7th Pay Commission; ಹುದ್ದೆ ಉನ್ನತೀಕರಣ, ಮೇಲ್ದರ್ಜೆಯ ವೇತನ ಬೇಡಿಕೆ
ಬೆಂಗಳೂರು, ಅಕ್ಟೋಬರ್ 09: ಕರ್ನಾಟಕ ಸರ್ಕಾರ ಸುಧಾಕರ್ ರಾವ್ ಅಧ್ಯಕ್ಷತೆಯ ರಾಜ್ಯ 7ನೇ ವೇತನ ಆಯೋಗ ರಚನೆ ಮಾಡಿದೆ. ಆಯೋಗ ನವೆಂಬರ್ ತಿಂಗಳಿನಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡುವ ನಿರೀಕ್ಷೆ ಇದೆ. ಸರ್ಕಾರ ವಹಿಸಿರುವ ಪರಿಶೀಲನಾ ಅಂಶಗಳ ಮೇಲೆ ಆಯೋಗ ಕಾರ್ಯವನ್ನು ನಿರ್ವಹಣೆ ಮಾಡುತ್ತಿದೆ.
ಕರ್ನಾಟಕ ಸರ್ಕಾರ ಸಚಿವಾಲಯಗಳ ನೌಕರರ ಸಂಘ ರಾಜ್ಯ 7ನೇ ವೇತನ ಆಯೋಗಕ್ಕೆ ವರದಿಯೊಂದನ್ನು ಸಲ್ಲಿಕೆ ಮಾಡಿದೆ. ಸಹಾಯಕರು (Assistant) ಹಾಗೂ ಶೀಘ್ರಲಿಪಿಗಾರರು (Stenographer) ಸೇರಿದಂತೆ ವಿವಿಧ ವೃಂದಗಳ ಬೇಡಿಕೆಗಳ ಕುರಿತು ಆಯೋಗಕ್ಕೆ ಮನವಿಯನ್ನು ಸಲ್ಲಿಕೆ ಮಾಡಿದೆ.

ಸಹಾಯಕರು ಹಾಗೂ ಶೀಘ್ರಲಿಪಿಗಾರರು; ವರದಿಯಲ್ಲಿ ಕೇಂದ್ರ ಸಚಿವಾಲಯದಲ್ಲಿ ವಿಷಯ ನಿರ್ವಾಹಕರಾಗಿ ಕಾರ್ಯ ನಿರ್ವಹಿಸುತ್ತಿರುವ ಸಹಾಯಕ ವೃಂದವು ಗ್ರೂಪ್-ಬಿ ಪತ್ರಾಂಕೇತರ (Non Gazetted) ಹುದ್ದೆಯಾಗಿರುತ್ತದೆ. ವೇತನ ಶ್ರೇಣಿಯು ರೂ. 44,900-1,42,400 ನೀಡಲಾಗುತ್ತಿದೆ.
ಆದರೆ ರಾಜ್ಯ ಸಚಿವಾಲಯದಲ್ಲಿ ಅದೇ ಸಮಾನಾಂತರ ವಿಷಯಗಳ ಕಾರ್ಯ ನಿರ್ವಹಣೆ ಮಾಡುತ್ತಿರುವ ಸಹಾಯಕ ಹುದ್ದೆಯು ಒಂದು ಕಿರಿಯ ಗ್ರೂಪ್ -ಸಿ ಹುದ್ದೆಯಾಗಿದ್ದು, ಇದನ್ನು ಕನಿಷ್ಠ ಹಿರಿಯ ಗ್ರೂಪ್-ಸಿ ಹುದ್ದೆಗೆ ಉನ್ನತೀಕರಿಸಿ, ಮೇಲ್ದರ್ಜೆಯ ವೇತನ ಶ್ರೇಣಿಗೆ ನಿಗದಿಪಡಿಸುವುದು ಅತ್ಯವಶ್ಯಕವಾಗಿರುತ್ತದೆ. (ವೇತನ ಪ್ರಸ್ತುತ ರೂ. 30,350-58,250 ರಿಂದ ರೂ. 37,900-70,850ಕ್ಕೆ ಹೆಚ್ಚಿಸುವುದು) ಎಂದು ಮನವಿ ಮಾಡಲಾಗಿದೆ.
