108ಸಂತರು, ಸಹಸ್ರಾರು ಭಕ್ತರಿಂದ ರಕ್ತಲಿಖಿತ ಹಕ್ಕೊತ್ತಾಯ ಸಮರ್ಪಣೆ
ಬೆಂಗಳೂರು, ಜ 13: ಭಾರತೀಯ ಗೋ ಪರಿವಾರ- ಕರ್ನಾಟಕ, 48 ದಿನಗಳ ಕಾಲ ರಾಜ್ಯದಲ್ಲಿ ಕೈಗೊಂಡ ಅಭಯ ಗೋಯಾತ್ರೆಯ ಸಮಾರೋಪ 'ಅಭಯ ಮಂಗಲ' ಕಾರ್ಯಕ್ರಮ ಈ ತಿಂಗಳ 21ರಂದು ಕೋಲಾರ ಜಿಲ್ಲೆ ಮಾಲೂರಿನಲ್ಲಿ ನಡೆಯಲಿದೆ.
ರಾಮಚಂದ್ರಾಪುರ ಮಠದ ಮಾಲೂರು ರಾಘವೇಂದ್ರ ಗೋಶಾಲೆ ಆವರಣದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ವಿನಾಶದ ಅಂಚಿನಲ್ಲಿರುವ 'ಮಲೆನಾಡು ಗಿಡ್ಡ' ತಳಿಯನ್ನು ಈ ಸಂದರ್ಭದಲ್ಲಿ ಸಂರಕ್ಷಣೆ ಮತ್ತು ಸಂವರ್ಧನೆಗಾಗಿ ಶ್ರೀಮಠ ದತ್ತು ಪಡೆಯಲಿದೆ.
ದೇಶದಲ್ಲೇ ಒಂದು ಗೋ ತಳಿಯನ್ನು ಇಡಿಯಾಗಿ ಸಂವರ್ಧನೆ ಹಾಗೂ ಸಂರಕ್ಷಣೆಗಾಗಿ ದತ್ತು ಪಡೆಯುತ್ತಿರುವುದು ಇದೇ ಮೊದಲು. ಗೋಹತ್ಯೆ ನಿಷೇಧಕ್ಕೆ ಸರ್ಕಾರಗಳ ಮೇಲೆ ಒತ್ತಡ ಹೇರುವ ಸಲುವಾಗಿ ನೂರೆಂಟು ಸಂತರು ಹಾಗೂ ಸಹಸ್ರ ಭಕ್ತರು ರಕ್ತದಲ್ಲಿ ಹಕ್ಕೊತ್ತಾಯಪತ್ರವನ್ನು ಬರೆದು ಗೋಮಾತೆಗೆ ಸಮರ್ಪಿಸುವುದು ಕಾರ್ಯಕ್ರಮದ ವಿಶೇಷ.

ದೇಶದಲ್ಲಿ ಸಂಪೂರ್ಣ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ಆಗ್ರಹಿಸಿ ಮತ್ತು ಭಾರತೀಯ ಗೋತಳಿಗಳ ಸಂರಕ್ಷಣೆ- ಸಂವರ್ಧನೆಗೆ ಕ್ರಮ ಕೈಗೊಳ್ಳಬೇಕು ಎಂದು ಆಳುವವರ್ಗದ ಮೇಲೆ ಒತ್ತಡ ಹೇರುವ ಬೃಹತ್ ಹಕ್ಕೊತ್ತಾಯದ ಅಂಗವಾಗಿ ಡಿಸೆಂಬರ್ 3ರಿಂದ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸಂಚರಿಸಿದ ಅಭಯ ಗೋಯಾತ್ರೆಗೆ ಅದ್ಭುತ ಬೆಂಬಲ ವ್ಯಕ್ತವಾಗಿದ್ದು, ಈ ಜನಾಂದೋಲನವನ್ನು ಮನೆ- ಮನಗಳಿಗೆ ತಲುಪಿಸುವಲ್ಲಿ ಅಭಯ ಮಂಗಲ ಮಹತ್ವದ ಪಾತ್ರ ವಹಿಸಲಿದೆ.
