ಚೀನಾದಲ್ಲಿ 10ಲಕ್ಷ ಸಾವು ಸಾಧ್ಯತೆ, ಭಾರತದಲ್ಲಿ 0.03ನಷ್ಟು ಸಕ್ರಿಯ ಕೇಸ್, ತಪಾಸಣೆ ಹೆಚ್ಚಳಕ್ಕೆ ಸೂಚನೆ: ಸುಧಾಕರ್
ಬೆಂಗಳೂರು, ಡಿಸೆಂಬರ್ 23: ಚೀನಾದಲ್ಲಿ ಆರೋಗ್ಯ ಪರಿಸ್ಥಿತಿ ಹೀಗೆ ಮುಂದುವರಿದರೆ 10ಲಕ್ಷ ಮಂದಿ ಮೃತಪಡುವ ಸಾಧ್ಯತೆ ಇದೆ. ಭಾರತದಲ್ಲಿ ಸಕ್ರಿಯ ಪ್ರಕರಣ ಪ್ರಮಾಣ 0.03 ಇದೆ. ಕರ್ನಾಟಕದಲ್ಲಿ ತಪಾಸಣೆ ಹೆಚ್ಚಳಕ್ಕೆ, ಮುನ್ನೆಚ್ಚರಿಕಾ ಲಸಿಕೆ ಡೋಸ್ ನೀಡಲು ಕೇಂದ್ರ ಸರ್ಕಾರ ಸೂಚಿಸಿದ್ದು, ಇನ್ನಷ್ಟು ಲಸಿಕೆಗಳನ್ನು ರಾಜ್ಯ ನೀಡುವಂತೆ ಕೇಳಿದ್ದೇವೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು.
ಕೇಂದ್ರ ಆರೋಗ್ಯ ಸಚಿವಾ ಮನ್ಸೂಖ್ ಮಾಂಡವೀಯ ಅಧ್ಯಕ್ಷತೆಯಲ್ಲಿ ಎಲ್ಲ ರಾಜ್ಯಗಳ ಆರೋಗ್ಯ ಸಚಿವರ ಜೊತೆ ಕೊರೊನಾ ಸಂಬಂಧ ತುರ್ತು ಸಭೆ ನಡೆಯಿತು. ಸಭೆ ಬಳಿಕ ಸುದ್ದಿಗಾರರಿಗೆ ಸಚಿವ ಡಾ.ಕೆ. ಸುಧಾಕರ್ ಪ್ರತಿಕ್ರಿಯಿಸಿದರು.
ತಜ್ಞರ ಅಧ್ಯಯನದ ಪ್ರಕಾರ ವಿಶ್ವದ ಯಾವೆಲ್ಲ ದೇಶಗಳಲ್ಲಿ ಕೊರೊನಾ ಹೆಚ್ಚಾಗಿದೆ. ಅಲ್ಲಿನ ಪರಿಸ್ಥಿತಿ ಹೇಗಿದೆ ಎಂದು ಸಭೆಯಲ್ಲಿ ಪ್ರಸ್ತಾಪಿಸಲಾಯಿತು. ಇಡಿ ವಿಶ್ವದಲ್ಲಿ ನಿತ್ಯ 5ಲಕ್ಷ 67 ಸಾವಿರ ಕೇಸ್ ಪತ್ತೆ ಆಗುತ್ತಿವೆ. ಅದರಲ್ಲಿ ಶೇ. 80ರಷ್ಟು ಕೇಸ್ಗಳು ಜಪಾನ್, ಚೀನಾ, ಅಮೆರಿಕಾ, ತೈವಾನ್, ನ್ಯೂಜಿಲೆಂಡ್ ಸೇರಿದಂತೆ ಹತ್ತು ದೇಶಗಳಲ್ಲಿ ಕಂಡು ಬರುತ್ತಿವೆ. ಆದರೆ ಭಾರತದಲ್ಲಿ ಸಕ್ರಿಯ ಕೇಸ್ ಪ್ರಮಾಣ ಶೇ.0.03ರಷ್ಟಿದೆ ಭಯ ಪಡುವ ಅಗತ್ಯವಿಲ್ಲ. ಈ ಕೂಡಲೇ ಎಲ್ಲರು ಮೂರನೇ ಡೋಸ್ ಪಡೆಯಬೇಕು ಎಂದು ಸೂಚಿಸಿದರು.

