ಮೂರು ತಿಂಗಳಿನಲ್ಲಿ ಕಲಬುರಗಿ-ಬೆಂಗಳೂರು ಹೊಸ ರೈಲು
ಕಲಬುರಗಿ, ಜುಲೈ 31; ಕಲಬುರಗಿ ಮತ್ತು ರಾಜಧಾನಿ ಬೆಂಗಳೂರು ನಡುವಿನ ರೈಲಿನಲ್ಲಿ ಪ್ರಯಾಣಿಕರ ದಟ್ಟಣೆ ಇದೆ. ಉಭಯ ನಗರಗಳ ನಡುವೆ ಹೊಸ ರೈಲು ಆರಂಭಿಸಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ನಡೆದಿತ್ತು. ರೈಲ್ವೆ ಇಲಾಖೆ ಕಲಬುರಗಿ-ಬೆಂಗಳೂರು ನಡುವೆ ಹೊಸ ರೈಲು ಓಡಿಸಬೇಕು ಎಂದು ತೀರ್ಮಾನಿಸಿದೆ.
ಕಲಬುರಗಿಯಲ್ಲಿ ಮಾತನಾಡಿದ ಸಂಸದ ಡಾ. ಉಮೇಶ್ ಜಾಧವ್ ಹೊಸ ರೈಲಿನ ಬಗ್ಗೆ ಮಾಹಿತಿ ನೀಡಿದ್ದಾರೆ. "ಮುಂದಿನ ಮೂರ್ನಾಲ್ಕು ತಿಂಗಳಿನಲ್ಲಿ ಕಲಬುರಗಿ-ಬೆಂಗಳೂರು ನಡುವೆ ಹೊಸ ರೈಲು ಆರಂಭವಾಗಲಿದೆ" ಎಂದು ಹೇಳಿದ್ದಾರೆ.

"ಕಲಬುರಗಿಯಿಂದ ಪ್ರತಿದಿನ ನೂರಾರು ಜನರು ಬೆಂಗಳೂರು ನಗರಕ್ಕೆ ಸಂಚಾರ ನಡೆಸುತ್ತಾರೆ. ಈ ಬಗ್ಗೆ ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದ ಮಾಹಿತಿಯಿಂದ ತಿಳಿದುಬಂದಿದೆ. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿಯಾಗಿ ಹೊಸ ರೈಲು ಓಡಿಸಲು ಮನವಿ ಮಾಡಿದ್ದೇನೆ" ಎಂದರು.
"ಈ ಭಾಗಕ್ಕೆ ರೈಲು ಸೌಲಭ್ಯ ಕಲ್ಪಿಸಲು ಧಾರವಾಡ ಸಂಸದ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೂ ಮನವಿ ಮಾಡಿದ್ದೇನೆ. ರೈಲ್ವೆ ಸಚಿವರ ಮೇಲೆ ಒತ್ತಡ ಹೇರಲು ಕೇಳಿದ್ದೇನೆ. ಅವರು ಸಹ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ರೈಲ್ವೆ ಮತ್ತು ವಿಮಾನಯಾನ ಸಚಿವರನ್ನು ಕರೆಸುವ ಭರವಸೆ ನೀಡಿದ್ದಾರೆ" ಎಂದು ಡಾ. ಉಮೇಶ್ ಜಾಧವ್ ಹೇಳಿದರು.
"ನನ್ನ ಮೊದಲ ಆದ್ಯತೆ ಕಲಬುರಗಿ ಮತ್ತು ಬೆಂಗಳೂರು ನಡುವೆ ಹೊಸ ರೈಲು ಓಡಿಸುವುದು ಆಗಿದೆ. ಬಳಿಕ ಕಲಬುರಗಿ ರೈಲ್ವೆ ವಿಭಾಗೀಯ ಕಚೇರಿ ಆರಂಭಿಸುವುದಕ್ಕೆ ಆಗಿದೆ" ಎಂದು ಸಂಸದರು ಭರವಸೆ ನೀಡಿದರು.
ವಿಮಾನ ಆರಂಭವಾಗಿದೆ; ಡಾ. ಉಮೇಶ್ ಜಾಧವ್ ಮಾತನಾಡಿ, "ಈಗ ಬೆಂಗಳೂರು-ಕಲಬುರಗಿ ನಡುವೆ ನಿತ್ಯದ ವಿಮಾನ ಸೇವೆ ಆರಂಭವಾಗಿದೆ. ಮೊದಲು ವಾರದಲ್ಲಿ ಕೆಲವು ದಿನ ವಿಮಾನ ಇರಲಿಲ್ಲ. ಕಲಬುರಗಿ ವಿಮಾನ ನಿಲ್ದಾಣ ಸಕ್ರಿಯ ವಿಮಾನ ನಿಲ್ದಾಣವಾಗುತ್ತಿದೆ. ಕಲಬುರಗಿಯಿಂದ ಮುಂಬೈ ಮತ್ತು ಅಜ್ಮೀರ್ಗೆ ವಿಮಾನ ಆರಂಭಿಸುವ ಉದ್ದೇಶವಿದೆ" ಎಂದರು.
