ಕರ್ನಾಟಕದಿಂದ ವಾಪಸ್ ಆಗಲು 5 ಲಕ್ಷ ಕಾರ್ಮಿಕರ ನೋಂದಣಿ!
ಬೆಂಗಳೂರು, ಮೇ 14 : ಕೊರೊನಾ ಹರಡದಂತೆ ತಡೆಯಲು ಘೋಷಣೆ ಮಾಡಿರುವ ಲಾಕ್ ಡೌನ್ ವಲಸೆ ಕಾರ್ಮಿಕರ ಮೇಲೆ ಭಾರಿ ಪರಿಣಾಮ ಬೀರಿದೆ. ಕರ್ನಾಟಕದಿಂದ 5 ಲಕ್ಷ ವಲಸೆ ಕಾರ್ಮಿಕರು ತಮ್ಮ ರಾಜ್ಯಕ್ಕೆ ವಾಪಸ್ ಆಗಲು ಬಯಸಿದ್ದಾರೆ.
Recommended Video
ಕರ್ನಾಟಕದಿಂದ ತವರು ರಾಜ್ಯಕ್ಕೆ ವಾಪಸ್ ಆಗಲು ಕಾರ್ಮಿಕರಿಗೆ ಶ್ರಮಿಕ್ ವಿಶೇಷ ರೈಲಿನ ವ್ಯವಸ್ಥೆ ಮಾಡಲಾಗಿದೆ. ಸೇವಾ ಸಿಂಧು ಪೋರ್ಟಲ್ನಲ್ಲಿ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇರುವ ವಲಸೆ ಕಾರ್ಮಿಕರು ನೋಂದಣಿ ಮಾಡಿಸಿದ್ದಾರೆ.
ಇದುವರೆಗೂ 5 ಲಕ್ಷ ಅರ್ಜಿಗಳು ಸೇವಾ ಸಿಂಧು ಮೂಲಕ ಬಂದಿವೆ. ಇವುಗಳಲ್ಲಿ ಕಳೆದ ಒಂದು ವಾರದಿಂದಲೇ 3 ಲಕ್ಷ ಜನರು ನೋಂದಣಿ ಮಾಡಿಸಿದ್ದಾರೆ. ಈ ಸಂಖ್ಯೆಯನ್ನು ನೋಡಿದರೆ ಲಾಕ್ ಡೌನ್ ಮುಗಿದ ಬಳಿಕ ರಾಜ್ಯದ ವಿವಿಧ ವಲಯದಲ್ಲಿ ಕಾರ್ಮಿಕರ ಕೊರತೆ ಎದುರಾಗುವ ನಿರೀಕ್ಷೆ ಇದೆ.
ಶ್ರಮಿಕ್ ವಿಶೇಷ ರೈಲಿನಲ್ಲಿ ಪ್ರತಿದಿನ ಸುಮಾರು 10 ಸಾವಿರ ಜನರು ತವರು ರಾಜ್ಯಕ್ಕೆ ವಾಪಸ್ ಆಗುತ್ತಿದ್ದಾರೆ. ಪ್ರತಿದಿನ ನೈಋತ್ಯ ರೈಲ್ವೆ 5 ಅಥವ 6 ರೈಲುಗಳನ್ನು ಓಡಿಸುತ್ತಿದೆ. ಲಾಕ್ ಡೌನ್ ಪರಿಣಾಮ ಕೆಲಸವಿಲ್ಲದೇ, ಕೈಯಲ್ಲಿ ಹಣವಿಲ್ಲದೇ ವಲಸೆ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಯಾವ ರಾಜ್ಯಗಳ ಕಾರ್ಮಿಕರು
ಕರ್ನಾಟಕದಿಂದ ವಾಪಸ್ ಆಗಲು ಬಿಹಾರ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಜಾರ್ಖಂಡ್ ಮತ್ತು ಒಡಿಶಾ ರಾಜ್ಯದ ಕಾರ್ಮಿಕರು ಹೆಚ್ಚಾಗಿ ನೋಂದಣಿ ಮಾಡಿಸಿದ್ದಾರೆ. ಕೇಂದ್ರಾಡಳಿತ ಪ್ರದೇಶಗಳಾದ ಅಂಡಮಾನ್ ಮತ್ತು ನಿಕೋಬಾರ್, ದಾದ್ರಾ ಮತ್ತು ನಗರ ಹವೇಲಿ, ಲಕ್ಷದೀಪಗಳ ಕಾರ್ಮಿಕರು ನೋಂದಣಿ ಮಾಡಿಕೊಂಡಿದ್ದಾರೆ.

