'ಲಿಂಗಾಯತ ಮುಖಂಡರು ಒಗ್ಗೂಡಲು ಶೀಘ್ರವೇ ಹೊಸ ವೇದಿಕೆ'
ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ. ಒಕ್ಕೊರಲಿನ ಕೂಗಿಗೆ ಲಿಂಗಾಯತ ಮುಖಂಡರಿಗಾಗಿ ಪ್ರತ್ಯೇಕ ವೇದಿಕೆ.
ನವದೆಹಲಿ, ಆಗಸ್ಟ್ 8: ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಹಾಗೂ ಸ್ವತಂತ್ರ್ಯ ಧರ್ಮದ ಸ್ಥಾನ ದಕ್ಕಿಸಿಕೊಳ್ಳುವ ವಿಚಾರಕ್ಕೆ ಸಂಬಂಧಿಸಿದಂತೆ ಲಿಂಗಾಯತ ಸಮಾಜದ ಎಲ್ಲಾ ಮುಖಂಡರನ್ನು ಒಂದೇ ವೇದಿಕೆಗೆ ತರುವ ಪ್ರಯತ್ನಕ್ಕೆ ಕೈಹಾಕಲಾಗಿದೆ.
ಈ ಬಗ್ಗೆ ಕಲಬುರಗಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಲಿಂಗಾಯತ ಮುಖಂಡ ಸಂಜಯ್ ಮಾಕಳ್, ತಮ್ಮ ಬೇಡಿಕೆ ಈಡೇರಿಕೆಗಾಗಿ ಎಲ್ಲಾ ಲಿಂಗಾಯತ ಮುಖಂಡರನ್ನು ಒಂದೇ ವೇದಿಕೆಗೆ ತರುವುದಾಗಿ ತಿಳಿಸಿದರಲ್ಲದೆ, ಈ ಬಗ್ಗೆ ರೂಪುರೇಷೆಗಳನ್ನು ಶೀಘ್ರದಲ್ಲೇ ಸಿದ್ಧಪಡಿಸುವುದಾಗಿ ಹೇಳಿದರು.
ಆನಂತರ, ವೀರಶೈವ ಮಹಾಸಭೆಯ ಪದಾಧಿಕಾರಿಗಳು ಇತ್ತೀಚೆಗೆ ಸಭೆ ನಡೆಸಿ ಕೈಗೊಂಡಿರುವ ನಿರ್ಧಾರವನ್ನು ಲಿಂಗಾಯತ ಮುಖಂಡರು ತಿರಸ್ಕರಿಸಿದರು.
ಇತ್ತೀಚೆಗೆ, ಅಖಿಲ ಭಾರತ ವೀರಶೈವ ಮಹಾಸಭಾದ ಪದಾಧಿಕಾರಿಗಳು ಸಭೆ ನಡೆಸಿ, ವೀರಶೈವರು, ಲಿಂಗಾಯತರು ಇಬ್ಬರೂ ಒಂದೇ ಎಂದು ಘೋಷಿಸಿದ್ದಾರೆ. ಅಲ್ಲದೆ, ಆಚಾರ- ವಿಚಾರಗಳೂ ಒಂದೇ ಎಂದು ಹೇಳಿದ್ದಾರೆ. ಒಂದು ವೇಳೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡುವುದೇ ಆದರೆ, 'ವೀರಶೈವ-ಲಿಂಗಾಯತ' ಎಂಬ ಹೆಸರಿನಲ್ಲೇ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡಬೇಕೆಂದು ಆಗ್ರಹಿಸಿದ್ದಾರೆ. ಆದರೆ, ಇದಕ್ಕೆ ನಮ್ಮ ಸಮ್ಮತವಿಲ್ಲ ಎಂದು ಲಿಂಗಾಯತ ಮುಖಂಡರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದ ಇತರ ಹೇಳಿಕೆಗಳ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಒಮ್ಮತದ ನಿರ್ಧಾರ ಪ್ರಕಟಿಸಲೇಬೇಕು
ಆಗಸ್ಟ್ 10ರಂದು ಅಖಿಲ ಭಾರತ ವೀರಶೈವ ಮಹಾಸಭಾದ ಅಂತಿಮ ಸಭೆ ನಡೆಯಲಿದ್ದು, ಆ ಸಭೆಯಲ್ಲಿ ಮಹಾಸಭಾವು ತನ್ನ ಹಳೆ ನಿಲುವಿಗೇ ಅಂಟಿಕೊಂಡಲ್ಲಿ, ಲಿಂಗಾಯರೂ ಪ್ರತ್ಯೇಕವಾಗಿ ತಮ್ಮದೇ ಆದ ಒಮ್ಮತದ ನಿರ್ಧಾರವನ್ನು ಪ್ರಕಟಿಸಲೇಬೇಕಾಗುತ್ತದೆ ಎಂದು ಸಂಜಯ್ ಮಾಕಳ್ ತಿಳಿಸಿದರು.

