ಚಿಂಚೋಳಿ ಉಪಚುನಾವಣೆ: ಕಾಂಗ್ರೆಸ್ನಲ್ಲಿ ಭಿನ್ನಮತ ಸ್ಫೋಟ
ಕಲಬುರಗಿ, ಮೇ 01: ಲೋಕಸಭೆ ಚುನಾವಣೆ ಮುಗಿಯುತ್ತಿದ್ದಂತೆ ಬಹುಮುಖ್ಯವಾದ ಚಿಂಚೋಳಿ ಮತ್ತು ಕುಂದಗೋಳ ಉಪಚುನಾವಣೆ ರಂಗು ಏರುತ್ತಿದೆ. ಆದರೆ ಚಿಂಚೋಳಿ ಕ್ಷೇತ್ರದಿಂದ ಕಾಂಗ್ರೆಸ್ಗೆ ಅಹಿತ ಸುದ್ದಿಯೊಂದು ಬಂದಿದೆ.
ಚಿಂಚೋಳಿ ಕ್ಷೇತ್ರ ಕಾಂಗ್ರೆಸ್ ನಲ್ಲಿ ಭಿನ್ನಮತ ಮೂಡಿದ್ದು, ಟಿಕೆಟ್ ಆಕಾಂಕ್ಷಿಯಾಗಿದ್ದ ಕಾಂಗ್ರೆಸ್ ಮುಖಂಡ ಬಾಬುರಾವ್ ಚವ್ಹಾಣ್ ಅವರು ಆರೋಪಿಸಿದ್ದಾರೆ.
ಮಾಜಿ ಸಚಿವರಾಗಿರುವ ಬಾಬುರಾವ್ ಚವ್ಹಾಣ್ ಅವರು ಕಳೆದ ವಿಧಾನಸಭೆ ಚುನಾವಣೆಗೂ ಮುನ್ನಾ ಬಿಜೆಪಿಗೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರ್ಪಡೆ ಆಗಿದ್ದರು. ಅವರು ಚಿಂಚೋಳಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ನ ಪ್ಬಲ ಆಕಾಂಕ್ಷಿ ಆಗಿದ್ದರು ಆದರೆ ಅವರಿಗೆ ಕಾಂಗ್ರೆಸ್ ಟಿಕೆಟ್ ನಿರಾಕರಿಸಿದ್ದು, ಇದರಿಂದ ಅವರು ಅಸಮಾಧಾನಗೊಂಡಿದ್ದಾರೆ.
ಚಿಂಚೋಳಿಯಲ್ಲಿ ಸುಭಾಷ್ ರಾಥೋಡ್ ಅವರಿಗೆ ಟಿಕೆಟ್ ನೀಡಿರುವುದು ಬಾಬುರಾವ್ ಚವ್ಹಾಣ್ ಅವರಿಗೆ ತೀವ್ರ ಅಸಮಾಧಾನ ತಂದಿದ್ದು, ನಾನು ಸುಭಾಷ್ ರಾಥೋಡ್ ಪರ ಪ್ರಚಾರ ಮಾಡುವುದಿಲ್ಲವೆಂದು ಬಹಿರಂಗವಾಗಿ ಘೋಷಿಸಿದ್ದಾರೆ.

ನಾನು ಇದೇ ಕ್ಷೇತ್ರದವನು: ಚೌವ್ಹಾಣ್
ನಾನು ಪ್ರಬಲ ಆಕಾಂಕ್ಷಿಯಾಗಿದ್ದೆ, ಸುಭಾಷ್ ಆಳಂದ ಕ್ಷೇತ್ರದವರು, ನಾನು ಸ್ಥಳೀಯ, ಒಂದು ಬಾರಿ ಇದೇ ಕ್ಷೇತ್ರದಿಂದ ಸ್ಪರ್ಧಿಸಿ ಕಡಿಮೆ ಅಂತರದಿಂದ ಸೋತಿದ್ದೇನೆ ಹಾಗಿದ್ದರೂ ನನಗೆ ಟಿಕೆಟ್ ನಿರಾಕರಿಸಲಾಗಿದೆ ಎಂದು ಬಾಬುರಾವ್ ಚೌವ್ಹಾಣ್ ಹೇಳಿದ್ದಾರೆ.

