Get Updates
Get notified of breaking news, exclusive insights, and must-see stories!

ಮಾರ್ಚ್ 1ರಿಂದ ದ್ವಿತೀಯ ಪಿಯು ಪರೀಕ್ಷೆ: ಪ್ರಶ್ನೆ ಪತ್ರಿಕೆ ಭದ್ರತೆ ಹೇಗಿದೆ?

ಬೆಂಗಳೂರು, ಫೆಬ್ರವರಿ 26: ಕರ್ನಾಟಕದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಗಳು ಮಾರ್ಚ್ 1 ರಿಂದ 20ರ ತನಕ ನಡೆಯಲಿವೆ. ಯಾವುದೇ ಗೊಂದಲವಿಲ್ಲದಂತೆ ಪರೀಕ್ಷೆಗಳನ್ನು ಶಾಂತಿಯುತವಾಗಿ ನಡೆಸಲು ಜಿಲ್ಲಾಡಳಿತ ಅಗತ್ಯವಾದ ಸಿದ್ದತೆಗಳನ್ನು ಮಾಡಿಕೊಂಡಿದೆ. ವಿದ್ಯಾರ್ಥಿಗಳು ಯಾವುದೇ ವದಂತಿಗಳಿಗೆ ಕಿವಿಗೊಡದೇ ಪರೀಕ್ಷೆಯನ್ನು ಬರೆಯುವಂತೆ ಮನವಿ ಮಾಡಲಾಗಿದೆ. ಪ್ರಶ್ನೆ ಪತ್ರಿಕೆಯ ಭದ್ರತೆಯ ಕುರಿತು ಸಹ ಸಾಕಷ್ಟು ಗಮನವನ್ನು ಹರಿಸಲಾಗಿದೆ.

ಜಿಲ್ಲಾಡಳಿತಗಳು ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ಸುಗಮವಾಗಿ ನಡೆಸಲು ಅಗತ್ಯ ತಯಾರಿಯನ್ನು ಮಾಡಿಕೊಂಡಿವೆ. ಎಲ್ಲಾ ಪರೀಕ್ಷಾ ಕೇಂದ್ರಗಳ ವೆಬ್‌ ಕ್ಯಾಸ್ಟಿಂಗ್‌ಗೆ ಪೂರ್ವಸಿದ್ಧತೆ ಮಾಡಿಕೊಳ್ಳಲಾಗಿದ್ದು, ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಪರಿಶೀಲನಾ ವರದಿಯನ್ನು ಪಡೆಯಲಾಗಿದೆ.

2nd PUC Exam From March 1st Preparation By District Administrations

ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಪ್ರತಿ ದಿನದ ಪರೀಕ್ಷಾ ಕಾರ್ಯದ ಚಟುವಟಿಕೆಗಳನ್ನು ವೆಬ್‌ ಕ್ಯಾಸ್ಟ್ ಮಾಡಲು ಕ್ರಮವಹಿಸಲಾಗಿದೆ. ಇದಕ್ಕೆ ಜಿಲ್ಲಾ ಪಂಚಾಯತಿಗಳಲ್ಲಿ ಜಿಲ್ಲಾ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲಾಗುತ್ತದೆ. ಪರೀಕ್ಷಾ ಕೇಂದ್ರಗಳಲ್ಲಿ ಅಗತ್ಯ ಮೂಲಭೂತ ಸೌಲಭ್ಯಗಳಾದ ಕುಡಿಯುವ ನೀರು, ಶೌಚಾಲಯ, ಉತ್ತಮವಾದ ಗಾಳಿ, ಬೆಳಕು, ಪೀಠೋಪಕರಣಗಳನ್ನು ಒದಗಿಸಲು ಸಂಬಂಧಿಸಿದ ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರಿಗೆ ಮತ್ತು ಶಾಲಾ ಮುಖ್ಯಸ್ಥರಿಗೆ ಸೂಚನೆ ನೀಡಲಾಗಿದೆ.

ಪ್ರಶ್ನೆ ಪತ್ರಿಕೆ ಭದ್ರತೆ: ಪ್ರಶ್ನೆ ಪತ್ರಿಕೆಗಳನ್ನು ಆಯಾ ತಾಲೂಕು ಖಜಾನೆಗಳಲ್ಲಿ ಅಭಿರಕ್ಷಣೆಯಲ್ಲಿ ಇಡಲಾಗುತ್ತದೆ. ಪ್ರತಿದಿನದ ವೇಳಾಪಟ್ಟಿಯಂತೆ ನಿಗದಿತ ಮಾರ್ಗದಲ್ಲಿ ಸಂಬಂಧಿಸಿದ ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆ ಪತ್ರಿಕೆಯನ್ನು ಪೊಲೀಸ್ ಬೆಂಗಾವಲಿನಲ್ಲಿ ಸರಬರಾಜು ಮಾಡಲಾಗುತ್ತದೆ.

