ಸರ್ಕಾರಕ್ಕೆ ಹಿಡಿಶಾಪ ಹಾಕುವ ಕಲಬುರಗಿ ಸರಕಾರಿ ಆಸ್ಪತ್ರೆಯ ದೈನೇಸಿ ಸ್ಥಿತಿ!
ಕಲಬುರಗಿ, ಸೆಪ್ಟೆಂಬರ್ 1: ಒಂದೇ ಇನ್ ಕ್ಯುಬೇಟರ್ ನಲ್ಲಿ ಎರಡು-ಮೂರು ಶಿಶುಗಳು, ಒಂದೇ ಬೆಡ್ ಮೇಲೆ ಇಬ್ಬರು ಬಾಣಂತಿಯರು! ಇದು ಕಲಬುರಗಿಯ ಸರ್ಕಾರಿ ಆಸ್ಪತ್ರೆಯ ಚಿತ್ರಣ.
ಅಷ್ಟೇ ಅಲ್ಲ, ಬಾಣಂತಿಯರು ನೆಲದ ಮೇಲೆ ಮಲಗಿರುವ ಚಿತಗ್ರಣವೂ ಇಲ್ಲಿ ಸಾಮಾನ್ಯವಾಗಿ ಕಾಣಸಿಗುತ್ತದೆ! ಸದ್ಯೋಜಾತ ಶಿಶುಗಳ ಮರಣ ಸಂಖ್ಯೆಯನ್ನು ಕಡಿಮೆ ಮಾಡುವ ಮತ್ತು ಬಾಣಂತಿಯರ ಆರೋಗ್ಯವನ್ನು ಕಾಪಾಡುವ ಗುರಿ ಹೊತ್ತ ಸರ್ಕಾರದ ಆಸ್ಪತ್ರೆಯಲ್ಲಿ ಹೀಗೆ ಮೂಲಸೌಕರ್ಯಗಳ ಕೊರತೆ ಕಾಡಿದರೆ, 'ಎಲ್ಲೆಲ್ಲೂ ಆರೋಗ್ಯ, ಎಲ್ಲರಿಗೂ ಆರೋಗ್ಯ' ಎಂಬ ಸರ್ಕಾರದ ಘೋಷವಾಕ್ಯ ಕೇವಲ ಮರೀಚಿಕೆಯಾದೀತು!
ಸರ್ಕಾರಿ ಆಸ್ಪತ್ರೆಗಳ ಕಥೆ ಬಿಚ್ಚಿಟ್ಟ ಸಿಎಜಿ ವರದಿ
ನಮ್ಮಲ್ಲಿ ಕೇವಲ 22 ಇನ್ ಕ್ಯುಬೇಟರ್ ಗಳಿವೆ. ಆಸ್ಪತ್ರೆ ಆಡಳಿತ ಮಂಡಳಿ ಈಗಾಗಲೇ ಆರೋಗ್ಯ ಇಲಾಖೆಯ ಬಳಿ, ಮತ್ತಷ್ಟು ಇನ್ ಕ್ಯುಬೇಟರ್ ಮತ್ತು ಬೆಡ್ ಗಳನ್ನು ಒದಗಿಸುವಂತೆ ಮನವಿ ಮಾಡಿಕೊಂಡಿದೆ. ಕಳೆದ ಒಂದೂವರೆ ವರ್ಷದ ಹಿಂದೆಯೇ ಆರೋಗ್ಯ ಇಲಾಖೆಯ ಬಳಿ ಈ ಬಗ್ಗೆ ಮನವಿ ಮಾಡಿಕೊಳ್ಳಲಾಗಿತ್ತು. ಅದಾದ ನಂತರವೂ ಹಲವು ಬಾರಿ ಮನವಿ ಮಾಡಿದ್ದರೂ ಆರೋಗ್ಯ ಇಲಾಖೆಯ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಆಸ್ಪತ್ರೆಯ ಸಿಬ್ಬಂದಿಯೊಬ್ಬರು ಹೇಳಿದ್ದಾರೆ.
ದಯವಿಟ್ಟು ಖಾಸಗಿ ಆಸ್ಪತ್ರೆಗೆ ಹೋಗಿ..!
ಸರ್ಕಾರದ ನಿರ್ಲಕ್ಷ್ಯದಿಂದಾಗಿ ನಾವು ಸಮಸ್ಯೆ ಎದುರಿಸುವುದು ಬೇಡವೆಂದೇ, ನಾವು ಹಲವು ರೋಗಿಗಳಿಗೆ ಈ ಆಸ್ಪತ್ರೆಗೆ ಬರಬೇಡಿ, ಖಾಸಗಿ ಆಸ್ಪತ್ರೆಗೆ ತೆರಳಿ ಎಂದು ಮನವಿ ಮಾಡಿಕೊಳ್ಳುತ್ತೇವೆ. ಆದರೆ ಖಾಸಗಿ ಆಸ್ಪತ್ರೆಗಳ ದುಬಾರಿ ಶುಲ್ಕವನ್ನು ಭರಿಸಲಾಗದ ಬಡವರು ನಮ್ಮ ಆಸ್ಪತ್ರೆಗೇ ಬರುತ್ತಿದ್ದಾರೆ. ಇದರಿಂದ ಬೆಡ್ ಗಳ ಕೊರತೆಯೂ ಕಾಡುತ್ತಿದೆ ಎಂಬುದು ಆಸ್ಪತ್ರೆ ಸಿಬ್ಬಂದಿಗಳ ಅಂಬೋಣ.
