ಗುರುವಾರದ ಸಾರಿಗೆ ಮುಷ್ಕರಕ್ಕೆ ನಾನಾ ಸಂಘಟನೆಗಳ ಬೆಂಬಲ
ಬೆಂಗಳೂರು, ಏ. 29 : 'ರಸ್ತೆ ಸುರಕ್ಷತಾ ಮಸೂದೆ' ಜಾರಿಗೊಳಿಸಬಾರದು ಎಂದು ಒತ್ತಾಯಿಸಿ ಕರೆ ನೀಡಿರುವ ಒಂದು ದಿನದ ಸಾರಿಗೆ ಮುಷ್ಕರಕ್ಕೆ ಕರ್ನಾಟಕದಲ್ಲಿ 11 ಸಂಘಟನೆಗಳು ಬೆಂಬಲ ನೀಡಿವೆ. ಸರ್ಕಾರಿ ಬಸ್ ಸೇವೆ ಸಂಪೂರ್ಣವಾಗಿ ಸ್ಥಗಿತಗೊಳ್ಳಲಿದ್ದು, ಬೆಂಗಳೂರಿನಲ್ಲಿ ಆಟೋಗಳು ರಸ್ತೆಗಿಳಿಯುವುದಿಲ್ಲ.
ಸಾರಿಗೆ ಮುಷ್ಕರಕ್ಕೆ ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ಬೆಂಬಲ ನೀಡಿವೆ. ಸಿಐಟಿಯು, ಕೆಎಸ್ಆರ್ಟಿಸಿ ಸಿಬ್ಬಂದಿ ಮತ್ತು ನೌಕರರ ಸಂಘ, ಕನ್ನಡ ಕ್ರಿಯಾ ಸಮಿತಿ, ಸಾರಿಗೆ ನಿಗಮಗಳ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಒಕ್ಕೂಟ, ಆಟೋ ಚಾಲಕರ ಸಂಘ ಸೇರಿದಂತೆ 11 ಸಂಘಟನೆಗಳು ಬೆಂಬಲ ಕೊಟ್ಟಿವೆ. [ಸಾರಿಗೆ ಮುಷ್ಕರಕ್ಕೆ ಆಟೋ ಚಾಲಕರ ಬೆಂಬಲ]
ವಿವಿಧ ಸಂಘಟನೆಗಳು ಬೆಂಬಲ ನೀಡಿರುವುದರಿಂದ ಮುಷ್ಕರ ಯಶಸ್ವಿಯಾಗಲಿದೆ ಎಂದು ಅಖಂಡ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಕಾರ್ಮಿಕ ಮಹಾಮಂಡಳಿ ಪ್ರಧಾನ ಕಾರ್ಯದರ್ಶಿ ಎ.ವಿ.ಬೋರಶೆಟ್ಟಿ ಹೇಳಿದ್ದಾರೆ. ಮುಷ್ಕರಕ್ಕೆ ಸುಮಾರು 10 ಆಟೋ ಸಂಘಗಳು ಬೆಂಬಲ ನೀಡಿವೆ ಎಂದು ಬೆಂಗಳೂರು ಆಟೋ ಚಾಲಕರ ಸಂಘದ ಅಧ್ಯಕ್ಷ ಎ.ಎಸ್.ಟಿ.ಅರಸು ತಿಳಿಸಿದ್ದಾರೆ. [ರಸ್ತೆ ಸುರಕ್ಷತಾ ಮಸೂದೆ ವಿವರಗಳು]
ಸಾರಿಗೆ ಮುಷ್ಕರದ ಹಿನ್ನಲೆಯಲ್ಲಿ ಪೊಲೀಸರು ಅಗತ್ಯ ಬಂದೋಬಸ್ತ್ ಕೈಗೊಂಡಿದ್ದಾರೆ. ಈ ಮುಷ್ಕರಕ್ಕೆ ಖಾಸಗಿ ಬಸ್, ಟ್ಯಾಕ್ಸಿ ಮಾಲೀಕರು ಬೆಂಬಲ ನೀಡಿಲ್ಲ. ಮುಷ್ಕರಕ್ಕೆ ಬೆಂಬಲ ನೀಡುವ ಕುರಿತು ಇಂದು ಅಂತಿಮ ತೀರ್ಮಾನ ಪ್ರಕಟಿಸುವುದಾಗಿ ಕರ್ನಾಟಕ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ಹೇಳಿದ್ದಾರೆ.

