ಕಾಂಗ್ರೆಸ್ನಿಂದ ದೇಶ ಭಕ್ತಿ ನಿರೀಕ್ಷೆ ಬೇಡ; ಸಿ. ಟಿ. ರವಿ
ಕಲಬುರಗಿ, ಮೇ 16; "ಕಾಂಗ್ರೆಸ್ಗೆ ನಿಯಮ ಮಾಡುವುದು ಗೊತ್ತು. ಅದನ್ನೂ ಬೈಪಾಸ್ ಮಾಡುವುದು ಗೊತ್ತು. 5 ವರ್ಷ ಕಾರ್ಯಕರ್ತನಾಗಿ ದುಡಿದರೆ ಟಿಕೆಟ್ ನೀಡಬಹುದು ಎನ್ನುವ ಪರ್ಯಾಯ ಮಾರ್ಗವನ್ನೂ ಹುಡುಕಿಕೊಂಡಿದ್ದಾರೆ" ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ. ವ್ಯಂಗ್ಯವಾಡಿದರು.
ಸೋಮವಾರ ಕಲಬುರಗಿಯಲ್ಲಿ ಮಾತನಾಡಿದ ಅವರು, ಒಂದು ಕುಟುಂಬಕ್ಕೆ ಒಂದೇ ಟಿಕೆಟ್ ಎಂಬ ಕಾಂಗ್ರೆಸ್ ನಿಯಮದ ಬಗ್ಗೆ ಪ್ರತಿಕ್ರಿಯೆ ನೀಡಿದರು.
"ಕಾಂಗ್ರೆಸ್ನಿಂದ ಪ್ರಾಮಾಣಿಕತೆ, ದೇಶಭಕ್ತಿ ನಿರೀಕ್ಷೆ ಮಾಡಲೇಬೇಡಿ, ವಂಶವಾಹಿನಿ ಹೊರತಾದ ರಾಜಕಾಣ. ಮತೀಯ ಓಲೈಕೆ ಇಲ್ಲದ ರಾಜಕಾರಣ, ಭ್ರಷ್ಟಾಚಾರ ರಹಿತ ಆಡಳಿತ ಕಾಂಗ್ರೆಸ್ನಿಂದ ನಿರೀಕ್ಷೆ ಮಾಡಿದರೆ ಭ್ರಮ ನಿರಸನವಾಗುತ್ತದೆ" ಎಂದರು.

ಈ ಮೂಲಕ "ಬಿಜೆಪಿ ಅವರಿಗೆ ಸಂವಿಧಾನ ಕಲಿಸಬೇಕಾಗಿದೆ" ಎನ್ನುವ ಮಾಜಿ ಸಚಿವ, ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಸಿ. ಟಿ. ರವಿ ತಿರುಗೇಟು ನೀಡಿದರು. "ಸಂವಿಧಾನ ಏನು ಅಂತ ಅವರಿಂದ ಕಲಿಯಬೇಕು ಎನ್ನುವ ಪರಿಸ್ಥಿತಿ ನಮಗೆ ಬಂದಿದೆ. ಮೊದಲು ಅವರು ಕಲಿಯಲಿ" ಎಂದು ತಿಳಿಸಿದರು.
"ಕಾಂಗ್ರೆಸ್ನಿಂದ ರಾಜಕಾರಣ ಮಾಡುವವರಿಗೆ ಭವಿಷ್ಯ ಇದೆ ಎಂದರೆ ಅದು ತಪ್ಪು. ಈಗ ಅಧಿಕಾರವಿರುವ ಜಾಗದಲ್ಲೇ ಸೋಲು ಮೇಲೆ ಸೋಲು. ಹಾಗಾಗಿ ಕಾಂಗ್ರೆಸ್ ನಂಬಿಕೊಂಡರೆ ಭವಿಷ್ಯ ಇಲ್ಲ ಅಂತ ಮುಖಂಡರಿಗೆ ಅನ್ನಿಸಿದೆ. ಅದಕ್ಕೆ ಪಕ್ಷ ಬಿಡಲೂ ತಯಾರಿಗಿದ್ದಾರೆ. ಇದು ಜನರಿಗೂ ಗೊತ್ತಾಗಿದೆ. ಕಾಂಗ್ರೆಸ್ನಿಂದ ದೇಶದ ಭವಿಷ್ಯ ಸಾಧ್ಯವಿಲ್ಲ ಅಂತ. ಕಲ್ಯಾಣ ಕರ್ನಾಟಕದಲೂ ಬಹಳ ಜನ ಸಂಪರ್ಕದಲ್ಲಿದ್ದಾರೆ. ಈಗಲೇ ಮಾಹಿತಿ ಬಿಟ್ಟುಕೊಡಲ್ಲ, ಅವರು ಕೂಡ ಮಹೂರ್ತಕ್ಕೆ ಕಾಯುತ್ತಿದ್ದಾರೆ. ನಾವು ಮಹೂರ್ತ ನಿಶ್ಚಯ ಮಾಡಿಲ್ಲ" ಎಂದು ಹೇಳಿದರು.

ಆತ್ಮರಕ್ಷಣೆಗಾಗಿ ಏರ್ ಗನ್ ತರಬೇತಿ; ಖಾಸಗಿ ಶಾಲಾ ಮಕ್ಕಳಿಗೆ ಶಸ್ತ್ರಾಸ್ತ್ರ ತರಬೇತಿ ಬಗ್ಗೆ ಮಾತನಾಡಿದ ಸಿ. ಟಿ. ರವಿ, "ಶಾಲಾ ಮಕ್ಕಳಿಗೆ ಅಲ್ಲ. ಪ್ರತಿ ವರ್ಷ ಬಜರಂಗದಳ ಅಭ್ಯಾಸ ವರ್ಗ ನಡೆಸುತ್ತದೆ. ಹಾಗೆ ರಾಜ್ಯ ಮತ್ತು ಜಿಲ್ಲೆಯಿಂದ ತರಬೇತಿ ಕೊಡುತ್ತಾರೆ. ಆತ್ಮರಕ್ಷಣೆಗಾಗಿ ಪೊಲೀಸ್ ಇಲಾಖೆಯೂ ಕೂಡ ತರಬೇತಿ ನೀಡುತ್ತದೆ. ಇದು ಹಾಗೆಯೇ ಆತ್ಮರಕ್ಷಣೆಗಾಗಿ ಏರ್ ಗನ್ ತರಬೇತಿ ಕೊಟ್ಟಿರುವುದು. ಬಜರಂಗದಳ ಅಭ್ಯಾಸ ಎಕೆ 47 ಅಲ್ಲ, ಬಾಂಬ್ ಹಾಕುವ ತರಬೇತಿ ಅಲ್ಲ, ಆತ್ಮರಕ್ಷಣೆಗಾಗಿ ಏರ್ ಗನ್ ತರಬೇತಿ ನೀಡುತ್ತದೆ" ಎಂದರು.












Click it and Unblock the Notifications