Karnataka Rajyotsava: ಅದ್ಧೂರಿ ರಾಜ್ಯೋತ್ಸವದ ಸಂಭ್ರಮ; ಪುನೀತ್ ರಾಜ್ ಕುಮಾರ್ ಫೋಟೋ ಹಿಡಿದು ಕುಪ್ಪಳಿಸಿದ ಯುವಕರು
ರಾಜ್ಯದ ವಿವಿಧ ಭಾಗಗಳಲ್ಲಿ ಕನ್ನಡದ ಕಂಪು ಹೆಚ್ಚಾಗಿದೆ. ಕುಂದಾನಗರಿ ಬೆಳಗಾವಿಯಲ್ಲಿ ಗುರುವಾರ ರಾತ್ರಿ 10 ಗಂಟೆಯಿಂದಲೇ ಕರ್ನಾಟಕ ರಾಜ್ಯೋತ್ಸವ ಸಂಭ್ರಮ ಮುಗಿಲು ಮುಟ್ಟಿದೆ. ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಕನ್ನಡಾಭಿಮಾನಿಗಳ ಸಂತೋಷದಿಂದ ಕನ್ನಡ ರಾಜ್ಯೋತ್ಸವವನ್ನ ಹಬ್ಬದಂತೆ ಆಚರಿಸಿದ್ದು, ಯುವಕರು ನಟ ಪುನೀತ್ ರಾಜ್ ಕುಮಾರ್ ಅವರ ಫೋಟೋ ಹಿಡಿದು ಕುಣಿದು ಕುಪ್ಪಳಿಸಿದ್ದಾರೆ.
ಮದುವಣಗಿತ್ತಿಯಂತೆ ಶೃಂಗಾರಗೊಂಡಿದ್ದ ರಾಣಿ ಚನ್ನಮ್ಮ ವೃತ್ತವು ಸಂಪೂರ್ಣ ಕನ್ನಡಮಯವಾಗಿದೆ. ಹಳದಿ - ಕೆಂಪು ಬಾವುಟಗಳನ್ನು ಹಿಡಿದು ನಿದ್ದೆಯನ್ನೂ ಲೆಕ್ಕಿಸದೇ ಬಂದಿದ್ದ ಕನ್ನಡಿಗರು ಡಿಜೆ ಹಾಡುಗಳಿಗೆ ಕುಣಿದು ಕುಪ್ಪಳಿಸಿದರು. ನಮ್ಮ ಬೆಳಗಾವಿ ಇದು ನಮ್ಮ ಬೆಳಗಾವಿ, ಕಾಣದಂತೆ ಮಾಯವಾದನು, ಬೊಂಬೆ ಹಾಡುತೈತೆ ಸೇರಿ ಮತ್ತಿತರ ಹಾಡುಗಳಿಗೆ ಯುವಕ-ಯುವತಿಯುರು ಹೆಜ್ಜೆ ಹಾಕಿದರು.

ಕನ್ನಡ ರಾಜ್ಯೋತ್ಸವ ಕುರಿತು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಾತನಾಡಿ, ಅತ್ಯಂತ ಸಂಭ್ರಮ, ಸಡಗರ ಹಾಗೂ ವೈಭವಯುತವಾಗಿ ಆಚರಿಸುತ್ತಿರುವ ಇಂದಿನ 69 ನೇ ಕನ್ನಡ ರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ಜಿಲ್ಲೆಯ ಜನತೆಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳನ್ನು ತಿಳಿಸುತ್ತೇನೆ.
ಕನ್ನಡ ರಾಜ್ಯೋತ್ಸವದ ಈ ಶುಭ ಸಂದರ್ಭದಲ್ಲಿ ಈದಿನ ನಮ್ಮ ನಾಡಿನ ಭಾಷೆ, ಕಲೆ, ಸಂಸ್ಕೃತಿ ಹಾಗೂ ಪರಂಪರೆಗಳನ್ನು ನೆನೆದು ಅವುಗಳನ್ನು ಪ್ರಾಮಾಣಿಕವಾಗಿ ಜಾರಿಗೆ ತರುವುದರ ಮೂಲಕ ಅವುಗಳನ್ನು ಅಭಿವೃದ್ಧಿಗೊಳಿಸುವ ಮಹತ್ವದ ದಿನ. ಇವುಗಳ ಉಳಿವಿಗಾಗಿ ನಾವೆಲ್ಲರೂ ಧೀಕ್ಷೆ ತೊಡುವ ದಿನ ಇದಾಗಿದೆ ಎಂದು ಭಾವಿಸುತ್ತೇನೆ. ಕನ್ನಡ ರಾಜ್ಯ ಸ್ಥಾಪನೆಗೆ ಕನ್ನಡ ನುಡಿಯನ್ನು ಕಟ್ಟುವ, ಉಳಿಸಿ-ಬೆಳೆಸುವ ಕಾಯಕದಲ್ಲಿ ತೊಡಗಿದವರ ಹಾಗೂ ಕರ್ನಾಟಕದ ಸರ್ವತೋಮುಖ ಬೆಳವಣಿಗೆಗೆ ಅನೇಕರು ಶ್ರಮಿಸಿದ್ದು, ಶ್ರಮಿಸಿದವರನ್ನೆಲ್ಲಾ ಈ ದಿನ ನಾಡ ಉತ್ಸವದಲ್ಲಿ ಗೌರವ ಪೂರ್ವಕವಾಗಿ ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ...
