7th Pay Commission: UGC ಮತ್ತು ಇತರ ವೇತನ ಶ್ರೇಣಿ ನೌಕರರ ನಿವೃತ್ತಿ ವೇತನ ಸೌಲಭ್ಯಗಳು
ಬೆಂಗಳೂರು, ಸೆಪ್ಟೆಂಬರ್ 14: ಕರ್ನಾಟಕ ಸರ್ಕಾರ ಜಾರಿಗೊಳಿಸುವ ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗದ ವರದಿ ಸರ್ಕಾರಿ ನೌಕರರಿಗೆ ಮಾತ್ರವಲ್ಲ ನಿವೃತ್ತ ನೌಕರರಿಗೂ ಅನುಕೂಲವಾಗುತ್ತದೆ. ಆಯೋಗ 558 ಪುಟಗಳ ಸಂಪುಟ-1ರ ವರದಿಯಲ್ಲಿ ಯುಜಿಸಿ/ ಎಐಸಿಟಿಇ/ ಐಸಿಎಆರ್ ವೇತನ ಶ್ರೇಣಿಗಳ ನೌಕರರ ನಿವೃತ್ತಿ ವೇತನ ಸೌಲಭ್ಯಗಳ ಕುರಿತು ವಿವರವಾದ ಶಿಫಾರಸುಗಳನ್ನು ಸರ್ಕಾರಕ್ಕೆ ನೀಡಿದೆ. ಹಾಗಾದರೆ ನಿವೃತ್ತರಿಗೆ ಸಿಗುವ ಸೌಲಭ್ಯಗಳು ಯಾವುವು? ಎಂಬ ವಿವರ ಇಲ್ಲಿದೆ.
ಯುಜಿಸಿ/ ಎಐಸಿಟಿಇ/ ಐಸಿಎಆರ್ ವೇತನ ಶ್ರೇಣಿಗಳ ವ್ಯಾಪ್ತಿಗೊಳಪಡುವ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳ ನಿವೃತ್ತ ಶಿಕ್ಷಕರ ಸಂಘಗಳಿಂದ ದೀರ್ಘಕಾಲದಿಂದ ಬಗೆಹರಿಯದೆ ಉಳಿದ ವಿವಾದಾಂಶದ ಕುರಿತು, ಅಂದರೆ ಅವರ ಪಿಂಚಣಿಗೆ ಸಂಬಂಧಿಸಿದಂತೆ ಅತಿ ಹೆಚ್ಚಿನ ಸಂಖ್ಯೆಯ ಮನವಿಗಳನ್ನು ಆಯೋಗವು ಸ್ವೀಕರಿಸಿದೆ. ಈ ಶಿಕ್ಷಕರು ತಮಗೆ ಅನ್ವಯವಾಗುವ ಪಿಂಚಣಿ ಮತ್ತು ಪಿಂಚಣಿ ಸೌಲಭ್ಯಗಳಲ್ಲಿ ಕೆಲವು ಮಾರ್ಪಾಡುಗಳನ್ನು ಕೋರಿದ್ದು, ಮೂಲತ: ಈ ಶಿಕ್ಷಕರು ಯಾವುದೇ ಗರಿಷ್ಠ ಮಿತಿಯಿಲ್ಲದೆ, ಅಂತಿಮವಾಗಿ ಪಡೆದ ಮೂಲ ವೇತನದ ಶೇಕಡ 50ರಷ್ಟು ಪಿಂಚಣಿಯನ್ನು ಕೋರುತ್ತಿದ್ದಾರೆ. ಈ ಬೇಡಿಕೆಗಳ ಹಿನ್ನೆಲೆಯು ಈ ಕೆಳಗಿನಂತಿದೆ.

