85ನೇ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನ ಬದಲಾವಣೆ
ಕಲಬುರಗಿ, ಜನವರಿ 10 : 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನದಲ್ಲಿ ಬದಲಾವಣೆ ಮಾಡಲಾಗಿದೆ. ಫೆಬ್ರವರಿ 5, 6 ಮತ್ತು 7 ರಂದು ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿ ಸಾಹಿತ್ಯ ಸಮ್ಮೇಳನ ನಡೆಯಲಿದೆ.
ಕವಿ ಕೃತಿ ಬರೆಯುವ ರೀತಿಯಲ್ಲಿ ಕಾಣುವಂತೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ಬದಲಾವಣೆ ಮಾಡಲಾಗಿದೆ. ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮತ್ತು ಪ್ರಚಾರ ಸಮಿತಿ ಅಧ್ಯಕ್ಷರಾದ ವೀರಭದ್ರ ಸಿಂಪಿ ಈ ಕುರಿತು ಮಾಹಿತಿ ನೀಡಿದ್ದಾರೆ.
85ನೇ ಕನ್ನಡ ಸಾಹಿತ್ಯ ಸಮ್ಮೇಳನ; ಲಾಂಛನದ ವಿಶೇಷತೆಗಳು
ಕಳೆದ ಭಾನುವಾರ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬಿಡುಗಡೆ ಮಾಡಲಾಗಿತ್ತು. ಆದರೆ, ಲಾಂಚನದ ಬಗ್ಗೆ ಕೆಲವರು ಅಪಸ್ವರ ಎತ್ತಿದ್ದರು. ಆದ್ದರಿಂದ, ಸಲಹೆಗಳನ್ನು ಪರಿಗಣಿಸಿ ಬದಲಾವಣೆ ಮಾಡಲಾಗಿದೆ.
ಕನ್ನಡ ಪುಸ್ತಕ ಪ್ರಾಧಿಕಾರದ ಪುಸ್ತಕಗಳು ಶೇ.50 ರಿಯಾಯಿತಿಯಲ್ಲಿ ಮಾರಾಟ
ಕನ್ನಡ ಸಾಹಿತ್ಯ ಸಮ್ಮೇಳನ ತಯಾರಿ ಕಲಬುರಗಿಯಲ್ಲಿ ಬಿರುಸಿನಿಂದ ನಡೆಯುತ್ತಿದೆ. ಮಖ್ಯ ವೇದಿಕೆ ನಿರ್ಮಾಣ ಕಾರ್ಯಕ್ಕೆ ಜನವರಿ 16 ರಂದು ಬೆಳಗ್ಗೆ 11.30ಕ್ಕೆ ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿ ಗುದ್ದಲಿ ಪೂಜೆ ಮಾಡಲಾಗುತ್ತದೆ.
ಕನ್ನಡ ಸಾಹಿತ್ಯ ಡಿಜಿಟಲೀಕರಣ ಮಾಡಲು ಸರ್ಕಾರ ಬದ್ಧ: ಅಶ್ವಥ್ ನಾರಾಯಣ
ಸಮ್ಮೇಳನದ ಲಾಂಛನ ಬದಲಾವಣೆ
85ನೇ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನದಲ್ಲಿ ಜಿಲ್ಲೆಯ ಶ್ರೇಷ್ಠ ಕವಿಗಳಲ್ಲಿ ಒಬ್ಬರಾದ ಶ್ರೀ ವಿಜಯನು ಬರೆದ 'ಕವಿರಾಜ ಮಾರ್ಗ' ಎಂಬ ಆದರ್ಶ ಗ್ರಂಥ ಮತ್ತು ಕವಿಯು ಕಾವ್ಯ ರಚನೆಯಲ್ಲಿ ತೊಡಗಿರುವುದನ್ನು ಸಾಂಕೇತಿಕವಾಗಿ ಬಳಸಿಕೊಳ್ಳಲಾಗಿತ್ತು.
ಕೃತಿ ಬರೆಯುವಂತೆ ಬದಲಾವಣೆ
ಜನವರಿ 5 ರಂದು ಬಿಡುಗಡೆ ಮಾಡಿದ ಲಾಂಛನದಲ್ಲಿ ಸಾರ್ವಜನಿಕರಿಗೆ ಕವಿರಾಜ ಮಾರ್ಗ ಕೃತಿ ಓದುವ ರೀತಿಯಲ್ಲಿರುವಂತೆ ಮುದ್ರಿಸಲಾಗಿತ್ತು. ವಿವಿಧ ಸಮ್ಮೇಳನ ಸಮಿತಿ ಸದಸ್ಯರು ಸಾರ್ವಜನಿಕರಿಗೆ ಕೃತಿ ಓದುವ ಬದಲು ಕವಿ ಕೃತಿ ಬರೆಯುವ ರೀತಿಯಲ್ಲಿ ಲಾಂಛನ ಪರಿಷ್ಕರಿಸಬೇಕು ಎಂದು ಸಲಹೆ ನೀಡಿದ್ದರು. ಈಗ ಅದನ್ನು ಬದಲಾವಣೆ ಮಾಡಲಾಗಿದೆ.
ಲಾಂಛನದಲ್ಲಿ ಏನಿದೆ?
ಕಲಬುರಗಿ ಜಿಲ್ಲೆಯ ಸನ್ನತಿ, ನಾಗಾವಿ, ಮರತೂರು ಮುಂತಾದ ಕಡೆ ಹಲವಾರು ಮಹತ್ವದ ಪ್ರಾಚೀನ ಶಾಸನಗಳು ಇರುವುದರಿಂದ ಸಾಂಕೇತಿಕವಾಗಿ ಶಾಸನವೊಂದನ್ನು ಲಾಂಛನದಲ್ಲಿ ಬಳಸಿಕೊಳ್ಳಲಾಗಿದೆ.
ಸಾಂಸ್ಕೃತಿಕವಾಗಿ ಮತ್ತು ಧಾರ್ಮಿಕವಾಗಿ ಸೌಹಾರ್ದ ಸಹಿಷ್ಣುತೆಗೆ ಹೆಸರುವಾಸಿಯಾದ ಮತ್ತು ಕಲಾತ್ಮಕ ಸ್ಮಾರಕಗಳಾದ ಹಜರತ್ ಖಾಜಾ ಬಂದೇ ನವಾಜ ದರ್ಗಾ, ಶ್ರೀ ಶರಣಬಸವೇಶ್ವರ ಐತಿಹಾಸಿಕ ಭವ್ಯ ದೇವಾಲಯ, ಕಲಬುರಗಿಯ ಕೋಟೆ, ಚರ್ಚ್ ಹಾಗೂ ಬೌದ್ಧ ವಿಹಾರಗಳು ಲಾಂಛನದಲ್ಲಿವೆ.
ತೊಗರಿಯ ಕಣಜ ಕಲಬುರಗಿ
ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಕಲಬುರಗಿಯಲ್ಲಿ ಅತಿ ಹೆಚ್ಚು ತೊಗರಿ ಬೆಳೆಯಲಾಗುತ್ತದೆ. ಕಲಬುರಗಿ ಜಿಲ್ಲೆಯನ್ನು 'ತೊಗರಿ ಬೆಳೆಯ ಕಣಜ' ಎಂದು ಕರೆಯಲಾಗುತ್ತದೆ. ಹಾಗಾಗಿ ತೊಗರಿ ಬೆಳೆಯನ್ನು ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನದಲ್ಲಿ ಬಳಸಿಕೊಳ್ಳಲಾಗಿದೆ.