ಆರು ಜಿಲ್ಲೆಗಳಲ್ಲಿ ಕಲ್ಯಾಣ ಕರ್ನಾಟಕ ಉತ್ಸವ; ಕನ್ನಡನಾಡಿಗೆ ಶ್ರಮಿಸುತ್ತೇನೆಂದ ಸಿಎಂ
ಕಲಬುರಗಿ, ಸೆಪ್ಟೆಂಬರ್ 17: ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಹೈದರಾಬಾದ್ ಕರ್ನಾಟಕವನ್ನು ಕಲ್ಯಾಣ ಕರ್ನಾಟಕ ಎಂದು ಮರುನಾಮಕರಣ ಮಾಡಲಾಗಿದ್ದು, ರಾಯಚೂರು, ಬಳ್ಳಾರಿ, ಕಲಬುರ್ಗಿ, ಯಾದಗಿರಿ, ಕೊಪ್ಪಳ, ಬೀದರ್ ಜಿಲ್ಲೆಗಳಲ್ಲಿ ಇಂದು ಕಲ್ಯಾಣ ಕರ್ನಾಟಕ ಉತ್ಸವ ನಡೆಯುತ್ತಿದೆ.
ಇಂದು ಕಲಬುರಗಿ ಡಿಎಆರ್ ಮೈದಾನದಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. "ಹೈದರಾಬಾದ್ ಕರ್ನಾಟಕ ಪ್ರದೇಶವನ್ನು ಇಂದು ಕಲ್ಯಾಣ ಕರ್ನಾಟಕ ಪ್ರದೇಶವೆಂದು ಘೋಷಣೆ ಮಾಡಲಾಗುತ್ತಿದೆ. ಕಲ್ಯಾಣ ಕರ್ನಾಟಕ ಸಮಗ್ರ ಅಭಿವೃದ್ಧಿಗೆ ಪ್ರತ್ಯೇಕ ಸಚಿವಾಲಯ ಸ್ಥಾಪಿಸಲಾಗುವುದು. ಈ ವರ್ಷ ಅತಿವೃಷ್ಟಿಯಿಂದ ಹಣಕಾಸಿನ ತೊಂದರೆ ಆಗಬಹುದು, ಹೆಚ್ಚಿನ ಅನುದಾನ ನೀಡಲಾಗುತ್ತಿಲ್ಲ. ಆದರೆ ಮುಂದಿನ ವರ್ಷದ ಆಯವ್ಯಯದಲ್ಲಿ ಈ ಭಾಗಕ್ಕೆ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡುತ್ತೇನೆ. ಹೈ-ಕ ಭಾಗದವರಿಗೆ ಸಚಿವ ಸ್ಥಾನ ಕುರಿತಂತೆ ಮುಂದಿನ ದಿನದಲ್ಲಿ ಆದ್ಯತೆ ನೀಡಲಾಗುವುದು" ಎಂದು ತಿಳಿಸಿದರು.
ಹೈದರಾಬಾದ್ ಕರ್ನಾಟಕ ಇನ್ನು ಮುಂದೆ ಕಲ್ಯಾಣ ಕರ್ನಾಟಕ
ಈ ವೇಳೆ ವಿಮೋಚನೆಯಲ್ಲಿ ಭಾಗಿಯಾದ ಸ್ವಾತ್ರಂತ್ರ್ಯ ಸೇನಾನಿಗಳಿಗೆ ಅಭಿನಂದನೆ ತಿಳಿಸಿದರು.
