ತಮಿಳುನಾಡಿಗೆ 133 ಟಿಎಂಸಿ ಕಾವೇರಿ ನೀರು ಬಿಡುಗಡೆ!
ಬೆಂಗಳೂರು, ಜುಲೈ 31 : ಜುಲೈ ತಿಂಗಳಿನಲ್ಲಿ ಸುರಿದ ಭಾರೀ ಮಳೆಯಿಂದಾಗಿ ಕಾವೇರಿ ಜಲಾನಯನ ಪ್ರದೇಶದ ವ್ಯಾಪ್ತಿಯ ಜಲಾಶಯಗಳು ಭರ್ತಿಯಾಗಿವೆ. ಹೆಚ್ಚುವರಿ ನೀರನ್ನು ತಮಿಳುನಾಡಿಗೆ ಬಿಡಲಾಗಿದ್ದು, 133 ಟಿಎಂಸಿ ನೀರು ಪಕ್ಕದ ರಾಜ್ಯಕ್ಕೆ ಹರಿದು ಹೋಗಿದೆ.
ಜೂನ್ 1ರಿಂದ ಜುಲೈ 29ರ ತನಕ ಕರ್ನಾಟಕ ತಮಿಳುನಾಡಿಗೆ 133 ಟಿಎಂಸಿ ನೀರು ಹರಿಸಿದೆ. ಜುಲೈ ಅಂತ್ಯದೊಳಗೆ 39 ಟಿಎಂಸಿ ನೀರನ್ನು ಹರಿಸುವಂತೆ ಸುಪ್ರೀಂಕೋರ್ಟ್ ಕರ್ನಾಟಕಕ್ಕೆ ಸೂಚನೆ ನೀಡಿತ್ತು. ಕಾವೇರಿ ವಿವಾದದ ಅಂತಿಮ ಆದೇಶವೂ ಇಷ್ಟು ನೀರು ಹರಿಸಲು ನಿರ್ದೇಶನ ನೀಡಿತ್ತು.
ಕಬಿನಿ ಮತ್ತು ಕೆಆರ್ಎಸ್ ಜಲಾಶಯಗಳು ಭರ್ತಿಯಾದ ಬಳಿಕ ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗಿದೆ. ಆದ್ದರಿಂದ, ಭಾರೀ ಪ್ರಮಾಣದ ನೀರು ತಮಿಳುನಾಡಿಗೆ ಹರಿದು ಹೋಗಿದೆ. ಜೂನ್ 15ರಂದು ಕಬಿನಿ, ಜುಲೈ 7ರಂದು ಹಾರಂಗಿ, ಜುಲೈ 14ರಂದು ಕೆಆರ್ಎಸ್ ಜಲಾಶಯ ಭರ್ತಿಯಾಗಿವೆ.

ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾದ ಕಾರಣ ಜಲಾಶಯಗಳಿಗೆ ಒಳ ಹರಿವು ಹೆಚ್ಚಿದ್ದು, ಜಲಾಶಯ ಬೇಗ ಭರ್ತಿಯಾಗಲು ಸಹಾಯಕವಾಯಿತು. ಎರಡು ವಾರಗಳ ಹಿಂದೆ ಕೆಆರ್ಎಸ್ ಜಲಾಶಯಕ್ಕೆ 80 ಸಾವಿರ ಕ್ಯುಸೆಕ್ ಒಳ ಹರಿವು ಇತ್ತು. ಕಳೆದ ವಾರ ಅದು 40 ಸಾವಿರಕ್ಕೆ ಇಳಿದಿತ್ತು.
ಜುಲೈ 31ರಂದು ಬೆಳಗ್ಗೆ 9421 ಕ್ಯುಸೆಕ್ ಒಳಹರಿವು ದಾಖಲಾಗಿದ್ದು, 7378 ಕ್ಯುಸೆಕ್ ಹೊರ ಹರಿವು ಇದೆ. 124 ಅಡಿ ಗರಿಷ್ಠ ಮಟ್ಟದ ಜಲಾಶಯದಲ್ಲಿ 122.70 ಅಡಿ ನೀರಿದೆ.
ಕಬಿನಿ ಜಲಾಶಯದಲ್ಲಿ 2282.87 ಅಡಿ ನೀರಿನ ಸಂಗ್ರಹವಿದೆ. 2284.00 ಅಡಿ ಎತ್ತರದ ಜಲಾಶಯಕ್ಕೆ16174 ಕ್ಯುಸೆಕ್ ಒಳ ಹರಿವು ಇದೆ. 16200 ಕ್ಯುಸೆಕ್ ನೀರು ಹೊರ ಹೋಗುತ್ತಿದೆ.
2859 ಅಡಿ ಎತ್ತರದ ಹಾರಂಗಿ ಜಲಾಶಯದಲ್ಲಿ 2857.46 ಅಡಿಗಳಷ್ಟು ನೀರಿದೆ. 4706 ಕ್ಯುಸೆಕ್ ಒಳ ಹರಿವು ಇದ್ದು, 3418 ಕ್ಯುಸೆಕ್ ಹೊರ ಹರಿವು ಇದೆ.












Click it and Unblock the Notifications