ಪರೀಕ್ಷಾ ದಿನಗಳಂದು ಪರೀಕ್ಷಾ ಕೇಂದ್ರಗಳ ಸುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಹಾಗೂ ಪರೀಕ್ಷಾ ಕೇಂದ್ರಗಳ ಆಸುಪಾಸಿನ ಜೆರಾಕ್ಸ್ ಮತ್ತು ಸೈಬರ್ ಸೆಂಟರ್‌ಗಳನ್ನು ಮುಚ್ಚಿಸಲು ಆದೇಶ ನೀಡಲಾಗಿದೆ. ಪರೀಕ್ಷಾ ಕೇಂದ್ರಗಳ ಪ್ರದೇಶದ ವ್ಯಾಪ್ತಿಯಲ್ಲಿ ಪರೀಕ್ಷಾ ಅವಧಿಯಲ್ಲಿ ನಿರಂತರ ವಿದ್ಯುತ್‌ ಸರಬರಾಜಿಗೆ ಅಧಿಕಾರಿಗಳಿಗೆ ನಿರ್ದೇಶನ ಕೊಡಲಾಗಿದೆ. ಪರೀಕ್ಷಾ ದಿನಗಳಂದು ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಲಾಗಿದೆ. ಹೆಚ್ಚುವರಿ ಮಾರ್ಗಗಳಿಗೆ ಬಸ್ಸುಗಳನ್ನು ಒದಗಿಸಲು ಸೂಚನೆ ನೀಡಲಾಗಿದೆ.

ಪರೀಕ್ಷಾ ಕೇಂದ್ರಗಳಿಗೆ ಆರೋಗ್ಯ ಇಲಾಖೆಯಿಂದ ಶುಶ್ರೂಷಕಿಯರನ್ನು ಔಷೋಧಪಚಾರಗಳೊಂದಿಗೆ ನೇಮಕ ಮಾಡಲು ಸೂಚನೆ ನೀಡಲಾಗಿದೆ. ಪರೀಕ್ಷಾ ಕೇಂದ್ರದಲ್ಲಿ ಮೊಬೈಲ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಪರೀಕ್ಷಾ ಕಾರ್ಯಕ್ಕೆ ಆ ದಿನದ ಪರೀಕ್ಷಾ ವಿಷಯವನ್ನು ಹೊರತುಪಡಿಸಿದ ಶಿಕ್ಷಕರನ್ನು ಕೊಠಡಿ ಮೇಲ್ವಿಚಾರಕರಾಗಿ ನೇಮಕ ಮಾಡಲಾಗುತ್ತದೆ ಹಾಗೂ ಲಾಟರಿ ಮೂಲಕ ಕೊಠಡಿ ಹಂಚಿಕೆ ಮಾಡಲಾಗುತ್ತದೆ.

