎಸಿಬಿ ದಾಳಿಯಲ್ಲಿ ಕೋಟಿ ಕೋಟಿ ಅಕ್ರಮ ಆಸ್ತಿ ಬಯಲಿಗೆ ಬಂದಿದೆ.

ಬೆಳಗಿನ ಭೇಟೆಯಲ್ಲಿ ಕೇದಗಿ ಮನೆಯಲ್ಲಿ ಸಿಕ್ಕಿತು ಚಿನ್ನಾಭರಣ:
ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ವಲಯ ಅರಣ್ಯ ಅಧಿಕಾರಿ ಶಿವಾನಂದ ಶರಣಪ್ಪ ಖೇಡಗಿ ಮನೆಯಲ್ಲಿ ಜ್ಯುವೆಲರಿ ಅಂಗಡಿ ಇಡುವಷ್ಟು ಚಿನ್ನಾಭರಣ ಮತ್ತು ಬೆಳ್ಳಿ ಆಭರಣಗಳು ಪತ್ತೆಯಾಗಿವೆ. ಎಸಿಬಿ ಐವರು ಅಧಿಕಾರಿಗಳ ತಂಡ ಬೆಳಗ್ಗೆ ಎಂಟು ಗಂಟೆಯಿಂದ ಚಿನ್ನಾಭರಣ ತೂಕ ಹಾಕಿ ಲೆಕ್ಕ ತೆಗೆದುಕೊಳ್ಳುವ ಕಾರ್ಯದಲ್ಲಿ ತೊಡಗಿದ್ದಾರೆ. 500 ರೂ. ಮುಖ ಬೆಲೆಯ ನೋಟುಗಳ ಐದಾರು ಕಂತುಗಳ ನಗದು ಹಣ ಸಿಕ್ಕಿದೆ. ಇದರ ಜತೆಗೆ ಚಿಲ್ಲರೆ ಹುಂಡಿ ತುಂಬುವ ರೀತಿಯಲ್ಲಿ ತುಂಬಿಸಿದ್ದ 100 ರೂ. ನೋಟುಗಳನ್ನು ಎಸಿಬಿ ಅಧಿಕಾರಿಗಳು ಕೂತು ಎಣಿಕೆ ಮಾಡುವಲ್ಲಿ ನಿರತರಾಗಿದ್ದಾರೆ. ತರಹೇವಾರಿ ಚಿನ್ನಾಭಣರಗಳ ನೆಕ್ಲೇಸ್ಗಳನ್ನು ನೋಡಿ ಎಸಿಬಿ ಅಧಿಕಾರಿಗಳೇ ದಂಗಾಗಿದ್ದಾರೆ. ಮಾತ್ರವಲ್ಲ, ಮನೆಯಲ್ಲಿ ಸುಗಂಧ ಬೀರುವ ಮೂರು ಕೆ.ಜಿ. ಶ್ರಿಗಂಧವನ್ನು ಕೂಡ ಸಂಗ್ರಹಿಸಿಟ್ಟಿದ್ದು, ಎಸಿಬಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಸಂಚಾರ ಇಲಾಖೆ ಅಡಿಷನಲ್ ಕಮೀನಷರ್ ರೇಷ್ಮೆ ಸೀರೆ ಪ್ರೀತಿ:
ಬೆಂಗಳೂರಿನ ಸಂಚಾರ ಇಲಾಖೆಯ ಸುರಕ್ಷತಾ ವಿಭಾಗದ ಹೆಚ್ಚುವರಿ ಆಯುಕ್ತ ಜಿನೇಂದ್ರ ಕುಮಾರ್ ಅವರ ಮನೆಯಲ್ಲಿ ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳು, ನಗದು ಹಣ ಮತ್ತು ಹೈಎಂಡ್ ವಾಚ್ ಗಳು ಆಸ್ತಿ ಪ್ರಮಾಣ ಪತ್ರಗಳು ಸಿಕ್ಕಿವೆ. ಮೂರು ಕಾರು, ದುಬಾರಿ ಬೆಲೆಯ ರೇಷ್ಮೆ ಸೀರೆಗಳು, ಚಿನ್ನದ ನೆಕ್ಲೇಸ್ ಎಂಟು ಆರಗಳು ಸಿಕ್ಕಿವೆ. ಅರ್ಧ ಕೆಜಿಗೂ ಅಧಿಕ ಚಿನ್ನಾಭರಣ ಆರಂಭದಲ್ಲಿ ದೊರೆತಿದ್ದು, ಭ್ರಷ್ಟರ ಅಕ್ರಮ ಆಸ್ತಿ ವಸ್ತು ಪ್ರದರ್ಶನ ಮೇಳದ ಚಿತ್ರಗಳು ಇಲ್ಲಿವೆ.

