ವಿಡಿಯೋ; ಕಲಬುರಗಿಯಲ್ಲಿ ಭಾರೀ ಮಳೆ, ಕಾಗಿಣಾ ನದಿಗೆ ಅಪಾರ ನೀರು
ಕಲಬುರಗಿ, ಸೆಪ್ಟೆಂಬರ್ 04; ಆಗಸ್ಟ್ ತಿಂಗಳಿನಲ್ಲಿ ಕಾಣೆಯಾಗಿದ್ದ ನೈಋತ್ಯ ಮುಂಗಾರು ಮಳೆ ಸೆಪ್ಟೆಂಬರ್ ತಿಂಗಳಿನಲ್ಲಿ ಕಾಣಿಸಿಕೊಂಡಿದೆ. ಕಲ್ಯಾಣ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಕಳೆದ ಎರಡು ದಿನಗಳಿಂದ ಮಳೆಯಾಗುತ್ತಿದೆ.
ಕಲಬುರಗಿ ನಗರ ಸೇರಿದಂತೆ ಜಿಲ್ಲೆಯ ಚಿತ್ತಾಪುರ, ಕಾಳಗಿ ಹಾಗೂ ಚಿಂಚೋಳಿಯಲ್ಲಿ ಮಳೆಯಾಗುತ್ತಿದೆ. ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಕಾಗಿಣಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ, ಪ್ರವಾಹದ ಭೀತಿ ಎದುರಾಗಿದೆ.

ಕಲಬುರಗಿ ವಾರ್ತಾ ಇಲಾಖೆ ಸೋಮವಾರ ವಿಡಿಯೋವೊಂದನ್ನು ಟ್ವೀಟ್ ಮಾಡಿದೆ.
ಕಳೆದ ಎರಡು ದಿನದಿಂದ ಕಲಬುರಗಿ ಜಿಲ್ಲೆಯಲ್ಲಿ ಮಳೆ ಸುರಿಯುತ್ತಿರುವ ಪರಿಣಾಮ ಸೋಮವಾರ ಜಿಲ್ಲೆಯ ಶಹಾಬಾದ-ವಾಡಿ ಮಧ್ಯದ ಕಾಗಿಣಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವ ದೃಶ್ಯ ಎಂದು ಹೇಳಿದೆ.
ಕಾಗಿಣಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವ ಹಿನ್ನಲೆಯಲ್ಲಿ ಚಿತ್ತಾಪುರ ತಾಲೂಕಿನ ದಂಡೋತಿ ಹತ್ತಿರುವ ಇರುವ ನದಿಯ ಸೇತುವೆ ಮುಳುಗಡೆಯಾಗುವ ಭೀತಿ ಎದುರಾಗಿದೆ. ಸೋಮವಾರ ಬೆಳಗ್ಗೆಯಿಂದ ನದಿಯ ನೀರಿನ ಮಟ್ಟದಲ್ಲಿ ಏರಿಕೆಯಾಗುತ್ತಲೇ ಇದೆ.
ಸೇಡಂ, ಚಿಂಚೋಳಿ, ಕಾಳಗಿ ತಾಲೂಕುಗಳಲ್ಲಿ ಮಳೆಯಾಗಿ, ಕಮಲಾವತಿ, ರೌದ್ರಾವತಿ, ಬೆಣ್ಣೆತೊರಾ ಚಿಕ್ಕನದಿಗಳ ನೀರು ಕಾಗಿಣಾ ನದಿ ಸೇರುತ್ತದೆ. ಆದ್ದರಿಂದ ನದಿಯಲ್ಲಿ ಅಪಾರ ಪ್ರಮಾಣದ ನೀರು ಹರಿಯುತ್ತಿದೆ.
ಸೋಮವಾರ ಬೆಳಗ್ಗೆ ಮಳೆ; ಸೋಮವಾರ ಮುಂಜಾನೆ 6.30 ರಿಂದ ಎಂಟೂವರೆ ತನಕ ಧಾರಕಾರ ಮಳೆಯಾಗಿದೆ. ಇದರಿಂದಾಗಿ ಹಳ್ಳಕೊಳ್ಳಗಳು ತುಂಬಿವೆ. ನದಿಗೆ ಹರಿದು ಬರುವ ನೀರಿನ ಪ್ರಮಾಣದಲ್ಲಿ ಏರಿಕೆಯಾಗಿದೆ. ಕೆಲವು ಕಡೆ ರಸ್ತೆ, ಸರ್ಕಾರಿ ಶಾಲೆ, ಗ್ರಾಮ ಪಂಚಾಯಿತಿ ಕಟ್ಟಡ ಜಲಾವೃತವಾಗಿವೆ.
ಕಳೆದ ಎರಡು ದಿನದಿಂದ ಕಲಬುರಗಿ ಜಿಲ್ಲೆಯಲ್ಲಿ ಮಳೆ ಸುರಿಯುತ್ತಿರುವ ಪರಿಣಾಮ ಸೋಮವಾರ ಜಿಲ್ಲೆಯ ಶಹಾಬಾದ-ವಾಡಿ ಮಧ್ಯದ ಕಾಗಿಣಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವ ದೃಶ್ಯ@CMofKarnataka @DKShivakumar @PriyankKharge @S_PrakashPatil @KarnatakaVarthe @MiraskarRavi @isha_pant @MiraskarRavi pic.twitter.com/9vo0udo1lS
— DIPR-KALABURAGI (@Kalaburgivarthe) September 4, 2023
ಭಾನವಾರ ಭಾರತೀಯ ಹವಾಮಾನ ಇಲಾಖೆಯು ಸೆಪ್ಟೆಂಬರ್ 3 ಮತ್ತು 4ರಂದು ಉತ್ತರ ಒಳನಾಡಿನ ಕಲಬುರಗಿ, ಬಾಗಲಕೋಟೆ, ಕೊಪ್ಪಳ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಿತ್ತು. 48 ಗಂಟೆಗಳ ಕಾಲ ಮಳೆಯಾಗುವ ಮುನ್ಸೂಚನೆ ನೀಡಿತ್ತು.