ಸೋಂಕು ರೋಗಕ್ಕೆ ಆಹ್ವಾನ
ಹೀಗೆ ಒಂದೇ ಇನ್ ಕ್ಯುಬೇಟರ್ ನಲ್ಲಿ ಎರಡು -ಮೂರು ಶಿಶುಗಳನ್ನು ಇಡುವುದು ಮತ್ತು ಒಂದೇ ಬೆಡ್ ನಲ್ಲಿ ಇಬ್ಬರು ರೋಗಿಗಳನ್ನು ಮಲಗಿಸುವುದು ಸ್ವಚ್ಛತೆ ಮತ್ತು ಆರೋಗ್ಯದ ದೃಷ್ಟಿಯಿಂದ ಸುರಕ್ಷಿತವಲ್ಲ. ಇದರಿಂದಲೇ ಸೋಂಕು ತಗುಲಿ ಹಲವರು ಸಾವಿಗೀಡಾದ ವರದಿಯೂ ಬಂದಿದೆ. ಆದರೆ ನಮಗೆ ಬೇರೆ ಆಯ್ಕೆಯಿಲ್ಲ. ನಾವೆಷ್ಟೇ ಮನವಿ ಮಾಡಿಕೊಂಡರೂ ನಮ್ಮ ಗೋಳು ಸಂಬಂಧಪಟ್ಟ ಅಧಿಕಾರಿಗಳಿಗೆ ಕೇಳಿಸುತ್ತಿಲ್ಲ ಎಂಬುದು ಸಿಬ್ಬಂದಿಗಳ ಅಳಲು.
ಶಿವಮೊಗ್ಗದಲ್ಲಿ ಎಕ್ಸ್ ರೇ ಕೋಣೆವರೆಗೆ ಪತಿಯ ಕಾಲು ಹಿಡಿದು ಎಳೆದೊಯ್ದ ಪತ್ನಿ
ಸುರೇಶ್ ಕುಮಾರ್ ಭೇಟಿ
ಆಸ್ಪತ್ರೆಗೆ ಭೇಟಿ ನೀಡಿದ್ದ ಬಿಜೆಪಿ ಮುಖಂಡ ಸುರೇಶ್ ಕುಮಾರ್ ಇಲ್ಲಿನ ಚಿಂತಾಜನಕ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. "ಆರೋಗ್ಯ ಇಲಾಖೆಗೆ ಪತ್ರ ಬರೆದು, ಆಸ್ಪತ್ರು ಮೂಲಸೌಕರ್ಯ ಕೊರತೆಯ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸುತ್ತೇವೆ" ಎಂದು ಅಭಯ ನೀಡಿದ್ದಾರೆ.
ಮೆಗ್ಗಾನ್ ಆಸ್ಪತ್ರೆ ನೆನಪಿಸಿದ ಘಟನೆ
ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಎಕ್ಸ್ ರೇ ಕೋಣೆಗೆ ಪತಿಯನ್ನು ಮಹಿಳೆಯೊಬ್ಬರು ಕಾಲು ಹಿಡಿದು ಎಳೆದುಕೊಂಡು ಹೋದ ಘಟನೆ ಕಳೆದ ಜೂನ್ ನಲ್ಲಿ ನಡೆದಿತ್ತು. ತೀರಾ ಅತ್ಯಗತ್ಯ ಸೌಕರ್ಯಗಳಾದ ವ್ಹೀಲ್ ಚೇರ್, ಸ್ಟ್ರೆಚರ್ ಗಳೂ ಸರ್ಕಾರಿ ಆಸ್ಪತ್ರೆಗಳಲ್ಲಿ ಇಲ್ಲವೆಂದರೆ ಸಾಮಾನ್ಯ ಜನರ ಆರೋಗ್ಯವೆಂದರೆ ಇಷ್ಟು ಬೇಜವಾಬ್ದಾರಿಯೇ ಎಂಬ ಪ್ರಶ್ನೆ ಎದ್ದಿತ್ತು.
ಸರ್ಕಾರಿ ಆಸ್ಪತ್ರೆಗಳ ಗುಣಮಟ್ಟ ಸುಧಾರಿಸಲಿ
ಒಟ್ಟಿನಲ್ಲಿ, ಬಡವರಿಗಾಗಿಯೇ ಇರುವ ಸರ್ಕಾರಿ ಆಸ್ಪತ್ರೆಗಳ ಈ ದೈನೇಸಿ ಸ್ಥಿತಿ ಸರ್ಕಾರದ ಅಸಾಮರ್ಥ್ಯವನ್ನು ಎತ್ತಿಹಿಡಿದಿದೆ. ಕಲಬುರುಗಿ ಸರ್ಕಾರಿ ಆಸ್ಪತ್ರೆಯ ಈ ಸನ್ನಿವೇಶ, ಸರ್ಕಾರಿ ಆಸ್ಪತ್ರೆಗಳ ಗುಣಮಟ್ಟ ತ್ವರಿತವಾಗಿ ಸುಧಾರಣೆಗೊಳ್ಳಬೇಕಾದ ಅಗತ್ಯವನ್ನು ಕೂಗಿ ಹೇಳಿದೆ.