ಆರಂಭದಲ್ಲಿ ರಾಜ್ಯದ ವಿಶ್ವವಿದ್ಯಾಲಯಗಳು ಮತ್ತು ಇಂಜಿನಿಯರಿಂಗ್ ಕಾಲೇಜುಗಳ ಶಿಕ್ಷಕ ವೃಂದಗಳಿಗೆ ಮಾತ್ರ ಯುಜಿಸಿ/ ಎಐಸಿಟಿಇ/ ಐಸಿಎಆರ್ ವೇತನ ಶ್ರೇಣಿಗಳನ್ನು ಅನ್ವಯಿಸಲಾಗಿರುತ್ತದೆ. ಪದವಿ ಕಾಲೇಜುಗಳ ಶಿಕ್ಷಕರ ಸಂಘದ ಒಕ್ಕೂಟವು ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಸರ್ಕಾರಿ ಪದವಿ ಕಾಲೇಜುಗಳಿಗೂ ಸಹ ಇದೇ ವೇತನ ಶ್ರೇಣಿಗಳನ್ನು ವಿಸ್ತರಿಸುವಂತೆ ಬೇಡಿಕೆ ಸಲ್ಲಿಸಿತ್ತು. ಇದರ ಪರಿಣಾಮವಾಗಿ, ಸರ್ಕಾರಿ ಮತ್ತು ಅನುದಾನಿತ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕ ವೃಂದಗಳಿಗೂ ಯುಜಿಸಿ ವೇತನ ಶ್ರೇಣಿಗಳನ್ನು ವಿಸ್ತರಿಸುವುದನ್ನು ಪರಿಶೀಲಿಸಲು ರಾಜ್ಯ ಸರ್ಕಾರವು 1987-88ರಲ್ಲಿ ಒಂದು ಸಮಿತಿಯನ್ನು ರಚಿಸಿತು.
ಈ ಸಮಿತಿಯ ಶಿಫಾರಸ್ಸುಗಳನ್ನು ಆಧರಿಸಿ, ಸರ್ಕಾರಿ ಮತ್ತು ಅನುದಾನಿತ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕ ವೃಂದಗಳಿಗೂ ದಿನಾಂಕ 01.01.1986ರಿಂದ ಅನ್ವಯವಾಗುವಂತೆ ಮಾರ್ಪಡಿಸಲಾದ ಯುಜಿಸಿ ವೇತನ ಶ್ರೇಣಿಗಳನ್ನು ವಿಸ್ತರಿಸಿತು. ಹೀಗೆ ವಿಸ್ತರಿಸಲಾದ ಮಾರ್ಪಡಿತ ಯುಜಿಸಿ ವೇತನ ಶ್ರೇಣಿಗಳನ್ನು ಆನಂತರದಲ್ಲಿ ಪರಿಷ್ಕರಿಸಿ, ಸರ್ಕಾರಿ ಮತ್ತು ಅನುದಾನಿತ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕ ವೃಂದಗಳಿಗೆ ಯುಜಿಸಿ ವೇತನ ಶ್ರೇಣಿಗಳನ್ನು ಸಂಪೂರ್ಣವಾಗಿ ಅನ್ವಯಿಸಲಾಯಿತು.
ವಿಶ್ವವಿದ್ಯಾಲಯಗಳು ಮತ್ತು ಸರ್ಕಾರಿ/ ಅನುದಾನಿತ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಶಿಕ್ಷಕ ವೃಂದಗಳಿಗೂ ಕೇಂದ್ರ ವೇತನ ಶ್ರೇಣಿಗಳನ್ನು ವಿಸ್ತರಿಸಿದಾಗ ಕೇವಲ ವೇತನಕ್ಕೆ ಸಂಬಂಧಿಸಿದಂತೆ ಮಾತ್ರ ರಾಜ್ಯವು ಅದನ್ನು ಒಪ್ಪಿಕೊಂಡಿತು. ನಿವೃತ್ತಿ ವೇತನಕ್ಕೆ ಸಂಬಂಧಿಸಿದಂತೆ, ಎಲ್ಲಾ ಶಿಕ್ಷಕರು ರಾಜ್ಯ ನಿವೃತ್ತಿ ವೇತನದ ನಿಯಮಗಳ ವ್ಯಾಪ್ತಿಗೊಳಪಡುತ್ತಾರೆ.
