ಕರ್ನಾಟಕಕ್ಕೆ ಮುಂದೆ ಬಹಳ ದೊಡ್ಡ ಅಪಾಯ ಕಾದಿದೆ: ಸಿ ಟಿ ರವಿ ಹೀಗೆ ಹೇಳಿದ್ಯಾಕೆ?
ಬೆಂಗಳೂರು, ಅಕ್ಟೋಬರ್ 04: ಕರ್ನಾಟಕಕ್ಕೆ ಮುಂದೆ ಬಹಳ ದೊಡ್ಡ ಅಪಾಯ ಕಾದಿದೆ. ಶಿವಮೊಗ್ಗ, ಕೋಲಾರ ಘಟನೆಗಳ ಮೂಲಕ ಟೆಸ್ಟಿಂಗ್ ಡೋಸ್ ಕೊಟ್ಟಿದ್ದಾರೆ. ಈಗ ಪಿಕ್ಚರ್ ಬಾಕಿ ಹೈ ಎಂಬಂತೆ ಟ್ರೈಲರ್ ತೋರಿಸುವ ಕೆಲಸ ಮಾಡಿದ್ದಾರೆ ಎಂದು ಮಾಜಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಮಾಜಿ ಸಚಿವ ಸಿ.ಟಿ.ರವಿ ಎಚ್ಚರಿಕೆ ನೀಡಿದರು.
ಈ ಕುರಿತು ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗ ಘಟನೆ ಹಿಂದೆ ದುರುದ್ದೇಶ ಇದ್ದಂತಿದೆ. ರಾಜ್ಯದ ಶಾಂತಿ ಹಾಳು ಮಾಡುವ ಉದ್ದೇಶ ಇದ್ದಂತಿದೆ. ಆದ್ದರಿಂದ ಈ ಘಟನೆಯ ನ್ಯಾಯಾಂಗ ತನಿಖೆ ಮಾಡುವಂತೆ ಎಂದು ಸಿ.ಟಿ.ರವಿ ಅವರು ಒತ್ತಾಯಿಸಿದರು.

ಹಿಂದೂ ಸಂಘಟನೆಗಳು ಮತ್ತು ಹಿಂದೂ ಕಾರ್ಯಕರ್ತರ ಮೇಲಿನ ಸುಳ್ಳು ಮೊಕದ್ದಮೆಗಳನ್ನು ವಾಪಸ್ ಪಡೆಯಲು ಆಗ್ರಹಿಸಿದರು. ಪುನೀತ್ ಕೆರೆಹಳ್ಳಿ ಮೇಲಿನ ಸುಳ್ಳು ಆರೋಪಕ್ಕೆ ಗೃಹ ಸಚಿವರು ಉತ್ತರ ಕೊಡಲಿ ಎಂದು ಸವಾಲು ಹಾಕಿದರು. ಇಲ್ಲವಾದರೆ ಸಾರ್ವಜನಿಕವಾಗಿ ಕ್ಷಮೆ ಯಾಚಿಸಿ ಎಂದೂ ಆಗ್ರಹಿಸಿದರು.
ಶಿವಮೊಗ್ಗ ಅತಿ ಸೂಕ್ಷ್ಮ ಪ್ರದೇಶ. ಹರ್ಷನ ಹತ್ಯೆ ಆಗಿತ್ತು. ಕರ್ನಾಟಕವು 140 ದಿನಗಳಲ್ಲಿ ನಕಾರಾತ್ಮಕ ಕಾರಣಕ್ಕಾಗಿ ಸುದ್ದಿಯಾದುದೇ ಹೆಚ್ಚು. ಹಿಂದೂ ಕಾರ್ಯಕರ್ತರ ಮೇಲೆ ಸುಳ್ಳು ಮೊಕದ್ದಮೆ ಹಾಕುತ್ತಿದ್ದೀರಿ. ಸಹಜ ಸಾವಿನ ಮಾಹಿತಿ ಇದ್ದರೂ ಪುನೀತ್ ಕೆರೆಹಳ್ಳಿ ಮೇಲೆ ಕೊಲೆ ಮೊಕದ್ದಮೆ ಹಾಕಿದ್ದೀರಿ. ವೇಶ್ಯಾವಾಟಿಕೆ ಮಾಡುತ್ತಿದ್ದ ಎಂದು ಸುಳ್ಳುವರದಿ ಕೊಟ್ಟಿದ್ದೀರಿ. ಪುನೀತ್ ಜೀವಕ್ಕೇನಾದರೂ ಆದರೆ ಈ ಪಾಪಿಷ್ಟ ಸರಕಾರವೇ ಹೊಣೆ ಎಂದು ತಿಳಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು 140 ದಿನಗಳು ಕಳೆದಿವೆ. ಕೋಮುವಾದಿ ಶಕ್ತಿಗಳು ಸಾರ್ವಜನಿಕವಾಗಿ ವಿಜೃಂಭಿಸಲು ಅವಕಾಶ ಮಾಡಿಕೊಟ್ಟಿದ್ದೇ ಈ ಸರಕಾರದ ಸಾಧನೆ ಎಂದು ವ್ಯಂಗ್ಯವಾಡಿದರು. ಬಹುಶಃ ಋಣ ತೀರಿಸುವ ದೃಷ್ಟಿಯಿಂದ ತಾಲಿಬಾನಿಗಳನ್ನು ಬೆಂಬಲಿಸುವ ಕೆಟ್ಟ ಕೆಲಸವನ್ನು ರಾಜ್ಯದ ಕಾಂಗ್ರೆಸ್ ಸರಕಾರ ಮಾಡುತ್ತಿದೆ. ಈ ಸರಕಾರದ ನಡೆ ಅನುಮಾನಾಸ್ಪದ ಮತ್ತು ದುರುದ್ದೇಶದ ಹಿನ್ನೆಲೆಯಿಂದ ಕೂಡಿದೆ ಎಂದು ಟೀಕಿಸಿದರು.

ವಿಧಾನಸಭಾ ಚುನಾವಣಾ ಫಲಿತಾಂಶ ಬರುವ ಸಂದರ್ಭದಲ್ಲಿ ಬೆಳವಾವಿಯಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗುತ್ತಾರೆ. ಭಟ್ಕಳದಲ್ಲಿ ಹಿಂದೂಗಳ ಹೆಣ ಎತ್ತಲು ಕೂಡ ಜನ ಇರಬಾರದು ಎಂದು ಮುಸ್ಲಿಮರೊಬ್ಬರು ಬರಹ ಬರೆದಿದ್ದರು. ಬೆಳಗಾವಿಯಲ್ಲಿ ಜೈನಮುನಿಯ ಭೀಕರ ಹತ್ಯೆ ಆಗಿದೆ. ಟಿ.ನರಸೀಪುರದಲ್ಲಿ ಯುವ ಬ್ರಿಗೇಡ್ ಕಾರ್ಯಕರ್ತನ ಹತ್ಯೆ ನಡೆದಿದೆ. ಫಲಿತಾಂಶ ಬಂದ ಮರುದಿನವೇ ಹೊಸಕೋಟೆಯಲ್ಲಿ ಬಿಜೆಪಿ ಕಾರ್ಯಕರ್ತನ ಹತ್ಯೆ ನಡೆದಿದೆ.
ಧಾರವಾಡದಲ್ಲಿ ಚುನಾವಣಾ ವಿಜಯೋತ್ಸವದ ಸಂದರ್ಭದಲ್ಲಿ ಚೂರಿ ಇರಿತ, ಯಾದಗಿರಿಯಲ್ಲಿ ಬಿಜೆಪಿ ಕಾರ್ಯಕರ್ತನ ಹತ್ಯೆ ಮಾಡಲಾಗಿದೆ. ಬೆಂಗಳೂರಿನಲ್ಲಿ ಹಿಂದೂಗಳ ಬೈಕಿಗೆ ಬೆಂಕಿ ಹಾಕಿದ್ದಾರೆ. ಹಾಸನದಲ್ಲಿ ಪಿಸ್ತೂಲ್ ಹಿಡಿದು ಓಡಾಡಿ ಭಯ ಹುಟ್ಟಿಸುವ ಕೆಲಸ ನಡೆದಿದೆ. ಸಕಲೇಶಪುರದಲ್ಲಿ ಪರವಾನಗಿ ಇಲ್ಲದ ಬಂದೂಕು ಇಟ್ಟುಕೊಂಡು ಹಸುವಿನ ತಲೆ ಸೀಳಿ ಹತ್ಯೆ ಮಾಡಿದ್ದಾರೆ. ಕಡೂರಿನಲ್ಲಿ ವಿಘ್ನೇಶ್ ಎಂಬ ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ ಮಾಡಿದ್ದಾರೆ.
