7th Pay Commission: ಪಿಂಚಣಿ ತಾರತಮ್ಯ ಪರಿಹಾರಕ್ಕೆ ಆಗ್ರಹಿಸಿ ಬೃಹತ್ ಪ್ರತಿಭಟನೆ
ಬೆಂಗಳೂರು, ಸೆಪ್ಟಂಬರ್ 18: ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರಿಗೆ ಪಿಂಚಣಿ ವಿಚಾರದಲ್ಲಿ ತಾರತಮ್ಯವಾಗಿದೆ. ಇವರಿಗೂ ಸಮಾನ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ನಡೆಸುತ್ತಿರುವ ಪ್ರತಿಭಟನಾ ಸಮಾವೇಶಕ್ಕೆ ನನ್ನ ಬೆಂಬಲ ಇದೆ. ರಾಜ್ಯ ಸರ್ಕಾರ ಭೇದ ಭಾವ ಮಾಡದೇ ಅವರ ಬೇಡಿಕೆ ಈಡೇರಿಸಬೇಕು ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗಡೆ ಅವರು ಆಗ್ರಹಿಸಿದ್ದಾರೆ.
ಬುಧವಾರ ಬೆಂಗಳೂರಿನ ನಗರದ ಫ್ರೀಡಂ ಪಾರ್ಕ್ ನಲ್ಲಿ ಕರ್ನಾಟಕ ರಾಜ್ಯ ನಿವೃತ್ತ ನೌಕರರ ವೇದಿಕೆಯ ಬೃಹತ್ ಸಮಾವೇಶಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ತಾರತಮ್ಯ ಮಾಡದೇ ಕೆಲಸ ಮಾಡುವುದು ಸರ್ಕಾರದ ಆದ್ಯ ಕರ್ತವ್ಯವಾಗಬೇಕು.

ರಾಜ್ಯ ಸರ್ಕಾರದ 7ನೇ ವೇತನ ಆಯೋಗದ ವರದಿಯಂತೆ ನಿವೃತ್ತ ಸರ್ಕಾರಿ ನೌಕರರಿಗೆ ಪಿಂಚಣಿಯಲ್ಲಿ ತಾರತಮ್ಯ ಸರಿಪಡಿಸುವುದು ಸೇರಿದಂತೆ ನಿವೃತ್ತ ನೌಕರರ ಬೇಡಿಕೆಗಳನ್ನು ಆದ್ಯತೆ ಮೇರೆಗೆ ರಾಜ್ಯ ಸರ್ಕಾರ ಬಗೆಹರಿಸಬೇಕು ಎಂದು ಅವರು ಹೇಳಿದರು.
ಸರ್ಕಾರದ ತಾರತಮ್ಯ ನೀರ್ಣಯ ಖಂಡನೀಯ
2022ರ ಜುಲೈ 1ರಿಂದ 2024 ಜುಲೈ 31ರವರೆಗೆ ನಿವೃತ್ತರಾದ ನೌಕರರಿಗೆ ಆರ್ಥಿಕ ಸೌಲಭ್ಯ ಒದಗಿಸದೇ ಇರುವುದು ತಪ್ಪು ಎಂದು ಸರ್ಕಾರದ ನೀರ್ಣಯವನ್ನು ಅವರು ಖಂಡಿಸಿದರು. ಈ ನೌಕರರು ತಮ್ಮ ಸೇವಾವಧಿಯಲ್ಲಿ ಸರ್ಕಾರದ ಕೆಲಸವನ್ನು ಉತ್ತಮವಾಗಿ ನಿರ್ವಹಣೆ ಮಾಡಿ ನಿವೃತ್ತರಾಗಿದ್ದಾರೆ. ಅವರ ಬೇಡಿಕೆಗಳನ್ನು ಈಡೇರಿಸುವುದು ಆಡಳಿತ ಸರ್ಕಾರಗಳ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.