ಪರೀಕ್ಷಾ ಕೇಂದ್ರಗಳಿಗೆ ಸಾರ್ವಜನಿಕರ ಪ್ರವೇಶವನ್ನು ಹಾಗೂ ಗುರುತಿನ ಚೀಟಿ ಇಲ್ಲದ ಯಾವುದೇ ವ್ಯಕ್ತಿಯನ್ನು ಪ್ರವೇಶಿಸಲು ಅನುಮತಿ ನೀಡಬಾರದೆಂದು ಕಟ್ಟು ನಿಟ್ಟಿನ ಸೂಚನೆ ನೀಡಲಾಗಿದೆ ಹಾಗೂ ಪರೀಕ್ಷಾ ಕಾರ್ಯನಿರತ ಸಿಬ್ಬಂದಿಗಳು ಕಡ್ಡಾಯವಾಗಿ ಗುರುತಿನ ಚೀಟಿಯನ್ನು ಧರಿಸಿ ಕರ್ತವ್ಯಕ್ಕೆ ಹಾಜರಾಗಲು ತಿಳಿಸಿದೆ. 2024-25ನೇ ಸಾಲಿನಲ್ಲಿಯೂ ಸಹ ಮೂರು ಪರೀಕ್ಷೆಗಳನ್ನು ನಡೆಸಲಾಗುವುದು. ವಿದ್ಯಾರ್ಥಿಗಳು ಇಚ್ಛಿಸಿದಲ್ಲಿ ಎರಡು ಮತ್ತು ಮೂರನೇ ಪರೀಕ್ಷೆಗೂ ಹಾಜರಾಗಬಹುದು. ಮೂರು ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಿದ ಅಂಕವನ್ನು ಪರಿಗಣಿಸಿ ಫಲಿತಾಂಶ ಘೋಷಿಸಲಾಗುವುದು. ಪರೀಕ್ಷಾ ಮುಕ್ತಾಯದ ನಂತರ ಉತ್ತರ ಪತ್ರಿಕೆಗಳ ಬಂಡಲ್ ಗಳನ್ನು ಸ್ವೀಕರಿಸಿ ಭದ್ರತಾ ಕೊಠಡಿಯಲ್ಲಿ ಅಭಿರಕ್ಷಿಸಲಾಗುವುದು. ಮಂಡಲಿಯು ಸೂಚಿಸುವ ದಿನ ಸೂಚಿತ ಸ್ಥಳಕ್ಕೆ ಪೊಲೀಸ್ ಬೆಂಗಾವಲಿನಲ್ಲಿ ರವಾನಿಸಲಾಗುವುದು.

ವಿದ್ಯಾರ್ಥಿಗಳಿಗೆ ಸೂಚನೆಗಳು: ವಿದ್ಯಾರ್ಥಿಗಳು ಈಗಾಗಲೇ ಸಾಧಿಸಿರುವ ಕಲಿಕಾ ಪ್ರಗತಿಯನ್ನು ಖಾತ್ರಿ ಪಡಿಸಿಕೊಂಡು ಪುನರಾವರ್ತನೆ ಮತ್ತು ಪುನರ್ ಅಭ್ಯಾಸ ಮಾಡುವುದು. ಅಧ್ಯಯನ ವೇಳಾಪಟ್ಟಿಯಂತೆ ಪ್ರತಿ ದಿನ ವಿಷಯವಾರು ಗುರಿ ನಿಗದಿಪಡಿಸಿಕೊಂಡು ಕಲಿಕೆಯನ್ನು ಉತ್ತಮ ಪಡಿಸಿಕೊಳ್ಳುವುದು. ಓದಿದ್ದನ್ನು ನೆನಪಿನಲ್ಲಿಡಲು ಪ್ರಮುಖ ಕಲಿಕಾಂಶಗಳ ಟಿಪ್ಪಣಿ ತಯಾರಿಸಿಕೊಂಡು ಪುನರ್‌ಮನನ ಮಾಡುವುದು. ಬರವಣಿಗೆ ಅಭ್ಯಾಸಕ್ಕೆ ಆದ್ಯತೆ ನೀಡುವುದು.

ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು, ಯಾವುದೇ ರೀತಿಯ ಒತ್ತಡಕ್ಕೆ ಒಳಗಾಗಬಾರದು. ಸಂಶಯಗಳಿದ್ದಲ್ಲಿ ಸಹಪಾಠಿಗಳೊಡನೆ ಹಾಗೂ ಶಿಕ್ಷಕರೊಡನೆ ಚರ್ಚಿಸಿ ಸ್ಪಷ್ಟತೆ ಹೊಂದುವುದು. ಯಾವುದೇ ಗೊಂದಲ, ಆತಂಕ ಇಟ್ಟುಕೊಳ್ಳದೆ ನಿರ್ಭೀತಿಯಿಂದ ಪರೀಕ್ಷೆಗೆ ಹಾಜರಾಗುವುದು. ಪರೀಕ್ಷಾ ಫಲಿತಾಂಶ ಕಲಿಕೆಯ ಅಂತಿಮವಲ್ಲ, ಪಡೆದ ಫಲಿತಾಂಶದ ಆಧಾರದಲ್ಲಿ ಲೋಪಗಳನ್ನು ಗುರುತಿಸಿಕೊಂಡು ಪ್ರಯತ್ನ ಮುಂದುವರೆಸಿ ಉತ್ತಮ ಸಾಧನೆಗೆ ಪ್ರಯತ್ನಿಸುವುದು.

