ಡಿಸೆಂಬರ್ 9ರ ಲೋಕ್ ಅದಾಲತ್; 25 ಲಕ್ಷ ಕೇಸ್ ಇತ್ಯರ್ಥ
ಬೆಂಗಳೂರು, ಡಿಸೆಂಬರ್ 13: ರಾಜ್ಯಾದ್ಯಂತ ಶನಿವಾರ ನಡೆದ ರಾಷ್ಟ್ರೀಯ ಲೋಕ್ ಅದಾಲತ್ನಲ್ಲಿ 25 ಲಕ್ಷಕ್ಕೂ ಅಧಿಕ ಪ್ರಕರಣ ಇತ್ಯರ್ಥವಾಗಿವೆ. ಇದರಿಂದಾಗಿ ನ್ಯಾಯಾಲಯದ ಮೇಲಿನ ಹೊರೆ ಭಾರೀ ಪ್ರಮಾಣದಲ್ಲಿ ತಗ್ಗಿದೆ.
ಅಲ್ಲದೆ, ಜನರಿಗೆ ಫಟಾಫಟ್ ವ್ಯಾಜ್ಯ ಇತ್ಯರ್ಥವಾಗಿದ್ದು, ಸಮಯ ಹಾಗೂ ಹಣ ಉಳಿತಾಯವಾಗಿದೆ. ಇತ್ಯರ್ಥವಾದ ವ್ಯಾಜ್ಯಗಳ ಕೋರ್ಟ್ ಶುಲ್ಕ ಕಕ್ಷಿದಾರರಿಗೆ ವಾಪಸ್ ಆಗಲಿದೆ. ರಾಜಿ ಸಂಧಾನದ ಮೂಲಕ ಇತ್ಯರ್ಥವಾಗಿರುವ ಕೇಸ್ಗಳಲ್ಲಿ ಒಟ್ಟು 1,569 ಕೋಟಿ ರೂ.ಗಳ ಪರಿಹಾರವನ್ನು ಕಕ್ಷಿದಾರರಿಗೆ ಪರಿಹಾರ ರೂಪದಲ್ಲಿ ನೀಡಲಾಗಿದೆ.

ಈ ಕುರಿತು ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರೂ ಆಗಿರುವ ಹೈಕೋರ್ಟ್ ನ್ಯಾಯಮೂರ್ತಿ ಪಿ. ಎಸ್. ದಿನೇಶ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಲೋಕ್ ಅದಾಲತ್; ಡಿಸೆಂಬರ್ 9ರ ಶನಿವಾರ ಹೈಕೋರ್ಟ್ನ ಮೂರು ಪೀಠಗಳು ಸೇರಿದಂತೆ ರಾಜ್ಯಾದ್ಯಂತ ಒಟ್ಟು 1,022 ಪೀಠಗಳು ಅದಾಲತ್ ನಡೆಸಿದ್ದವು. ಈ ವೇಳೆ ನ್ಯಾಯಾಲಯದಲ್ಲಿ ಬಾಕಿಯಿದ್ದ 2,24,080 ಪ್ರಕರಣಗಳು ಹಾಗೂ 22,90,263 ವ್ಯಾಜ್ಯ ಪೂರ್ವ ಪ್ರಕರಣಗಳು ಸೇರಿ ಒಟ್ಟು 25,14,343 ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದೆ ಎಂದು ವಿವರಿಸಿದರು.
ಅಲ್ಲದೆ, ಒಟ್ಟು 1,358 ವೈವಾಹಿಕ ಪ್ರಕರಣಗಳನ್ನು ಇತ್ಯರ್ಥ ಪಡಿಸಿ, 262 ದಂಪತಿಗಳು ಮತ್ತೆ ಒಂದುಗೂಡಿಸಿರುವುದು ಈ ಬಾರಿಯ ಅದಾಲತ್ನ ಮತ್ತೊಂದು ವಿಶೇಷವಾಗಿದೆ ಎಂದರು. ಅದಲಾತ್ಗೆ ಸುಮಾರು 30 ಲಕ್ಷ ಪ್ರಕರಣಗಳನ್ನು ಗುರುತಿಸಲಾಗಿತ್ತು. ಆ ಪೈಕಿ 25 ಲಕ್ಷಕ್ಕೂ ಅಧಿಕ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಉಳಿದ ಅಂದಾಜು ಐದು ಲಕ್ಷ ಪ್ರಕರಣಗಳು ಕಾರಣಾಂತರಗಳಿಂದ ವಿಲೇವಾರಿ ಮಾಡಲಾಗಲಿಲ್ಲ.
