ವಸತಿ ರಹಿತರ ಸಮೀಕ್ಷೆ ನಡೆಸಲು ನಿರ್ಧಾರ: ಅಂಬರೀಶ್
ಮಂಡ್ಯ, ಜ. 7 : 2015ರ ಮಾರ್ಚ್ ಅಂತ್ಯದ ವೇಳೆಗೆ ರಾಜ್ಯದ 3 ಲಕ್ಷ ಜನರಿಗೆ ಆಶ್ರಯ ಕಲ್ಪಿಸಿಕೊಡಲಾಗುವುದು ಎಂದು ವಸತಿ ಸಚಿವ ಅಂಬರೀಶ್ ತಿಳಿಸಿದ್ದಾರೆ.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸದಾಗಿ ವಸತಿ ರಹಿತರ ಸಮೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ. ವಸತಿ ರಹಿತರರು ಮತ್ತು ನಿವೇಶನ ರಹಿತರ ಸಮೀಕ್ಷೆ ಕೈಗೊಳ್ಳಲು ಉದ್ದೇಶಿಸಲಾಗಿದೆ. ಯೋಜನೆಗೆ ಬೇಕಾಗುವ ಸಮರ್ಪಕ ಹಣ ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.[ಗೃಹ ನಿರ್ಮಾಣ ಸಂಘಕ್ಕೆ ನೇರ ಭೂ ಖರೀದಿ ಅವಕಾಶ]

ರಾಜೀವ್ ಗಾಂಧಿ ಆವಾಸ್ ಯೋಜನೆಯಡಿ ಈ ಬಾರಿ ಕೇಂದ್ರದಿಂದ 505 ಕೋಟಿ ರೂ. ಮಂಜೂರಾತಿ ಪಡೆಯಲಾಗಿದೆ. ಅಲ್ಲದೇ ವಿವಿಧ ರೀತಿಯ 40 ಯೋಜನೆಗಳಿಗೆ ಕೇಂದ್ರದ ಅನುಮತಿ ದೊರೆತಿದೆ ಎಂದು ಅಂಬರೀಶ್ ಮಾಹಿತಿ ನೀಡಿದರು.
ಕೇಂದ್ರದ ಹಣಕಾಸು ನೆರವಿನಲ್ಲಿ ಸುಮಾರು 185 ಕೊಳಗೇರಿ ಪ್ರದೇಶಗಳಲ್ಲಿ 36,438 ಮನೆಗಳನ್ನು ನಿರ್ಮಿಸಲಾಗುವುದು. ಈ ಎಲ್ಲಾ ಯೋಜನೆಗಳು ಸದ್ಯ ಪ್ರಾರಂಭಿಕ ಹಂತದಲ್ಲಿವೆ. ಜೆಎನ್-ನರ್ಮ್ ಯೋಜನೆಯಡಿ ಹೆಚ್ಚಿನ ಅನುದಾನ ಬಳಕೆ ಮಾಡಿ, ಉತ್ತಮ ಗುಣಮಟ್ಟದ ಮನೆಗಳನ್ನು ನಿರ್ಮಿಸಲು ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.[ಬೆಂಗಳೂರಿನಲ್ಲಿ ಮನೆ ಖರೀದಿ ಪ್ರಮಾಣ ದೇಶದಲ್ಲೇ ಹೆಚ್ಚು]
ಮೌಲ್ಯಮಾಪನದಲ್ಲಿ ದ್ವೀತೀಯ ಶ್ರೇಣಿ
ರಾಜ್ಯ ಯೋಜನಾ ಇಲಾಖೆ 2014-15ರ ಮೌಲ್ಯಮಾಪನ ನೀಡಿದ್ದು ವಸತಿ ಇಲಾಖೆ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಅಭಿವೃದ್ಧಿ ಇಲಾಖೆಗಳ ಸಾಲಿನಲ್ಲಿ ನೋಡಿದರೆ ವಸತಿ ಇಲಾಖೆ ಪ್ರಥಮ ಸ್ಥಾನದಲ್ಲಿ ಇದೆ ಎಂದು ಮಾಹಿತಿ ನೀಡಿದರು.
ಮಂಡ್ಯ ಜಿಲ್ಲೆಯ ಕಬ್ಬು ಬೆಳೆಗಾರರ ಹಿತ ಕಾಯಲು ಸರ್ಕಾರ ಮತ್ತು ನಾನು ಬದ್ಧನಾಗಿದ್ದೇನೆ. ಸಕ್ಕರೆ ಕಾರ್ಖಾನೆ ಮಾಲೀಕರು ಮತ್ತು ರೈತರ ಸಭೆ ನಡೆಸಿ ಗೊಂದಲ ಬಗೆಹರಿಸಲಾಗಿದೆ ಎಂದು ಹೇಳಿದರು.












Click it and Unblock the Notifications