'ಲಂಚಮುಕ್ತ ಮಂಡ್ಯ' ನಿರ್ಮಾಣಕ್ಕೆ ಪಣತೊಟ್ಟ ಆಮ್ ಆದ್ಮಿ
ಮಂಡ್ಯ, ಡಿಸೆಂಬರ್, 15: ಲಂಚದ ಹಾವಳಿ ತಡೆಗಟ್ಟಿ ಲಂಚ ಮುಕ್ತ ಮಂಡ್ಯ ಮಾಡಲು ಆಮ್ ಆದ್ಮಿ ಪಕ್ಷ ಪಣತೊಟ್ಟಿದ್ದು, ಈ ಸಂಬಂಧ ಸೋಮವಾರ 'ಲಂಚ ಮುಕ್ತ ಮಂಡ್ಯ' ವಿನೂತನ ಕಾರ್ಯಕ್ರಮಕ್ಕೆ ಎಎಪಿ ಪಕ್ಷದ ರಾಜ್ಯ ಸಂಚಾಲಕ ರವಿ ಕೃಷ್ಣಾರೆಡ್ಡಿ ಚಾಲನೆ ನೀಡಿದರು.
ಆಮ್ ಆದ್ಮಿ ಪಕ್ಷದ ಸಹಸಂಚಾಲಕ ರವಿಕೃಷ್ಣಾರೆಡ್ಡಿ ಮಾತನಾಡಿ, ರಾಜ್ಯದ ಎಲ್ಲ ಜಿಲ್ಲೆಗಳನ್ನು ಲಂಚ ಮುಕ್ತ ಗೊಳಿಸುವುದೇ ನಮ್ಮ ಉದ್ದೇಶ. ತಾಲೂಕು ಕಚೇರಿ, ಉಪ ನೋಂದಣಾಧಿಕಾರಿಗಳ ಕಚೇರಿ, ಆರ್ಟಿಒ ಕಚೇರಿಯಲ್ಲಿ ತಾಂಡವವಾಡುತ್ತಿರುವ, ಜನರಿಗೆ ತಲೆನೋವಾಗಿ ಪರಿಣಮಿಸಿರುವ ಲಂಚವನ್ನು ಬೇರು ಸಮೇತ ಕಿತ್ತುಹಾಕಲು ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.[ಸರ್ಕಾರಿ ಕಚೇರಿಗಳಲ್ಲಿ ಲಂಚ ಕೇಳಿದರೆ ಕರೆ ಮಾಡಿ]

ನಗರದ ಸರ್ಕಾರಿ ಕಚೇರಿಗಳಿಗೆ ಸೋಮವಾರ ತೆರಳಿದ ಕಾರ್ಯಕರ್ತರು ಕಡತಗಳನ್ನು ವಿಲೇವಾರಿ ಮಾಡದೆ ಸತಾಯಿಸುವ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದು, ತಡ ಮಾಡದೆ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಮಾಡಿಕೊಡುವಂತೆ ತಾಕೀತು ಮಾಡಿದರು.
ಹೊಳಲು ಗ್ರಾಮದಿಂದ ಬಂದಿದ್ದ ಸುಮಾರು 10ಕ್ಕೂ ಹೆಚ್ಚು ಗ್ರಾಮಸ್ಥರು ತಮಗೆ ಪಡಿತರ ಚೀಟಿ ನೀಡದೆ ಸತಾಯಿಸುತ್ತಿದ್ದಾರೆ ಎಂದು ಕಾರ್ಯಕರ್ತರ ಮುಂದೆ ಅಳಲು ತೋಡಿಕೊಂಡರು. ಆಗ ತಹಸೀಲ್ದಾರ್ ಮಾರುತಿ ಪ್ರಸನ್ನ ಅವರ ಕೊಠಡಿಗೆ ತೆರಳಿದ ಕಾರ್ಯಕರ್ತರು, ಸಮಸ್ಯೆ ಬಗ್ಗೆ ವಿವರಣೆ ಕೇಳಿದರು.[ಆಮ್ ಆದ್ಮಿ ಪಕ್ಷದಿಂದ 'ಹಳೇ ಕಲ್ಲು, ಹೊಸ ಬಿಲ್ಲು' ಅಭಿಯಾನ]
ಹೊಳಲು ಗ್ರಾಮದ ಜನರ ಸಮಸ್ಯೆ ಮನಗಂಡ ತಹಸೀಲ್ದಾರ್ ಸಂಬಂಧಪಟ್ಟ ಅಧಿಕಾರಿಗೆ ದೂರವಾಣಿ ಕರೆ ಮಾಡಿ ವಿಚಾರಿಸಿದರು. ನಂತರ ಡಿ. 18ರಂದು ತಮ್ಮ ಗ್ರಾಮ ಪಂಚಾಯತಿ ಕಚೇರಿಯಲ್ಲಿ ಪಡಿತರ ಚೀಟಿಗಳನ್ನು ನೀಡುವ ವ್ಯವಸ್ಥೆ ಮಾಡುವುದಾಗಿ ತಹಸೀಲ್ದಾರ್ ತಿಳಿಸಿದರು.
ಆಮ್ ಆದ್ಮಿ ಪಕ್ಷದ ಈ ಕಾರ್ಯಕ್ರಮ ಮಧ್ಯವರ್ತಿಗಳ ಕೆಂಗಣ್ಣಿಗೆ ಗುರಿಯಾಗಿದ್ದು, ಈ ಸಂಬಂಧ ಕೆಲವು ಮಧ್ಯವರ್ತಿಗಳು ಹಾಗೂ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಯಿತು.












Click it and Unblock the Notifications