ಕರ್ನಾಟಕದಲ್ಲಿ ಕಪ್ಪು ಶಿಲೀಂಧ್ರ ಸೋಂಕಿಗೆ ತುತ್ತಾದವರ ಸಂಖ್ಯೆ 3900
ಬೆಂಗಳೂರು, ಸೆಪ್ಟೆಂಬರ್ 22: ಕೊರೊನಾ ಸೋಂಕಿನಿಂದ ಚೇತರಿಸಿಕೊಂಡ ನಂತರ ಕಾಣಿಸಿಕೊಳ್ಳುವ 'ಬ್ಲ್ಯಾಕ್ ಫಂಗಸ್' ಸೋಂಕಿಗೆ ಕರ್ನಾಟಕದಲ್ಲಿ ಇದುವರೆಗೂ 3900 ಮಂದಿ ತುತ್ತಾಗಿದ್ದಾರೆ ಎಂದು ಆರೋಗ್ಯ ಸಚಿವ ಕೆ. ಸುಧಾಕರ್ ಮಂಗಳವಾರ ತಿಳಿಸಿದ್ದಾರೆ.
ಮ್ಯೂಕರ್ಮೈಕೋಸಿಸ್ ಎಂದು ಕರೆಯಲಾಗುವ ಕಪ್ಪು ಶಿಲೀಂಧ್ರ ಸೋಂಕು ಕೊರೊನಾ ಸೋಂಕಿನಿಂದ ಚೇತರಿಸಿಕೊಂಡರವಲ್ಲಿ ಕಾಣಿಸಿಕೊಳ್ಳುತ್ತದೆ. ಇದುವರೆಗೂ ರಾಜ್ಯದಲ್ಲಿ 3900 ಮಂದಿಯಲ್ಲಿ ಈ ಸೋಂಕು ಪತ್ತೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಮಂಗಳವಾರ ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕ ಈಶ್ವರ ಖಂಡ್ರೆ ಪ್ರಶ್ನೆಗೆ ಉತ್ತರಿಸಿದ ಸುಧಾಕರ್, 'ಕಪ್ಪು ಶಿಲೀಂಧ್ರ ಸೋಂಕಿಗೆ ಚಿಕಿತ್ಸೆಯು ದುಬಾರಿಯಾಗಿದ್ದು, ಚಿಕಿತ್ಸೆಯನ್ನು ಉಚಿತವಾಗಿ ನೀಡಲು ಸರ್ಕಾರ ನಿರ್ಧರಿಸಿದೆ' ಎಂದು ಹೇಳಿದರು.

'ಕಪ್ಪು ಶಿಲೀಂಧ್ರ ಸೋಂಕಿಗೆ 96,060 ವಯಲ್ಗಳ ಲಿಪೊಸೊಮಾಲ್ ಆಂಫೊಟೆರಿಸಿನ್ ತರಿಸಿಕೊಂಡಿದ್ದು, 51000 ವಯಲ್ಗಳನ್ನು ಈಗಾಗಲೇ ಜಿಲ್ಲೆಗಳಿಗೆ ವಿತರಿಸಲಾಗಿದೆ' ಎಂದು ತಿಳಿಸಿದರು.
ಬೀದರ್ ಜಿಲ್ಲೆಯಲ್ಲಿ ಕಪ್ಪು ಶಿಲೀಂಧ್ರ ಸೋಂಕಿಗೆ ಔಷಧಗಳ ಸರಬರಾಜು ಕೊರತೆ ಕುರಿತು ಮಾತನಾಡಿದ ಅವರು, ಕೆಲವು ಔಷಧಗಳ ಸರಬರಾಜಿನಲ್ಲಷ್ಟೇ ವ್ಯತ್ಯಾಸವಾಗಿದೆ. ಪೂರಕ ಔಷಧಿಗಳನ್ನು ನೀಡಲಾಗಿದೆ ಎಂದರು.
'ಕಪ್ಪು ಶಿಲೀಂಧ್ರ ಸೋಂಕಿಗೆ 6800 Posaconazole ಮಾತ್ರೆಗಳು ದೊರೆತಿದ್ದು, ಅದರಲ್ಲಿ 6,704 ಮಾತ್ರೆಗಳನ್ನು ಜಿಲ್ಲೆಗಳಿಗೆ ನೀಡಲಾಗಿದೆ. ಆದರೆ ಸದ್ಯಕ್ಕೆ ರಾಜ್ಯದಲ್ಲಿ ಈ ಮಾತ್ರೆ ಅವಶ್ಯಕತೆ ಹೆಚ್ಚಿದೆ. ಕೇಂದ್ರಕ್ಕೆ ಹೆಚ್ಚು ಮಾತ್ರೆಗಳಿಗೆ ಬೇಡಿಕೆ ಇಟ್ಟಿದ್ದೇವೆ. ಇನ್ನು ಮೂರ್ನಾಲ್ಕು ದಿನಗಳಲ್ಲಿ ಮಾತ್ರೆಗಳು ಲಭ್ಯವಾಗಲಿದ್ದು, ಎಲ್ಲಾ ಜಿಲ್ಲೆಗಳಿಗೂ ಕಳುಹಿಸಿಕೊಡಲಾಗುವುದು' ಎಂದು ಹೇಳಿದರು.