ಕ್ಷೇತೀಯ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುವ ಗ್ರೂಪ್ ಸ- ವೃಂದದ ಪ್ರಥಮ ದರ್ಜೆ ಸಹಾಯಕ ಹುದ್ದೆಯ ಲಿಪಿಕ ಸಿಬ್ಬಂದಿಯಾಗಲಿ ಅಥವಾ ವಿಶೇಷ ಪರಿಣಿತಿಯ ಅವಶ್ಯವಿರುವ ಹುದ್ದೆಗಳಾದ ಸಬ್ ರಿಜಿಸ್ಟ್ರಾರ್, ವಾಣಿಜ್ಯ ತೆರಿಗೆ ಪರಿವೀಕ್ಷಕರು, ಲೆಕ್ಕ ಸಹಾಯಕರು ಮುಂತಾದ ಹುದ್ದೆಗಳ ಕಾರ್ಯ ಸ್ವರೂಪ ಮತ್ತು ಜವಬ್ದಾರಿಗಳಲ್ಲಿ ಇಡೀ ಸೇವಾವಧಿಯಲ್ಲಿಯೇ ಯಾವುದೇ ಗಮನರ್ಹ ವ್ಯತ್ಯಾಸಗಳಾಗುವುದಿಲ್ಲ ಈ ಹುದ್ದೆಗಳ ಸಿಬ್ಬಂದಿ ಯಾವುದೇ ಸ್ಥಳಗಳಿಗೆ ವರ್ಗಾವಣೆಯಾದಗಲೂ ಒಂದೇ ರೀತೀಯ ಕಾರ್ಯ ಸ್ವರೂಪ ಮತ್ತು ಜವಾಬ್ದಾರಿ ಹೊಂದಿರುತ್ತಾರೆ.
ಆದರೆ, ಸಚಿವಾಲಯದಲ್ಲಿ ವಿಷಯ ನಿರ್ವಾಹಕನಾಗಿ ಕರ್ತವ್ಯ ನಿರ್ವಾಹಿಸುವ ಸಹಾಯಕನು ತನ್ನ ಸೇವಾವಧಿಯಲ್ಲಿ ಒಂದೇ ಇಲಾಖೆಗೆ ಸೀಮೀತವಾಗಿರದೆ, ವಿವಿಧ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುವುದರಿಂದ ಆಯಾ ಇಲಾಖೆಗಳ ವಿಶೇಷ ಕಾರ್ಯ ಸ್ವರೂಪಕ್ಕನುಗುಣವಾಗಿ ವಿವಿಧ ಕಾಯಿದೆ ಮತ್ತು ನಿಯಮಗಳನ್ನು ಅರಿತು ಕಾರ್ಯ ನಿರ್ವಹಿಸಬೇಕಿರುತ್ತದೆ.
ಈ ಹಿನ್ನಲೆಯಲ್ಲಿ ಕ್ಷೇತ್ರೀಯ ಇಲಾಖೆಗಳ ಗ್ರೂಪ್-ಸಿ ಸಿಬ್ಬಂದಿಗಳಿಗೆ ಹೋಲಿಸಿದಾಗ ಸಚಿವಾಲಯದಲ್ಲಿ ವಿಷಯ ನಿರ್ವಾಹಕರಾಗಿರುವ ಸಹಾಯಕ ಹುದ್ದೆಯ ಸಿಬ್ಬಂದಿಗಳು ಹೆಚ್ಚಿನ ಪರಿಣಿತಿ, ಜವಾಬ್ದಾರಿ ಹಾಗೂ ವಿವಿಧ ಇಲಾಖೆಗಳ ಕಾಯಿದೆ ಮತ್ತು ನಿಯಮಗಳ ಬಗ್ಗೆ ಹೆಚ್ಚಿನ ಅರಿವನ್ನು ಹೊಂದಿರುತ್ತಾರೆ. ಈ ಅಂಶಗಳನ್ನು ಪರಿಗಣಿಸಿ ಸಹಾಯಕ ಹುದ್ದೆಯನ್ನು ಕನಿಷ್ಠ ಹಿರಿಯ ಗ್ರೂಪ್ -ಸಿ ಹುದ್ದೆಗೆ ಉನ್ನತೀಕರಿಸಿ, ಮೇಲ್ದರ್ಜೆಯ ವೇತನ ಶ್ರೇಣಿಗೆ ನಿಗದಿಪಡಿಸುವುದು ಅತ್ಯವಶ್ಯಕವಾಗಿರುತ್ತದೆ ಎಂದು ಹೇಳಿದೆ.
