ಹುಬ್ಬಳ್ಳಿ ಬ್ಲಫ್ ಮಾಸ್ಟರ್: ಚಿಟ್ ಫಂಡ್ ನಿಂದ 2 ಕೋಟಿ ವಂಚನೆ
ಹುಬ್ಬಳ್ಳಿ, ನವೆಂಬರ್, 27 : ಚೀಟಿ ವ್ಯವಹಾರದಿಂದ ಹಲವಾರು ಜನರು ಮೋಸ ಹೋಗುತ್ತಿರುವ ಘಟನೆ ಎಲ್ಲೆಡೆ ನಡೆಯುತ್ತಿದೆ. ಈ ಘಟನೆಗೆ ಛೋಟಾ ಬಾಂಬೆ ಎಂದೆನಿಸಿಕೊಂಡಿರುವ ಹುಬ್ಬಳ್ಳಿಯು ಸಾಕ್ಷಿಯಾಗಿದ್ದು, ಚೀಟಿ ವ್ಯವಹಾರದಿಂದ ನೂರಾರು ಜನ ಮೋಸ ಹೋದ ಘಟನೆ ಶುಕ್ರವಾರ ಬೆಳಕಿಗೆ ಬಂದಿದೆ.
ನಗರದ ಹಳೇಹುಬ್ಬಳ್ಳಿ ನಿವಾಸಿ ಪರಶು ಉಮ್ಮಚಗಿ ಎಂಬಾತನೇ ನೂರಾರು ಜನರಿಗೆ ಪಂಗನಾಮ ಹಾಕಿದ ವ್ಯಕ್ತಿ. ಓಂಕಾರ ಫೈನಾನ್ಸ್ ಎಂಬ ಹೆಸರಿನಲ್ಲಿ ಚಿಟ್ ಫಂಡ್ ವ್ಯವಹಾರ ನಡೆಸುತ್ತಿದ್ದು, 2 ಕೋಟಿ ರೂ.ಗೂ ಹೆಚ್ಚು ಹಣ ವಂಚಿಸಿದ್ದಾನೆ. ಈತನ ವಿರುದ್ಧ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.[ಮತ್ತೊಂದು ಚೀಟ್ ಫಂಡ್: ಕೋಟ್ಯಂತರ ಪಂಗನಾಮ]
ಘಟನೆ ವಿವರ:
ನಗರದ ಪ್ರತಿಷ್ಠಿತ ಸಿದ್ಧಾರೂಢಮಠ ಬಳಿ ಪರಶು ಓಂಕಾರ ಫೈನಾನ್ಸ್ ಎಂಬ ಹೆಸರಿನಲ್ಲಿ ಚಿಟ್ ಫಂಡ್ ಕಂಪನಿ ತೆರೆದಿದ್ದ. ಈ ನೆಪದಲ್ಲಿ ಹಲವಾರು ಜನರಿಂದ ಹಣ ವಸೂಲಿ ಮಾಡಿದ್ದ. ಈತನನ್ನು ನಂಬಿದ ಜನರು ಆತನ ಬಳಿ ಹಣ ಹೂಡಿಕೆ ಮಾಡಿದ್ದಾರೆ.
ಹಣ ಸಂಗ್ರಹವಾದ ಬಳಿಕ ರಸ್ತೆ ಅಗಲೀಕರಣ ಕಾರ್ಯ ನಡೆದಿರುವುದರಿಂದ ಕಚೇರಿ ಸ್ಥಳಾಂತರಿಸುತ್ತಿದ್ದೇನೆ ಎಂದು ಹೇಳಿ ಅಲ್ಲಿಂದ ಪರಾರಿಯಾಗಿದ್ದಾನೆ. ಈ ವಿಷಯ ತಿಳಿದ ಮಂದಿ ಆತನನ್ನು ಹಿಡಿದು ಥಳಿಸಿದ್ದಾರೆ.[ಮಂಗಳೂರು : 5 ಕೋಟಿ ದರೋಡೆ ತನಿಖೆ ಎಲ್ಲಿಗೆ ಬಂತು?]
ಆಗ ಆತ ಜನರಿಗೆ ನಾನು ನನ್ನ ಮನೆಯನ್ನು ಮಾರಾಟ ಮಾಡಿ ನಿಮಗೆಲ್ಲಾ ಹಣ ನೀಡುತ್ತೇನೆ ಎಂಬ ಭರವಸೆ ನೀಡಿದ್ದನು. ಈ ರೀತಿಯಾಗಿ ಸುಮಾರು 6 ತಿಂಗಳಿನಿಂದಲೂ ಹೇಳುತ್ತಾ ಜನರಿಂದ ಮುಖ ಮರೆಸಿಕೊಂಡಿದ್ದಾನೆ.
ಆರು ತಿಂಗಳಾದರೂ ಹಣ ನೀಡದೆ ಸುಳ್ಳು ಹೇಳುತ್ತಾ ವಂಚಿಸುತ್ತಿರುವ ಪರಶು ವಿರುದ್ಧ ಹಣ ನೀಡಿದ ಮಂದಿ ಆಕ್ರೋಶಗೊಂಡು ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತನಿಖೆ ಕೈಗೊಂಡ ಪೊಲೀಸರು ಈತನನ್ನು ಬಂಧಿಸಲು ಬಲೆ ಬೀಸಿದ್ದಾರೆ.