ಸಮಸ್ತ ವೀರಶೈವ ಲಿಂಗಾಯತರಿಗೆ 2ಎ ಮೀಸಲಾತಿ; ನಿರಾಣಿ
ಬೆಂಗಳೂರು, ಡಿಸೆಂಬರ್ 04; "ಪಂಚಮಸಾಲಿ ಎರಡಲ್ಲ ಮೂರು ಪೀಠಗಳನ್ನು ಮಾಡಿದ್ದು ನಾನೇ. ಸಮಸ್ತ ವೀರಶೈವ ಲಿಂಗಾಯತರಿಗೆ 2ಎ ಮೀಸಲಾತಿ ಅನ್ವಯವಾಗಬೇಕು ಎಂಬುದು ನಮ್ಮ ಉದ್ದೇಶವಾಗಿದೆ" ಎಂದು ಸಚಿವ ಮುರುಗೇಶ ನಿರಾಣಿ ಹೇಳಿದರು.
ಕೊಪ್ಪಳದಲ್ಲಿ ಮಾತನಾಡಿದ ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವರಾದ ಮುರುಗೇಶ ನಿರಾಣಿ, "ಕೆಲವು ಸಣ್ಣ ವೈಮನಸ್ಸುಗಳು ಇರುವುದರಿಂದ ವಿರೋಧಿಗಳು ನಮ್ಮನ್ನು ಪಂಚಮಸಾಲಿ ವಿರೋಧಿಗಳಂತೆ ಬಿಂಬಿಸುತ್ತಿದ್ದಾರೆ" ಎಂದರು.
"ಸಮಸ್ತ ಲಿಂಗಾಯತ ಸಮುದಾಯಕ್ಕೆ ಈ ಮೀಸಲಾತಿ ಸಿಗಬೇಕು ಎನ್ನುವುದು ನನ್ನ ಉದ್ದೇಶ. ಕೇವಲ ಪಂಚಮಸಾಲಿಗೆ ಮಾತ್ರ ಬೇಡ ಎಂದಿರುವುದಕ್ಕೆ ನನ್ನ ವಿರೋಧ ಮಾಡುತ್ತಿದ್ದಾರೆ. ಸಮಾಜಕ್ಕೆ ಆ ಇಬ್ಬರ ಕೊಡುಗೆ ಏನು, ನನ್ನ ಕೊಡುಗೆ ಏನು ಎನ್ನುವುದು ಜನರಿಗೆ ಗೊತ್ತಿದೆ" ಎಂದು ಪರೋಕ್ಷವಾಗಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಕಾಂಗ್ರೆಸ್ ನಾಯಕ ವಿಜಯಾನಂದ ಕಾಶಪ್ಪನವರ್ ವಿರುದ್ದ ವಾಗ್ದಾಳಿ ನಡೆಸಿದರು.

"ಎರಡು ಪೀಠಗಳನ್ನು ಒಂದು ಮಾಡಬೇಕು ಎಂದು ಪ್ರಯತ್ನ ಮಾಡಿದ್ದೆ ನಾನು. ಶೇ 100 ಸಮಸ್ತ ವೀರಶೈವ ಲಿಂಗಾಯತ ಸಮುದಾಯಕ್ಕೆ 2 ಎ ಮೀಸಲಾತಿ ಸಿಗುತ್ತದೆ" ಎಂದು ಸಚಿವರು ಹೇಳಿದರು.
ಕುಟುಂಬ ರಾಜಕಾರಣ ಮಾಡುವುದಿಲ್ಲ; "ನನ್ನ ಮಗನಿಗೆ ರಾಜಕಾರಣಕ್ಕೆ ಬರುವ ಆಸಕ್ತಿಯಿಲ್ಲ. ಯಾವುದೇ ಕಾರಣಕ್ಕೂ ನನ್ನ ಮಗ ರಾಜಕಾರಣಕ್ಕೆ ಬರುವುದಿಲ್ಲ" ಎಂದು ಬಾಗಲಕೋಟೆಯಲ್ಲಿ ಸಚಿವ ಮುರುಗೇಶ್ ನಿರಾಣಿ ಸ್ಪಷ್ಟಪಡಿಸಿದರು.
"ನಮ್ಮ ಕುಟುಂಬದಲ್ಲಿ ಮುರುಗೇಶ್ ನಿರಾಣಿ ಮತ್ತು ಹನಮಂತ ನಿರಾಣಿ ಮಾತ್ರ ರಾಜಕೀಯದಲ್ಲಿ ಇರುತ್ತಾರೆ. ನಮ್ಮಿಬ್ಬರನ್ನು ಬಿಟ್ಟು ಮೂರನೇಯವರು ಸ್ಪರ್ಧೆ ಮಾಡುವುದಿಲ್ಲ. ಒಂದು ವೇಳೆ ಮನೆಯಲ್ಲಿ ಯಾರಾದರೂ ಸ್ಪರ್ಧೆ ಮಾಡುತ್ತೇನೆ ಅಂದರೆ ನಾನು ರಾಜಕೀಯದಿಂದ ನಿವೃತ್ತಿ ಹೊಂದುತ್ತೇನೆ" ಎಂದು ಸಚಿವರು ಹೇಳಿದರು.
"ನನಗೂ ಇಪ್ಪತ್ತು ವರ್ಷ ಜನ ಆಶೀರ್ವಾದ ಮಾಡಿದ್ದಾರೆ. ನಾನು ಫ್ಯಾಕ್ಟರಿ ನೋಡಿಕೊಂಡು ಹೋಗುತ್ತೇನೆ. ಸಹೋದರ ಸಂಗಮೇಶ್ ನಿರಾಣಿ ಬೇಕಿದ್ದರೆ ಸ್ಪರ್ಧೆ ಮಾಡಲಿ, ನನ್ನ ಮಗ ಮಾತ್ರ ರಾಜಕಾರಣಕ್ಕೆ ಬರಲ್ಲ" ಎಂದು ಸ್ಪಷ್ಟಪಡಿಸಿದ್ದರು.












Click it and Unblock the Notifications