ಐವತ್ತು ಕೋಟಿ ವೆಚ್ಚದಲ್ಲಿ ಅನುಭವ ಮಂಟಪ ನಿರ್ಮಾಣ
ಹೈದರಾಬಾದ್ ಕರ್ನಾಟಕವನ್ನು ಕಲ್ಯಾಣ ಕರ್ನಾಟಕ ನಾಮಾಂಕಿತ ಮಾಡಿದ್ದಕ್ಕಾಗಿ ಕಲಬುರ್ಗಿಯಲ್ಲಿ ಸಿಎಂ ಯಡಿಯೂರಪ್ಪ ಅವರಿಗೆ ಅಭಿನಂದನಾ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಕಲಬುರಗಿಯ ವಿವಿಧ ಮಠಾಧೀಶರಿಂದ ಯಡಿಯೂರಪ್ಪ ಅವರಿಗೆ ಅದ್ಧೂರಿ ಅಭಿನಂದನೆ ಸಲ್ಲಿಸಲಾಯಿತು. ನೂರಕ್ಕೂ ಹೆಚ್ಚು ಮಠಾಧೀಶರು ಸಮಾರಂಭದಲ್ಲಿ ಭಾಗಿಯಾಗಿದ್ದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಯಡಿಯೂರಪ್ಪ, "ನಿಮ್ಮೆಲ್ಲರ ಆಶೀರ್ವಾದದಿಂದ ಕನ್ನಡ ನಾಡಿನಲ್ಲಿ ಅಭಿವೃದ್ಧಿ ಕೆಲಸ ಮಾಡಲು ಆನೆ ಬಲ ಬಂದಿದೆ. ಕರ್ನಾಟಕ ಅಭಿವೃದ್ಧಿಗೆ ಶಕ್ತಿಮೀರಿ ಪ್ರಯತ್ನಿಸುವೆ. ಕಲಬುರಗಿಯಲ್ಲಿ ಅನುಭವ ಮಂಟಪ ಕಟ್ಟಲು ಮೊದಲ ಕಂತಿನಲ್ಲಿ 20 ಕೋಟಿ ಬಿಡುಗಡೆ ಮಾಡಲಾಗುವುದು. ಕಲಬುರಗಿಯಲ್ಲಿ ಐವತ್ತು ಕೋಟಿ ವೆಚ್ಚದಲ್ಲಿ ಸುಂದರ ಅನುಭವ ಮಂಟಪ ನಿರ್ಮಾಣವಾಗಲಿದೆ. ಮೊದಲ ಕಂತಿನಲ್ಲಿ 20 ಕೋಟಿ ಬಿಡುಗಡೆ ಮಾಡಿ ಒಂದು ವಾರದಲ್ಲಿ ಕಾಮಗಾರಿ ಆರಂಭಿಸಲು ಸೂಚಿಸುವೆ ಎಂದು ಹೇಳಿದರು.
ವಿವಾದವಾದ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ ಆದೇಶ
ಆರೋಗ್ಯ ಸಚಿವ ಶ್ರೀರಾಮುಲು ಧ್ವಜಾರೋಹಣ
ಆರೋಗ್ಯ ಸಚಿವ ಬಿ ಶ್ರೀರಾಮುಲು ಅವರು ಯಾದಗಿರಿಯಲ್ಲಿ ಕಲ್ಯಾಣ ಕರ್ನಾಟಕ ಉತ್ಸವದ ಧ್ವಜಾರೋಹಣ ನೆರೆವೇರಿಸಿದರು. ಯಾದಗಿರಿ ನಗರದ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಧ್ವಜಾರೋಹಣ ನಡೆಸಲಾಯಿತು.
ಈ ವೇಳೆ ಶಾಸಕ ವೆಂಕಟರೆಡ್ಡಿ ಮುದ್ನಾಳ, ಜಿಪಂ ಅಧ್ಯಕ್ಷ ರಾಜಶೇಖರಗೌಡ ವಜ್ಜಲ, ಡಿಸಿ ಎಂ ಕೂರ್ಮಾರಾವ್, ಸಿಇಓ ಶಿಲ್ಪಾ ಶರ್ಮಾ ಇದ್ದರು.
ಅನುದಾನದಲ್ಲಿ ತಾರತಮ್ಯವಾಗದು ಎಂದ ಡಿಸಿಎಂ
ರಾಯಚೂರಿನಲ್ಲಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಕಲ್ಯಾಣ ಕರ್ನಾಟಕ ಉತ್ಸವಕ್ಕೆ ಚಾಲನೆ ನೀಡಿದರು. ರಾಯಚೂರಿನ ಪೊಲೀಸ್ ಕವಾಯತು ಮೈದಾನದಲ್ಲಿ ಧ್ವಜಾರೋಹಣ ಮಾಡಿ, ತ್ರೀವರ್ಣ ಧ್ವಜಕ್ಕೆ ಗೌರವ ಸಲ್ಲಿಸಿದರು.
ಇದೇ ಸಂದರ್ಭ ಮಾತನಾಡಿದ ಅವರು, "ಲೋಕಪಯೋಗಿ ಇಲಾಖೆಯಿಂದ ರಾಯಚೂರು ಜಿಲ್ಲೆಗೆ ಹೆಚ್ಚಿನ ಅನುದಾನ ನೀಡಲಾಗುವುದು. ಈ ಭಾಗಕ್ಕೆ ಲೋಕೋಪಯೋಗಿ ಇಲಾಖೆಯ ಅನುದಾನದ ತಾರತಮ್ಯವಾಗದಂತೆ ನೋಡಿಕೊಳ್ಳಲಾಗುವುದು. ಕಲ್ಯಾಣ ಕರ್ನಾಟಕ ನಾಮಕರಣ ಮಾಡಿ ಸಂವಿಧಾನ ತಿದ್ದುಪಡಿ ಮಾಡಲು ಕಾನೂನು ತಜ್ಞರ ಅಭಿಪ್ರಾಯ ಪಡೆದು ಯಾವುದೇ ತೊಂದರೆಯಾಗದಂತೆ ಸರ್ಕಾರ ನೋಡಿಕೊಳ್ಳುವುದು" ಎಂದು ಭರವಸೆ ನೀಡಿದರು.
