ಕರ್ನಾಟಕದಲ್ಲಿ ಸಾರಿಗೆ ವ್ಯವಸ್ಥೆ ಬದಲಾವಣೆ; ಹೀಗಿವೆ ಸಲಹೆಗಳು
ಬೆಂಗಳೂರು, ಮಾರ್ಚ್ 02; ಕರ್ನಾಟಕ ಸರ್ಕಾರ ರಸ್ತೆ ಸಾರಿಗೆ ಸಂಸ್ಥೆಗಳ ಆರ್ಥಿಕ ಸ್ವಾವಲಂಬನೆ ಮತ್ತು ಸಂಪನ್ಮೂಲ ಕ್ರೋಢೀಕರಣಗಳ ಅಧ್ಯಯನಕ್ಕೆ ನಿವೃತ್ತ ಐಎಎಸ್ ಅಧಿಕಾರಿ ಎಂ. ಆರ್. ಶ್ರೀನಿವಾಸಮೂರ್ತಿ ಅಧ್ಯಕ್ಷತೆಯ ಸಮಿತಿ ರಚನೆ ಮಾಡಿತ್ತು.
ರಾಜ್ಯಾದ್ಯಂತ ಜನರು 550 ಸಲಹೆಗಳನ್ನು ರಸ್ತೆ ಸಾರಿಗೆ ಸಂಸ್ಥೆಗಳ ಆರ್ಥಿಕ ಸ್ವಾವಲಂಬನೆ ಮತ್ತು ಸಂಪನ್ಮೂಲ ಕ್ರೋಢೀಕರಣಕ್ಕೆ ನೀಡಿದ್ದಾರೆ. ಇದರಲ್ಲಿ ಬೆಂಗಳೂರು ನಗರದಲ್ಲಿ ಸಾರಿಗೆ ಕ್ಷೇತ್ರದಲ್ಲಿ ಬದಲಾವಣೆ ತರಲು ಹಲವು ಸಲಹೆಗಳನ್ನು ನೀಡಲಾಗಿದೆ.
2021ರ ನವೆಂಬರ್ನಲ್ಲಿ ಎಂ. ಆರ್. ಶ್ರೀನಿವಾಸಮೂರ್ತಿ ಅಧ್ಯಕ್ಷತೆಯ ಏಕ ಸದಸ್ಯ ಸಮಿತಿ ರಚನೆಯಾಗಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹ ಸಮಿತಿಯ ಜೊತೆ ಒಂದು ಸುತ್ತಿನ ಸಭೆಯನ್ನು ನಡೆಸಿದ್ದರು. ಜನರು ನೀಡುವ ಸಲಹೆಗಳನ್ನು ಸರ್ಕಾರ ಒಪ್ಪಲಿದೆಯೇ? ಕಾದು ನೋಡಬೇಕು.

ಮಹಿಳೆಯರಿಗೆ ಉಚಿತ ಬಸ್ ಸೇವೆ, ಡಬ್ಬಲ್ ಡೆಕ್ಕರ್ ಬಸ್ ಸೇವೆ ಪುನಃ ಆರಂಭ, ಮಿನಿ ಬಸ್ ಸೇವೆ ಆರಂಭ, ಕ್ಯಾಷ್ ಲೆಸ್ ವ್ಯವಸ್ಥೆ ಜಾರಿ, ರಿಯಲ್ ಟೈಂ ಮಾಹಿತಿ ನೀಡುವುದು ಸೇರಿದಂತೆ ವಿವಿಧ ಸಲಹೆಗಳನ್ನು ನೀಡಲಾಗಿದೆ.
550 ಸಲಹೆಗಳ ಪೈಕಿ 400 ಸಲಹೆಗಳು ಆನ್ಲೈನ್ ಮೂಲಕ ಸಲ್ಲಿಕೆಯಾಗಿವೆ. 150 ಸಲಹೆ ಪತ್ರದ ಮೂಲಕ ಬಂದಿವೆ. ಜನವರಿ 31ರ ತನಕ ಸಲಹೆಗಳನ್ನು ಕಳಿಸಿ ಎಂದು ತಿಳಿಸಲಾಗಿತ್ತು. ಆದರೆ ಫೆಬ್ರವರಿಯಲ್ಲಿಯೂ ಸಲಹೆಗಳು ಬರುತ್ತಿವೆ.
ಡಬಲ್ ಡೆಕ್ಕರ್ ಬಸ್ ಎಷ್ಟು ಜನ ನೋಡಿದ್ದೀರಿ? ಎಂಬ ಪ್ರಶ್ನೆಗೆ ವಿದ್ಯಾರ್ಥಿಗಳ ಬಳಿ ಉತ್ತರವಿಲ್ಲ. ಮುಂಬೈ, ಸಿಂಗಾಪುರದಲ್ಲಿ ನೋಡಿದ್ದೇವೆ ಎಂಬ ಉತ್ತರ ಬರುತ್ತಿದೆ. ಬೆಂಗಳೂರಿನಂತಹ ನಗರದಲ್ಲಿ ಏಕೆ ಇದು ಸಾಧ್ಯವಿಲ್ಲ? ಎಂದು ಜನರು ಪ್ರಶ್ನಿಸಿದ್ದಾರೆ.