'ಪ್ರಿಯಾಂಕ್ ಖರ್ಗೆ ನನ್ನನ್ನು ಪ್ರಚಾರಕ್ಕೆ ಆಹ್ವಾನಿಸಿಲ್ಲ'
ಪ್ರಿಯಾಂಕ್ ಖರ್ಗೆ ಅವರು ನನ್ನನ್ನು ಪ್ರಚಾರಕ್ಕೆ ಕರೆದಿಲ್ಲ, ಅಲ್ಲದೆ ಸುಭಾಷ್ ರಾಥೋಡ್ ಸಹ ನನ್ನನ್ನು ನಾಮಪತ್ರ ಸಲ್ಲಿಸುವ ಸಮಯ ಕರೆದಿಲ್ಲ, ಹಾಗಿದ್ದಮೇಲೆ ನಾನು ಏಕೆ ಅವರ ಪರವಾಗಿ ಪ್ರಚಾರ ಮಾಡಬೇಕು, ಸುಭಾಷ್ ರಾಥೋಡ್ ನನ್ನನ್ನು ಪ್ರಚಾರಕ್ಕೆ ಕರೆದರೂ ಹೋಗುವುದಿಲ್ಲ ಎಂದಿದ್ದಾರೆ.

ಬಿಜೆಪಿಯಿಂದ ಉಮೇಶ್ ಜಾಧವ್ ಮಗನಿಗೆ ಟಿಕೆಟ್
ಚಿಂಚೋಳಿಯ ಕಾಂಗ್ರೆಸ್ ಶಾಸಕ ಉಮೇಶ್ ಜಾಧವ್ ಅವರು ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಗೊಂಡ ಕಾರಣ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯುತ್ತಿದ್ದು, ಬಿಜೆಪಿಯಿಂದ ಉಮೇರ್ಶ ಜಾಧವ್ ಪುತ್ರ ಅವಿನಾಶ್ ಜಾಧವ್ ಅವರಿಗೆ ಟಿಕೆಟ್ ನೀಡಲಾಗಿದೆ. ಕಾಂಗ್ರೆಸ್ ಪಕ್ಷ ಸುಭಾಷ್ ರಾಥೋಡ್ ಅವರಿಗೆ ಟಿಕೆಟ್ ನೀಡಿದೆ.

ಕುಂದಗೋಳ ಕ್ಷೇತ್ರದಲ್ಲಿಯೂ ಉಪಚುನಾವಣೆಯಲ್ಲಿ
ಕುಂದಗೋಳ ಕ್ಷೇತ್ರದಲ್ಲಿಯೂ ಉಪಚುನಾವಣೆ ನಡೆಯುತ್ತಿದ್ದು, ಅಲ್ಲಿ ದಿವಂಗತ ಶಾಸಕ ಶಿವಳ್ಳಿ ಅವರ ಪತ್ನಿ ಕುಸುಮಾ ಶಿವಳ್ಳಿ ಅವರಿಗೆ ಟಿಕೆಟ್ ನೀಡಲಾಗಿದೆ. ಬಿಜೆಪಿಯು ಚಿಕ್ಕನಗೌಡ ಅವರಿಗೆ ಟಿಕೆಟ್ ನೀಡಿದೆ. ಎರಡೂ ಕ್ಷೇತ್ರಗಳ ಗೆಲುವು ಕಾಂಗ್ರೆಸ್ ಮತ್ತು ಬಿಜೆಪಿಗೆ ಬಹು ಮುಖ್ಯವಾಗಿದ್ದು, ಬಿರುಸಿನ ಪೈಪೋಟಿ ನಡೆಯುತ್ತಿದೆ.












Click it and Unblock the Notifications