ಹಣಕಾಸಿನ ಕೊರತೆ
ಸುಮಾರು 10 ಸಾವಿರ ವಲಸೆ ಕಾರ್ಮಿಕರು ಪ್ರತಿದಿನ ಕರ್ನಾಟಕದಿಂದ ವಿವಿಧ ರಾಜ್ಯಕ್ಕೆ ವಾಪಸ್ ಆಗುತ್ತಿದ್ದಾರೆ. ಆದರೆ, ಕೆಲಸವಿಲ್ಲದೇ, ಹಣವಿಲ್ಲದೇ ಪರದಾಡುತ್ತಿರುವ ಹಲವು ಕಾರ್ಮಿಕರು ಇನ್ನೂ ಇದ್ದು, ಅವರು ರಾಜ್ಯಕ್ಕೆ ವಾಪಸ್ ಆಗಲು ಕಾದು ಕುಳಿತಿದ್ದಾರೆ. ನಡೆದುಕೊಂಡು, ಸ್ವಂತ ವಾಹನದಲ್ಲಿಯೂ ಕಾರ್ಮಿಕರು ವಾಪಸ್ ಆಗುತ್ತಿದ್ದಾರೆ.

ಸರ್ಕಾರದಿಂದ ಮನವೊಲಿಕೆ
ಸರ್ಕಾರ ವಲಸೆ ಕಾರ್ಮಿಕರ ಮನವೊಲಿಕೆ ಕಾರ್ಯಕ್ಕೂ ಮುಂದಾಗಿದೆ. ಕೆಲಸ ಸಿಗಲಿದೆ, ಕಾರ್ಮಿಕರ ಹಿತಾಸಕ್ತಿ ಕಾಪಾಡಲು ನಾವು ಬದ್ಧರಾಗಿದ್ದೇವೆ ತವರಿಗೆ ವಾಪಸ್ ಹೋಗಬೇಡಿ ಎಂದು ಮನವೊಲಿಕೆ ಸಹ ಮಾಡಲಾಗುತ್ತಿದೆ. ಬೆಂಗಳೂರಿನ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಇರುವ ಕಾರ್ಮಿಕರಲ್ಲಿ ಶೇ 25ರಷ್ಟು ಜನರು ವಲಸೆ ಬಂದವರು ಎಂಬ ಮಾಹಿತಿಯೂ ಇದೆ.

ಯಾವುದೇ ಸೌಲಭ್ಯ ಸಿಗುತ್ತಿಲ್ಲ
ಬೆಂಗಳೂರಿನಂತಹ ನಗರದಲ್ಲಿ ಇರುವ ವಲಸೆ ಕಾರ್ಮಿಕರಿಗೆ ಸರಿಯಾದ ವ್ಯವಸ್ಥೆ ಸಿಕ್ಕಿಲ್ಲ. ಲಾಕ್ ಡೌನ್ ಘೋಷಣೆಯಾದ ಬಳಿಕ ಗುತ್ತಿಗೆದಾರರು ಅವರಿಗೆ ಸಂಬಳ ನೀಡಿಲ್ಲ. ಕೈಯಲ್ಲಿ ಹಣವಿಲ್ಲದೇ, ಸರಿಯಾದ ಆಹಾರ ಸಿಗದ ಕಾರಣ ಕಾರ್ಮಿಕರು ನಗರ ಬಿಟ್ಟು ತವರು ರಾಜ್ಯಕ್ಕೆ ವಾಪಸ್ ಆಗಲು ಬಯಸಿದ್ದಾರೆ.












Click it and Unblock the Notifications