ನಂಜನಗೂಡಿನಲ್ಲಿ ಚಾಕುವಿನಿಂದ ಇರಿದು ಪರಾರಿ, ಬಾಗಲಕೋಟೆ ನವನಗರದಲ್ಲಿ ಬೀದಿ ದೀಪ ಬಂದ್ ಮಾಡಿ ಬಿಜೆಪಿ ಬೆಂಬಲಿಗರ ಮೇಲೆ ಹಲ್ಲೆ ನಡೆದಿದೆ. ಕುವೆಂಪು ಅವರು ಕರ್ನಾಟಕವನ್ನು ಸರ್ವ ಜನಾಂಗದ ಶಾಂತಿಯ ತೋಟ ಎಂದು ಕರೆದಿದ್ದರು. ಆದರೆ, ಅವರ ತವರು ಜಿಲ್ಲೆಯಲ್ಲಿ ಮತಾಂಧರ ಅಟ್ಟಹಾಸ ಮೆರೆಯಲು ಅವಕಾಶ ಕೊಟ್ಟಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಸಿದ್ದರಾಮಯ್ಯನವರು ಮೊದಲ ಅವಧಿಯ ಸಿಎಂ ಆಗಿದ್ದಾಗ ಟಿಪ್ಪುವಿನ ಓಲೈಕೆ, ಸರಕಾರದಿಂದ ಟಿಪ್ಪು ಜಯಂತಿ ಆರಂಭಿಸಲಾಗಿತ್ತು. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರರ ಸ್ಪರ್ಧೆಯಲ್ಲಿ ಈಗ ಸರ್ವ ಜನಾಂಗದ ಶಾಂತಿಯ ತೋಟದ ಶಾಂತಿ ಹಾಳು ಮಾಡಲು ಒಬ್ಬ ಟಿಪ್ಪು ಸಾಕಾಗುವುದಿಲ್ಲ ಎಂದು ಟಿಪ್ಪು ಜೊತೆ ಔರಂಗಜೇಬನ ವಿಜೃಂಭಣೆಗೆ ಅವಕಾಶ ಕೊಡುತ್ತಿದ್ದಾರೆ. ಮತಾಂಧರ ಮೆರೆಸುವ ಕೆಲಸಕ್ಕೆ ಈ ಸರಕಾರ ಬೆನ್ನೆಲುಬಾಗಿ ನಿಂತಿದೆ. ಪೊಲೀಸರ ಮೇಲೆ ಕಲ್ಲೆಸೆತ ಆದಾಗ ಎಸ್ಪಿಯೇ ಓಡಿಬರಬೇಕಾದ ಸ್ಥಿತಿ ಬರುತ್ತದೆ. ಗೃಹ ಸಚಿವ ಪರಮೇಶ್ವರರವರು ಇದೆಲ್ಲ ಸಾಮಾನ್ಯ ಎಂದು ಲಘುವಾಗಿ ತಳ್ಳಿ ಹಾಕುತ್ತಾರೆ ಎಂದು ಟೀಕಿಸಿದರು.
ಡಿಜೆ ಹಳ್ಳಿ, ಕೆಜಿ ಹಳ್ಳಿಯ ಗಲಭೆಯಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರ ಮನೆಗೇ ಬೆಂಕಿ ಹಾಕಿದ್ದರು. ಹಲವು ಮನೆಗಳು ಮತ್ತು ನೂರಾರು ವಾಹನಗಳಿಗೆ ಬೆಂಕಿ ಹಾಕಿದ್ದರು. ಪೊಲೀಸ್ ಸ್ಟೇಷನ್ ಮೇಲೆ ಬೆಂಕಿ ಹಾಕಿದ್ದರು. ಅಂಥ ಗಂಭೀರ ಪ್ರಕರಣದ ಕೇಸು ವಾಪಸ್ ಪಡೆಯಲು ತನ್ವೀರ್ ಸೇಠ್ ಅವರು ಸರಕಾರಕ್ಕೆ ಪತ್ರ ಬರೆದಿದ್ದರು. ಆ ಸಾಲಿನಲ್ಲೇ ಹುಬ್ಬಳ್ಳಿಯ ಪೊಲೀಸ್ ಠಾಣೆಗೆ ದಾಳಿ ಸೇರಿ 12 ಪ್ರಕರಣಗಳಲ್ಲಿ ಆರೋಪಿಗಳಾಗಿರುವವರ ಕೇಸು ಹಿಂಪಡೆಯಲು ಉಪ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರರು ಪತ್ರ ಬರೆಯತ್ತಾರೆ. ಮತಾಂಧತೆಗೆ ಈ ಸರಕಾರ ಕುಮ್ಮಕ್ಕು ಕೊಡುತ್ತಿರುವುದಕ್ಕೆ ಇದಕ್ಕಿಂತ ಸಾಕ್ಷಿ ಬೇಕಾಗಿಲ್ಲ ಎಂದರು.