ಶಿಫಾರಸು ಮತ್ತು ವಿವರಣೆಗಳು: ಕರ್ನಾಟಕ ನಾಗರಿಕ ಸೇವಾ ನಿಯಮಗಳ ಉಪಬಂಧಗಳನ್ವಯ ನಿವೃತ್ತಿ ವೇತನವು ಅಂತಿಮ ಮೂಲ ವೇತನದ ಶೇ.50 ರಷ್ಟು ಮತ್ತು ಕಾಲ ಕಾಲಕ್ಕೆ ಹೊರಡಿಸಲಾದ ಸರ್ಕಾರಿ ಆದೇಶಗಳಲ್ಲಿ ನಿರ್ದಿಷ್ಟಪಡಿಸಿದ ಕನಿಷ್ಠ ಮತ್ತು ಗರಿಷ್ಠ ನಿವೃತ್ತಿ ವೇತನ/ ಕುಟುಂಬ ನಿವೃತ್ತಿ ವೇತನದ ಮಿತಿಗೊಳಪಟ್ಟಿರಬೇಕು. ಅದರಂತೆ ಯುಜಿಸಿ/ ಎಐಸಿಟಿಇ/ ಐಸಿಎಆರ್ ವೇತನ ಶ್ರೇಣಿಗಳನ್ನು ಪಡೆಯುವ ಶಿಕ್ಷಕರ ಅಂತಿಮ ಮೂಲ ವೇತನದ ಶೇ.50 ರಷ್ಟು ಮೊತ್ತವು ಹೆಚ್ಚಾಗಿದ್ದರೂ ಸಹ, ರಾಜ್ಯದ ನಿಯಮಗಳನುಸಾರ ಗರಿಷ್ಮ ನಿವೃತ್ತಿ ವೇತನದ ಮಿತಿಗೆ ಒಳಟ್ಟಿರುತ್ತದೆ.
ಪಿಂಚಣಿ ಮೇಲಿನ ಈ ಮಿತಿಯ ವಿರುದ್ಧ ಸೇವೆ ಸಲ್ಲಿಸುತ್ತಿರುವ ಮತ್ತು ನಿವೃತ್ತರಾದ ಸಂಬಂಧಪಟ್ಟ ನೌಕರರು ಪ್ರತಿಭಟನೆ ನಡೆಸುತ್ತಿದ್ದಾರೆ. ರಾಜ್ಯ ಸರ್ಕಾರವು ಕೇಂದ್ರ ವೇತನ ಶ್ರೇಣಿಗಳನ್ನು ನೀಡಲು ಒಪ್ಪಿರುವುದರಿಂದ, ತಾವು ಪಡೆದ ಅಂತಿಮ ವೇತನದ ಶೇ.50ರಷ್ಟು ನಿವೃತ್ತಿ ವೇತನಕ್ಕೆ ಅರ್ಹರಾಗಿದ್ದು, ಆ ಮೊತ್ತವನ್ನು ನೀಡಬೇಕಾಗುತ್ತದೆ ಎಂಬುದು ಅವರ ನಿಲುವು. ಆದರೆ ಕೆಲವು ಸಂದರ್ಭಗಳಲ್ಲಿ ಪಿಂಚಣಿಯು ರಾಜ್ಯ ಸರ್ಕಾರದ ಗರಿಷ್ಠ ಪಿಂಚಣಿಗಿಂತ ಹೆಚ್ಚಾಗಿರಬಹುದು ಮತ್ತು ಕೆಸಿಎಸ್ಆರ್ ನಿಯಮಗಳನ್ನು ಉಲ್ಲಂಘಿಸಿದಂತಾಗುತ್ತದೆ ಎಂಬ ಕಾರಣದಿಂದ ರಾಜ ಸರ್ಕಾರವು ಇದನ್ನು ಒಪ್ಪಿರುವುದಿಲ್ಲ.