ಗುರುವಾರ ಆರೋಗ್ಯ ಇಲಾಖೆ ಹೊರಡಿಸಿದ ಸುತ್ತೋಲೆಯಲ್ಲಿನ ಮಾರ್ಗಸೂಚಿಗಳೇ ಮುಂದುವರಿಯಲಿವೆ. ಜೊತೆಗೆ ಐಎಲ್ಐ, ಸಾರಿ ಸೇರಿದಂತೆ ಕೋವಿಡ್ ತಪಾಸಣೆ ಹೆಚ್ಚಿಸಲು ಕೇಂದ್ರ ಸಚಿವರು ಸೂಚಿಸಿದ್ದಾರೆ. ಮುನ್ನೆಚ್ಚರಿಕೆ ಲಸಿಕೆ ನೀಡುವಂತೆ ಹಾಗೂ ದೊಡ್ಡ ಸಭೆ, ಸಮಾರಂಭಗಳತ್ತ ಗಮನವಹಿಸಿ ಎಂದು ಹೇಳಿದ್ದಾರೆ ಎಂದರು.
ಚೀನಾದಲ್ಲಿ ಅಧ್ಯಯನ ನಡೆಸಿದ್ದ ಅಮೆರಿಕಾ ಸಂಸ್ಥೆ ವರದಿ ಪ್ರಕಾರ, ಕೋವಿಡ್ ಪರಿಸ್ಥಿತಿ ಚೀನಾದಲ್ಲಿ ಹೀಗೆ ಮುಂದುವರಿದರೆ ಮುಂದಿನ ವರ್ಷದ ಹೊತ್ತಿಗೆ ಚೀನಾದಲ್ಲಿ ಸುಮಾರು 10ಲಕ್ಷ ಮಂದಿ ಮೃತಪಡುವ ಸಾಧ್ಯತೆ ಇದೆ ಎನ್ನಲಾಗಿದೆ. ಚೀನಾದಲ್ಲಿ ಜನರು ಲಸಿಕೆ ಪಡೆಯುವಲ್ಲಿ ಅದ್ಯತೆ ನೀಡದ್ದರಿಂದ ಅಲ್ಲಿ ಸೋಂಕು ಏರಿಕೆ ಆಗಿದೆ ಎಂದು ವರದಿ ತಿಳಿಸಿದೆ.
ಆದರೆ ಭಾರತದಲ್ಲಿ ಎರಡು ಡೋಸ್ ಲಸಿಕಾಕರಣ ಯಶಸ್ವಿಯಾಗಿದೆ. ಮುಖ್ಯವಾಗಿ ದೇಶದ ಜನರಲ್ಲಿ ಸ್ವಾಭಾವಿಕವಾಗಿ ರೋಗ ನಿರೋಧಕ ಶಕ್ತಿ ಹೆಚ್ಚಿರುವ ಕಾರಣ ಇಲ್ಲಿ ಕೋವಿಡ್ ಸಕ್ರಿಯ ಪ್ರಕರಣ ತೀರಾ ಕಡಿಮೆ ಇದೆ. ವಿದೇಶಗಳಿಗೆ ಹೋಲಿಕೆ ಮಾಡಿದರೆ ಜನರು ಸೋಂಕು ನಿಯಂತ್ರಣಕ್ಕೆ ಹೆಚ್ಚು ಗಮನ ಹರಿಸಿದ್ದಾರೆ.
ಸದ್ಯ 9-10ಲಕ್ಷ ಡೋಸ್ ಲಸಿಕೆ ಲಭ್ಯ
ರಾಜ್ಯದಲ್ಲಿ ಸದ್ಯ ಎಕ್ಸಪೈರಿ ಆಗದಿರುವ ಮತ್ತು ಜನರಿಗೆ ನೀಡುಬಹುದಾದ 9ರಿಂದ 10ಲಕ್ಷ ಲಸಿಕೆಗಳು ಲಭ್ಯ ಇವೆ. ಮುನ್ನೆಚ್ಚರಿಕೆ ಡೋಸ್ ಕಡಿಮೆ ಜನರ ತೆಗೆದುಕೊಂಡಿದ್ದಾರೆ. ಒಮ್ಮೆಲೆ ಜನರ ಲಸಿಕೆ ಪಡೆಯಲು ಮುಂದಾದರೆ ಇನ್ನಷ್ಟು ಡೋಸ್ಗಳು ಬೇಕಾಗಬಹದು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಶೀಘ್ರವೇ ಲಸಿಕೆ ನೀಡುವುದಾಗಿ ಕೇಂದ್ರ ಸಚಿವರು ತಿಳಿಸಿದ್ದಾರೆ. ಈ ಹಿಂದೆ 50ಲಕ್ಷದಿಂದ 1ಕೋಟಿವರೆಗೆ ಡೋಸ್ಗಳು ರಾಜ್ಯ ಬರುತ್ತಿದ್ದವು. ಆದರೆ ಜನರು ಮುನ್ನೆಚ್ಚರಿಕೆ ಡೋಸ್ ಪಡೆಯಲು ಆಸಕ್ತಿ ವಹಿಸಲಿಲ್ಲ ಎಂದು ಹೇಳಿದರು.












Click it and Unblock the Notifications