ಜುಲೈ ತಿಂಗಳಿನಲ್ಲಿ ಕಲಬುರಗಿ ಜಿಲ್ಲೆಯಲ್ಲಿ ಭಾರೀ ಮಳೆಯಾಗಿತ್ತು. ಆಗ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಮಳೆಯಿಂದ ಬಾಧಿತ ಪ್ರದೇಶಗಳ ವೀಕ್ಷಣೆ ಕಾರ್ಯವನ್ನು ನಡೆಸಿದ್ದರು. ಮಳೆಯಿಂದ ರಸ್ತೆ ಸಂಪರ್ಕ ಕಡಿತವಾಗಿದ್ದ ಸೇಡಂ ತಾಲೂಕಿನ ಮಳಖೇಡ್ ಬಳಿ ಕಾಗಿಣಾ ಸೇತುವೆಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ವೀಕ್ಷಣೆ ನಡೆಸಿದ್ದರು. ಹಳೇ ಸೇತುವೆ ಪಕ್ಕದಲ್ಲಿ ಕೆ.ಆರ್.ಐ.ಡಿ.ಎಲ್. ಸಂಸ್ಥೆಯಿಂದ ನಿರ್ಮಿಸಲಾದ ಹೊಸ ಸೇತುವೆ ಕಾಮಗಾರಿ ಕುರಿತು ಮಾಹಿತಿ ಪಡೆದಿದ್ದರು.
ಜೂನ್ 1ರಿಂದ ಜುಲೈ 27ರ ತನಕ ಕಲಬುರಗಿ ಜಿಲ್ಲೆಯಲ್ಲಿ ಸುರಿದ ಮಳೆಯಿಂದ 283 ಮನೆಗಳು ಭಾಗಶ: ಹಾನಿಗೊಂಡಿದ್ದವು. ಇದಲ್ಲದೇ 20 ಕಿ. ಮೀ. ರಾಜ್ಯ ಹೆದ್ದಾರಿ, 27.50 ಕಿ. ಮೀ. ಜಿಲ್ಲಾ ಹೆದ್ದಾರಿ, 100 ಕಿ. ಮೀ. ಗ್ರಾಮೀಣ ರಸ್ತೆಗಳು ಸೇರಿದಂತೆ ಒಟ್ಟು 147.50 ಕಿ. ಮೀ. ರಸ್ತೆ, 84 ಸೇತುವೆಗಳು, 89 ಶಾಲಾ ಕೊಠಡಿಗಳು ಹಾಗೂ 38 ಅಂಗನವಾಡಿ ಕೇಂದ್ರಗಳು ಹಾನಿಯಾಗಿದ್ದವು.
ಜಿಲ್ಲೆಯಾದ್ಯಂತ 281 ವಿದ್ಯುತ್ ಕಂಬಗಳು, 35 ಟಿಸಿಗಳು ಹಾನಿಗೊಂಡಿದ್ದವು. ಜುಲೈ 24ರಂದು ಜೇವರ್ಗಿ ತಾಲೂಕಿನ ಬಿರಾಳ (ಬಿ) ಗ್ರಾಮದಲ್ಲಿ ಮಳೆಯಿಂದ ಮನೆ ಕುಸಿತ ಪರಿಣಾಮ ಗ್ರಾಮದ 38 ವರ್ಷದ ಬಸಮ್ಮ ಗಂಡ ಬಸವರಾಜ ಬಳಗಾರ ಅವರು ಮೃತಪಟ್ಟಿದ್ದು, ಮೃತರ ವಾರಸುದಾರರಿಗೆ ಸರ್ಕಾರದ ಮಾರ್ಗಸೂಚಿಯಂತೆ 5 ಲಕ್ಷ ರೂ. ಪರಿಹಾರ ವಿತರಣೆ ಮಾಡಲಾಗಿತ್ತು.
ಕಲಬುರಗಿ ಜಿಲ್ಲೆಯಲ್ಲಿ ಜುಲೈ ತಿಂಗಳಿನಲ್ಲಿ ಒಂದು ವಾರದಿಂದ ಮಳೆ ಸುರಿದ ಕಾರಣ ಸಾರ್ವಜನಿಕರಿಗೆ ಏನಾದರೂ ತೊಂದರೆಯಾದಲ್ಲಿ ಜಿಲ್ಲಾ ತುರ್ತು ನಿರ್ವಹಣಾ ಕೇಂದ್ರದ ಸಹಾಯವಾಣಿ ಸಂಖ್ಯೆ 08472-278677, ಟೋಲ್ ಫ್ರೀ ಸಂಖ್ಯೆ 1077ಗೆ ಸಂಪರ್ಕಿಸಲು ಜಿಲ್ಲಾಡಳಿತ ಮನವಿ ಮಾಡಿತ್ತು.












Click it and Unblock the Notifications