ಜ.1ರಂದು ಕಲಬುರಗಿ ಜಿಲ್ಲೆಯಲ್ಲಿ 13 ಇಂದಿರಾ ಕ್ಯಾಂಟೀನ್ ಓಪನ್
ಕಲಬುರಗಿ, ಅಕ್ಟೋಬರ್ 27 : ಕಲಬುರಗಿ ಜಿಲ್ಲೆಯಲ್ಲಿ ನಗರ ಪ್ರದೇಶಗಳಲ್ಲಿ ವಾಸಿಸುವ ಬಡ ಜನರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಒಟ್ಟು 13 ಇಂದಿರಾ ಕ್ಯಾಂಟೀನ್ ಪ್ರಾರಂಭಿಸಲಾಗುತ್ತಿದೆ.
ಇಂದಿರಾ ಕ್ಯಾಂಟೀನ್ ಅನುಷ್ಠಾನದ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ್, "2018ರ ಜನವರಿ 1ರಂದು ಕಲಬುರಗಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 7 ಹಾಗೂ ತಾಲೂಕಿಗೊಂದು ಇಂದಿರಾ ಕ್ಯಾಂಟೀನ್ ಗಳನ್ನು ಸ್ಥಾಪಿಸಬೇಕಾಗಿದ್ದು, ಅದಕ್ಕೆ ಸೂಕ್ತ ಸ್ಥಳ ಗುರುತಿಸಲು" ಅಧಿಕಾರಿಗಳಿಗೆ ಸೂಚಿಸಿದರು.
ಇಂದಿರಾ ಕ್ಯಾಂಟೀನ್ ಸ್ಥಾಪಿಸಲು ಈಗಾಗಲೇ ಗುರುತಿಸಿರುವ ಸ್ಥಳಗಳಿಗೆ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕಾರ್ಯಾಭಿವೃದ್ಧಿ ಸಂಸ್ಥೆ ಅಧಿಕಾರಿಗಳು ಭೇಟಿ ನೀಡಿ ತಕ್ಷಣದಿಂದಲೇ ಕ್ಯಾಂಟೀನ್ ನಿರ್ಮಿಸಲು ನಿರತರಾಗಬೇಕು.
ಕ್ಯಾಂಟೀನ್ ನಲ್ಲಿ ಸೂಕ್ತ ಸ್ಥಳಾವಕಾಶ, ವಾಹನ ನಿಲುಗಡೆ ವ್ಯವಸ್ಥೆ, ಕುಡಿಯುವ ನೀರು ಮತ್ತು ಒಳಚರಂಡಿ ವ್ಯವಸ್ಥೆ ಇರುವ ಹಾಗೆ ನೋಡಿಕೊಳ್ಳಬೇಕು. ಇಂದಿರಾ ಕ್ಯಾಂಟೀನ್ ಗೆ ನಗರ ನೀರು ಸರಬರಾಜು ಮಂಡಳಿ ಮತ್ತು ಜೆಸ್ಕಾಂದಿಂದ ಯಾವುದೇ ಶುಲ್ಕ ಪಡೆಯದೇ ವಿದ್ಯುತ್ ಮತ್ತು ನೀರಿನ ಸಂಪರ್ಕ ದೊರಕಿಸಬೇಕೆಂದು ತಿಳಿಸಿದರು.

ಕಲಬುರಗಿ ನಗರದಲ್ಲಿ ಏಳು ಕ್ಯಾಂಟೀನ್
ನಗರದ ಕೇಂದ್ರ ಬಸ್ ನಿಲ್ದಾಣ, ಸರ್ಕಾರಿ ಜಿಲ್ಲಾ ಆಸ್ಪತ್ರೆ, ಗಂಜ್ ಪ್ರದೇಶ ಹಾಗೂ ಸೂಪರ್ ಮಾರ್ಕೇಟಿನಲ್ಲಿರುವ ಸಿಟಿ ಬಸ್ ನಿಲ್ದಾಣಗಳಂತಹ ಒಟ್ಟು 4 ಸ್ಥಳಗಳಲ್ಲಿ ಕ್ಯಾಂಟೀನ್ ಪ್ರಾರಂಭಿಸಲು ಈಗಾಗಲೇ ಸ್ಥಳ ಗುರುತಿಸಲಾಗಿದೆ. ಇನ್ನೂಳಿದಂತೆ ನಗರದಲ್ಲಿ ಮೂರು ಕಡೆಗಳಲ್ಲಿ ಹೆಚ್ಟು ಬಡವರಿರುವ ಜನನಿಬಿಡ ಪ್ರದೇಶಗಳನ್ನು ಗುರುತಿಸಿ ವರದಿ ನೀಡಬೇಕು ಎಂದು ಹೇಳಿದರು

