ಯಾನಾಗುಂದಿ ಮಾತೆ ಮಾಣಿಕೇಶ್ವರಿ ಟ್ರಸ್ಟ್ ಆಸ್ತಿ ಕಬಳಿಕೆಗೆ ಯತ್ನ?
ಕಲಬುರಗಿ, ಮಾರ್ಚ್ 9: ಕಲಬುರಗಿ ಸೇಡಂ ತಾಲೂಕಿನ ಯಾನಾಗುಂದಿ ಆಶ್ರಮದ ಮಾತೆ ಮಾಣಿಕೇಶ್ವರಿ ಅವರ ನಿಧನದ ಬಳಿಕ ಅವರ ಹೆಸರಿನಲ್ಲಿರುವ ಟ್ರಸ್ಟಿಗೆ ಸೇರಿರುವ ಆಸ್ತಿ ಕಬಳಿಸುವ ಹುನ್ನಾರ ನಡೆದಿರುವ ಆರೋಪ ಕೇಳಿ ಬಂದಿದೆ.
87 ವರ್ಷ ವಯಸ್ಸಿನ ಮಾತೆ ಮಾಣಿಕೇಶ್ವರಿ ಅವರ ಅಂತ್ಯ ಸಂಸ್ಕಾರ ಮಾರ್ಚ್ 9ರಂದು ಮಧ್ಯಾಹ್ನ ನಡೆಯಲಿದೆ. ಭಕ್ತಾದಿಗಳು ಇಂದು 12 ಗಂಟೆ ತನಕ ಅಂತಿಮ ದರ್ಶನ ಪಡೆದುಕೊಳ್ಳಬಹುದು, ನಂತರ ಸಕಲ ಸರ್ಕಾರಿ ಗೌರವದೊಂದಿಗೆ ಮಾತೆಯವರು ಅನುಷ್ಠಾನಗೈದ ಸ್ಥಳದಲ್ಲೇ ಅಂತ್ಯಸಂಸ್ಕಾರ ನಡೆಯಲಿದೆ. 28 ವರ್ಷಗಳ ಹಿಂದೆ ಸಮಾಧಿ ಸ್ಥಳವನ್ನು ಗುರುತಿಸಲಾಗಿದೆ. ವೀರಶೈವ ವಿಧಿ ವಿಧಾನದಂತೆ ಎಲ್ಲವೂ ನಡೆಯಲಿದೆ ಎಂದು ಟ್ರಸ್ಟ್ ವಕ್ತಾರರು ಹೇಳಿದ್ದಾರೆ.
ಆದರೆ, ಮಾತೆ ನಂತರ ಯಾನಾಗುಂದಿ ಆಶ್ರಮಕ್ಕೆ ಯಾರು ದಿಕ್ಕು ಎಂಬ ಪ್ರಶ್ನೆ ಈಗ ಎದ್ದಿದೆ. ಸದ್ಯಕ್ಕೆ ಮಾಣಿಕೇಶ್ವರಿ ಅಮ್ಮ ಅವರ ಆಪ್ತ, ಟ್ರಸ್ಟ್ ಕಾರ್ಯದರ್ಶಿಯಾಗಿಯಾಗಿರುವ ಶಿವಯ್ಯ ಸ್ವಾಮಿ ಅವರ ಹೆಸರು ಕೇಳಿ ಬರುತ್ತಿದೆ.

ಶಿವಯ್ಯ ಸ್ವಾಮಿ ವಿರುದ್ಧ ಮಾಣಿಕೇಶ್ವರಿ ಸಂಬಂಧಿಕ ಆರೋಪ
ಆದರೆ, ಶಿವಯ್ಯ ಸ್ವಾಮಿ ವಿರುದ್ಧ ಮಾಣಿಕೇಶ್ವರಿ ಸಂಬಂಧಿಕರು ಇದಕ್ಕೆ ಒಪ್ಪುತ್ತಿಲ್ಲ. ''ಮಾಣಿಕೇಶ್ವರಿ ನನ್ನ ಅಮ್ಮ'' ಎಂದು ಶಿವಯ್ಯ ಸ್ವಾಮಿ ಸುಳ್ಳು ಆಧಾರ್ ಕಾರ್ಡ್ ಮಾಡಿಸಿಕೊಂಡಿದ್ದಾರೆ. ಈ ಮೂಲಕ ಟ್ರಸ್ಟ್ ಆಸ್ತಿ ಕಬಳಿಸಲು ಯತ್ನಿಸುತ್ತಿದ್ದಾರೆ ಎಂದು ಮಾಣಿಕೇಶ್ವರಿ ಸೋದರಿ ಮಗ ಶ್ರೀಹರಿ ಮಲ್ಲಬಾದಿ ಎಂಬುವರು ಆರೋಪಿಸಿದ್ದಾರೆ.
ಮಾತೆ ಮಾಣಿಕೇಶ್ವರಿ ಹೆಸರಿನಲ್ಲಿರುವ ಟ್ರಸ್ಟ್ ವ್ಯಾಪ್ತಿಗೆ 245 ಎಕರೆ ಭೂಮಿ ಸೇರಿದೆ. ಅನೇಕ, ಶಾಲೆ, ಕಾಲೇಜು, ಗುಡಿ, ಮಂದಿರಗಳನ್ನು ಟ್ರಸ್ಟ್ ನಡೆಸುತ್ತಾ ಬಂದಿದೆ.

