ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಪ್ರಜ್ವಲ್ ರೇವಣ್ಣ ಹೇಳಿದ್ದು ಹೀಗೆ..
ಕಲಬುರಗಿ, ಡಿಸೆಂಬರ್ 05 : ಜೆಡಿಎಸ್ ಪಕ್ಷ ಬಲವರ್ಧನೆಗಾಗಿ ರಾಜ್ಯ ಪ್ರವಾಸದಲ್ಲಿ ತೊಡಗಿರುವ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಪ್ರಜ್ವಲ್ ರೇವಣ್ಣ ತಮ್ಮ ಚುನವಾವಣಾ ಸ್ಪರ್ಧೆಗೆ ಇಳಿಯುವ ಊಹಾಪೋಹಕ್ಕೆ ತೆರೆ ಎಳೆದಿದ್ದಾರೆ.
ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಜ್ವಲ್ ರೇವಣ್ಣ ನಾನು ಟಿಕೆಟ್ ಗಾಗಿ ಬೇಡಿಕೆ ಇಟ್ಟಿಲ್ಲ, ಪಕ್ಷದ ಹಿರಿಯರು (ದೇವೇಗೌಡ, ಕುಮಾರಸ್ವಾಮಿ) ಸ್ಪರ್ಧಿಸಲು ಸೂಚನೆ ಕೊಟ್ಟರಷ್ಟೆ ಚುನಾವಣೆಗೆ ನಿಲ್ಲುವುದಾಗಿ ಹೇಳಿದ್ದಾರೆ.
ಪಕ್ಷದ ಹಿರಿಯರು ಚುನಾವಣೆಗೆ ಸ್ಪರ್ಧಿಸುವುದು ಬೇಡ ಎಂದಿದ್ದಾರಾ ಎಂಬ ಪ್ರಶ್ನೆಗೆ ಪರಿಪೂರ್ಣ ಉತ್ತರ ನೀಡದ ಪ್ರಜ್ವಲ್ "ಅವರು ಬೇಡ ಅಂದಿದ್ದಾರೆ ಅಂತಲೇ ತಿಳ್ಕೊಳ್ಳಿ' ಎಂದು ಅಡ್ಡ ಗೋಡೆಯ ಮೇಲೆ ದೀಪವಿಟ್ಟರು. ಚುನಾವಣೆಗೆ ಸ್ಪರ್ಧಿಸುವ ವಿಷಯ ಇನ್ನೂ ಜೀವ ಕಳೆದುಕೊಂಡಿಲ್ಲ ಎಂಬುದನ್ನು ಅವರ ಮಾತು ಸ್ಪಷ್ಟಪಡಿಸುತ್ತಿತ್ತು.

'ನಾನು ಸ್ಪರ್ದಿಸುವ ಮಾತು ಬಂದಿಲ್ಲಾ, ನನಗೆ ದೊಡ್ಡವರು ಸ್ಪರ್ದೆ ಮಾಡು ಅಂದ್ರೆ ಮಾಡ್ತೇನೆ, ಬೇಡಾ ಅಂದ್ರೆ ಇಲ್ಲಾ' ಎಂದು ಚೆಂಡನ್ನು ದೇವೇಗೌಡ, ಕುಮಾರಸ್ವಾಮಿ ಅವರ ಅಂಗಳಕ್ಕೆ ತಳ್ಳಿದರು.
'ಅಕಸ್ಮಾತ್ ಚುನಾವಣೆಗೆ ಸ್ಪರ್ಧಿಸುವ ಅವಕಾಶ ಸಿಕ್ಕರೆ ನಾನು ಎಲ್ಲಿ ಸ್ಪರ್ದೆ ಮಾಡಬೇಕು ಅನ್ನೋದನ್ನು ಕೂಡಾ ಪಕ್ಷದ ಹಿರಿಯರೇ ಹೇಳ್ತಾರೆ ಎನ್ನುವ ಮೂಲಕ ತಮಗೆ ಸ್ಪರ್ಧಿಸುವ ಆಸೆ ಇದೆ ಎಂಬುದನ್ನು ಸೂಚ್ಯವಾಗಿಯೇ ಮಾಧ್ಯಮಗಳ ಮುಂದೆ ತೆರೆದಿಟ್ಟರು.
ಆದರೆ ಮತ್ತೆ ತಮ್ಮ ಮಾತಿನ ವರಸೆ ಬದಲಿಸಿ 'ಜನರ ಸೇವೆ ಮಾಡಲು ಶಾಸಕನೇ ಆಗಬೇಕು ಅಂತ ಇಲ್ಲಾ, ಶಾಸಕನಿಲ್ಲದೆ ಇದ್ದರು ಕೂಡಾ ಮಾಡಬಹುದು' ಎಂದರು.
ಪ್ರದಾನ ಕಾರ್ಯದರ್ಶಿಯಾದ ಮೇಲೆ ಹೈದ್ರಾಬಾದ್ ಕರ್ನಾಟಕಕ್ಕೆ ಮೊದಲ ಆಧ್ಯತೆ ನೀಡಿದ್ದೇನೆ, ಈ ಭಾಗದಲ್ಲಿ ಜೆಡಿಎಸ್ ಗೆ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ ಎಂದು ಮಾತು ಮುಗಿಸಿದರು.












Click it and Unblock the Notifications