ಸಂಬಂಧಪಟ್ಟ ಸಂಘಗಳ ಪ್ರತಿನಿಧಿಗಳು ವಿಷಯವನ್ನು ಪ್ರಸ್ತಾಪಿಸಿ, ಕೆಎಟಿ ಮತ್ತು ರಾಜ್ಯ ಉಚ್ಛ ನ್ಯಾಯಾಲಯಗಳು ಅವರುಗಳ ವಾದವನ್ನು ಎತ್ತಿಹಿಡಿಯುವ ಮೂಲಕ ರಾಜ್ಯ ಸರ್ಕಾರಕ್ಕೆ ನಿರ್ದೇಶನಗಳನ್ನು ನೀಡಲಾಗಿದ್ದರೂ, ಇಲ್ಲಿಯವರೆಗೆ ರಾಜ್ಯ ಸರ್ಕಾರವು ಅವರು ಕೋರಿದ ಪರಿಹಾರವನ್ನು ನೀಡಿರುವುದಿಲ್ಲ. ಯುಜಿಸಿ/ ಎಐಸಿಟಿಇ/ ಐಸಿಎಆರ್ ವೇತನ ಶ್ರೇಣಿಗಳ ವ್ಯಾಪ್ತಿಗೊಳಪಡುವ ಶಿಕ್ಷಕರ ಬೇಡಿಕೆಗಳನ್ನು ಪರಿಗಣಿಸುವುದು ಪಿಂಚಣಿ ಸೌಲಭ್ಯಗಳಿಗೆ ಸಂಬಂಧಿಸಿದಂತೆ ಈ ಕುರಿತು ಅನ್ವಯವಾಗುವ ನಿಯಮಗಳು ಜಾರಿಯಲ್ಲಿರುವವರೆಗೆ ಅವರ ಬೇಡಿಕೆಗಳನ್ನು ಪರಿಗಣಿಸಲಾಗದು ಎಂಬುದು ಇಲ್ಲಿ ಸ್ಪಷ್ಟವಾಗುತ್ತದೆ.
ಈ ಆಯೋಗಕ್ಕೆ ಸಂಬಂಧಿಸಿದಂತೆ ಈಗಾಗಲೇ ಮಾನ್ಯ ಕಟಿ ಮತ್ತು ಮಾನ್ಯ ಉಚ್ಚ ನ್ಯಾಯಾಲಯಗಳಲ್ಲಿ ಈ ವಿಷಯವನ್ನು ವ್ಯವಹರಿಸುತ್ತಿದ್ದುದರಿಂದ ಈ ಹಂತದಲ್ಲಿ ಸಮಸ್ಯೆಯನ್ನು ಬಗೆಹರಿಸುವುದು ಕಾರ್ಯಸಾಧುವಾಗಿರುವುದಿಲ್ಲ. ಕುರಿತು ಸಂಘಗಳಿಂದ ಪ್ರಸ್ತಾಪಿಸಲಾಗಿರುವ ವಿಷಯಗಳಿಗೆ ಸಂಬಂಧಿಸಿದ ಸಮಸ್ಯೆಗಳ ಪರಿಹಾರವು ಸ್ಪಷ್ಟವಾಗಿ ರಾಜ್ಯ ಸರ್ಕಾರದ ಹಂತದಲ್ಲಿತ್ತದೆ. ನಮ್ಮ ಶಿಫಾರಸ್ಸುಗಳ ಆಧಾರದ ಮೇಲೆ ವೇತನ ಶ್ರೇಣಿಗಳ ಪರಿಷ್ಕರಣೆಯ ನಂತರ ಗರಿಷ್ಠ ಪಿಂಚಣಿಯಲ್ಲಿನ ಪರಿಷ್ಕರಣೆಯು ಯುಜಿಸಿ/ ಎಐಸಿಟಿಇ/ ಐಸಿಎಆರ್ ವೇತನ ಶ್ರೇಣಿಗಳನ್ನು ಒಳಗೊಂಡಿರುವ ಶಿಕ್ಷಕರು ಸೇರಿದಂತೆ ಎಲ್ಲಾ ರಾಜ್ಯ ಪಿಂಚಣಿದಾರರಿಗೆ ಅನ್ವಯಿಸುತ್ತದೆ ಎಂದು ಹೇಳಬೇಕಾಗಿಲ್ಲ ಎಂದು ಆಯೋಗ ಹೇಳಿದೆ.












Click it and Unblock the Notifications