ಅಪಾರ ಭಕ್ತ ಸಮೂಹ ಹೊಂದಿರುವ ಮಾತೆ
ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ರಾಜ್ಯಗಳ ಅಪಾರ ಭಕ್ತ ಸಮೂಹವನ್ನು ಮಾತೆ ಮಾಣಿಕೇಶ್ವರಿ ಅಗಲಿದ್ದಾರೆ. ಮಾತೆಯವರ ದರ್ಶನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಬರುವ ನಿರೀಕ್ಷೆಯಿದ್ದು, ಕಾನೂನು ಸುವ್ಯವಸ್ಥೆಗೆ ಯಾವುದೇ ರೀತಿಯ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು. ಬರುವ ಭಕ್ತರಿಗೆ ಕುಡಿಯುವ ನೀರು ಮತ್ತಿತರ ಸೌಲಭ್ಯಗಳನ್ನು ಒದಗಿಸಬೇಕು ಎಂದು ಜಿಲ್ಲಾಧಿಕಾರಿ ಶರತ್ ಬಿ ಹೇಳಿದ್ದಾರೆ.

70 ವರ್ಷಗಳ ಕಾಲ ಆಹಾರ ತ್ಯಜಿಸಿ ಅನುಷ್ಠಾನಗೈದ ಮಾತಾಜಿ
ಲೋಕ ಕಲ್ಯಾಣಕ್ಕಾಗಿ ತಪಗೈದು ಸುಮಾರು 70 ವರ್ಷಗಳ ಕಾಲ ಆಹಾರ ತ್ಯಜಿಸಿ ಅನುಷ್ಠಾನಗೈದ ಮಾತಾಜಿಯವರ ಅಗಲಿಕೆಯು ರಾಷ್ಟ್ರಕ್ಕೆ ಅಪಾರ ನಷ್ಟವಾಗಿದೆ. ಕರ್ನಾಟಕ, ಆಂಧ್ರ, ತೆಲಂಗಾಣ ಮತ್ತು ಮಹಾರಾಷ್ಟ್ರದಲ್ಲಿ ಅಪಾರ ಭಕ್ತರನ್ನು ಮಾತಾಜಿ ಅಗಲಿದ್ದಾರ.
ಮಹಾಯೋಗಿನಿ ಮಾತೆ ಮಾಣಿಕೇಶ್ವರಿ ಅಂತ್ಯಕ್ರಿಯೆಯಲ್ಲಿ ಸರ್ಕಾರದ ಪರವಾಗಿ ಭಾಗವಹಿಸಿ ಗೌರವ ಸಲ್ಲಿಸಲು ಮುಖ್ಯಮಂತ್ರಿಗಳು ತಮಗೆ ನಿರ್ದೇಶನ ನೀಡಿರುವುದರಿಂದ ಅಂತೆಯೇ ತಾವು ಸೋಮವಾರ ನಡೆಯುವ ಅಂತ್ಯಕ್ರಿಯೆ ಸಮಾರಂಭದಲ್ಲಿ ಭಾಗಿಯಾಗಲಿದ್ದೇನೆ ಎಂದು ಸಚಿವ ಪ್ರಭು ಚವ್ಹಾಣ ತಿಳಿಸಿದರು.

ಯಡಿಯೂರಪ್ಪಗೆ ಸಿಎಂ ಆಗುವೆ ಎಂದು ಹರಿಸಿದ್ದರು
''ದೇವಿ ಆಶೀರ್ವಾದಿಂದ ನನಗೆ ಹೊಸ ಹುರುಪು, ಶಕ್ತಿ ಬಂದಿದೆ. ಮತ್ತೆ ರಾಜ್ಯದ ಮುಖ್ಯಮಂತ್ರಿಯಾಗುವೆ' ಎಂದು ಹೇಳಿದರು. ಇದೇ ವೇಳೆ 'ದುಷ್ಟ ಬುದ್ಧಿಯ ಬಿಡು. ಗೋಹತ್ಯೆ, ಪ್ರಾಣಿ ಬಲಿಯನ್ನು ನಿಲ್ಲಿಸು' ಎಂದು ದೇವಿ ತನಗೆ ಸೂಚಿಸಿರುವುದಾಗಿ ಯಡಿಯೂರಪ್ಪ ತಿಳಿಸಿದರು. ಶಂಕರಬಿದರಿ ಅವರ ಜೊತೆಗೂಡಿ ಯಾನಾಗುಂದಿಯ ಮಾಣಿಕ್ಯಬೆಟ್ಟದಲ್ಲಿ ನೆಲೆಸಿದ್ದ ಮಾತೆಯನ್ನು 2012ರಲ್ಲಿ ಬಿ.ಎಸ್ ಯಡಿಯೂರಪ್ಪ ಅವರು ಭೇಟಿ ಮಾಡಿದ್ದರು.
ಪಾಕಿಸ್ತಾನ ತನ್ನ ನೆಲವನ್ನೇ ನಾಶ ಮಾಡಿಕೊಳ್ಳುತ್ತಿದೆ. ಕಾಶ್ಮೀರದಲ್ಲಿ ಮುಸ್ಲಿಮರು ತಮ್ಮವರನ್ನೇ ಕೊಂದು ಅಧರ್ಮ ಮೆರೆಯುತ್ತಿದ್ದಾರೆ. ಭಾರತ-ಪಾಕಿಸ್ತಾನ ಮಧ್ಯೆ ಯುದ್ಧ ನಡೆಯುತ್ತದೆ. ಆ ನಂತರವೇ ಭಯೋತ್ಪಾದನೆ ಕೊನೆಗೊಳ್ಳಲಿದೆ ಎಂದು ಬಾಲಾಕೋಟ್ ಸರ್ಜಿಕಲ್ ದಾಳಿ ನಂತರ ಮಾಣಿಕೇಶ್ವರಿ ಹೇಳಿದ್ದರು.












Click it and Unblock the Notifications