ಗವ್ಯೋದ್ಯಮಕ್ಕೆ ಒತ್ತು ನೀಡುವ ಮೂಲಕ ಗೋ ಸಾಕಾಣಿಕೆಯನ್ನು ಆರ್ಥಿಕವಾಗಿಯೂ ಲಾಭದಾಯಕ ಎಂದು ಸಮಾಜಕ್ಕೆ ತೋರಿಸಿಕೊಡುವ ನಿಟ್ಟಿನಲ್ಲಿ ಮಠದ ಗೋಶಾಲೆಯಲ್ಲೇ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದ ತಜ್ಞರು, ಗಣ್ಯರು, ಗೋ ಸಂಶೋಧಕರು, ಗವ್ಯ ಚಿಕಿತ್ಸಾ ತಜ್ಞರು, ಗೋಪರ ಹೋರಾಟಗಾರರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವರು.
ಹಾಲುಹಬ್ಬ: ಗೋಪೂಜೆ, ಗೋಗ್ರಾಸ, ಗೋವಿಚಾರ, ಪ್ರಸ್ತುತಿ, ಅಭಯಾಕ್ಷರ, ಗೋಕಲೆ, ಗವ್ಯೋತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ, ರಥಯಾತ್ರೆಯನ್ನೊಳಗೊಂಡ ವಿಶಿಷ್ಟ ಕಾರ್ಯಕ್ರಮ ಇದಾಗಿದೆ. ಇಷ್ಟೇ ಅಲ್ಲದೇ ಸಭಿಕರೆಲ್ಲರಿಗೆ ಪರಿಶುದ್ಧ ದೇಶೀಸಿಹಾಲಿನ ಅಮೃತ ಸವಿಯುವ ಅವಕಾಶ. ಕಾರ್ಯಕ್ರಮದಲ್ಲಿ ಎಲ್ಲರಿಗೂ ಗೋಪೂಜೆಯ ಅವಕಾಶವಿದೆ.
ಗೋಸಂರಕ್ಷಣೆಗೆ ನಾಡನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಇದು ಬೃಹತ್ ಜನಾಂದೋಲನವಾಗಿ ಬೆಳೆದಿದ್ದು, ಸಹಸ್ರಾರು ಗೋಭಕ್ತರು ಈ ಅಪೂರ್ವ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ. ವಿವಿಧ ಗವ್ಯೋತ್ಪನ್ನಗಳ, ದೇಶಿ ಹಾಲು- ತುಪ್ಪದಿಂದ ತಯಾರಿಸಿದ ಸಿಹಿ ತಿನಸುಗಳ, ಪುಸ್ತಕ, ಸಿ.ಡಿ. ಪ್ರದರ್ಶನ ಮತ್ತು ಮಾರಾಟವೂ ಇದೆ. ಕಾರ್ಯಕ್ರಮಕ್ಕೆ ಮುನ್ನ ಸುತ್ತಮುತ್ತಲು ಗೋರಥ ಸಂಚರಿಸಿ ಜಾಗೃತಿ ಮೂಡಿಸಲಿದೆ.
ಕಳೆದ ವರ್ಷ ಮಠದ ವತಿಯಿಂದ ಹಮ್ಮಿಕೊಂಡಿದ್ದ ಮಂಗಲ ಗೋಯಾತ್ರೆಯ ವಿಶಿಷ್ಟ ಪರಿಕಲ್ಪನೆಗಾಗಿ ರಾಷ್ಟ್ರಪ್ರಶಸ್ತಿಯನ್ನು ಗೆದ್ದುದನ್ನು ಇಲ್ಲಿ ಸ್ಮರಿಸಬಹುದು. ಈ ಬಾರಿ ಅಭಯ ಮಂಗಲವನ್ನು ಮತ್ತಷ್ಟು ವೈವಿಧ್ಯಮಯ ಹಾಗೂ ಅರ್ಥಪೂರ್ಣವಾಗಿ ಹಮ್ಮಿಕೊಳ್ಳಲಾಗುತ್ತಿದೆ.












Click it and Unblock the Notifications