ಧ್ವಜಾರೋಹಣಕ್ಕೂ ಮುನ್ನ ಸರದಾರ್ ವಲ್ಲಭಬಾಯಿ ಪಟೇಲ್ ಪುತ್ಥಳಿಗೆ ಪೂಜೆ ಸಲ್ಲಿದರು. ಕಾರ್ಯಕ್ರಮದಲ್ಲಿ ಡಿಸಿ ವೆಂಕಟೇಶ್, ಸಿಇಓ ಲಕ್ಷ್ಮಿಕಾಂತ ರೆಡ್ಡಿ, ರಾಯಚೂರು ಎಂಪಿ ಹಾಗೂ ಸ್ಥಳೀಯ ಶಾಸಕರು, ಶಾಲಾ ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಪೊಲೀಸ್ ಸಿಬ್ಬಂದಿ, ಶಾಲಾ ಮಕ್ಕಳಿಂದ ಆಕರ್ಷಕ ಪಥ ಸಂಚಲನ ನಡೆಯಿತು.
ಬಿಎಸ್ವೈ ಸಂಪುಟದಲ್ಲಿ ಕಲ್ಯಾಣ ಕರ್ನಾಟಕಕ್ಕೆ ಘೋರ ಅನ್ಯಾಯ, ಆಕ್ರೋಶ
ಎಲ್ಲವೂ ವಿಧಿಲಿಖಿತ ಎಂದ ಲಕ್ಷ್ಮಣ ಸವದಿ
ಬಳ್ಳಾರಿಯ ನಗರದ ಮುನಿಸಿಪಲ್ ನಲ್ಲಿ ನಡೆದ ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಭಾಗವಹಿಸಿದ್ದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, "ತುಂಬ ಸಂತೋಷದಿಂದ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯಲ್ಲಿ ಭಾಗಿಯಾಗಿರುವೆ. ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವನಾಗಿ ನನ್ನನ್ನು ನೇಮಿಸಿರುವುದು ಕೂಡ ಸಂತೋಷ ತಂದಿದೆ, ಈ ಭಾಗವನ್ನು ನಾನು ಅಭಿವೃದ್ಧಿಪಡಿಸಲು ಪ್ರಯತ್ನಿಸುವೆ" ಎಂದು ಹೇಳಿದ್ದಾರೆ.
"ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವನಾಗುವ ಯಾವ ನಿರೀಕ್ಷೆಯೂ ಇರಲಿಲ್ಲ, ನಾನು ಶಾಸಕನಾದದ್ದು, ಸಚಿವನಾದದ್ದು, ಶಾಸಕ ಅಲ್ಲದಿದ್ದರೂ ಸಚಿವ ಆದದ್ದು, ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಆದದ್ದು ಎಲ್ಲವೂ ಅನಿರೀಕ್ಷಿತ. ನಾನು ಏನು ಆಗಬೇಕು, ಏನು ಆಗಬಾರದೆಂಬ ಬಗ್ಗೆ ಎಲ್ಲ ವಿಧಿವಿಖಿತ, ನನ್ನ ಹಣೆಬರಹವನ್ನು ಯಾರೂ ಬದಲಿಸಲಾಗದು" ಎಂದು ಹೇಳಿದರು.
"ಜಿಲ್ಲಾ ಉಸ್ತುವಾರಿ ಮತ್ತು ಕಲ್ಯಾಣ ಕರ್ನಾಟಕ ಉತ್ಸವ ಧ್ವಜಾರೋಹಣ ಜವಾಬ್ದಾರಿ ನನಗೆ ನೀಡಲಾಗಿದೆ, ಈ ಬಗ್ಗೆ ನಮ್ಮ ನಡುವೆ ಅಸಮಾಧಾನಗಳಿಲ್ಲ, ನಾನು ಶ್ರೀರಾಮುಲು ಜೊತೆ ಮಾತಾಡಿರುವೆ, ಸಂತೋಷದಿಂದ ಬಳ್ಳಾರಿಗೆ ಬರುವಂತೆ ತಿಳಿಸಿದರು. ಅಣ್ಣ ಇದ್ದಲ್ಲಿ ತಮ್ಮ ಇರುತ್ತಾನೆ, ಜಿಲ್ಲಾ ಉಸ್ತುವಾರಿ ಬಗ್ಗೆ ಯಾವುದೇ ಅಸಮಾಧಾನ ಇಲ್ಲ" ಎಂದು ಹೇಳಿದರು.