ಉಕ್ರೇನ್ನಲ್ಲಿ ಕರ್ನಾಟಕದ 406 ವಿದ್ಯಾರ್ಥಿಗಳು, 30 ಜನರ ರಕ್ಷಣೆ
ಬೆಂಗಳೂರು, ಫೆಬ್ರವರಿ 28; ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ನಡೆಯುತ್ತಿದೆ. ಉಕ್ರೇನ್ನಲ್ಲಿ ಕರ್ನಾಟಕದ 406 ವಿದ್ಯಾರ್ಥಿಗಳು ಸಿಲುಕಿದ್ದು, 30 ಜನರನ್ನು ಮಾತ್ರ ಇಲ್ಲಿಯ ತನಕ ರಕ್ಷಣೆ ಮಾಡಲಾಗಿದೆ.
ಕರ್ನಾಟಕ ಸರ್ಕಾರ ಉಕ್ರೇನ್ನಲ್ಲಿ ಸಿಲುಕಿರುವ ಕನ್ನಡಿಗರಿಗೆ ನೆರವು ನೀಡಲು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತ ಆರ್. ಮನೋಜ್ ರಂಜನ್ ಅವರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಿದೆ.
ಶನಿವಾರ ಮುಂಬೈಗೆ ಆಗಮಿಸಿದ್ದ ವಿಮಾನದಲ್ಲಿದ್ದ 12 ವಿದ್ಯಾರ್ಥಿಗಳು ಭಾನುವಾರ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. ದೆಹಲಿಗೆ ಆಗಮಿಸುವ ವಿದ್ಯಾರ್ಥಿಗಳಿಗೆ ಕರ್ನಾಟಕ ಭವನದಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ.

ಉಕ್ರೇನ್ನಲ್ಲಿರುವ 406 ವಿದ್ಯಾರ್ಥಿಗಳಲ್ಲಿ 135 ಜನರು ಬೆಂಗಳೂರು ನಗರದವರು. ಮೈಸೂರು 28, ಬಾಗಲಕೋಟೆ 24, ವಿಜಯಪುರ 18, ದಕ್ಷಿಣ ಕನ್ನಡ 18, ಬೆಂಗಳೂರು ಗ್ರಾಮಾಂತರದ 18 ವಿದ್ಯಾರ್ಥಿಗಳಿದ್ದಾರೆ.
ತುಮಕೂರು 17, ರಾಯಚೂರು 15, ಹಾಸನ 13, ಕಲಬುರಗಿ ಮತ್ತು ಬೆಳಗಾವಿಯ 12, ಹಾವೇರಿ 10, ಕೋಲಾರ ಮತ್ತು ದಾವಣಗೆರೆ 9. ಚಿಕ್ಕಬಳ್ಳಾಪುರ ಮತ್ತು ಚಿಕ್ಕಮಗಳೂರಿನ 8 ವಿದ್ಯಾರ್ಥಿಗಳು ಸಿಲುಕಿದ್ದಾರೆ.
ಬೀದರ್ ಮತ್ತು ಬಳ್ಳಾರಿಯ 5, ಚಿತ್ರದುರ್ಗ 5, ಶಿವಮೊಗ್ಗ 4, ಕಲಬುರಗಿ 4, ಧಾರವಾಡ ಮತ್ತು ಚಾಮರಾಜನಗರ 4, ಮಂಡ್ಯ ಮತ್ತು ಕೊಪ್ಪಳ 3, ರಾಮನಗರ, ಉತ್ತರ ಕನ್ನಡ ಮತ್ತು ಗದಗ ಜಿಲ್ಲೆಯ 3 ವಿದ್ಯಾರ್ಥಿಗಳಿದ್ದಾರೆ.
ಭಾನುವಾರ ಉಡುಪಿಯ ಒಬ್ಬರು, ಬೆಳಗಾವಿ ಮತ್ತು ಗದಗ ಜಿಲ್ಲೆಯ ಒಬ್ಬರು ರಾಜ್ಯಕ್ಕೆ ಆಗಮಿಸಿದ್ದಾರೆ. ಹಲವು ವಿದ್ಯಾರ್ಥಿಗಳು ಭಾರತಕ್ಕೆ ವಾಪಸ್ ಆಗುತ್ತಿದ್ದಾರೆ. ಬೆಂಗಳೂರಿನ ರಚನಾ, ಚಿತ್ರದುರ್ಗದ ಟಿ. ಸುಹಾನ ಹಂಗೇರಿ ತಲುಪಿದ್ದಾರೆ.
ಭಾನುವಾರ ಬುಕಾರೆಸ್ಟ್ನಿಂದ 250 ಮತ್ತು 198, ಹಂಗೇರಿ ರಾಜಧಾನಿ ಬುಡಾಪೆಸ್ಟ್ನಿಂದ 240 ಭಾರತೀಯರನ್ನು ಕರೆತರಲಾಗಿದೆ. ಆಪರೇಷನ್ ಗಂಗಾ ಹೆಸರಿನಲ್ಲಿ ಕೇಂದ್ರ ಸರ್ಕಾರ ಉಕ್ರೇನ್ನಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರುತ್ತಿದೆ.