ಒಂದು ದಿನದ ಸಾರಿಗೆ ಮುಷ್ಕರ
ಕೇಂದ್ರ ಸರ್ಕಾರ ಜಾರಿಗೊಳಿಸಲು ಉದ್ದೇಶಿಸಿರುವ 'ರಸ್ತೆ ಸಾರಿಗೆ ಸುರಕ್ಷತಾ ಮಸೂದೆ'ಯನ್ನು ವಿರೋಧಿಸಿ ವಿವಿಧ ಕಾರ್ಮಿಕ ಸಂಘಟನೆಗಳು ಏ.30ರ ಗುರುವಾರ ರಾಷ್ಟ್ರವ್ಯಾಪಿ ಒಂದು ದಿನದ ಸಾರಿಗೆ ಮುಷ್ಕರಕ್ಕೆ ಕರೆ ನೀಡಿವೆ. [ಸಾರಿಗೆ ಮುಷ್ಕರ ಏಕೆ?, ಏನು?]

11 ಸಂಘಟನೆಗಳ ಬೆಂಬಲ
ಕೆಎಸ್ಆರ್ಟಿಸಿ, ಬಿಎಂಟಿಸಿ, ಬೆಂಗಳೂರು ಆಟೋ ಚಾಲಕರ ಸಂಘ, ಸಿಐಟಿಯು, ಕೆಎಸ್ಆರ್ಟಿಸಿ ಸಿಬ್ಬಂದಿ ಮತ್ತು ನೌಕರರ ಸಂಘ, ಕನ್ನಡ ಕ್ರಿಯಾ ಸಮಿತಿ ಸೇರಿ 11 ಸಂಘಟನೆಗಳು ಬಂದ್ಗೆ ಬೆಂಬಲ ನೀಡಿವೆ. ಬೆಂಗಳೂರಿನಲ್ಲಿ ಬೆಳಗ್ಗೆ 6ರಿಂದ ಸಂಜೆ 6ತ ತನಕ ಆಟೋ ಸೇವೆ ಸ್ಥಗಿತಗೊಳ್ಳಲಿದೆ.

ಟ್ಯಾಕ್ಸಿಗಳ ಬೆಂಬಲವಿಲ್ಲ
ಏ.30ರ ಗುರುವಾರದ ಮುಷ್ಕರಕ್ಕೆ ನಮ್ಮ ಬೆಂಬಲವಿಲ್ಲ ಎಂದಿನಂತೆ ಟ್ಯಾಕ್ಸಿ ಮತ್ತು ಮ್ಯಾಕ್ಸಿಕ್ಯಾಬ್ ಸಂಚಾರ ನಡೆಸಲಿವೆ ಎಂದು ಬೆಂಗಳೂರು ಟೂರಿಸ್ಟ್ ಟ್ಯಾಕ್ಸಿ ಓನರ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ರಾಧಾಕೃಷ್ಣ ಹೊಳ್ಳ ಸ್ಪಷ್ಟಪಡಿಸಿದ್ದಾರೆ.

ಖಾಸಗಿ ಬಸ್ಸುಗಳು ಸಂಚರಿಸುತ್ತವೆ
ಗುರುವಾರದ ಮುಷ್ಕರಕ್ಕೆ ಖಾಸಗಿ ಬಸ್ಸುಗಳು ಬೆಂಬಲ ನೀಡಿಲ್ಲ, ಎಂದಿನಂತೆ ಸಂಚಾರ ನಡೆಸಲಿವೆ ಎಂದು ಕರ್ನಾಟಕ ರಾಜ್ಯ ಖಾಸಗಿ ಬಸ್ ಮಾಲೀಕರ ಸಂಘದ ಉಪಾಧ್ಯಕ್ಷ ಸದಾನಂದ ಛಾತ್ರಾ ಹೇಳಿದ್ದಾರೆ.

ಅಗತ್ಯ ಪೊಲೀಸ್ ಭದ್ರತೆ
ಒಂದು ದಿನದ ಸಾರಿಗೆ ಮುಷ್ಕರದ ಹಿನ್ನೆಲೆಯಲ್ಲಿ ಬೆಂಗಳೂರು ನಗರದಲ್ಲಿ ಅಗತ್ಯ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ಹೇಳಿದ್ದಾರೆ. ಖಾಸಗಿ ಬಸ್ ಸಂಚಾರಕ್ಕೆ ಅಡ್ಡಿ ಪಡಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಈ ಸೇವೆಗಳು ಅಬಾಧಿತ
* ಹಣ್ಣು, ತರಕಾರಿ ಮಾರುಕಟ್ಟೆ, ಮಾಲ್ಗಳು, ಅಂಗಡಿ ತೆರೆದಿರುತ್ತವೆ
* ಹೋಟೆಲ್, ಸರ್ಕಾರಿ ಕಚೇರಿ, ಬ್ಯಾಂಕ್, ಅಂಚೆ ಕಚೇರಿ ಕಾರ್ಯನಿರ್ವಹಿಸಲಿವೆ
* ಆಸ್ಪತ್ರೆ, ಆಂಬ್ಯುಲೆನ್ಸ್, ಮೆಡಿಕಲ್ ಸ್ಟೋರ್ ತೆರೆದಿರುತ್ತವೆ











Click it and Unblock the Notifications