ಆಪರೇಷನ್ ಕಮಲ ಆಡಿಯೋ: ಎಫ್ಐಆರ್ ರದ್ದಿಗೆ ಬಿಎಸ್ವೈ ಮನವಿ
ಕಲಬುರಗಿ, ಫೆಬ್ರವರಿ 20: ಆಪರೇಷನ್ ಕಮಲ ಆಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪ ಹಾಗೂ ಮೂವರ ವಿರುದ್ಧ ಹಾಕಲಾಗಿರುವ ಎಫ್ಐಆರ್ ಅನ್ನು ಎಫ್ಐಆರ್ ಅನ್ನು ರದ್ದು ಮಾಡಬೇಕು ಎಂದು ಯಡಿಯೂರಪ್ಪ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದಾರೆ.
ಇಂದು ಕಲಬುರಗಿ ಜಿಲ್ಲಾ ನ್ಯಾಯಾಲಯದಲ್ಲಿ ಈ ವಿಚಾರವಾಗಿ ವಾದ ಮಂಡಿಸಿದ ಯಡಿಯೂರಪ್ಪ ಪರ ವಕೀಲರು, ಈ ಪ್ರಕರಣವು ಲಂಚ ಪ್ರಕರಣದ ಅಡಿ ಬರುವುದಿಲ್ಲ, ಹಾಗಾಗಿ ಪೊಲೀಸರು ಯಡಿಯೂರಪ್ಪ ಅವರ ಮೇಲೆ ಹಾಕಿರುವ ಎಫ್ಐಆರ್ ಅನ್ನು ರದ್ದು ಮಾಡಬೇಕು ಎಂದಿದ್ದಾರೆ.
ಜೆಡಿಎಸ್ ಶಾಸಕ ನಾಗನಗೌಡ ಅವರ ಪುತ್ರ ಶರಣಗೌಡ ಅವರಿಗೆ ಹಣದ ಆಮೀಷ ತೋರಿಸಿ ಬಿಜೆಪಿಗೆ ಸಳೆಯಲು ಯತ್ನಿಸಿದ್ದರು ಎನ್ನಲಾಗಿರುವ ಆಡಿಯೋ ಒಂದನ್ನು ಕುಮಾರಸ್ವಾಮಿ ಬಿಡುಗಡೆ ಮಾಡಿದ್ದರು. ಇದರಲ್ಲಿ ಯಡಿಯೂರಪ್ಪ, ಶಿವನಗೌಡ ನಾಯಕ್, ಪ್ರೀತಂಗೌಡ ಮತ್ತು ಇನ್ನೊಬ್ಬರ ಧ್ವನಿ ಇದೆ ಎನ್ನಲಾಗಿತ್ತು.

ಯಡಿಯೂರಪ್ಪ ವಿರುದ್ಧ ದೂರು ನೀಡಿದ್ದ ಶರಣಗೌಡ
ಆಡಿಯೋ ಬಿಡುಗಡೆ ನಂತರ ಶರಣಗೌಡ ಅವರು, ಯಡಿಯೂರಪ್ಪ ಅವರು ನನಗೆ ಹಣದ ಆಮೀಷ ಒಡ್ಡಿದ್ದಾರೆ ಎಂದು ಪೊಲೀಸ್ ದೂರು ನೀಡಿದ್ದರು. ಪ್ರಕರಣ ಸಂಬಂಧ ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ನಂತರ ನಡೆದ ವಿಚಾರಣೆಯಲ್ಲಿ ಎಲ್ಲ ಆರೋಪಿಗಳಿಗೆ ಜಾಮೀನು ಸಿಕ್ಕಿತ್ತು.

ಎಫ್ಐಆರ್ ರದ್ದಿಗಾಗಿ ಆರೋಪ ಮಂಡನೆ
ಇಂದು ಎಫ್ಐಆರ್ ರದ್ದಿಗಾಗಿ ಆರೋಪ ಮಂಡಿಸಿದ ಬಿಎಸ್ವೈ ಪರ ವಕೀಲ ನಾಗೇಶ್, ಶರಣಗೌಡ ಅವರು ನೀಡಿದ್ದ ದೂರನ್ನು ಪೂರ್ಣವಾಗಿ ಓದಿ, ಇದೊಂದು ರಾಜಕೀಯ ಷಡ್ಯಂತ್ರ, ಫೆಬ್ರವರಿ 9 ರಂದು ನಡೆದ ಘಟನೆ ಬಗ್ಗೆ ಫೆಬ್ರವರಿ 13ಕ್ಕೆ ದೂರು ನೀಡಲಾಗಿದೆ ಎಂದರು.

ಇದು ಲಂಚ ಪ್ರಕರಣ ಆಗುವುದಿಲ್ಲ
ಶರಣಗೌಡ ಜನಪ್ರತಿನಿಧಿ ಅಲ್ಲ ಹಾಗಾಗಿ ಆತನನ್ನು ಪಕ್ಷಕ್ಕೆ ಆಹ್ವಾನಿಸುವುದು ಸರಿಯಾಗಿಯೇ ಇದೆ. 'ಚುನಾವಣೆಗೆ ಸ್ಪರ್ಧಿಸಿದರೆ ಹಣ ಕೊಡುವುದಾಗಿ ಹೇಳಿದ್ದಾರೆ' ಎಂದು ಶರಣಗೌಡ ದೂರಿನಲ್ಲಿ ಹೇಳಿದ್ದಾರೆ. ಇದು ಲಂಚ ಪ್ರಕರಣ ಹೇಗೆ ಆಗುತ್ತದೆ ಎಂದು ನಾಗೇಶ್ ವಾದ ಮಂಡಿಸಿದರು.

ಹಲವು ಪ್ರಕರಣಗಳು ಗಮನಕ್ಕೆ
ವಾದ ಮಂಡನೆ ಸಮಯ 1992ರ ಭಜನಲಾಲ್ ಕೇಸ್ , 2004 ಪವಿತ್ರಾ ಕೇಸ್, 2006ರ ಭಟ್ ಪ್ರಕರಣವನ್ನ ಸಿ.ವಿ.ನಾಗೇಶ್ ಉಲ್ಲೇಖಿಸಿದರು. ಸುಪ್ರೀಂಕೋರ್ಟ್ ನೀಡಿದ್ದ ತೀರ್ಪು ಬಗ್ಗೆ ಕೋರ್ಟ್ ಗಮನಕ್ಕೆ ತಂದರು. ವಾದ ಆಲಿಸಿದ ನ್ಯಾಯಾಧೀಶರು ತೀರ್ಪನ್ನು ಕಾಯ್ದಿರಿಸಿ ಪ್ರಕರಣವನ್ನು ಮುಂದೂಡಿದರು.












Click it and Unblock the Notifications