10 ಸಾವಿರ ಚೆಕ್ಬೌನ್ಸ್ ಕೇಸ್ ವಿಲೇ: ಮೋಟಾರ್ ವಾಹನ ಅಪಘಾತ ಪರಿಹಾರ ಪ್ರಕರಣಗಳಲ್ಲಿ 4,031 ಪ್ರಕರಣಗಳನ್ನು ಇತ್ಯರ್ಥಪಡಿಸಿದ್ದು, ಒಟ್ಟು 209 ಕೋಟಿ ರು.ಗಳನ್ನು ಸಂತ್ರಸ್ತರಿಗೆ ಪರಿಹಾರದ ರೂಪದಲ್ಲಿ ಕೊಡಿಸಲಾಗಿದೆ. 10,513 ಚೆಕ್ ಬೌನ್ಸ್, 3,125 ವಿಭಾಗ ದಾವೆ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. 522 ಭೂಸ್ವಾಧೀನ ಅಮಲ್ಜಾರಿ (ಎಲ್ಎಸಿ ಎಕ್ಸಿಕ್ಯೂಷನ್) ಪ್ರಕರಣಗಳಲ್ಲಿ ಇತ್ಯರ್ಥ ಪಡಿಸಿದ್ದು, 120 ಕೋಟಿ ರು.ಗಳ ಪರಿಹಾರ ವಿತರಣೆ ಮಾಡಲಾಗಿದೆ.
839 ಮೋಟಾರು ವಾಹನ ಅಮಲ್ಜಾರಿ ಪ್ರಕರಣಗಳು ಇತ್ಯರ್ಥಪಡಿಸಿದ್ದು, 51 ಕೋಟಿ ರು.ಗಳ ಪರಿಹಾರ ವಿತರಣೆ ಮಾಡಲಾಗಿದೆ. ಇತರೆ 3,290 ಅಮಲ್ಜಾರಿ ಪ್ರಕರಣಗಳು ಇತ್ಯರ್ಥವಾಗಿದ್ದು, 124 ಕೋಟಿ ರು. ಪರಿಹಾರ ವಿತರಣೆ ಮಾಡಲಾಗಿದೆ . 28 ರೇರಾ ಪ್ರಕರಣಗಳ 32 ಲಕ್ಷ ರು, ಪರಿಹಾರ, 88 ಗ್ರಾಹಕರ ವ್ಯಾಜ್ಯಗಳ ಪ್ರಕರಣಗಳಲ್ಲಿ 2.47 ಕೋಟಿ ರು. ಪರಿಹಾರ ನೀಡಲಾಗಿದೆ ಎಂದು ನ್ಯಾಯಮೂರ್ತಿಗಳು ತಿಳಿಸಿದರು.
"ನ್ಯಾಯಾಲಯದಲ್ಲಿ ಹಲವು ವರ್ಷಗಳ ಕಾಲ ಪ್ರಕರಣ ಬಾಕಿ ಉಳಿಯುವುದರಿಂದ ವ್ಯಾಜ್ಯದಾರನಿಗೆ ವೈಯಕ್ತಿಕವಾಗಿ ಹಾಗೂ ಅವರ ಕುಟುಂಬದವರು ಸಾಕಷ್ಟು ತೊಂದರೆ ಉಂಟಾಗಲಿದೆ. ಲೋಕ್ ಅದಾಲತ್ನಲ್ಲಿ ರಾಜಿ ಸೂತ್ರದ ಮೂಲಕ ತತ್ವರಿತವಾಗಿ ಪ್ರಕರಣ ಇತ್ಯರ್ಥಪಡಿಸಲು ಸಾಧ್ಯವಿದೆ. ಇದರಿಂದ ಕೋರ್ಟ್ ಹಾಗೂ ವ್ಯಾಜ್ಯದಾರನ ಸಾಕಷ್ಟು ಸಮಯ ಉಳಿತಾಯವಾಗಲಿದೆ. ಯಾವುದೇ ಖರ್ಚು ಇಲ್ಲದೆ ಪರಿಹಾರ ಕಂಡುಕೊಳ್ಳಬಹುದು. ನ್ಯಾಯಾಲಯಕ್ಕೆ ಅಲೆದಾಡುವುದು ಸಹ ತಪ್ಪುತ್ತದೆ. ಅದಾಲತ್ ವೇದಿಕೆಯನ್ನು ವ್ಯಾಜ್ಯದಾರರು ಬಳಸಿಕೊಳ್ಳಬೇಕು" ಎಂದು ಅವರು ತಿಳಿಸಿದರು.