ಉಕ್ರೇನ್ನಲ್ಲಿ ಸಿಲುಕಿರುವ ಕರ್ನಾಟಕದ ವಿದ್ಯಾರ್ಥಿಗಳು ಪೋಷಕರ ಜೊತೆ ಸಂಪರ್ಕದಲ್ಲಿದ್ದಾರೆ. ಅವರೆಲ್ಲರೂ ಸುರಕ್ಷಿತವಾಗಿದ್ದಾರೆ. ರಾಜಧಾನಿ ಕೀವ್ನಲ್ಲಿ ಸಿಲುಕಿರುವ ಕೆಲವರು ಮಾತ್ರ ನೀರು, ಆಹಾರದ ಸಮಸ್ಯೆ ಎದುರಿಸುತ್ತಿದ್ದಾರೆ. ಕೀವ್ ನಗರದಲ್ಲಿಯೇ 40 ಕನ್ನಡಿಗ ವಿದ್ಯಾರ್ಥಿಗಳಿದ್ದಾರೆ ಎಂದು ಅಂದಾಜಿಸಲಾಗಿದೆ.
ಉಕ್ರೇನ್ನಿಂದ ಹಲವಾರು ಭಾರತೀಯರು ಹಂಗೇರಿ, ರುಮೇನಿಯಾ, ಪೋಲೆಂಡ್ ಗಡಿಭಾಗಗಳತ್ತ ಸ್ಥಳಾಂತರಗೊಂಡಿದ್ದಾರೆ. ಏರ್ ಇಂಡಿಯಾ ವಿಶೇಷ ವಿಮಾನದ ಮೂಲಕ ಅವರನ್ನು ಭಾರತಕ್ಕೆ ಕರೆತರಲಾಗುತ್ತಿದೆ.
ಆಪರೇಷನ್ ಗಂಗಾ; ಅಪರೇಷನ್ ಗಂಗಾ ಹೆಸರಿನಲ್ಲಿ ಭಾರತೀಯರನ್ನು ರಕ್ಷಣೆ ಮಾಡುವ ಕಾರ್ಯ ನಡೆಯುತ್ತಿದೆ. ಇದಕ್ಕಾಗಿ ಸಹಾಯವಾಣಿ ಸಂಖ್ಯೆಗಳನ್ನು ಸಹ ನೀಡಲಾಗಿದೆ.
24x7 Control Centres set up to assist in the evacuation of Indian nationals through the border crossing points with Hungary, Poland, Romania and Slovak Republic⬇️https://t.co/uMI1Wu5Jwd#OperationGanga pic.twitter.com/UXF1NVBFcr
— OpGanga Helpline (@opganga) February 27, 2022
ಕಾರ್ಖೀವ್ ಮತ್ತು ಕೀವ್ ನಗರದಲ್ಲಿಯೇ 3,500ಕ್ಕೂ ಅಧಿಕ ಭಾರತೀಯರಿದ್ದಾರೆ. ಎಲ್ಲರೂ ಬಂಕರ್ಗಳಲ್ಲಿ ಆಶ್ರಯ ಪಡೆದಿದ್ದು, ಈ ನಗರಗಳ ಮೇಲೆಯೇ ರಷ್ಯಾದ ಸೈನಿಕರು ಹೆಚ್ಚಿನ ದಾಳಿ ನಡೆಸುತ್ತಿದ್ದಾರೆ. ಈ ನಗರದಿಂದ ಪೋಲೆಂಡ್, ಹಂಗೇರಿ, ಸ್ಲೋವಾಕಿಯಾ ಗಡಿ ತಲುಪಲು ಯಾವುದೇ ವಾಹನದ ವ್ಯವಸ್ಥೆ ಇಲ್ಲವಾಗಿದೆ.
ಹಾಸನದ ಹಿಮನ್ ರಾಜ್, ಅರ್ಪಿತಾ, ಧನುಜಾ ಸೇರಿ ಕರ್ನಾಟಕದ ನಾಲ್ವರು ವಿದ್ಯಾರ್ಥಿಗಳಿರುವ ತಂಡ ಸತತ 15 ಗಂಟೆ ಪ್ರಯತ್ನದ ಬಳಿಕ ಕಡೆಗೂ ಹಂಗೇರಿ ವಿಮಾನ ನಿಲ್ದಾಣ ತಲುಪಿದ್ದಾರೆ. ಉಕ್ರೇನ್ನ ಹುಜಾರ್ಡ್ನಿಂದ ಭಾನುವಾರ ಹೊರಟಿದ್ದ ವಿದ್ಯಾರ್ಥಿಗಳು ಬಸ್ ಮೂಲಕ ಮಧ್ಯರಾತ್ರಿ ಹಂಗೇರಿಗೆ ಆಗಮಿಸಿದ್ದಾರೆ.
ಇಂದು ಹಂಗೇರಿಯ ಕಾಲಮಾನ 6.10 ಕ್ಕೆ ಹೊರಡಲಿರುವ ವಿಮಾನದಲ್ಲಿ ಎಲ್ಲರೂ ಭಾರತಕ್ಕೆ ಮರಳಲಿದ್ದಾರೆ. ಕಡೆಗೂ ಸುರಕ್ಷಿತವಾಗಿ ಹಂಗೇರಿ ತಲುಪಿದ ಬಗ್ಗೆ ಪೋಷಕರಿಗೆ ವಿದ್ಯಾರ್ಥಿಗಳು ವಿಡಿಯೋ ಕಳುಹಿಸಿದ್ದಾರೆ.












Click it and Unblock the Notifications