ಕಲಬುರಗಿಯಲ್ಲಿ ಸಿಡಿಲಿಗೆ ರೈತ ಬಲಿ, ಇನ್ನೋರ್ವ ರೈತ ಆತ್ಮಹತ್ಯೆ
ಕಲಬುರಗಿ, ಅಕ್ಟೋಬರ್ 16: ಇಬ್ಬರು ರೈತರ ಸಾವಿಗೆ ಕಲಬುರಗಿ ಜಿಲ್ಲೆ ಸಾಕ್ಷಿಯಾಗಿದೆ. ಒಬ್ಬರು ರೈತರು ಹೊಲದಲ್ಲೇ ಸಿಡಿಲು ಬಡಿದು ಸಾವನ್ನಪ್ಪಿದ್ದರೆ, ಇನ್ನೊಬ್ಬರು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಮುಕರಂಬಾ ಗ್ರಾಮದಲ್ಲಿ ರವಿವಾರ ಮಧ್ಯಾಹ್ನ 2ಗಂಟೆ ಸಮಯಕ್ಕೆ ಸಿಡಿಲು ಬಡಿದ ಪರಿಣಾಮ ಶಂಕರಪ್ಪ ಶರಣಪ್ಪ ಕಬ್ಬಲಿಗ (48) ಮೃತಪಟ್ಟಿದ್ದಾರೆ.
ತೊಗರಿ ಹೊಲದಲ್ಲಿ ಹುಲ್ಲು ತೆಗೆದು ಹಾಕಿ ಮನೆಗೆ ಬರುವಾಗ ಘಟನೆ ನಡೆದಿದೆ. ಈ ಕುರಿತು ರಟಕಲ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳೆ ಹಾನಿಯಾಗಿದ್ದಕ್ಕೆ ರೈತ ಆತ್ಮಹತ್ಯೆ
ಒಂದೆಡೆ ಮಳೆ ರೈತರ ಮೊಗದಲ್ಲಿ ಮಂದಹಾಸ ತಂದಿದ್ದರೆ ಬೆಳೆ ಕಳೆದುಕೊಂಡ ರೈತರು ಮಾತ್ರ ಅತಂತ್ರರಾಗಿದ್ದಾರೆ.
ಇದೇ ಕಾರಣಕ್ಕೆ ಕಲಬುಗರಿ ತಾಲೂಕಿನ ಪಾಣೆಗಾಂವ ಗ್ರಾಮದಲ್ಲಿ ರೈತ ರೇವಣಸಿದ್ದ (37) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ರೇವಣಸಿದ್ದ ಬ್ಯಾಂಕಿನಲ್ಲಿ 6 ಲಕ್ಷ ರೂ. ಸಾಲ ಮಾಡಿಕೊಂಡಿದ್ದರು. ಈ ವರ್ಷವಾದರೂ ಬೆಳೆ ಬಂದು ಸಾಲ ತೀರಿಸುವ ಕನಸನ್ನು ರೇವಣಸಿದ್ದ ಕಂಡಿದ್ದರು. ಆದರೆ ಮಳೆಯಿಂದ ಬೆಳೆ ಕೊಚ್ಚಿಹೋಗಿತ್ತು.
ಇದರಿಂದ ನೊಂದು ಭಾನುವಾರ ವಿಷ ಸೇವಿಸಿ ರೇವಣಸಿದ್ಧ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಷ ಸೇವಿಸಿದ ಸುದ್ದಿ ಗೊತ್ತಾದ ತಕ್ಷಣ ಬಸವೇಶ್ವರ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾಣದೇ ರೇವಣಸಿದ್ಧ ಸಾವನ್ನಪ್ಪಿದ್ದಾರೆ.
ಫರಹತಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.
ಅನೈತಿಕ ಸಂಬಂಧಕ್ಕೆ ವ್ಯಕ್ತಿ ಬಲಿ
ಅನೈತಿಕ ಸಂಬಂಧ ಹಿನ್ನಲೆಯಲ್ಲಿ ವ್ಯಕ್ತಿಯೋರ್ವರನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ನಗರದ ಹೊರವಲಯದ ಜಾಪೂರದಲ್ಲಿ ನಡೆದಿದೆ.
ಚಿತ್ತಾಪೂರ ಪಟ್ಟಣ್ಣದ ನಿವಾಸಿ ಬಸವರಾಜ ಕಾಸಿ (30) ಕೊಲೆಯಾದ ವ್ಯಕ್ತಿಯಾಗಿದ್ದಾರೆ.
ಬಸವರಾಜ ಕಾಸಿ ವಿವಾಹಿತ ಮಹಿಳೆ ಜೊತೆ ಅನೈತಿಕ ಸಂಬಂಧ ಹೊಂದಿದ್ದರು ಎಂಬ ಆರೋಪದ ಮೇಲೆ ಮಹಿಳೆಯ ಮೈದುನ ಹಾಗೂ ಮೈದುನನ ಸ್ನೇಹಿತರು ಬಡಿಗೆಗಳಿಂದ ಹೊಡೆದು ಕೊಲೆ ಮಾಡಿದ್ದಾರೆ. ಶನಿವಾರ ಸಂಜೆಯೇ ಕೊಲೆ ಮಾಡಿ ನಂತರ ಟವೇರಾ ವಾಹನದಲ್ಲಿ ಶವ ಹಾಕಿ, ವಾಹನವನ್ನು ಬಿಟ್ಟು ಆರೋಪಿಗಳು ಪರಾರಿಯಾಗಿದ್ದಾರೆ.
ಈ ಪ್ರಕರಣವು ಎಂ.ಬಿ.ನಗರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.