ದೇಶದ ಭಾಷೆ ಮತ್ತು ಸಾಹಿತ್ಯ ಪರಂಪರೆಯಲ್ಲಿ ಕನ್ನಡ ನಾಡು ಮತ್ತು ಕನ್ನಡ ಭಾಷೆಗೆ ಉನ್ನತ ಸ್ಥಾನವಿದೆ. ಕನ್ನಡ ಭಾಷೆಯು 8 ಬಾರಿ ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದಿರುವುದು ನಮ್ಮ ಸಾಹಿತ್ಯ ಭಾಷೆಯ ಶ್ರೀಮಂತಿಕೆಯನ್ನು ತೋರಿಸುತ್ತದೆ. ಕನ್ನಡ ಬರಿ ಭಾಷೆಯಲ್ಲ. ಇದೊಂದು ಶಕ್ತಿ. ನಮ್ಮ ನಾಡು-ನುಡಿ, ಸಂಸ್ಕೃತಿಗೆ ಭವ್ಯವಾದ 2000 ವರ್ಷಗಳಿಗೂ ಮೀರಿದ ಇತಿಹಾಸವಿದೆ. ಕಾವೇರಿಯಿಂದ ಗೋದಾವರಿಯವರೆಗೆ ಕನ್ನಡ ನಾಡು ಹಬ್ಬಿದೆ ಎಂದು ಕನ್ನಡದ ಮೊದಲ ಕೃತಿ "ಕವಿರಾಜಮಾರ್ಗ" ದಲ್ಲಿ ಉಲ್ಲೇಖಿಸಿರುವುದು ಇದಕ್ಕೆ ಸಾಕ್ಷಿ.
ಇಂತಹ ಭವ್ಯ ಪರಂಪರೆಯ ಈ ನಮ್ಮ ನೆಲದ ಸಂಪತ್ತು, ಸಂಪ್ರದಾಯ, ಪರಂಪರೆ, ಕಲೆ, ಸಂಸ್ಕೃತಿ ಹಾಗೂ ಭಾಷೆ ಇವುಗಳನ್ನೆಲ್ಲಾ ಉಳಿಸಿ-ಬೆಳೆಸಿಕೊಂಡು ಹೋಗುವುದು ಪ್ರತಿಯೊಬ್ಬ ಕನ್ನಡಿಗರ ಆದ್ಯ ಕರ್ತವ್ಯ...ಮಾತೃ ಭಾಷೆಯನ್ನು ಗೌರವಿಸಬೇಕೆಂದು ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರು ಪ್ರತಿಪಾದಿಸಿದ್ದರು ಎಂಬುದನ್ನು ಮನಗಂಡು ಮಾತೃಭಾಷೆಗೆ ಪ್ರಧಾನ ಸ್ಥಾನ ನೀಡಬೇಕಿದೆ.
ನಿತ್ಯ ಉತ್ಸವಗಳ ನಾಡಾದ ಜಿಲ್ಲೆಯು ವಿವಿಧ ಕ್ಷೇತ್ರಗಳಲ್ಲಿ ಪರಿಣಿತಿಯನ್ನು ಹೊಂದಿ, ಪ್ರಸಿದ್ಧಿ ಪಡೆದು, ಸಾಹಿತ್ಯ ಕ್ಷೇತ್ರದಲ್ಲಿ ತನ್ನದೇ ಆದ ಹಿರಿಮೆಯನ್ನು ಗಳಿಸುವುದರ ಜೊತೆಗೆ ಕನ್ನಡ ಸಾಹಿತ್ಯಕ್ಕೆ ಜಿಲ್ಲೆ ತನ್ನದೇ ಆದ ಕೊಡುಗೆ ನೀಡಿದೆ. ವಿವಿಧತೆಯಲ್ಲಿ ಏಕತೆಗೆ ನಮ್ಮ ಜಿಲ್ಲೆ ಬಹುದೊಡ್ಡ ಉದಾಹರಣೆಯಾಗಿದೆ.
ಈ ನಮ್ಮ ನೆಲವು ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ, ಕಲೆ ಮತ್ತು ಧರ್ಮಕ್ಕೆ ಗಮನಾರ್ಹ ಕೊಡುಗೆಗಳನ್ನು ನೀಡಿದೆ. ಬಸವಣ್ಣನವರ ಮುಂದಾಳತ್ವದಲ್ಲಿ ನಡೆದ ಶರಣ ಚಳವಳಿಯು ಸಮಾಜದಲ್ಲಿ ಬದಲಾವಣೆಯನ್ನು ಹಾಗೂ ಪ್ರಜಾಸತ್ತಾತ್ಮಕ ಆಡಳಿತಕ್ಕೆ ಭದ್ರ ಬುನಾದಿಯನ್ನು 12 ನೇ ಶತಮಾನದಲ್ಲಿ ಹಾಕಿತು.
ಆಲೂರು ವೆಂಕಟರಾವ್ ಅವರ ನೇತೃತ್ವದಲ್ಲಿ 1905ರಲ್ಲಿ ಕರ್ನಾಟಕ ಏಕೀಕರಣದ ಹೋರಾಟದೊಂದಿಗೆ ಪ್ರಾರಂಭವಾಗಿ 1956 ರ ನವೆಂಬರ್ 01 ರಂದು ಭಾಷಾವಾರು ಪ್ರಾಂತ್ಯಗಳು ರಚನೆಯೊಂದಿಗೆ ಮೈಸೂರು ಉದಯವಾಯಿತು. ಮಾಜಿ ಮುಖ್ಯಮಂತ್ರಿ ದಿವಂಗತ ಡಿ. ದೇವರಾಜು ಅರಸು ಅವರ ಪ್ರಯತ್ನದ ಫಲವಾಗಿ 1973 ರ ನವೆಂಬರ್ 01 ರಂದು ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು ಎಂದು ಹೇಳಿದರು.












Click it and Unblock the Notifications