ಬೆಂಗಳೂರು ನಗರದಲ್ಲಿ ಬಿಎಂಟಿಸಿ ಬಸ್ ಜೀವನಾಡಿಯಾಗಿದೆ. ಲಾಭದಲ್ಲಿ ಸಂಸ್ಥೆಯನ್ನು ನಡೆಸಲು ಏಕೆ ಸಾಧ್ಯವಾಗುತ್ತಿಲ್ಲ ಎಂದು ಜನರು ಕೇಳಿದ್ದು, ಬಿಎಂಟಿಸಿ ಸುಧಾರಣೆಗೆ ಹಲವು ಸಲಹೆ ನೀಡಿದ್ದಾರೆ.
ಪ್ರಯಾಣಿಕರ ಬಸ್ ಎಲ್ಲಿದೆ? ಎಂದು ರಿಯಲ್ ಟೈಂ ಮಾಹಿತಿ ಪಡೆಯುವಂತಾಗಬೇಕು. ಇದಕ್ಕಾಗಿ ಅಗತ್ಯ ವ್ಯವಸ್ಥೆ ಮಾಡಬೇಕು ಎಂದು ಸಲಹೆ ನೀಡಲಾಗಿದೆ. ಬಸ್ಗಳಲ್ಲಿ ಎಲೆಕ್ಟ್ರಾನಿಕ್ ಡಿಸ್ ಪ್ಲೇ ಬೋರ್ಡ್ ಅಳವಡಿಕೆ ಮಾಡಬೇಕು. ಹಿಂದೆ ಈ ಯೋಜನೆ ಜಾರಿಗೊಳಿಸಿದರೂ ಅದು ಕಾರ್ಯರೂಪಕ್ಕೆ ಬಂದಿಲ್ಲ ಎಂದು ಜನರು ಹೇಳಿದ್ದಾರೆ.
ಬಿಎಂಟಿಸಿ ಸುಧಾರಣೆ; ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಸುಧಾರಣೆಗಾಗಿ ತುರ್ತಾಗಿ ಮಾರ್ಗ ಬದಲಾವಣೆಯಾಗಬೇಕಿದೆ ಎಂದು ಜನರು ಸಲಹೆ ನೀಡಿದ್ದಾರೆ. ವೈಜ್ಞಾನಿಕ ವಿಧಾನದಲ್ಲಿ ಮಾರ್ಗವನ್ನು ಪರಿಷ್ಕರಣೆ ಮಾಡಬೇಕಿದೆ. ಬಸ್ಗಳ ಸಂಚಾರ ನಿಯಂತ್ರಣಕ್ಕೆ ಈಗಿರುವ ಹೊಸ ತಂತ್ರಜ್ಞಾನವನ್ನು ಬಳಸಿಕೊಂಡು ಬದಲಾವಣೆ ತರಬೇಕು ಎಂದು ಸಲಹೆ ನೀಡಲಾಗಿದೆ.
ಬಸ್ಗಳಲ್ಲಿ ಪಿಎಸ್ಐ ಡಿಸ್ಪ್ಲೇ ಬೋರ್ಡ್ಗಳ ಅಗತ್ಯವಿದೆ. ಪ್ರಯಾಣಿಕರಿಗೆ ಬಸ್ಗಳಲ್ಲಿಯೇ ಮಾಹಿತಿಗಳು ಸಿಗಬೇಕು. ಇದಕ್ಕಾಗಿ ಸುಧಾರಿತ ತಂತ್ರಜ್ಞಾನ ಬಳಕೆ ಮಾಡಿಕೊಂಡು ವ್ಯವಸ್ಥೆ ಮಾಡಬೇಕು ಎಂದು ಜನರು ಸಲಹೆ ನೀಡಿದ್ದಾರೆ.
ಎಂ. ಆರ್. ಶ್ರೀನಿವಾಸಮೂರ್ತಿ ಅಧ್ಯಕ್ಷತೆಯ ಸಮಿತಿ ರಚನೆ ಮಾಡಿದ್ದ ಸರ್ಕಾರ ಕೆಎಸ್ರ್ಟಿಸಿ, ಬಿಎಂಟಿಸಿ, ವಾಯುವ್ಯ ಸಾರಿಗೆ ಸಂಸ್ಥೆ ಮತ್ತು ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ನಿಗಮಗಳಲ್ಲಿ ಆರ್ಥಿಕ ಸ್ವಾವಲಂಬನೆ ಮತ್ತು ಸಂಪನ್ಮೂಲ ಕ್ರೋಢೀಕರಣದ ಕುರಿತು ಮೂರು ತಿಂಗಳಿನಲ್ಲಿ ವರದಿ ನೀಡುವಂತೆ ಸೂಚನೆ ನೀಡಿತ್ತು.
ಸಮಿತಿ ನಿಗಮಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರಿಗೆ ಅಗತ್ಯವಿರುವ ಮಾಹಿತಿ ಮತ್ತು ಸಹಕಾರವನ್ನು ನೀಡಬೇಕೆಂದು ಎಲ್ಲಾ ಸಾರಿಗೆ ನಿಗಮಗಳ ಮುಖ್ಯಸ್ಥರಿಗೆ ಸರ್ಕಾರ ನಿರ್ದೇಶನ ನೀಡಿತ್ತು. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದ ಬಳಿಕ ಸಾರಿಗೆ ನಿಗಮನಗಳನ್ನು ಲಾಭದತ್ತ ತರಲು ಪ್ರಯತ್ನ ಮಾಡುತ್ತಿದ್ದಾರೆ.












Click it and Unblock the Notifications