ಕಲಬುರಗಿ; ನೂರಾರು ಪ್ರಯಾಣಿಕರನ್ನು ಬಿಟ್ಟು ಹೋದ ರೈಲು!
ಕಲಬುರಗಿ, ಜೂನ್ 25; ಅಲ್ಲಿ ನೂರಾರು ಪ್ರಯಾಣಿಕರು ಇದ್ದರು. ರೈಲು ಸಹ ಬಂದಿತ್ತು. ಆದರೆ ಯಾರನ್ನೂ ಸಹ ಹತ್ತಿಸಿಕೊಳ್ಳದೇ ರೈಲು ಮುಂದೆ ಸಾಗಿದೆ. ಈ ಘಟನೆ ನಡೆದಿರುವುದು ಕಲಬುರಗಿ ರೈಲು ನಿಲ್ದಾಣದಲ್ಲಿ. ತಮ್ಮ ತಪ್ಪಿಗೆ ಸಿಬ್ಬಂದಿಗಳು ಪ್ರಯಾಣಿಕರ ಕ್ಷಮೆ ಕೇಳಿದ್ದಾರೆ.
ಭಾನುವಾರ ರೈಲು ನಂಬರ್ 17319 ಹುಬ್ಬಳ್ಳಿ-ಸಿಕಂದರಾಬಾದ್ ರೈಲು ಕಲಬುರಗಿ ರೈಲು ನಿಲ್ದಾಣದಲ್ಲಿ ನೂರಾರು ಪ್ರಯಾಣಿಕರನ್ನು ಬಿಟ್ಟು ಮುಂದೆ ಸಾಗಿದೆ. ಇದರಿಂದಾಗಿ ಪ್ರಯಾಣಿಕರು ಪರದಾಡಿದರು.

ಶನಿವಾರ ರಾತ್ರಿ ಹುಬ್ಬಳ್ಳಿಯಿಂದ ಹೊರಟಿದ್ದ ರೈಲು ಭಾನುವಾರ ಬೆಳಗ್ಗೆ 6.15ಕ್ಕೆ ಕಲಬುರಗಿ ರೈಲು ನಿಲ್ದಾಣಕ್ಕೆ ಬರಬೇಕಿತ್ತು. ರೈಲಿಗಾಗಿ ನೂರಾರು ಪ್ರಯಾಣಿಕರು ಸಹ ಕಾಯುತ್ತಿದ್ದರು. ಆದರೆ ರೈಲು ಬೇರೆ ಪ್ಲಾಟ್ಫಾರಂ ಮೂಲಕ ತೆಲಂಗಾಣದ ಸಿಕಂದರಾಬಾದ್ಗೆ ಸಂಚಾರ ನಡೆಸಿದೆ.
ಪ್ರಯಾಣಿಕರ ವಾಗ್ವಾದ; ಕಲಬುರಗಿ ರೈಲು ನಿಲ್ದಾಣದ ಪ್ಲಾಟ್ ಫಾರಂ ಸಂಖ್ಯೆ 1ರಲ್ಲಿ ಪ್ರಯಾಣಿಕರು ಕಾಯುತ್ತಿದ್ದರು. ಆದರೆ ರೈಲು ನಿಲ್ದಾಣದ ಸಿಬ್ಬಂದಿ ರೈಲು ಬರುವ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಆದ್ದರಿಂದ ರೈಲು ಬೇರೆ ಪ್ಲಾಟ್ ಫಾರಂ ಮೂಲಕ ಮುಂದೆ ಸಾಗಿದೆ.
ರೈಲು ಹೋದ ಬಳಿಕ ಪ್ರಯಾಣಿಕರು ರೈಲ್ವೆ ಸ್ಟೇಷನ್ ಮ್ಯಾನೇಜರ್ ಕಛೇರಿಗೆ ನುಗ್ಗಿ ವಾಗ್ವಾದ ನಡೆಸಿದರು. ತಮ್ಮಂದ ತಪ್ಪಾಗಿದೆ, ನಾವು ಘೋಷಣೆ ಮಾಡದ ಕಾರಣ ರೈಲು ಬೇರೆ ಪ್ಲಾಟ್ ಫಾರಂ ಮೂಲಕ ಮುಂದೆ ಸಾಗಿದೆ ಎಂದು ಸ್ಟೇಷನ್ ಮ್ಯಾನೇಜರ್ ಪ್ರಯಾಣಿಕರ ಕ್ಷಮೆ ಕೇಳಿದರು.