ಶೀಘ್ರಲಿಪಿಗಾರ: ಶೀಘ್ರಲಿಪಿಗಾರರ ವೃಂದವು ಸಹಾಯಕ ವೃಂದಕ್ಕೆ ತತ್ಸಮಾನ ಹುದ್ದೆಯಾಗಿದ್ದು, ಕೇಂದ್ರ ಸಚಿವಾಲಯದಲ್ಲಿ ಶೀಘ್ರಲಿಪಿಗಾರರನ್ನೇ ಆಪ್ತ ಸಹಾಯಕರಾಗಿ ಆಯ್ಕೆ ಮಾಡಿಕೊಳ್ಳಲಾಗುತ್ತಿದ್ದು, ಸದರಿ ನೌಕರರಿಗೆ ವೇತನ ಶ್ರೇಣಿಯು ರೂ. 44,900-142,400 ನೀಡಲಾಗುತ್ತಿದೆ. ಪ್ರಯುಕ್ತ ರಾಜ್ಯ ಸಚಿವಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಶೀಘ್ರಲಿಪಿಗಾರರಿಗೂ ಸಹ ಕನಿಷ್ಠ ವೇತನ ಶ್ರೇಣಿ ಪ್ರಸ್ತುತ ರೂ. 30,350-58,250 ರಿಂದ ರೂ. 37,900-70,850ಕ್ಕೆ ಹೆಚ್ಚಿಸುವಂತೆ ವರದಿಯಲ್ಲಿ ವೇತನ ಆಯೋಗಕ್ಕೆ ಕೋರಲಾಗಿದೆ.
ಕರ್ನಾಟಕದಲ್ಲಿ ಈ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ರಾಜ್ಯ ಸರ್ಕಾರಿ ನೌಕರರ ವೇತನ ಶ್ರೇಣಿಗಳನ್ನು ಪರಿಷ್ಕರಿಸಲು ಮತ್ತು ನೂತನ ವೇತನ ರಚನೆ ಇತ್ಯಾದಿಗಳನ್ನು ರೂಪಿಸಲು ಕರ್ನಾಟಕ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರ್ ರಾವ್ ಅಧ್ಯಕ್ಷತೆಯ 7ನೇ ರಾಜ್ಯ ವೇತನ ಆಯೋಗವನ್ನು ರಚನೆ ಮಾಡಿತ್ತು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಆಯೋಗ ವರದಿ ನೀಡಲು ನಿಗದಿಪಡಿಸಿರುವ ಕಾಲಾವಧಿಯನ್ನು ದಿನಾಂಕ 19/5/2023ರಿಂದ 6 ತಿಂಗಳು ವಿಸ್ತರಣೆ ಮಾಡಿ ಆದೇಶ ಹೊರಡಿಸಲಾಗಿತ್ತು. 7ನೇ ವೇತನ ಆಯೋಗದ ಅಧ್ಯಕ್ಷರು, ಸದಸ್ಯರ ನಿಯೋಗ ಕಳೆದ ವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿಯಾಗಿತ್ತು. ಆಯೋಗ ನವೆಂಬರ್ ತಿಂಗಳಿನಲ್ಲಿ ಸರ್ಕಾರಕ್ಕೆ ಶಿಫಾರಸು ವರದಿಯನ್ನು ಸಲ್ಲಿಕೆ ಮಾಡುವ ನಿರೀಕ್ಷೆ ಇದೆ.












Click it and Unblock the Notifications