ಕಲಬುರಗಿ ಜಿಲ್ಲೆಯ ತಾಲೂಕಿಗೊಂದು ಕ್ಯಾಂಟೀನ್
ಆಳಂದದಲ್ಲಿ ಶ್ರೀರಾಮ ಮಾರ್ಕೇಟ್ ಹತ್ತಿರ, ಅಫಜಲಪುರದಲ್ಲಿ ಪೊಲೀಸ್ ಇಲಾಖೆಯ ವಸತಿ ಗೃಹಗಳ ಹತ್ತಿರ, ಚಿತ್ತಾಪುರಿನ ಎ.ಪಿ.ಎಂ.ಸಿ. ಮಾರುಕಟ್ಟೆ ಪಕ್ಕದಲ್ಲಿ, ಚಿಂಚೋಳಿಯ ಬಸ್ ನಿಲ್ದಾಣ ಎದುರುಗಡೆ, ಜೇವರ್ಗಿಯಲ್ಲಿ ಹಳೆಯ ತಹಶೀಲ್ದಾರ ಕಚೇರಿ ಹತ್ತಿರ ಹಾಗೂ ಸೇಡಂನಲ್ಲಿ ಲೋಕೋಪಯೋಗಿ ಕಾರ್ಯಾಲಯದ ಎದುರು ಇಂದಿರಾ ಕ್ಯಾಂಟೀನ್ ಸ್ಥಾಪಿಸಲಾಗುವುದು ಎಂದರು.

ಪಾಲಿಕೆ ಮತ್ತು ಕಾರ್ಮಿಕ ಇಲಾಖೆಯ ಸಂಯುಕ್ತದಲ್ಲಿ
ಕ್ಯಾಂಟೀನ್ ನಿರ್ಮಿಸಲು ತಗಲುವ ವೆಚ್ಚದ ಶೇ. 70ರಷ್ಟು ಮಹಾನಗರ ಪಾಲಿಕೆ ಹಾಗೂ ಶೇ. 30ರಷ್ಟು ಕಾರ್ಮಿಕ ಇಲಾಖೆ ಭರಿಸಬೇಕಾಗಿದೆ. ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಪ್ರಾರಂಭಿಸುವ ಏಳು ಇಂದಿರಾ ಕ್ಯಾಂಟಿನ್ ಗಳಿಗೆ ತಿಂಡಿ ಮತ್ತು ಊಟ ಸರಬರಾಜು ಮಾಡಲು ಒಂದೇ ಅಡುಗೆ ಕೋಣೆ ಸ್ಥಾಪಿಸಲಾಗುತ್ತಿದ್ದು, ಅಡುಗೆ ಕೋಣೆಯಿಂದ ಕ್ಯಾಂಟೀನ್ ಗಳಿಗೆ ತಿಂಡಿ ಮತ್ತು ಊಟ ಸರಬರಾಜು ಮಾಡಲು ಕಾರ್ಮಿಕ ಇಲಾಖೆಯವರು ವಿಶಿಷ್ಟ ವಾಹನ ಒದಗಿಸಬೇಕು ಎಂದರು.

ಹೆಚ್ಚಿನ ಮುತುವರ್ಜಿವಹಿಸಲು ಅಧಿಕಾರಿಗಳಿಗೆ ಸೂಚನೆ
ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಅದರಲ್ಲೂ ಬಡವರಿಗೆ ಕೈಗೆಟಕುವ ದರದಲ್ಲಿ ಅಂದರೆ 5ರೂ.ಗೆ ಬೆಳಗಿನ ಉಪಹಾರ, 10ರೂ.ಗಳಲ್ಲಿ ಮಧ್ಯಾಹ್ನ ಮತ್ತು ರಾತ್ರಿ ಊಟ ಒದಗಿಸಲು ಇಂದಿರಾ ಕ್ಯಾಂಟೀನ್ ಗಳನ್ನು ಸ್ಥಾಪಿಸಲಾಗುತ್ತಿದೆ. ಅಧಿಕಾರಿಗಳು ಹೆಚ್ಚಿನ ಮುತುವರ್ಜಿವಹಿಸಿ ಕಾರ್ಯನಿರ್ವಹಿಸುವಂತೆ ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ್ ಸೂಚಿಸಿದರು.












Click it and Unblock the Notifications