ತಾರತಮ್ಯ ಮಾಡುವುದು ಸಂವಿಧಾನ ವಿರುದ್ಧವಾಗಿದೆ. ಕಾನೂನಿನ ವಿರುದ್ಧವಾಗಿ ಸರ್ಕಾರ ನಿರ್ಣಯಿಸಿದ್ದೇ ಆದಲ್ಲಿ ಅದರ ವಿರುದ್ಧ ನನ್ನು ಹೋರಾಟ, ಹೋರಾಟಗಾರರಿಗೆ ಸದಾ ಬೆಂಬಲ ಇರಲಿದೆ. ನಿಮ್ಮ ಪಿಂಚಣಿ ತಾರತಮ್ಯ ಬೇಡಿಕೆ ಸರಿ ಇದೆ. ಇದಕ್ಕೆ ನನ್ನ ಬೆಂಬಲ ಇದೆ. ಸದ್ಯಕ್ಕೆ ಈ ಬೇಡಿಕೆಯನ್ನು ನ್ಯಾಯಾಲಯಕ್ಕೆ ತೆರಳುವುದು ಬೇಡ. ಸರ್ಕಾರದ ಮಟ್ಟದಲ್ಲಿಯೇ ಬಗೆಹರಿಸಿಕೊಳ್ಳಬೇಕು ಎಂದು ಅವರು ನೌಕರರ ಸಂಘಕ್ಕೆ ಸಲಹೆ ನೀಡಿದರು.
ಆಯೋಗ ಪರಿಷ್ಕರಣೆ ವೇಳೆ ಅನ್ಯಾಯ
ಸರ್ಕಾರಿ ನೌಕರರು ನಿವೃತ್ತರಾದವರಲ್ಲಿ ಶೇಕಡಾ 40 ಶಿಕ್ಷಕರು, ಶೇಕಡಾ 12 ಆರೋಗ್ಯ ಇಲಾಖೆ ನೌಕರರು, ಶೇಕಡಾ 10 ಆರಕ್ಷಕ ಸಿಬ್ಬಂದಿ, ಉಳಿದ ಶೇಕಡಾ 38 ಭಾಗ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಪ್ರತಿ ಬಾರಿ ವೇತನ ಆಯೋಗಗಳ ಪರಿಷ್ಕರಣೆ ಸಂದರ್ಭದಲ್ಲಿ ನಿವೃತ್ತರಿಗೆ ಅನ್ಯಾವಾಗುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಹಿಂದೊಮ್ಮೆ 6ನೇ ವೇತನ ಆಯೋಗದ ಸಂದರ್ಭದಲ್ಲಿಯೂ ಇದೇ ರೀತಿ ತಾರತಮ್ಯ ಆಗಿತ್ತು. ಇದೀಗ 7ನೇ ವೇತನ ಆಯೋಗದಲ್ಲಿ ಅಂತದ್ದೇ ಲೋಪ ಕಂಡು ಬರುತ್ತಿದೆ. ಆದ್ದರಿಂದ ಆದೇಶವನ್ನು ಪರಿಶೀಲಿಸಿ ಪರಿಷ್ಕೃತ ಆದೇಶ ಹೊರಡಿಸಿ ಈ ನೌಕರರಿಗೆ ಆರ್ಥಿಕ ಸೌಲಭ್ಯ ನೀಡಬೇಕು ಎಂದು ತಿಳಿಸಿದರು.
ಸರ್ಕಾರಿ ನೌಕರರ ಡಿಎ, ಡಿಆರ್ ಏರಿಕೆ ನಿರೀಕ್ಷೆ
ಸದ್ಯ ಕರ್ನಾಟಕ ಸೇರಿದಂತೆ ದೇಶದಲ್ಲಿ ಏಳನೇ ವೇತನ ಆಯೋಗ ಜಾರಿಯಲ್ಲಿದೆ. ಎಂಟನೇ ವೇತನ ಆಯೋಗವು 2026ರಂದು ಜಾರಿಗೆ ಬರುವ ನಿರೀಕ್ಷೆ ಇದೆ. ಸರ್ಕಾರಗಳು ತಮ್ಮ ಸರ್ಕಾರಿ ನೌಕರರಿಗೆ 2024ರ ಜುಲೈ ತಿಂಗಳ ತುಟ್ಟಿಭತ್ಯೆ (DA) ಮತ್ತು ಪಿಂಚಣಿದಾರರಿಗೆ ತುಟ್ಟಿಪರಿಹಾರ (DR)ವನ್ನು ಘೋಷಿಸುವುದು ಬಾಕಿ ಇದೆ. ಈ ಡಿಎ ಮತ್ತು ಡಿಆರ್ ಶೇ.3 ರಿಂದ 4ರಷ್ಟು ಏರಿಕೆ ಮಾಡಿ ಇದೇ ಸೆಪ್ಟಂಬರ್ ಅಂತ್ಯ ಇಲ್ಲವೇ ಅಕ್ಟೋಬರ್ ಮೊದಲ ವಾರ ಆದೇಶ ಹೊರಡಿಸುವ ಸಾಧ್ಯತೆ ಇದೆ.












Click it and Unblock the Notifications