ಸನಾತನ ಧರ್ಮದ ಅವಹೇಳನ ಮಾಡುವವರು ಇಲ್ಲಿ ಗಲಭೆ ಹುಟ್ಟಿಸುವವರು ಎನಿಸುತ್ತಿಲ್ಲ. ಅವಹೇಳನ ಮಾಡುವವರ ಮುಂಚೂಣಿಯಲ್ಲಿ ಪ್ರಿಯಾಂಕ್ ಖರ್ಗೆ ಅವರೇ ನಿಂತುಕೊಳ್ಳುತ್ತಾರೆ. ಅವಹೇಳನ ಮಾಡಿ ಉದಯನಿಧಿ ಸ್ಟಾಲಿನ್ ಪರ ನಿಲ್ಲುತ್ತಾರೆ.
ಸಿಎಂ ಸಿದ್ದರಾಮಯ್ಯ ಅವರು ಮುಸ್ಲಿಮರ ಋಣ ತೀರಿಸುವ ಮಾತನಾಡಿದ್ದಾರೆ. ರಾಜ್ಯದ ಋಣ ತೀರಿಸಬೇಕೆಂದು ಅವರು ಹೇಳಿಲ್ಲ. ರಾಜ್ಯದ ಸಮಗ್ರ ಅಭಿವೃದ್ಧಿಯ ಚಿತ್ರಣವನ್ನೂ ಜನರ ಮುಂದಿಟ್ಟಿಲ್ಲ. ಮುಸ್ಲಿಮರ ಅಭಿವೃದ್ಧಿಗಾಗಿ 10 ಸಾವಿರ ಕೋಟಿ ಕೊಡುವ ಮಾತನಾಡುತ್ತಾರೆ. ನಿಮಗೆ ಮುಸಲ್ಮಾನರು ಮಾತ್ರ ಮತ ಹಾಕಿದ್ದಾರಾ? ಜಾತ್ಯತೀತತೆ ಎಂದರೆ ಮುಸಲ್ಮಾನರ ಓಲೈಕೆಯೇ? ಕೋಮುವಾದಿ ರಾಜಕಾರಣ ನಿಮ್ಮದಲ್ಲವೇ? ಎಂದು ಕೇಳಿದರು.
-
"5 ತಿಂಗಳಾದ್ರೂ ಸಿಗದ ದಸರಾ ಲೆಕ್ಕ: ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ'' -
"5 ತಿಂಗಳಾದ್ರೂ ಸಿಗದ ದಸರಾ ಲೆಕ್ಕ: ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ'' -
"ಕಾಂಗ್ರೆಸ್ನಿಂದ ದಲಿತ ದ್ರೋಹ: 14,200 ಕೋಟಿ ರೂ ಎಸ್ಸಿಎಸ್ಪಿ/ಟಿಎಸ್ಪಿ ಹಣ ಗ್ಯಾರಂಟಿ ಪಾಲು'' -
ಇಡೀ ಸರ್ಕಾರವೇ ಉಮೇಶ್ ಮೇಟಿ ಜೊತೆಗಿದೆ: ಬಾಗಲಕೋಟೆಯಲ್ಲಿ ನಾಮಪತ್ರ ಸಲ್ಲಿಕೆ ವೇಳೆ ಡಿ.ಕೆ.ಶಿವಕುಮಾರ್ ಅಭಯ -
ದಾವಣಗೆರೆ ದಕ್ಷಿಣದಲ್ಲಿ ಕಾಂಗ್ರೆಸ್ ಅಬ್ಬರ: ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸಮ್ಮುಖದಲ್ಲಿ ಸಮರ್ಥ್ ಶಾಮನೂರು ನಾಮಪತ್ರ ಸಲ್ಲಿಕೆ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು












Click it and Unblock the Notifications