ಖರ್ಗೆ ಸೋಲಿಸಿದವರಿಗೆ ಉಡುಗೊರೆ ನೀಡಿದ ಬಿಜೆಪಿ
ಬೆಂಗಳೂರು, ಅಕ್ಟೋಬರ್ 13 : ಸೋಲಿಲ್ಲದ ಸರದಾರ ಎಂದು ಖ್ಯಾತಿ ಪಡೆದಿದ್ದ ಮಲ್ಲಿಕಾರ್ಜುನ ಖರ್ಗೆ ಲೋಕಸಭಾ ಚುನಾವಣೆಯಲ್ಲಿ ಸೋಲು ಕಂಡರು. ಖರ್ಗೆ ಸೋಲಿಸಲು ಪ್ರಮುಖ ಪಾತ್ರ ವಹಿಸಿದ ನಾಯಕನಿಗೆ ಬಿಜೆಪಿ ಉಡುಗೊರೆ ನೀಡಿದೆ.
ಮಾಜಿ ಸಚಿವ, ಬಿಜೆಪಿ ನಾಯಕ ಬಾಬೂರಾವ್ ಚಿಂಚನಸೂರು ಅವರನ್ನು ಕೋಲಿ ಸಮುದಾಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ನೇಮಕ ಮಾಡಿದೆ. ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಈ ಕುರಿತು ಶನಿವಾರ ಆದೇಶ ಹೊರಡಿಸಿದ್ದಾರೆ.
ಮೊದಲು ಕಾಂಗ್ರೆಸ್ನಲ್ಲಿದ್ದ ಬಾಬೂರಾವ್ ಚಿಂಚನಸೂರು ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿದ್ದರು. ಬಳಿಕ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ್ದರು. ಮಲ್ಲಿಕಾರ್ಜುನ ಖರ್ಗೆ ಪುತ್ರ ವ್ಯಾಮೋಹದಿಂದ ಸಿಡಿದೆದ್ದು ಬಿಜೆಪಿ ಸೇರಿದ್ದಾರೆ ಎಂಬ ಆರೋಪವೂ ಇದೆ.

ಬಿಜೆಪಿ ಸೇರಿದ್ದ ಬಾಬೂರಾವ್ ಚಿಂಚನಸೂರು 2019ರ ಲೋಕಸಭಾ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆಯನ್ನು ಸೋಲಿಸುವುದಾಗಿ ಪಣತೊಟ್ಟಿದ್ದರು. ಕೋಲಿ ಸಮುದಾಯದಕ್ಕೆ ಸೇರಿದ ಅವರು, ಸಮಾಜದ ವೋಟು ಖರ್ಗೆಗೆ ಹೋಗದಂತೆ ತಡೆದಿದ್ದರು.
ಚಿಂಚೋಳಿ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿದ್ದ ಡಾ. ಉಮೇಶ್ ಜಾಧವ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಜೆಪಿ ಸೇರಿದ್ದರು. ಲೋಕಸಭಾ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಕಣಕ್ಕಿಳಿದು ಗೆದ್ದು ಮೊದಲ ಬಾರಿ ಲೋಕಸಭೆಗೆ ಪ್ರವೇಶಿಸಿದರು.
1972ರಲ್ಲಿ ವಿಧಾನಸಭೆಗೆ ಆಯ್ಕೆಯಾದ ಮಲ್ಲಿಕಾರ್ಜುನ ಖರ್ಗೆ ಮತ್ತೆ ಸೋಲು ಕಂಡಿರಲಿಲ್ಲ. 9 ಬಾರಿ ವಿಧಾನಸಭೆಗೆ, 2 ಬಾರಿ ಲೋಕಸಭೆಗೆ ಆಯ್ಕೆಯಾದರು. ಕೇಂದ್ರ ಸಚಿವರಾಗಿ, ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕರಾಗಿ ಕೆಲಸ ಮಾಡಿದರು.
ಸೋಲಿಲ್ಲದ ಸರದಾರ ಎಂದೇ ಖ್ಯಾತಿ ಪಡೆದಿದ್ದ ಮಲ್ಲಿಕಾರ್ಜುನ ಖರ್ಗೆಯನ್ನು 2019ರ ಲೋಕಸಭಾ ಚುನಾವಣೆಯಲ್ಲಿ ಸೋಲಿಸಲಾಯಿತು. ಅಚ್ಚರಿ ಎಂದರೆ ಖರ್ಗೆ ಜೊತೆ ಕಾಂಗ್ರೆಸ್ನಲ್ಲಿದ್ದ ಎಲ್ಲಾ ನಾಯಕರು ಪಕ್ಷ ತೊರೆದು ಬಿಜೆಪಿ ಸೇರಿ ಅವರನ್ನು ಸೋಲಿಸಿದರು.












Click it and Unblock the Notifications