ಕಲಬುರಗಿ ಆಡಳಿತದಲ್ಲಿ ಸ್ತ್ರೀ ಶಕ್ತಿ; ಡಿಸಿ, ಎಸ್ಪಿ ಮಹಿಳೆಯರು
ಕಲಬುರಗಿ, ಜೂನ್ 20; ಕರ್ನಾಟಕದ ಕಾಂಗ್ರೆಸ್ ಸರ್ಕಾರ ಸೋಮವಾರ 14 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ. ಹಲವು ಜಿಲ್ಲೆಗಳ ಜಿಲ್ಲಾಧಿಕಾರಿಗಳು ವರ್ಗಾವಣೆಗೊಂಡಿದ್ದಾರೆ. ಕಲಬುರಗಿ ಡಿಸಿಯಾಗಿ ಫೌಜಿಯಾ ತರನ್ನುಮ್ ನೇಮಕಗೊಂಡಿದ್ದಾರೆ.
ಕಲಬುರಗಿ ಡಿಸಿಯಾಗಿದ್ದ ಯಶವಂತ ವಿ. ಗುರುಕರ್ ವರ್ಗಾವಣೆ ಮಾಡಲಾಗಿದೆ. ಅವರ ಸ್ಥಾನಕ್ಕೆ 2015ನೇ ಬ್ಯಾಚ್ ಐಎಎಸ್ ಅಧಿಕಾರಿ ಫೌಜಿಯಾ ತರನ್ನುಮ್ ನೇಮಕ ಮಾಡಲಾಗಿದೆ. ಫೌಜಿಯಾ ತರನ್ನುಮ್ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ಪರೀಕ್ಷಾ ನಿಯಂತ್ರಕರಾಗಿದ್ದರು.

ಕಲಬುರಗಿ ಜಿಲ್ಲಾಧಿಕಾರಿ ಮಾತ್ರವಲ್ಲ. ಜಿಲ್ಲಾ ಪಂಚಾಯಿತಿ ಸಿಇಒ ಡಾ.ಗಿರೀಶ್ ಡಿ. ಬದೋಲೆ ವರ್ಗಾವಣೆ ಮಾಡಲಾಗಿದ್ದು, ಭನ್ವರಸಿಂಗ್ ಮೀನಾ ಅವರನ್ನು ನೇಮಕ ಮಾಡಲಾಗಿದೆ. ಜಿಲ್ಲೆಯ ಆಡಳಿತದಲ್ಲಿ ಸ್ತ್ರೀ ಶಕ್ತಿ ಕಂಡುಬಂದಿದೆ. ಜಿಲ್ಲೆಯ ಎರಡು ಪ್ರಮುಖ ಹುದ್ದೆಗಳಾದ ಡಿಸಿ, ಎಸ್ಪಿಯಾಗಿ ಮಹಿಳೆಯರು ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ.
ಈಗಾಗಲೇ ಕಲಬುರಗಿ ಎಸ್ಪಿಯಾಗಿ ಇಶಾ ಪಂತ್ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಈಗ ಜಿಲ್ಲಾಧಿಕಾರಿಯಾಗಿ ಫೌಜಿಯಾ ತರನ್ನುಮ್ ನೇಮಕಗೊಂಡಿದ್ದಾರೆ. ಇದರ ಜೊತೆಗೆ ಕಲಬುರಗಿ ಉತ್ತರ ಕ್ಷೇತ್ರದ ಶಾಸಕಿಯಾಗಿ ಕನೀಜ್ ಫಾತಿಮಾ ಇದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಮಹಿಳೆಯರು ಮೇಲುಗೈ ಸಾಧಿಸಿದ್ದಾರೆ.
ನೂತನ ಡಿಸಿ ಪರಿಚಯ; ನೂತನ ಜಿಲ್ಲಾಧಿಕಾರಿಯಾಗಿ ನೇಮಕಗೊಂಡಿರುವ ಫೌಜಿಯಾ ತರನ್ನುಮ್ ಅವರಿಗೆ ಕಲಬುರಗಿ ಹೊಸದಲ್ಲ. 2019ರಲ್ಲಿ ಅವರು ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತರಾಗಿ ಕಾರ್ಯ ನಿರ್ವಹಣೆ ಮಾಡಿದ್ದರು. ಈಗ ಜಿಲ್ಲಾಧಿಕಾರಿಯಾಗಿ ಮತ್ತೆ ಜಿಲ್ಲೆಗೆ ಆಗಮಿಸಿದ್ದಾರೆ.
