ಸಿಂಗಾರಗೊಂಡ ಸೂಫಿ-ಸಂತರ ನಾಡು ಕಲಬುರಗಿ ಗೋಡೆಗಳು
ಕಲಬುರಗಿ, ಜನವರಿ 28: ನಗರದ ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿ ಫೆಬ್ರವರಿ 5 ರಿಂದ 7ರ ವರೆಗೆ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವ ಹಿನ್ನಲೆಯಲ್ಲಿ ಸೂಫಿ-ಸಂತರ ನಾಡು ಕಲಬುರಗಿಯಲ್ಲಿ ನಗರ ಸೌಂದರ್ಯೀಕರಣ ಕಾರ್ಯಗಳು ಮತ್ತು ವಿದ್ಯುತ್ ಕಂಬಗಳಿಗೆ ಸಾಹಿತ್ಯ ಸಮ್ಮೇಳನದ ಮಾಹಿತಿವುಳ್ಳ ಬೋರ್ಡ್ ಅಳವಡಿಕೆ ಕಾರ್ಯ ಭರದಿಂದ ಸಾಗಿದೆ.
ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಿಂದ ಜಗತ್ ವೃತ್ತದ ವರೆಗೆ ವಿದ್ಯುತ್ ಕಂಬಕ್ಕೆ ಅಲಂಕಾರ ಸಮಿತಿಯಿಂದ ಬೋರ್ಡ್ಗಳ ಅಳವಡಿಕೆ ಕಾರ್ಯ ನಿರಂತರ ಸಾಗಿತ್ತು.ಇದಲ್ಲದೆ ರಸ್ತೆ ವಿಭಜಕಗಳಿಗೆ ಸುಣ್ಣ ಬಣ್ಣ ಹಚ್ಚುವ ಕೆಲಸ, ರಸ್ತೆ ಬದಿ ಗೋಡೆಗಳ ಮೇಲೆ ಚಿತ್ರ ಬಿಡಿಸುವ ಮತ್ತು ನುಡಿ ಸಮ್ಮೇಳನಕ್ಕೆ ಆಗಮಿಸುವ ಬರಹಗಳು ಎಲ್ಲೆಡೆ ಬರೆಯಲಾಗುತ್ತಿದೆ.
ನುಡಿ ಸಮ್ಮೇಳಕ್ಕೆ ಇನ್ನೇನೂ ಒಂದು ವಾರ ಬಾಕಿ ಇರುವ ಹಿನ್ನೆಲೆಯಲ್ಲಿ ನಗರವನ್ನು ಮದುವಣಗಿತ್ತಿಯಂತೆ ಸಿಂಗರಿಸಲು ಎಲ್ಲಾ ಸಮಿತಿಗಳು ಯುದ್ದೋಪಾದಿಯಲ್ಲಿ ತಮ್ಮ ಕೆಲಸಗಳನ್ನು ಆರಂಭಿಸಿವೆ.

ಈ ಮಧ್ಯೆ ರವಿವಾರ ಅಲಂಕಾರ ಸಮಿತಿ ಅಧ್ಯಕ್ಷರಾಗಿರುವ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸುವರ್ಣ ಹಣಮಂತರಾಯ ಮಾಲಾಜಿ ಅವರು ಗೋಡೆ ಬರಹ ಮತ್ತು ಬೋರ್ಡ್ ಅಳವಡಿಕೆ ಕಾರ್ಯ ವೀಕ್ಷಿಸಿದರು.
ಮಹಿಳಾ ಸಮಿತಿ ಸದಸ್ಯರಿಂದ ಪ್ರಚಾರ:
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸುವಂತೆ ಶಾಸಕಿ ಕನೀಸ್ ಫಾತಿಮಾ ಅವರ ನೇತೃತ್ವದಲ್ಲಿ ಸಮ್ಮೇಳನದ ಮಹಿಳಾ ಸಮಿತಿಯು ಕಲಬುರಗಿ ನಗರದ ಮಹಾಲಕ್ಷ್ಮಿ ಬಡಾವಣೆ, ಇ.ಎಸ್.ಐ.ಸಿ.ಸುತ್ತಮುತ್ತ ಬಡಾವಣೆಯಲ್ಲಿ ಸಂಚರಿಸಿ ಮಹಿಳಾ ನಿವಾಸಿಗಳಲ್ಲಿ ಮನವಿ ಮಾಡಿದರು.

ಬಡಾವಣೆಯ ನಿವಾಸಿಗಳಿಗೆ ಪೋಸ್ಟರ್ ನೀಡಿದ ಸಮಿತಿ ಸದಸ್ಯರು, ನುಡಿ ಜಾತ್ರೆಗೆ ಆಹ್ವಾನಿಸಿದರು. ತದನಂತರ ಸಮಿತಿಯು ಕನ್ನಡಮ್ಮನ ಜಾತ್ರೆಗೆ ಬರುವ ಮಹಿಳಾ ಪ್ರತಿನಿಧಿಗಳು ತಂಗಲಿರುವ ಇ.ಎಸ್.ಐ.ಸಿ ಕಟ್ಟಡಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಇದಕ್ಕೂ ಮುನ್ನ ಸಮಿತಿಯು ಸಭೆ ನಡೆಸಿ ಮುಂದಿನ ಕಾರ್ಯ ಯೋಜನೆ, ರೂಪುರೇಗಳ ಬಗ್ಗೆ ಚರ್ಚಿಸಿದರು. ಈ ಸಂದರ್ಭದಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪನಿರ್ದೇಶಕಿ ರೇಣುಕಾದೇವಿ ಸೇರಿದಂತೆ ಮಹಿಳಾ ಸಮಿತಿ ಸದಸ್ಯರು ಇದ್ದರು.












Click it and Unblock the Notifications