"ವಿವಿಧ ವಿಮಾನಯಾನ ಸಂಸ್ಥೆಗಳನ್ನು ಭೇಟಿ ಮಾಡಿ ಬೆಂಗಳೂರು-ಕಲಬುರಗಿ-ಮುಂಬೈ ಮಾರ್ಗದಲ್ಲಿ ವಿಮಾನ ಸಂಚಾರ ಆರಂಭಿಸುವ ಕುರಿತು ಮಾತುಕತೆ ನಡೆಸಲಾಗುತ್ತದೆ" ಎಂದು ಸಂಸದರು ತಿಳಿಸಿದರು.
ಕಲಬುರಗಿ-ಬೆಂಗಳೂರು ಹೊಸ ರೈಲು; ಕಲಬುರಗಿ-ಬೆಂಗಳೂರು ನಡುವೆ ಹೊಸ ರೈಲು ಓಡಿಸಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ನಡೆದಿತ್ತು. ಆಗ ಕಲಬುರಗಿ-ಬೆಂಗಳೂರು, ಬೀದರ್-ಬೆಂಗಳೂರು ನಡುವೆ ಹೊಸ ರೈಲು ಓಡಿಸುವಂತೆ ಕೋರಿ ಎಐಸಿಸಿ ಅಧ್ಯಕ್ಷ ಮತ್ತು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ಗೆ ಪತ್ರವನ್ನು ಬರೆದಿದ್ದರು.
ಕಲಬುರಗಿಯಿಂದ 2 ಮತ್ತು ಬೀದರ್ನಿಂದ ಬೆಂಗಳೂರಿಗೆ 1 ಹೊಸ ರೈಲನ್ನು ಆರಂಭಿಸಬೇಕು ಎಂದು ಮನವಿ ಮಾಡಿದ್ದರು. ಕಲಬುರಗಿ ಮತ್ತು ಬೀದರ್ನಿಂದ ಬೆಂಗಳೂರು ನಗರಕ್ಕೆ ಸಂಚಾರ ನಡೆಸುವ ಜನರ ಸಂಖ್ಯೆ ಹೆಚ್ಚಿದೆ. ಇವರಲ್ಲಿ ಬಹುತೇಕರು ವಲಸೆ ಕೂಲಿ ಕಾರ್ಮಿಕರು ಎಂದು ಖರ್ಗೆ ಪತ್ರದಲ್ಲಿ ವಿವರಣೆ ನೀಡಿದ್ದರು.
ಈ ವಲಸೆ ಕಾರ್ಮಿಕರು ಮೀಸಲು ಬೋಗಿಯಲ್ಲಿ ಸೀಟು ಕಾಯ್ದಿರಿಸಿ ಸಂಚಾರ ನಡೆಸಲು ಆರ್ಥಿಕವಾಗಿ ಶಕ್ತಿ ಹೊಂದಿಲ್ಲ. ಆದ್ದರಿಂದ ಸಾಮಾನ್ಯ ದರ್ಜೆಯ ಬೋಗಿಯಲ್ಲಿ ಪ್ರಯಾಣ ಮಾಡುತ್ತಾರೆ. ಪ್ರಯಾಣಿಕರ ದಟ್ಟಣೆ ತಡೆಯಲು ಹೊಸ ರೈಲು ಓಡಿಸಬೇಕು ಎಂದು ಒತ್ತಾಯಿಸಿದ್ದರು.
ಕಲಬುರಗಿಗೆ ಹಕ್ಕಿನ ರೈಲು ಬಿಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ಈಗಲೂ ಅಭಿಯಾನ ನಡೆಯುತ್ತಿದೆ. ಹಲವಾರು ಜನರು ಈ ಕುರಿತು ಟ್ವೀಟ್ ಮಾಡುತ್ತಾರೆ. ಕಲಬುರಗಿ ರೈಲು ನಿಲ್ದಾಣ ಮತ್ತು ಇತರ ಮೂಲಗಳಿಂದ ವರ್ಷಕ್ಕೆ ಸಾವಿರ ಕೋಟಿ ರೂ.ಗೆ ಹೆಚ್ಚಿನ ಆದಾಯ ಪಡೆಯುವ ರೈಲ್ವೆ ಇಲಾಖೆ ಬೆಂಗಳೂರಿಗೆ ಹೊಸ ರೈಲು ಓಡಿಸಲು ಮೀನಾಮೇಷ ಏಣಿಸುತ್ತಿದೆ ಎಂದು ಆಕ್ರೋಶವೂ ವ್ಯಕ್ತವಾಗುತ್ತಿದೆ.












Click it and Unblock the Notifications