ಮನೆ ಮಾಲೀಕ ಬಾಡಿಗೆದಾರನನ್ನು ಗೃಹಬಂಧನದಲ್ಲಿ ಇಟ್ಟಿದ್ಯಾಕೆ?
ಮಂಡ್ಯ,ಮಾರ್ಚ್,07: ಮನೆಖಾಲಿ ಮಾಡಲು ಒಪ್ಪದ ಬಾಡಿಗೆದಾರನನ್ನು ಮನೆ ಬಿಡುವಂತೆ ಬೆದರಿಸಿದ ಮಾಲೀಕನು ಬಾಡಿಗೆದಾರನನ್ನು ಸುಮಾರು ಮೂರು ಗಂಟೆಗಳ ಕಾಲ ಮನೆಯೊಳಗೆ ಕೂಡಿ ಹಾಕಿದ ಘಟನೆ ಮಂಡ್ಯದ ಕೆ.ಆರ್.ಪೇಟೆಯ ಸುಭಾಷ್ ನಗರದಲ್ಲಿ ನಡೆದಿದೆ.
ಮಹಿಳಾ ಮತ್ತು ಮಕ್ಕಳ ಇಲಾಖೆಯ ಕಟ್ಟಡದ ಮಾಲೀಕ ಶಿವರಾಮೇಗೌಡರ ಮನೆಯಲ್ಲಿ ವಾಸವಾಗಿದ್ದ ಲೋಕೇಶ್ ಗೆ ಮನೆ ಒಪ್ಪಂದದ ವಾಯಿದೆ ಮುಗಿದಿದ್ದು, ಮನೆ ಖಾಲಿಮಾಡುವಂತೆ ಒತ್ತಡ ಹೇರಿದ್ದರು. ಲೋಕೇಶ್ ಸ್ವಲ್ವಕಾಲಾವಕಾಶ ನೀಡುವಂತೆ ಕೇಳಿದ್ದರು.[ನಿಮ್ಮ ಕನಸಿನ ಮನೆ ಸಾಕಾರಕ್ಕೆ ಬೆಂಗಳೂರಿನಲ್ಲಿ ನಿವೇಶನ]
ಘಟನೆಯ ವಿವರ:
ಶನಿವಾರ ಏಕಾಏಕಿ ಮನೆಗೆ ಬಂದ ಮನೆ ಮಾಲೀಕ ಶಿವರಾಮೇಗೌಡ ನಿಮ್ಮ ಒಪ್ಪಂದದ ವಾಯಿದೆ ಮುಗಿದಿದೆ. ತಕ್ಷಣ ಮನೆ ಖಾಲಿ ಮಾಡಬೇಕು. ಇಲ್ಲದಿದ್ದರೆ ಬಲವಂತವಾಗಿ ಹೊರಹಾಕಬೇಕಾಗುತ್ತದೆ ಎಂದು ಹೇಳಿದ ಅವರು ಲೋಕೇಶ್ ಮೇಲೆ ಸೀಮೆಎಣ್ಣೆ ಎರಚಿದ್ದಾರೆ. ಬಳಿಕ ಕೊಲೆ ಮಾಡುವ ಬೆದರಿಕೆ ಹಾಕಿದ ಮಾಲೀಕ ಬೆಳಿಗ್ಗೆ 11ಗಂಟೆಯಿಂದ ಮಧ್ಯಾಹ್ನ 3ಗಂಟೆಯವರೆಗೆ ಮನೆಯೊಳಗೆ ಕೂಡಿ ಹಾಕಿ ಹೊರಗಿನಿಂದ ಬಾಗಿಲಿಗೆ ಬೀಗ ಹಾಕಿದ್ದಾರೆ.
ವಿಷಯ ತಿಳಿದ ಲೋಕೇಶ್ ಸ್ನೇಹಿತರಾದ ಬಸವರಾಜು, ನಾಗೇಶ್, ಶ್ರೀನಿವಾಸ್, ಕಿಕ್ಕೇರಿ ಶಂಭು ಅವರು ಬಂದು ಬೀಗ ತೆಗೆಯುವಂತೆ ಮಾಲೀಕ ಶಿವರಾಮೇಗೌಡರಿಗೆ ಮನವಿ ಮಾಡಿದರೂ ಅವರು ಮಾತ್ರ ಒಪ್ಪಲಿಲ್ಲ.[ಬಿಡಿಎ ಫ್ಲ್ಯಾಟ್ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ?]
ಬಳಿಕ ಅನ್ಯ ಮಾರ್ಗವಿಲ್ಲದೆ ಕೆ.ಆರ್.ಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಎಎಸ್ಐ ಶಿವಣ್ಣ ಅವರು ಸ್ಥಳಕ್ಕೆ ಬಂದು ಮನೆಯ ಮಾಲೀಕ ಶಿವರಾಮೇಗೌಡರನ್ನು ಕರೆಯಿಸಿ ಬಾಗಿಲಿಗೆ ಹಾಕಿದ್ದ ಬೀಗ ತೆಗೆಸಿದ್ದಾರೆ. ಅಷ್ಟರಲ್ಲೇ ಬೆಳಿಗ್ಗೆ ತಿಂಡಿ ಮತ್ತು ಮಧ್ಯಾಹ್ನದ ಊಟವಿಲ್ಲದೆ ಬಾಡಿಗೆದಾರ ಲೋಕೇಶ್ ಅಸ್ವಸ್ಥಗೊಂಡಿದ್ದರು. ಬಳಿಕ ಸುಧಾರಿಸಿಕೊಂಡ ಲೋಕೇಶ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೂರು ದಾಖಲಿಸಿಕೊಂಡಿರುವ ಎಎಸ್ಐ ಶಿವಣ್ಣ ಅವರು ಮನೆಯ ಮಾಲೀಕ ಶಿವರಾಮೇಗೌಡ ಅವರ ವಿರುದ್ಧ ಬಾಡಿಗೆ ಕಾನೂನು ಮತ್ತು ಅಕ್ರಮ ಗೃಹ ಬಂಧನ ನಿಷೇಧ ಕಾಯಿದೆ ಅನ್ವಯ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.[ಕೆಂಪೇಗೌಡ ಬಡಾವಣೆಯಲ್ಲಿ ಸೈಟ್ ಪಡೆಯಲು ಅರ್ಜಿ ಹಾಕಿ]
ಈ ನಡುವೆ ಮನೆಯ ಮಾಲೀಕ ಶಿವರಾಮೇಗೌಡ ಅವರು ಮನೆಯಲ್ಲಿ ಯಾರೂ ಇಲ್ಲವೆಂದು ತಿಳಿದು ಬೀಗ ಹಾಕಿದ್ದಾಗಿ ಹೇಳಿದ್ದಾರೆ. ಅಲ್ಲದೆ ಪೊಲೀಸ್ ಠಾಣೆಯಲ್ಲಿ ಬಾಡಿಗೆದಾರರಾದ ಲೋಕೇಶ್ ಮತ್ತು ಅವರ ತಂದೆ ಜೆ.ಬಿ.ಬೋರೇಗೌಡ ಅವರು ಮನೆ ಖಾಲಿ ಮಾಡುವುದಾಗಿ ಮುಚ್ಚಳಿಕೆ ಬರೆದುಕೊಟ್ಟಿರುವುದಾಗಿ ತಿಳಿಸಿದ್ದಾರೆ.