ಕಾಲ ಸನ್ನಿಹಿತವಾಗಿದೆ
ಎಲ್ಲಾ ಲಿಂಗಾಯತ ಧರ್ಮದ ಮುಖಂಡರು, ಮಠದ ಸ್ವಾಮೀಜಿಗಳು ಸೇರಿದಂತೆ ಎಲ್ಲರೂ ಒಗ್ಗಟ್ಟಾಗಿ ಈ ಬಗ್ಗೆ ಸೇರುವ ಅವಶ್ಯಕತೆಯಿದೆ ಎಂದು ಅವರು ತಿಳಿಸಿದರು. ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಸ್ಥಾನಮಾನ ಸಿಗುವ ಕಾಲ ಸನ್ನಿಹಿತವಾಗಿದೆ.

ತಮ್ಮ ವಾದಕ್ಕೆ ದಾಖಲೆ ನೀಡಲಿ
ಇತ್ತೀಚೆಗೆ, ಲಿಂಗಾಯತರೂ ವೀರಶೈವರೇ. ಬಸವಣ್ಣನವರೂ ವೀರಶೈವರೇ ಆಗಿ ಬದಲಾಗಿದ್ದರೆಂದು ಹೇಳಿಕೆ ನೀಡಿದ್ದ ಚಿಂತಕ ಚಿದಾನಂದ ಮೂರ್ತಿಯವರ ಹೇಳಿಕೆಗೆ ಸಂಜಯ್ ಮಾಕಳ್ ಆಕ್ಷೇಪ ವ್ಯಕ್ತಪಡಿಸಿದರು. ಚಿ.ಮೂ. ಹೇಳಿಕೆಗೆ ಯಾವುದೇ ಸಾಕ್ಷಾಧಾರಗಳಿಲ್ಲ. ಯಾವುದೇ ದಾಖಲೆಗಳು ಇಲ್ಲದೇ ಮಾತನಾಡುವ ಚಿ.ಮೂ ಅವರು ಮೊದಲು ತಮ್ಮ ಹೇಳಿಕೆಗೆ ಪೂರಕವಾದ ಸಾಕ್ಷ್ಯಾಧಾರಗಳನ್ನು ನೀಡಲಿ ಎಂದರು.

ಶತಮಾನಗಳಿಂದ ತಪ್ಪು ತಿಳಿವಳಿಕೆ
ಇನ್ನು, ಅನ್ಯ ಕೋಮಿನ ಜನರು ಶತಶತಮಾನಳಿಂದಲೂ ಲಿಂಗಾಯರು, ವೀರಶೈವರೂ ಒಂದೇ ಎಂದು ತಿಳಿದುಕೊಂಡಿದ್ದಾರೆ. ಅಲ್ಲದೆ, ಲಿಂಗಾಯತರು ಹಿಂದೂ ಧರ್ಮದ ಭಾಗ ಎಂದೂ ಅಂದುಕೊಂಡಿದ್ದಾರೆ. ಆದರೆ, ವಾಸ್ತವದಲ್ಲಿ ಹಾಗಿಲ್ಲ. ಹಿಂದಿನಿಂದಲೂ ಇಂಥದ್ದೇ ಸಿದ್ಧಾಂತವು ಜನಮಾನಸದಲ್ಲಿ ನೆಲೆಯೂರಿರುವುದು ವಿಷಾದನೀಯ ಎಂದರು.












Click it and Unblock the Notifications