ಹುಬ್ಬಳ್ಳಿ-ಸಿಕಂದರಾಬಾದ್ ರೈಲು ಹೋದ ಬಳಿಕ ಬರಬೇಕಿದ್ದ ಹುಸೇನ್ ಸಾಗರ್ ರೈಲು ಬಂದಿದೆ. ಆಗ ಪ್ರಯಾಣಿಕರಿಗೆ ಹುಬ್ಬಳ್ಳಿ-ಸಿಕಂದರಾಬಾದ್ ರೈಲು ಹೋಗಿರುವುದು ತಿಳಿದುಬಂದಿದೆ. ಆಗ ಸ್ಟೇಷನ್ ಮ್ಯಾನೇಜರ್ ಕಛೇರಿಗೆ ನುಗ್ಗಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಕಲಬುರಗಿ ಸ್ಟೇಷನ್ ಮ್ಯಾನೇಜರ್ ಪಿ. ಎ. ನರಗುಂದಕರ್, "ನಮ್ಮ ಸಿಬ್ಬಂದಿ ರೈಲು ಬರುವಾಗ ಪ್ರಯಾಣಿಕರಿಗೆ ಮಾಹಿತಿ ನೀಡದ ಕಾರಣ ಪ್ರಯಾಣಿಕರಿಗೆ ರೈಲು ತಪ್ಪಿ ಹೋಗಿದೆ. ಏಕೆ ಹೀಗಾಯಿತು? ಎಂದು ಪರಿಶೀಲನೆ ಮಾಡುತ್ತಿದ್ದೇವೆ" ಎಂದರು.
ಈ ಘಟನೆ ಬಳಿಕ ರೈಲು ನಿಲ್ದಾಣದ ಅಧಿಕಾರಿಗಳು ಹುಬ್ಬಳ್ಳಿ-ಸಿಕಂದರಾಬಾದ್ ರೈಲಿನ ಪ್ರಯಾಣಿಕರನ್ನು ಹುಸೇನ್ ಸಾಗರ್ ರೈಲಿನಲ್ಲಿ ಪ್ರಯಾಣಿಸಲು ವ್ಯವಸ್ಥೆ ಮಾಡಿಕೊಟ್ಟರು.
ವಿಶೇಷ ರೈಲುಗಳ ಸಂಚಾರ; ಭಾರತೀಯ ರೈಲ್ವೆ ಬೆಂಗಳೂರು ಮತ್ತು ಬಿಹಾರದ ದಾನಪುರ ನಡುವೆ ವಿಶೇಷ ರೈಲು ಸಂಚಾರ ನಡೆಸುತ್ತಿದೆ. ರೈಲಿನ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.
ಪ್ರಯಾಣಿಕರ ದಟ್ಟಣೆಯನ್ನು ನಿವಾರಿಸುವ ಸಲುವಾಗಿ ಒಂದು ಟ್ರಿಪ್ ಬಿಹಾರದ ದಾನಪುರ ಮತ್ತು ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ನಡುವೆ ಕಾಯ್ದಿರಿಸದ ಸೂಪರ್ಫಾಸ್ಟ್ ವಿಶೇಷ ಎಕ್ಸ್ಪ್ರೆಸ್ ರೈಲು (03245/03246) ಓಡಿಸಲು ತೀರ್ಮಾನಿಸಲಾಗಿದೆ.
ರೈಲು ಸಂಖ್ಯೆ 03246 ಜೂನ್ 25 ರಂದು ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ನಿಲ್ದಾಣದಿಂದ ರಾತ್ರಿ 11:30 ಗಂಟೆಗೆ ಪ್ರಾರಂಭವಾಗಿ, ಜೂನ್ 27 ರಂದು ರಾತ್ರಿ 11:30 ಗಂಟೆಗೆ ದಾನಪುರ ನಿಲ್ದಾಣವನ್ನು ತಲುಪಲಿದೆ.
ಈ ರೈಲು ಅರಾ, ಬಕ್ಸರ್, ದೀನ್ ದಯಾಳ ಉಪಾಧ್ಯಾಯ, ಪ್ರಯಾಗ್ ರಾಜ್ ಲೋಕಿ, ಮಾಣಿಕ್ಪುರ, ಸತ್ನಾ, ಜಬಲ್ಪುರ್, ಇಟಾರ್ಸಿ, ನಾಗಪುರ, ಬಲ್ಹರ್ಶಾ, ವಾರಂಗಲ್, ವಿಜಯವಾಡ, ಪೆರಂಬೂರ, ಕಟ್ಟಾಡಿ, ಜೋಲಾರ್ಪೆಟ್ಟೆ, ಮತ್ತು ಬಂಗಾರಪೇಟೆ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿದೆ.
ಈ ವಿಶೇಷ ಎಕ್ಸ್ಪ್ರೆಸ್ ರೈಲು 20 ಬೋಗಿ ಹೊಂದಿದೆ. ಜನರಲ್ ಸೆಕೆಂಡ್ ಕ್ಲಾಸ್ ಬೋಗಿಗಳು (18) ಮತ್ತು ಸೆಕೆಂಡ್ ಕ್ಲಾಸ್ ಕಮ್ ಲಗೇಜ್ ಮತ್ತು ಬ್ರೇಕ್ ವ್ಯಾನ್ ಬೋಗಿಗಳು (2) ಒಳಗೊಂಡಿರುತ್ತದೆ.












Click it and Unblock the Notifications