ಅದಾಲತ್ ವಿಶೇಷತೆಗಳು
* ಬೆಂಗಳೂರಿನ 13ನೇ ಲಘು ವ್ಯಾಜ್ಯಗಳ ನ್ಯಾಯಾಲಯ ಮತ್ತು ಬೆಂಗಳೂರಿನ 16ನೇ ಲಘು ವ್ಯಾಜ್ಯಗಳ ನ್ಯಾಯಾಲಯದಲ್ಲಿದ್ದ ಎರಡು ಪ್ರತ್ಯೇಕ ಎಂವಿಸಿ ಪ್ರಕರಣಗಳನ್ನು ಇತ್ಯರ್ಥಪಡಿಸಿ ಕ್ರಮವಾಗಿ 55 ಲಕ್ಷ ರೂ. ಹಾಗೂ 49.65 ಕ್ಷ ರೂ.ಗೆ ಇತ್ಯರ್ಥಡಿಸಲಾಗಿದೆ.
* ಬೆಳಗಾವಿಯ ಖಾನಪುರ ಕೋರ್ಟ್ನಲ್ಲಿದ್ದ ಎಂವಿಸಿ ಅಮಲ್ಜಾರಿ ಪ್ರಕರಣವನ್ನು ಇತ್ಯರ್ಥಪಡಿಸಿ, 71,60,566 ರು. ಪರಿಹಾರ ಕಲ್ಪಿಸಲಾಗಿದೆ. ಅದೇ ಜಿಲ್ಲೆಯ ಬೈಲಹೊಂಗಲ ಕೋರ್ಟ್ನ ಎಂವಿಸಿ ಪ್ರಕರಣವನ್ನು ಪರಿಹರಿಸಿ 50 ಲಕ್ಷ ರೂ.ಗೆ ಪರಿಹಾರ ನೀಡಲಾಗಿದೆ.
* ಬೆಂಗಳೂರು ಲಘು ವ್ಯಾಜ್ಯಗಳ ಕೋರ್ಟ್ನಲ್ಲಿ ಎರಡು ಪ್ರತ್ಯೇಕ ಚೆಕ್ ಬೌನ್ಸ್ ಪ್ರಕರಣವನ್ನು ಇತ್ಯರ್ಥಪಡಿಸಿ ಕ್ರಮವಾಗಿ 1.18 ಮತ್ತು 1.09 ಕೋಟಿ ರೂ. ಪರಿಹಾರ ನೀಡಲಾಗಿದೆ.
* ಮಂಡ್ಯ ಜಿಲ್ಲೆಯ ಪ್ರಧಾನ ಸಿವಿಲ್ ನ್ಯಾಯಾಲಯದ ಮುಂದಿದ್ದ 18 ವರ್ಷ ಹಳೆಯ ಪಾಲು ವಿಭಾಗ ಪ್ರಕರಣ ಮತ್ತು ಚಾಮರಾಜನಗರದ ಹೆಚ್ಚುವರಿ ಸಿವಿಲ್ ಕೋರ್ಟ್ನಲ್ಲಿ 11 ವರ್ಷದಿಂದ ಬಾಕಿ ಉಳಿದಿದ್ದ ಪಾಲು ವಿಭಾಗ ಪ್ರಕರಣವನ್ನು ಇತ್ಯರ್ಥಪಡಿಸಲಾಗಿದೆ.












Click it and Unblock the Notifications