ಫೌಜಿಯಾ ತರನ್ನುಮ್ ಚಿಕ್ಕಬಳ್ಳಾಪುರ ಮತ್ತು ಕೊಪ್ಪಳ ಜಿಲ್ಲಾ ಪಂಚಾಯತ್ ಸಿಒಇ ಆಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ. ಕೊಪ್ಪಳ ಜಿಲ್ಲಾ ಪಂಚಾಯತಿಯಿಂದ ಅವರು ಕೆಪಿಎಸ್ಸಿ ಪರೀಕ್ಷಾ ನಿಯಂತ್ರಕರಾಗಿ ವರ್ಗಾವಣೆಗೊಂಡಿದ್ದರು.
ಎಸ್ಪಿ ಇಶಾ ಪಂತ್ ಪರಿಚಯ; ಇನ್ನು ಕಲಬುರಗಿ ಎಸ್ಪಿ ಇಶಾ ಪಂತ್ 2011ನೇ ಬ್ಯಾಚ್ ಐಪಿಎಸ್ ಅಧಿಕಾರಿ. 2021ರಿಂದ ಅವರು ಎಸ್ಪಿಯಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಅವರ ನೇತೃತ್ವದಲ್ಲಿಯೇ 2023ರ ಚುನಾವಣೆಯನ್ನು ಜಿಲ್ಲೆಯಲ್ಲಿ ಶಾಂತಿಯುತವಾಗಿ ನಡೆಸಲಾಗಿದೆ.
ಉತ್ತರಾಖಂಡ ರಾಜ್ಯದ ಅಲ್ಮೋರ ಮೂಲದ ಇಶಾ ಪಂತ್ ಎಷ್ಟು ಸ್ಪಷ್ಟವಾಗಿ ಕನ್ನಡ ಮಾತನಾಡುತ್ತಾರೆ ಎಂದರೆ ಅವರು ಕನ್ನಡಿಗರು ಎಂದೇ ಹೇಳಬೇಕು. 2016ರಲ್ಲಿ ಅವರು ಐಎಎಸ್ ಅಧಿಕಾರಿ ಅನಿರುದ್ಧ್ ಶ್ರವಣ್ ವಿವಾಹವಾಗಿದ್ದಾರೆ.
ಈ ಬಾರಿಯ ಚುನಾವಣೆಯಲ್ಲಿ ಕಲಬುರಗಿ ಉತ್ತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಕನೀಜ್ ಫಾತಿಮಾ ಶಾಸಕಿಯಾಗಿ ಆಯ್ಕೆಯಾಗಿದ್ದಾರೆ. 80,973 ಮತಗಳನ್ನು ಪಡೆದು ಅವರು ಚುನಾವಣೆಯಲ್ಲಿ ಜಯಗಳಿಸಿದ್ದಾರೆ. 2018ರ ಚುನಾವಣೆಯಲ್ಲಿಯೂ ಅವರು 64,311 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು.
ಜಿಲ್ಲಾ ಪಂಚಾಯಿತಿಯ ನೂತನ ಸಿಇಒ ಭನ್ವರಸಿಂಗ್ ಮೀನಾ 2017ನೇ ಬ್ಯಾಚ್ ಐಎಎಸ್ ಅಧಿಕಾರಿ. ಬಾಗಲಕೋಟೆಯಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ ವಿಶೇಷ ಭೂ ಸ್ವಾಧೀನ ಅಧಿಕಾರಿಯಾಗಿ ಅವರು ಕಾರ್ಯ ನಿರ್ವಹಣೆ ಮಾಡುತ್ತಿದ್ದರು. ಈಗ ಕಲಬುರಗಿ ಸಿಇಒ ಆಗಿ ನೇಮಕಗೊಂಡಿದ್ದಾರೆ.












Click it and Unblock the Notifications