ಬಿಡಿಎ ರಾಕೇಶ್ ಕುಮಾರ್ ಬಂಗಲೆ :
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ನಗರ ಯೋಜನೆ ವಿಭಾಗದ ಅಧಿಕಾರಿ ರಾಕೇಶ್ ಕುಮಾರ್ ಒಡೆತನದ ಬೃಹತ್ ಬಂಗಲೆ ಬೆಂಗಳೂರಿನಲ್ಲಿ ಪತ್ತೆಯಾಗಿದೆ. ತಾಜ್ ಮಾದರಿ ಕಟ್ಟಿರುವ ಈ ಬಂಗಲೆ ಕೋಟ್ಯಂತರ ರೂಪಾಯಿ ಬೆಳೆ ಬಾಳುತ್ತದೆ. ಬೆಳಗಿನ ಜಾವ ಹ್ಯಾಪಿ ಮೂಡ್ನಲ್ಲಿದ್ದ ವೇಳೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಶಾಕ್ ಕೊಟ್ಟಿದ್ದಾರೆ.
ಅಶೋಕ್ ರೆಡ್ಡಿ ಐಶರಾಮಿ ಬಂಗಲೆ ಡ್ರಮ್ ನಲ್ಲಿತ್ತು ಚಿನ್ನದ ಸಂಪತ್ತು!:
ಕೃಷ್ಣ ಜಲಭಾಗ್ಯ ನಿಗಮದ ಇಂಜಿನಿಯರ್ ಅಶೋಕ್ ರೆಡ್ಡಿ ಅವರಿಗೆ ಸೇರಿದ ಐಶರಾಮಿ ಬಂಗಲೆ ರಾಯಚೂರಿನಲ್ಲಿ ಪತ್ತೆಯಾಗಿದೆ. ಎಸಿಬಿ ದಾಳಿಯ ಬಗ್ಗೆ ಅದೇನು ಸುಳಿವು ಸಿಕ್ಕಿತ್ತೋ ಏನೋ ಗೊತ್ತಿಲ್ಲ. ನೀಲಿ ಬಣ್ಣದ ಡ್ರಮ್ ನಲ್ಲಿ ನಗದು ಹಣ ಮತ್ತು ಚಿನ್ನಾಭರಣ ಬಚ್ಚಿಟ್ಟಿದ್ದರು. ಆದರೆ ಎಸಿಬಿ ಅಧಿಕಾರಿಗಳು ಮನೆ ಶೋಧ ಮಾಡುವಾಗ ಡ್ರಮ್ ನಲ್ಲಿ ಬಚ್ಚಿಟ್ಟಿದ್ದ ಚಿನ್ನಾಭರಣಗಳು, ನಗದು ಹಣ ಬೆಳ್ಳಿ ವಸ್ತುಗಳು ಬಯಲಾಗಿವೆ. ಡ್ರಮ್ ನಲ್ಲಿ ಬಚ್ಚಿಟ್ಟರೂ ಬಿಡದ ಎಸಿಬಿ ಅಧಿಕಾರಿಗಳ ಶೋಧ ಕಾರ್ಯ ನೋಡಿ ದಂಗಾಗಿದ್ದಾರೆ.

ಎಸಿಬಿ ದಾಳಿ ಒಳಗಾದವರ ವಿವರ:
1. ಗಜೇಂದ್ರ ಕುಮಾರ್ , ಅಡಿಷನಲ್ ಡೈರೆಕ್ಟರ್ ಸಾರಿಗೆ ಇಲಾಖೆ,
2. ರಾಕೇಶ್ ಕುಮಾರ್, ಬಿಡಿಎ ಟೌನ್ ಪ್ಲಾನಿಂಗ್, ಬಿಡಿಎ,
3. ರಮೇಶ್ ಕನಕಟ್ಟೆ, Rfo, ಯಾದಗಿರಿ,
4. ಬಸವರಾಜ, ಶೇಖರ್ ರೆಡ್ಡಿ ಇಂಜಿನಿಯರ್ ,ಗೋಕಾಕ್,
5. ಬಸವಕುಮಾರ್, ಶಿರಸ್ತೆದಾರ್ ಅಣ್ಣಿಗೇರಿ,
6. ಗೋಪಿನಾಥ್ , ಮಾಳಗಿ, ನಿರ್ಮಿತಿ ಕೇಂದ್ರ ವಿಜಯಪುರ,
7. ಕೆ.ಬಿ. ಶಿವಕುಮಾರ್, ಅಡಿಷನಲ್ ಡೈರೆಕ್ಟರ್, ಕಾಮರ್ಸ್ ಅಂಡ್ ಇಂಡಸ್ಟ್ರೀಸ್ ,
8. ಶಿವಾನಂದ ಪಿ. ಶರಣಪ್ಪ, RFO, ಬಾದಾಮಿ,
09. ಮಂಜುನಾಥ್, ಅಸಿಸ್ಟೆಂಟ್ ಕಮೀಷನರ್, ರಾಮನಗರ,
10. ಶ್ರೀನಿವಾಸ್, ಜನರಲ್ ಮ್ಯಾನೇಜರ್ ಸಮಾಜ ಕಲ್ಯಾಣ ಇಲಾಖೆ,
11. ಮಹೇಶ್ವರಪ್ಪ, ಜಿಲ್ಲಾ ಪರಿಸರ ಅಧಿಕಾರಿ, ದಾವಣಗೆರೆ,
12. ಕೃಷ್ಣನ್, ಎಇ, ಎಪಿಎಂಸಿ ಹಾವೇರಿ,
13.ಚಲುವರಾಜ್, ಅಬಕಾರಿ ನಿರೀಕ್ಷಕ, ಗುಂಡ್ಲುಪೇಟೆ,
14. ಗಿರೀಶ್, ಸಹಾಯಕ ಇಂಜಿನಿಯರ್, ರಾಷ್ಟ್ರೀಯ ಹೆದ್ದಾರಿ,
15. ಬಾಲಕೃಷ್ಣ, H.N. ವಿಜಯನಗರ ಪೊಲೀಸ್ ಠಾಣೆ, ಮೈಸೂರು,
16. ಗವಿ ರಂಗಪ್ಪ, ಎಇ, ಲೋಕೋಪಯೋಗಿ ಇಲಾಖೆ,
17. ಅಶೋಕ ರೆಡ್ಡಿ ಪಾಟೀಲ್, ಎಇಇ, ಕೃಷ್ಣ ಜಲ ಭಾಗ್ಯ ನಿಗಮ, ರಾಯಚೂರು,
18, ದಯಾ ಸುಂದರ್ ರಾಜು, ಎಇ kptcl, ದಕ್ಷಿಣ ಕನ್ನಡ











Click it and Unblock the Notifications