ರಾಯಚೂರು : ಬಾಲಕಿ ಮೇಲೆ ಅತ್ಯಾಚಾರ, ಕೊಲೆ
ರಾಯಚೂರು, ಜೂ. 16 : ಒಂಭತ್ತು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮಾಡಿ, ತಲೆಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿರುವ ಭೀಕರ ಘಟನೆ, ರಾಯಚೂರು ಜಿಲ್ಲೆಯ ಲಿಂಗಸುಗೂರಿನ ತಾಂಡಾವೊಂದರಲ್ಲಿ ನಡೆದಿದೆ.
ಲಿಂಗಸುಗೂರು ತಾಲೂಕಿನ ಗೋನವಾಟ್ಲಾ ತಾಂಡಾದ ಒಂಭತ್ತು ವರ್ಷದ ಬಾಲಕಿ ಭಾನುವಾರ ಕುರಿ ಕಾಯಲು ಹೋಗಿದ್ದಾಗ ಮೂವರು ಆಕೆಯನ್ನು ಅಪಹರಿಸಿ ಅತ್ಯಾಚಾರ ಮಾಡಿ, ತಲೆಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾರೆ. ಸೋಮವಾರ ಬಾಲಕಿ ಶವ ಪತ್ತೆಯಾಗಿದೆ.

ಘಟನೆಯ ಬಗ್ಗೆ ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಲಿಂಗಸುಗೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತಾಂಡಾದ ನಿವಾಸಿಗಳಾದ ಮೂವರು ಶಂಕಿತ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. [ಅಶ್ಲೀಲ ಜಾಹಿರಾತು ಪ್ರಚೋದನಕಾರಿ, ರೇಪ್ ತಡೆಯಲಾಗದು]
ಬಲವಂತದ ಮದುವೆಯಾಗಿ ಜೈಲು ಸೇರಿದ : ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ಅಪ್ರಾಪ್ತ ವಯಸ್ಸಿನ ನಾದಿನಿಯನ್ನು ಮದುವೆಯಾದ ಭಾವ ಕೆಲವೇ ಗಂಟೆಗಳಲ್ಲಿ ಜೈಲು ಸೇರಿದ ಘಟನೆ ನಡೆದಿದೆ. ಬಂಧಿತನನ್ನು ಕವಣಾಪುರ ಗ್ರಾಮದ ಪ್ರಶಾಂತ್ ಕುಮಾರ್(30) ಎಂದು ಗುರುತಿಸಲಾಗಿದೆ.
ಆರೋಪಿ ಪ್ರಶಾಂತ್ ಕುಮಾರ್ ಎಸ್ಎಸ್ಎಲ್ ಸಿ ವ್ಯಾಸಂಗ ಮಾಡುತ್ತಿರುವ ಬಾಲಕಿಯನ್ನು ಬಲವಂತವಾಗಿ ವಿವಾಹವಾಗಿ ಜೈಲು ಸೇರಿದ್ದಾನೆ. ಪ್ರಶಾಂತ್ ಬಾಲಕಿಯ ಅಕ್ಕನನ್ನು ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದು ಆಕೆ ಗಂಡನನ್ನು ತೊರೆದಿದ್ದಾಳೆ. ಇದರಿಂದಾಗಿ ಮತ್ತೊಂದು ಮದುವೆಯಾಗಲು ಹುಡುಗಿಯನ್ನು ಹುಡುಕುತ್ತಿದ್ದ ಈತ, ಬಾಲಕಿಯ ಸೋದರ ಮಾವಂದಿರನ್ನು ಬಲವಂತವಾಗಿ ಒಪ್ಪಿಸಿ ಬಾಲಕಿಯನ್ನು ವಿವಾಹವಾಗಿದ್ದಾನೆ.
ಸೋಮವಾರ ಮುಂಜಾನೆ 6 ಗಂಟೆಯ ವೇಳೆಗೆ ಚನ್ನಪಟ್ಟಣದ ಸಮೀಪದ ಬೀರೇಶ್ವರ ದೇವಾಲಯದಲ್ಲಿ ಬಾಲಕಿಯನ್ನು ಪ್ರಶಾಂತ್ ಬಲವಂತವಾಗಿ ಮದುವೆಯಾಗಿದ್ದಾನೆ. ಬಾಲಕಿ ತನ್ನ ಸ್ನೇಹಿತರಿಗೆ ದೂರವಾಣಿ ಕರೆ ಮಾಡಿ ಈ ವಿಷಯ ತಿಳಿಸಿದ್ದಳು. ಈ ವಿಚಾರ ಗ್ರಾಮಸ್ಥರಿಗೂ ತಿಳಿದು, ಪೊಲೀಸರಿಗೂ ವಿಷಯ ತಿಳಿದಿದೆ. ಪೊಲೀಸರು ಕೆಲವು ಗಂಟೆಗಳ ಹಿಂದೆ ಮದುವೆಯಾಗಿದ್ದ ಪ್ರಶಾಂತ್ ಅವರನ್ನು ಬಂಧಿಸಿದ್ದಾರೆ.












Click it and Unblock the Notifications