ಕರ್ನಾಟಕದಲ್ಲಿ ಕಪ್ಪು ಶಿಲೀಂಧ್ರ ರೋಗಕ್ಕೆ ಈವರೆಗೂ 437 ಮಂದಿ ಪ್ರಾಣ ಬಿಟ್ಟಿದ್ದಾರೆ. ಈ ಪೈಕಿ ಬೆಂಗಳೂರು ನಗವೊಂದರಲ್ಲೇ 149 ಜನರು ಮೃತಪಟ್ಟಿದ್ದಾರೆ. ಕೊರೊನಾ ಸೋಂಕಿತರ ಸಾವಿಗೆ ಕೇವಲ ಕಪ್ಪು ಶಿಲೀಂಧ್ರವಷ್ಟೇ ಅಲ್ಲದೇ ಅವರ ದೇಹದಲ್ಲಿರುವ ರಕ್ತದೊತ್ತಡ, ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಳ, ಸ್ಟೆರಾಯ್ಡ್ ಚಿಕಿತ್ಸೆಯಿಂದಲೂ ಕಪ್ಪು ಫಂಗಸ್ ಹೆಚ್ಚಳವಾಗುತ್ತಿದೆ.
ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ಅಥವಾ ವೆರಿಕೋಜೋನಲ್ ಥೆರಿಪಿಗೆ ಒಳಗಾಗಿರುವ, ಅನಿಯಂತ್ರಿತ ಮಧುಮೇಹ, ಸ್ಟೆರಾಯಿಡ್ ಗಳ ಅತಿಯಾದ ಬಳಕೆಯಿಂದ ರೋಗನಿರೋಧಕ ಶಕ್ತಿ ಕಳೆದುಕೊಂಡವರು ಅಥವಾ ಅಧಿಕ ಕಾಲ ICUನಲ್ಲಿ ಚಿಕಿತ್ಸೆ ಪಡೆದವರು ಈ ಫಂಗಲ್ ಇನ್ಫೆಕ್ಷನ್ ಗೆ ಗುರಿಯಾಗುವ ಸಾಧ್ಯತೆ ಇದೆ ಎಂದು ಆರೋಗ್ಯ ಸಚಿವರು ಹೇಳಿದ್ದಾರೆ.
ಬ್ಲಾಕ್ ಫಂಗಸ್ಗೆ ಗುರಿಯಾದ ವ್ಯಕ್ತಿಗಳ ಕಣ್ಣು ಅಥವಾ ಮೂಗಿನ ಬಳಿ ಕೆಂಪು ಗುರುತು ಕಾಣಿಸುವ ಸಾಧ್ಯತೆ ಇದೆ ಅಥವಾ ನೋವು ಇರಲಿದೆ. ಇದಲ್ಲದೆ, ಜ್ವರ, ತಲೆನೋವು, ಕಫ, ಉಸಿರಾಟ ತೊಂದರೆ, ರಕ್ತದ ವಾಂತಿ, ಮಾನಸಿಕ ಸೀಮಿತದಲ್ಲಿ ಬದಲಾವಣೆಯಂತಹ ಲಕ್ಷಣಗಳು ಕಾಣಿಸುವ ಸಾಧ್ಯತೆ ಇದೆ.
ಕರ್ನಾಟಕದಲ್ಲಿ ಕೊರೊನಾ ಪ್ರಕರಣ:
ಕರ್ನಾಟಕದಲ್ಲಿ ಮಂಗಳವಾರ 818 ಹೊಸ ಕೋವಿಡ್ ಪ್ರಕರಣ ಪತ್ತೆಯಾಗಿವೆ. ಬೆಂಗಳೂರು ನಗರದಲ್ಲಿ 359 ಹೊಸ ಪ್ರಕರಣಗಳು ದಾಖಲಾಗಿವೆ. 1,414 ಸೋಂಕಿತರು ಚೇತರಿಕೆಯಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ರಾಜ್ಯದಲ್ಲಿ 21 ಸೋಂಕಿತರು ಸಾವನ್ನಪ್ಪಿದ್ದು, ಸದ್ಯಕ್ಕೆ ರಾಜ್ಯದಲ್ಲಿ 13,741 ಸಕ್ರಿಯ ಪ್ರಕರಣಗಳಿವೆ.












Click it and Unblock the Notifications