ಪೋಷಕರು ವಿದ್ಯಾರ್ಥಿಗಳ ಅಧ್ಯಯನಕ್ಕೆ ಸೂಕ್ತ ವಾತವರಣ ಮತ್ತು ಅವಕಾಶವನ್ನು ಒದಗಿಸುವುದು. ವಿದ್ಯಾರ್ಥಿಗಳ ಕಲಿಕಾ ಪ್ರಗತಿಯನ್ನು ಪರಿಶೀಲಿಸಿ ಶಿಕ್ಷಕರೊಡನೆ ಸಮಾಲೋಚಿಸಿ ಸಹಕಾರ ನೀಡುವುದು. ವ್ಯಕ್ತಿ ಭಿನ್ನತೆಗೆ ಅನುಗುಣವಾಗಿ ತಮ್ಮ ಮಕ್ಕಳ ಕಲಿಕೆಗೆ ಸೂಕ್ತವಾದ ಪ್ರೇರಣೆ ಮತ್ತು ಪ್ರೋತ್ಸಾಹವನ್ನು ನೀಡುವುದು, ತಮ್ಮ ಮಕ್ಕಳನ್ನು ಇತರೆ ವಿದ್ಯಾರ್ಥಿಗಳೊಡನೆ ಹೋಲಿಕೆ ಮಾಡಿ ಯಾವುದೇ ರೀತಿಯ ಒತ್ತಡ ಹೇರಬಾರದು.

ವಿದ್ಯಾರ್ಥಿಗಳ ಕಲಿಕೆ ಮತ್ತು ಪರೀಕ್ಷೆ ಸಿದ್ಧತೆಗೆ ನೀಡಿದಷ್ಟೇ ಪ್ರಾಮುಖ್ಯತೆಯನ್ನು ಅವರ ಆರೋಗ್ಯ ಮತ್ತು ವಿಶ್ರಾಂತಿಗೂ ಆದ್ಯತೆ ನೀಡುವುದು. ಪರೀಕ್ಷೆಗೆ ಪ್ರಾರಂಭಕ್ಕೆ ಕನಿಷ್ಠ 1 ಗಂಟೆ ಮುಂಚಿತವಾಗಿ ತಮ್ಮ ಮಕ್ಕಳನ್ನು ಪರೀಕ್ಷಾ ಕೇಂದ್ರಕ್ಕೆ ಹಾಜರುಪಡಿಸುವುದು. ಪರೀಕ್ಷೆಗಳನ್ನು ಪಾರದರ್ಶಕವಾಗಿ ನಡೆಸಲು ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಯು ಪಾರದರ್ಶಕವಾಗಿ ನಡೆಯುವುದನ್ನು ಖಾತ್ರಿ ಪಡಿಸಕೊಳ್ಳಲು ಸಿಸಿ ಕ್ಯಾಮೆರ ಅಳವಡಿಸಿ ಜಿಲ್ಲಾ ಹಂತದಲ್ಲಿ ವೆಬ್‌ಕ್ಯಾಸ್ಟಿಂಗ್ ಮಾಡಲಾಗುತ್ತಿದೆ.

ಪ್ರತಿ ದಿನ ಆಯ್ದ ಪರೀಕ್ಷಾ ಕೇಂದ್ರಗಳಲ್ಲಿ ರಾಜ್ಯ ಮಟ್ಟದಲ್ಲಿ Artificial Intelligence ತಂತ್ರಜ್ಞಾನ ಆಧಾರಿತವಾಗಿ ವೆಬ್ ಕ್ಯಾಸ್ಟಿಂಗ್ ನಡೆಸಲಾಗುತ್ತಿದೆ. ಪರೀಕ್ಷಾ ಪಾವಿತ್ರ್ಯತೆ ಹಾಗೂ ಗೌಪ್ಯತೆ ಕಾಪಾಡಲು ಶಿಕ್ಷಣ ಇಲಾಖೆ ಹಾಗೂ ಜಿಲ್ಲಾಡಳಿತ ಎಲ್ಲಾ ಮುಂಜಾಗ್ರತ ಕ್ರಮಗಳನ್ನು ಕೈಗೊಂಡಿರುತ್ತದೆ.

ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಅಕ್ರಮ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ವದಂತಿಗಳಿಗೆ ಕಿವಿ ಗೊಡಬಾರದು ಹಾಗೂ ಸುಳ್ಳು ಸುದ್ದಿಗಳನ್ನು ಹಬ್ಬಿಸಬಾರದು. ಪರೀಕ್ಷಾ ಕಾರ್ಯಕ್ಕೆ ಅಡಚಣೆ ಉಂಟುಮಾಡುವ ಸುಳ್ಳು ಸುದ್ದಿ ಹರಡುವ ವ್ಯಕ್ತಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+